Home / ಕವನ / ಕವಿತೆ / ಅವಿರತ ಯಜ್ಞ

ಅವಿರತ ಯಜ್ಞ

ಭುವಿಯ ಚೇತನಾಗ್ನಿಯಲ್ಲಿ
ಸೂರ್‍ಯ ಬಲಿಯು ನೀಡುವ;
ಅಮೃತಗರ್ಭನಾದ ಸೋಮ
ಸೋಮರಸವನೂಡುವ.

ಅಗಣಿತ ಗ್ರಹ-ತಾರಕಾಳಿ
ಮಧುಹೋಮವ ನಡೆಸಿವೆ;
ಮೋಡ- ಗುಡುಗು, ಮಿಂಚು-ಸಿಡಿಲು
ಉದಧಿಗರ್ಘ್ಯ ಕೊಡುತಿವೆ!

ಸಾಗರ ಹೋತಾರನಾಗಿ
ಸೂರ್ಯಗೆ ಬಲಿ ನೀಡುವ;
ಸೂರ್ಯನು ದಾತಾರನಾಗಿ
ಮೇಘಕೆ ಹನಿ ಹಾಕುವ.

ಮೇಘ ಯಾಗಕರ್ತೃವಾಗಿ
ಮಳೆಗೆ ನೀರ ಬೇಳ್ವುದು.
ಮಳೆಯು ಯಾಜಮಾನ್ಯ ವಹಿಸಿ
ಇಳೆಗೆ ಬಾಳನೆರೆವುದು.


ಪಾತಾಳದ ಶಕ್ತಿಮೂರ್ತಿ
ಭೂತಳದೀ ಭೂತಗಣಕೆ
ಸಾತ್ತ್ವಾಹುತಿ ಕೊಡುತಿದೆ;
ಸತ್ತ್ವಹವನ ಮಹಾಫಲವೆ
ಸಸ್ಯಗಳಲಿ ರೂಪುಗೊಂಡು,
ಜೀವಕೆ ಕೂಳಿಡುತಿದೆ.

ಜೀವ ಕೂಳನುಣುತಿವೆ;
ಜೀವನ ಬಲ ಕೊಳುತಿವೆ;
ಊಟ ಆಟ ಅರಿತಿವೆ-
ಅದರೊಳೆ ಮೈ ಮರೆತಿವೆ


‘ಪ್ರತಿಜೀವವು ಪಡೆಯಬೇಕು
ಯಾಜಮಾನ್ಯ ದೀಕ್ಷೆ!’
ಎಂದಿರುವುದು ಯಜ್ಞಪ್ರಿಯ-
ಸೃಷ್ಟಿಯ ಸದಪೇಕ್ಷೆ!

ಒಂದು ಜೀವಿಗೊಂದು ಜೀವ
ವಹ್ನಿಯು ಯಜಮಾನ-
ಆಗಬೇಕು; ಆದರೆಯೇ
ಶಾಂತಿ, ಸಮಾಧಾನ!


ಯಜ್ಞಸೂತ್ರದಲಿಯೆ ಕೋದು
ಲೋಕ-ಲೋಕ ನಿಂತಿವೆ ;
ಎಂದೆಂದಿಗು ಚ್ಯುತಿಯು ಇರದ
ಸಮಗತಿಗಳನಾಂತಿವೆ

ಅದೋ ಅಲ್ಲಿ, ಇದೋ ಇಲ್ಲಿ
ಎಲ್ಲೆಲ್ಲಿಯು ಯಜ್ಞ !
ಯಜ್ಞವ್ಯಾಪ್ತಿಯೆಂತಹದಿದು !
ಅರಿತವನೇ ಪ್ರಾಜ್ಞ!
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...