Home / ಕವನ / ಕವಿತೆ / ಗಿಳಿವಿಂಡು

ಗಿಳಿವಿಂಡು

ಒಂದರಳೆ ಮರದಲ್ಲಿ
ಸಂಜೆಯಾಗಿರುವಲ್ಲಿ
ಒಂದೊಂದೆ ಮರಳುವವು ಸಾಲುಗೊಂಡು :
ಒಂದೊಂದೆ ಮರಳುವವು
ಗಿಳಿಯೆಲ್ಲ ತೆರಳುವವು
ಗೂಡುಗೊಂಡಿಹ ಮರವನಿದಿರುಗೊಂಡು.

ಸಂಧ್ಯೆಯಿಂದೀಚೆಗೆನೆ
ಸ್ಮರನೆಚ್ಚ ಶರಗಳೆನೆ
ತಾಗುತಿದೆ ಗಿಳಿಹಿಂಡು ಬಂದು ಮರಕೆ.
ಕೊಂಬೆಮೇಲೆಳೆಮರಿಯು
ನಂಬಿ ತಾಯಿಯನರಿಯು-
ತಿರೆ ಮಿಡಿಯಿತೆನ್ನೆದೆಯು ದೀನ ಸ್ವರಕೆ.

ಮರ, ಸ್ಮರನ ಬೀಡೆಂದು-
ಗಿಳಿಗಾವಲಿಹುದೆಂದು-
ಗಳಹುತಿದ್ದನು ಹಳೆಯ ದಿನದ ಕವಿಯು :
ಅಂದಿನಾ ಬಾಳಿನಾ
ಇಂದಿನಾ ಹಾಳಿನಾ
ಗತಿ ಬೇರೆ ಶ್ರುತಿ ಬೇರೆ,-ಕಹಿಯು ಸವಿಯು,

ನೂರಾರು ಗಿಳಿಯ ಮನೆ-
ಯೊಳಗೊಂಡ ಮರದ ಕೊನೆ-
ಯೆಲೆಗಳಲಿ ತೂರಾಡಿ ಚೀರಾಡುತ
ಒಂದು ಗಿಳಿಯಿನ್ನೊಂದ-
ನಲ್ಲಿ ಭೀ ಥೂ ಎಂದು,
ತನ್ನದಿದು ತನಗೆಂದು ಹೋರಾಡುತ

ಬರೆ, ಕೇಳಿ ಚೀರ್‍ದನಿಯ,
ನೋಡಿಲ್ಲಿ! ಹೂಗಣೆಯ
ಹಬ್ಬ ವಿಹುದೆನಬಹುದೆ ಕಣ್ಣು ಮುಚ್ಚಿ?
ಒಂದು ಗಿಳಿಯಿನ್ನೊಂದ-
ನೆದುರಿಸಲು ಕಡುನೊಂದು
ಕದನವೆಸಗುತ ಕೂಕ್ಕೆ ಚುಚ್ಚಿ ಚುಚ್ಚಿ?

ಒಂದೊಂದು ಗಿಳಿಗೊಂದು
ಮನೆಯಿಹುದು ಇದ್ದರೂ
ಗಿಳಿಯ ಗೊಂದಣನಿಂತು ಹಾರ್‍ವುದೇಕೆ?
ಬೇರೊಂದು ಗಿಳಿಯ ಮನೆ-
ಯನ್ನು ಸೇರುತ ಕಲಹ-
ವೆಸಗಿ ತಿಳಿವಿಲ್ಲದಲೆ ಸಾರ್‍ವುದೇಕೆ?

ಎಲ್ಲರಿಗೆ ಸವಿಗನಸು,
ಎಲ್ಲರಿಗೆ ಸವಿತಿನಸು,
ಎಲ್ಲರಿಗದೆಲ್ಲವನು ಕೊಡುವಳಿಳೆಯು.
ಕಲ್ಲೆದೆಯವರು ಕೆಲರು
ಮೆಲ್ಲುವರದೆಲ್ಲವನು
ಇಲ್ಲಿಹುದು ನೋಡು ಅನ್ಯಾಯದೆಳೆಯು!

ಬಳಿಗೆ ಸುಳಿವಳು ರಾತ್ರಿ
ಇವಳೆ ಎಲ್ಲರ ಧಾತ್ರಿ!
ತಲೆಗೊಂದು ಮಂಚವನು ಮಲಗಲಿತ್ತು
ಹಗಲೆಲ್ಲ ಹಿರಿ ವಯಣ,
ಮುಗಿಲುದ್ದ ಕುಡ್ಯಾಣ-
ಕಣಿಗೊಳಿಸುವಳು ಗಿಳಿಯ, ಕ್ರಾಂತಿವೆತ್ತು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...