ಜಯ ಭಾರತ!

– ಪಲ್ಲವಿ –
ಜಯ ಜಯ ಭಾರತ ಭೂಮಾತೇ-ಜಯ
ಜಯ ಮಹಿಮಾಕುಲವಿಖ್ಯಾತೇ !
ಜಯ ಸತ್ಯಸಾರ ಸಂಭೂತೇ….
ಜಯ ಜಯ ಭಾರತ ಭೂಮಾತೇ !


ವರುಣದೇವ ವರವಾಗಿ ನೀಡಿರುವ
ಶರನಿಧಿಗಳು ಘೂರ್ಣಿಸುತ….
ಮೊರೆಯುತಿಹವು ಹಗಲಿರುಳನು ಗಣಿಸದೆ
ನಿನ್ನ ಯಶದ ಸಂಗೀತ !
ಮೂಡಣ ಪಡುವಣ ತೆಂಕಣ ಗಡಿಯೊಳು
ಎಲ್ಲೆಲ್ಲಿಯು ಜಲದೂತ-
ಹೂಡಿಯಿರುವ ಕಾಸಿನ ಕಡುಗೋಂಟೆಯ
ನಿನ್ನ ರಾಜ್ಯ ನಿರ್ಭೀತ !
ಹೆಣೆದಿವೆ ಅಲೆಗಳ ಮಾಲೆ….ರ-
ಕ್ಷಣೆಯನ್ನು ಪಡೆದಿವೆ ವೇಲೆ….ಓ
ಜನನಿ, ನಿನಗಿರದು ಸೋಲೇ !
ಜಯ ಜಯ ಭಾರತ ಭೂಮಾತೇ-ಜಯ-
ಜಯ ಮಹಿಮಾಕುಲವಿಖ್ಯಾತೇ !


ಗಿರಿಯ ರಾಜ ಪರಿವಾರ ಸಹಿತ ನಿಂ-
ತಿರುವ ಬಡಗಲಲ್ಲಿ….
ಹೊರೆಯುತಿರುವ ದಿಗ್‌ನಾಗನಾಗಿ ನಿಡು-
ನೋಟಗಳನು ಚೆಲ್ಲಿ ;
ಹರಿಸುತಿಹನು ನಿರ್ಝರಿಣಿಗಳನು ನೂ-
ರಾರು ರೂಪಗಳಲಿ….
ಸಿರಿಯಿಂದಲಿ ನಿನ್ನರಮನೆ ತುಂಬುವ
ಹೃದಯಾಕೂತಿಯಲಿ.
ಸುರಗಂಗೆಯನಿಳುಹಿರುವ-ಸುಧೆ-
ಯೊರತೆಯನ್ನು ಬಲಿದಿರುವ-ಬಲ-
ದರಿಮೆಯನ್ನು ಬೆಳಸಿರುವ…
ಜಯ ಜಯ ಭಾರತ ಭೂಮಾತೇ-ಜಯ
ಜಯ ಮಹಿಮಾಕುಲ ವಿಖ್ಯಾತೇ !


ಮೊದಲು ನಿನ್ನಂಗಣದಲಿ ಹರಡಿದನು
ರವಿಯು ಕಿರಣ ಜಾಲಾ…
ಮೊದಲ ಬೆಳಕು ಕಂಡವಳು ನೀನೆ ತೋ-
ರಿದೆಯೆ ಲೋಕಕೆಲ್ಲಾ !
ನಿನ್ನ ಸಂತಾನ ಮನು-ಮುನಿ ವಿತಾನ
ಹಾಡಿ ಸಾಮಗಾನಾ….
ಬನ್ನಗಳನ್ನು ನೀಗಿಸಿತು ಬಾಳಿನೊಳೆ
ಮಾಡಿ ಅಮೃತಪಾನಾ !
ಜಗವು ಜಡತಿಯಲ್ಲಿರಲು-ನಿನ-
ಗೊಗೆಯಿತಂದೆ ಮುಂಬಗಲು-ಇದು
ನಿನ್ನ ವುಣ್ಯದೊಂದರಳು….
ಜಯ ಜಯ ಭಾರತ ಭೂಮಾತೇ-ಜಯ
ಜಯ ಮಹಿಮಾಕುಲ ವಿಖ್ಯಾತೇ!


ಧರ್ಮದೈವತದ ಮರ್ಮವರಿದು ಕೈ –
ಗೊಡುತ ಕರೆದು ತಂದೆ….
ಕರ್ಮದಾ ಹುರುಳ ಮೊರ್ಮೆದಲೆ ತಿಳಿದು
ದುರ್ಮತಿಯನೆಲ್ಲ ಕೊಂದೆ.
ನೂರು ನೂರು ತರೆಯೂರಿನಲ್ಲಿ ಮರೆ-
ಗೊಂಡ ಸತ್ಯ ಮುಖವ…
ಏರಿ ಮೇಲೆ, ತರೆಹಾರಿಸುತ ಜಗಕೆ
ತೋರಿದೆ ನಿಜಸುಖವ.
ಕವಿರಾಜರ ನೀ ಕರೆದೆ-ನವ-
ನವ ಕಾವ್ಯದ ಮಳೆಗರೆದೆ-ಭುವಿ-
ಗೆಲ್ಲ ಜೀವಕಳೆಯೆರೆದೆ….
ಜಯ ಜಯ ಭಾರತ ಭೂಮಾತೇ-ಜಯ
ಜಯ ಮಹಿಮಾಕುಲ ವಿಖ್ಯಾತೇ !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತಾಯೆ ಕನ್ನಡಾಂಬೆಗೆ
Next post ಭೋಂಗಾನಾದ

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…