ಬೇಡತಿ

ನರಿಯ ಮದುವೆಯ ಮಂಗ-
ಲೋತ್ಸವದ ಸಮಯವೆನೆ
ಹೂಬಿಸಿಲುಮಳೆಯಾಗ ಸುರಿಯುತಿತ್ತು.
‘ಇರುವೆ ನಿಬ್ಬೆರಗಾಗಿ’
ಎಂದು ಮುಗಿಲೆಂದಂತೆ
ನೀರದದ ಕಪ್ಪುಗೆರೆ ಸರಿಯುತಿತ್ತು.

ಮೊರಡಿಯೊಂದರ ಬಳಿಗೆ
ಸಾಗಿಹಳು ಬೇಡತಿಯು.
ಅವಳ ಬಣ್ಣವು ಸುತ್ತಿನೆರೆಯ ಕಪ್ಪು
ಬಡ ಜಾಲಿ ಮರದಂತೆ
ಬಡಕವಾಗಿಹ ದೇಹ
ಬಾಗಿಹುದು. ಯೌವ್ವನದಲಿಹುದು ಮುಪ್ಪು!

ಮುಳ್ಳುಗಂಟಿಯ ಮುರಿದು
ತುಂಡುಗಳ ಜೋಡಿಸುತ
ಬಂದಿಹಳು ಉರವಲದ ಹೊರೆಯ ಹೊತ್ತು.
ಹಾಯ್ದು ಹೊರೆಯೊಳಗಿಂದ
ಇದೊ! ಸೀಳುಬಿದಿರೊಂದು
ಉಳಿದ ಉರವಲವದರ ಸುತ್ತು ಮುತ್ತು

ತುಸು ತಡೆದು ನಡೆಯಲೆನೆ
ಹೊರೆಯ ಕೆಳಗಿಳಿಸಿಹಳು,
ಆ ಸೀಳು ಬಿದಿರನ್ನೆ ನಿಲಿಸಿಬಿಟ್ಟು
ಊರಿ ನಿಂತಿದೆ ಬಿದಿರು,
ಅವಳೆಡೆಗೆ ಬಾಗಿಹುದು
ತುದಿಗಿರುವ ಒಣಗಿದ ಕರಿಯ ಕಟ್ಟು

ಹೆಣ್ಣೆ ಹೊರೆಯಾಗಿಹುದೊ?
ಹೊರೆಯೆ ಹೆಣ್ಣಾಗಿಹುದೊ?
ಒಂದಕೊಂದೊಲಿಯುವದ ನೋಡಿ ಕಣ್ಣು
ತಾನೆ ಮಂಕಾಗಿಹುದೊ?
ಹೆಣ್ಣಿರಲಿ ಹೊರೆಯಿರಲಿ,-
ಇವಕೆ ತುದಿಮೊದಲಹುದು ಕಾಡುಮಣ್ಣು.

ಅಕ್ಕ ತಂಗಿಯರಂತೆ
ಹಾಸುಹೊಕ್ಕಾಗಿಹವು
ನಿಂತಿದಿರುಬದಿರೊಂದೆ ಬಟ್ಟೆಯಲ್ಲಿ.
ಎಲುಬು – ಪಲುಬಿನ ಕಟ್ಟು
ಇದರದರದು ಗುಟ್ಟು.
ಏನಿಲ್ಲ ಯಾವುದರ ಹೊಟ್ಟೆಯಲ್ಲಿ!

ಬೇಡರಾಕೆಯ ಮುಂದೆ
ಕಾಡುಹೊರೆ ನಿಂದಿತ್ತು
ಕೇಳಿತ್ತು: ದಾರಿ ಕೊನೆ ಮುಟ್ಟಿತೆಲ್ಲಿ?
ಒಂದು ಕ್ಷಣ ಮೌನದಲಿ
ಹೆಣ್ಣು ವಡಿನುಡಿದಿತ್ತು :
‘ಕೆಟ್ಟೆವಿಲ್ಲಿಯು! ನಾವು ಅಟ್ಟೆವಲ್ಲಿ!’

ಮರುಕ್ಷಣವೆ ಹೊರೆಯೆತ್ತಿ
ಮುಂದೆ ಸಾಗಿದಳಾಕೆ
ದೂರ ತನ್ನ ವರ ಗುಡಿಸಿಲವ ಕಂಡು
ಮೊರಡಿಯೊಂದರ ಬಳಿಗೆ
ನಡೆದಿಹಳು ಬೇಡತಿಯು
ಉರವಲದ ಕಿರಿಹೊರೆಯ ಹೊತ್ತುಕೊಂಡು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಗು
Next post ನೇರಿಲು ಹಣ್ಣಿನ ಕಥೆ

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಕರಾಚಿ ಕಾರಣೋರು

    ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…