Home / ಕವನ / ಕವಿತೆ / ಅವಿರತ ಯಜ್ಞ

ಅವಿರತ ಯಜ್ಞ

ಭುವಿಯ ಚೇತನಾಗ್ನಿಯಲ್ಲಿ
ಸೂರ್‍ಯ ಬಲಿಯು ನೀಡುವ;
ಅಮೃತಗರ್ಭನಾದ ಸೋಮ
ಸೋಮರಸವನೂಡುವ.

ಅಗಣಿತ ಗ್ರಹ-ತಾರಕಾಳಿ
ಮಧುಹೋಮವ ನಡೆಸಿವೆ;
ಮೋಡ- ಗುಡುಗು, ಮಿಂಚು-ಸಿಡಿಲು
ಉದಧಿಗರ್ಘ್ಯ ಕೊಡುತಿವೆ!

ಸಾಗರ ಹೋತಾರನಾಗಿ
ಸೂರ್ಯಗೆ ಬಲಿ ನೀಡುವ;
ಸೂರ್ಯನು ದಾತಾರನಾಗಿ
ಮೇಘಕೆ ಹನಿ ಹಾಕುವ.

ಮೇಘ ಯಾಗಕರ್ತೃವಾಗಿ
ಮಳೆಗೆ ನೀರ ಬೇಳ್ವುದು.
ಮಳೆಯು ಯಾಜಮಾನ್ಯ ವಹಿಸಿ
ಇಳೆಗೆ ಬಾಳನೆರೆವುದು.


ಪಾತಾಳದ ಶಕ್ತಿಮೂರ್ತಿ
ಭೂತಳದೀ ಭೂತಗಣಕೆ
ಸಾತ್ತ್ವಾಹುತಿ ಕೊಡುತಿದೆ;
ಸತ್ತ್ವಹವನ ಮಹಾಫಲವೆ
ಸಸ್ಯಗಳಲಿ ರೂಪುಗೊಂಡು,
ಜೀವಕೆ ಕೂಳಿಡುತಿದೆ.

ಜೀವ ಕೂಳನುಣುತಿವೆ;
ಜೀವನ ಬಲ ಕೊಳುತಿವೆ;
ಊಟ ಆಟ ಅರಿತಿವೆ-
ಅದರೊಳೆ ಮೈ ಮರೆತಿವೆ


‘ಪ್ರತಿಜೀವವು ಪಡೆಯಬೇಕು
ಯಾಜಮಾನ್ಯ ದೀಕ್ಷೆ!’
ಎಂದಿರುವುದು ಯಜ್ಞಪ್ರಿಯ-
ಸೃಷ್ಟಿಯ ಸದಪೇಕ್ಷೆ!

ಒಂದು ಜೀವಿಗೊಂದು ಜೀವ
ವಹ್ನಿಯು ಯಜಮಾನ-
ಆಗಬೇಕು; ಆದರೆಯೇ
ಶಾಂತಿ, ಸಮಾಧಾನ!


ಯಜ್ಞಸೂತ್ರದಲಿಯೆ ಕೋದು
ಲೋಕ-ಲೋಕ ನಿಂತಿವೆ ;
ಎಂದೆಂದಿಗು ಚ್ಯುತಿಯು ಇರದ
ಸಮಗತಿಗಳನಾಂತಿವೆ

ಅದೋ ಅಲ್ಲಿ, ಇದೋ ಇಲ್ಲಿ
ಎಲ್ಲೆಲ್ಲಿಯು ಯಜ್ಞ !
ಯಜ್ಞವ್ಯಾಪ್ತಿಯೆಂತಹದಿದು !
ಅರಿತವನೇ ಪ್ರಾಜ್ಞ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...