ಭುವಿಯ ಚೇತನಾಗ್ನಿಯಲ್ಲಿ
ಸೂರ್‍ಯ ಬಲಿಯು ನೀಡುವ;
ಅಮೃತಗರ್ಭನಾದ ಸೋಮ
ಸೋಮರಸವನೂಡುವ.

ಅಗಣಿತ ಗ್ರಹ-ತಾರಕಾಳಿ
ಮಧುಹೋಮವ ನಡೆಸಿವೆ;
ಮೋಡ- ಗುಡುಗು, ಮಿಂಚು-ಸಿಡಿಲು
ಉದಧಿಗರ್ಘ್ಯ ಕೊಡುತಿವೆ!

ಸಾಗರ ಹೋತಾರನಾಗಿ
ಸೂರ್ಯಗೆ ಬಲಿ ನೀಡುವ;
ಸೂರ್ಯನು ದಾತಾರನಾಗಿ
ಮೇಘಕೆ ಹನಿ ಹಾಕುವ.

ಮೇಘ ಯಾಗಕರ್ತೃವಾಗಿ
ಮಳೆಗೆ ನೀರ ಬೇಳ್ವುದು.
ಮಳೆಯು ಯಾಜಮಾನ್ಯ ವಹಿಸಿ
ಇಳೆಗೆ ಬಾಳನೆರೆವುದು.


ಪಾತಾಳದ ಶಕ್ತಿಮೂರ್ತಿ
ಭೂತಳದೀ ಭೂತಗಣಕೆ
ಸಾತ್ತ್ವಾಹುತಿ ಕೊಡುತಿದೆ;
ಸತ್ತ್ವಹವನ ಮಹಾಫಲವೆ
ಸಸ್ಯಗಳಲಿ ರೂಪುಗೊಂಡು,
ಜೀವಕೆ ಕೂಳಿಡುತಿದೆ.

ಜೀವ ಕೂಳನುಣುತಿವೆ;
ಜೀವನ ಬಲ ಕೊಳುತಿವೆ;
ಊಟ ಆಟ ಅರಿತಿವೆ-
ಅದರೊಳೆ ಮೈ ಮರೆತಿವೆ


‘ಪ್ರತಿಜೀವವು ಪಡೆಯಬೇಕು
ಯಾಜಮಾನ್ಯ ದೀಕ್ಷೆ!’
ಎಂದಿರುವುದು ಯಜ್ಞಪ್ರಿಯ-
ಸೃಷ್ಟಿಯ ಸದಪೇಕ್ಷೆ!

ಒಂದು ಜೀವಿಗೊಂದು ಜೀವ
ವಹ್ನಿಯು ಯಜಮಾನ-
ಆಗಬೇಕು; ಆದರೆಯೇ
ಶಾಂತಿ, ಸಮಾಧಾನ!


ಯಜ್ಞಸೂತ್ರದಲಿಯೆ ಕೋದು
ಲೋಕ-ಲೋಕ ನಿಂತಿವೆ ;
ಎಂದೆಂದಿಗು ಚ್ಯುತಿಯು ಇರದ
ಸಮಗತಿಗಳನಾಂತಿವೆ

ಅದೋ ಅಲ್ಲಿ, ಇದೋ ಇಲ್ಲಿ
ಎಲ್ಲೆಲ್ಲಿಯು ಯಜ್ಞ !
ಯಜ್ಞವ್ಯಾಪ್ತಿಯೆಂತಹದಿದು !
ಅರಿತವನೇ ಪ್ರಾಜ್ಞ!
*****