Home / ಕವನ / ಕವಿತೆ / ಬೇಡತಿ

ಬೇಡತಿ

ನರಿಯ ಮದುವೆಯ ಮಂಗ-
ಲೋತ್ಸವದ ಸಮಯವೆನೆ
ಹೂಬಿಸಿಲುಮಳೆಯಾಗ ಸುರಿಯುತಿತ್ತು.
‘ಇರುವೆ ನಿಬ್ಬೆರಗಾಗಿ’
ಎಂದು ಮುಗಿಲೆಂದಂತೆ
ನೀರದದ ಕಪ್ಪುಗೆರೆ ಸರಿಯುತಿತ್ತು.

ಮೊರಡಿಯೊಂದರ ಬಳಿಗೆ
ಸಾಗಿಹಳು ಬೇಡತಿಯು.
ಅವಳ ಬಣ್ಣವು ಸುತ್ತಿನೆರೆಯ ಕಪ್ಪು
ಬಡ ಜಾಲಿ ಮರದಂತೆ
ಬಡಕವಾಗಿಹ ದೇಹ
ಬಾಗಿಹುದು. ಯೌವ್ವನದಲಿಹುದು ಮುಪ್ಪು!

ಮುಳ್ಳುಗಂಟಿಯ ಮುರಿದು
ತುಂಡುಗಳ ಜೋಡಿಸುತ
ಬಂದಿಹಳು ಉರವಲದ ಹೊರೆಯ ಹೊತ್ತು.
ಹಾಯ್ದು ಹೊರೆಯೊಳಗಿಂದ
ಇದೊ! ಸೀಳುಬಿದಿರೊಂದು
ಉಳಿದ ಉರವಲವದರ ಸುತ್ತು ಮುತ್ತು

ತುಸು ತಡೆದು ನಡೆಯಲೆನೆ
ಹೊರೆಯ ಕೆಳಗಿಳಿಸಿಹಳು,
ಆ ಸೀಳು ಬಿದಿರನ್ನೆ ನಿಲಿಸಿಬಿಟ್ಟು
ಊರಿ ನಿಂತಿದೆ ಬಿದಿರು,
ಅವಳೆಡೆಗೆ ಬಾಗಿಹುದು
ತುದಿಗಿರುವ ಒಣಗಿದ ಕರಿಯ ಕಟ್ಟು

ಹೆಣ್ಣೆ ಹೊರೆಯಾಗಿಹುದೊ?
ಹೊರೆಯೆ ಹೆಣ್ಣಾಗಿಹುದೊ?
ಒಂದಕೊಂದೊಲಿಯುವದ ನೋಡಿ ಕಣ್ಣು
ತಾನೆ ಮಂಕಾಗಿಹುದೊ?
ಹೆಣ್ಣಿರಲಿ ಹೊರೆಯಿರಲಿ,-
ಇವಕೆ ತುದಿಮೊದಲಹುದು ಕಾಡುಮಣ್ಣು.

ಅಕ್ಕ ತಂಗಿಯರಂತೆ
ಹಾಸುಹೊಕ್ಕಾಗಿಹವು
ನಿಂತಿದಿರುಬದಿರೊಂದೆ ಬಟ್ಟೆಯಲ್ಲಿ.
ಎಲುಬು – ಪಲುಬಿನ ಕಟ್ಟು
ಇದರದರದು ಗುಟ್ಟು.
ಏನಿಲ್ಲ ಯಾವುದರ ಹೊಟ್ಟೆಯಲ್ಲಿ!

ಬೇಡರಾಕೆಯ ಮುಂದೆ
ಕಾಡುಹೊರೆ ನಿಂದಿತ್ತು
ಕೇಳಿತ್ತು: ದಾರಿ ಕೊನೆ ಮುಟ್ಟಿತೆಲ್ಲಿ?
ಒಂದು ಕ್ಷಣ ಮೌನದಲಿ
ಹೆಣ್ಣು ವಡಿನುಡಿದಿತ್ತು :
‘ಕೆಟ್ಟೆವಿಲ್ಲಿಯು! ನಾವು ಅಟ್ಟೆವಲ್ಲಿ!’

ಮರುಕ್ಷಣವೆ ಹೊರೆಯೆತ್ತಿ
ಮುಂದೆ ಸಾಗಿದಳಾಕೆ
ದೂರ ತನ್ನ ವರ ಗುಡಿಸಿಲವ ಕಂಡು
ಮೊರಡಿಯೊಂದರ ಬಳಿಗೆ
ನಡೆದಿಹಳು ಬೇಡತಿಯು
ಉರವಲದ ಕಿರಿಹೊರೆಯ ಹೊತ್ತುಕೊಂಡು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...