Home / ಕವನ / ಕವಿತೆ / ಕೆದಾರ ಮರಣಮೃದಂಗ

ಕೆದಾರ ಮರಣಮೃದಂಗ

ದೈವ ಸನ್ನಿಧಿಯ ಚೈತನ್ಯದಲಿ
ಹಿಡಿದ ಹೂಮಾಲೆ ಧೂಪದೀಪ ಶ್ರೀಗಂಧ
ಸ್ವರ್ಗದೊಳಗೋಡಾಡಿ ದೇವಪಾದತಲದಲಿ ನಿಂತಕ್ಷಣ
ಕನಸು ನನಸಾಗಿಸಿಕೊಂಡ ಭಾವತೃಪ್ತಿ.

ಹರಹರ ಮಹಾದೇವ ಹರಹರ ಮಹಾದೇವ
ಪರಾತ್ಪರಾಶಿವನ ಮಂತ್ರ ಎಲ್ಲರೆದೆ ತುಂಬ
ಆ ಬೆಟ್ಟ ಈ ಬೆಟ್ಟ ಅಲ್ಲಿಯದೋ ಪ್ರಪಾತ
ಹಚ್ಚಹಸಿರು ಇಳಿಜಾರು ಅಂಕುಡೊಂಕು
ಮೋಡಮುಸುಕು ಮಳೆಯೊಳಗೆಲ್ಲ ಪ್ರತಿಧ್ವನಿ ತುಂಬಿ

ಭಾರಹೊತ್ತ ಇಳಿಸಂಜೆಗೆ ಸುಸ್ತಾಯಿತೆ?
ಇಲ್ಲವೇ ಇಲ್ಲ; ಸುತ್ತೆಲ್ಲ ದೀಪಸಾಲುಗಳು
ಝಗಮಗಿಸುವ ಜಾತ್ರಾಮೆರವಣಿಗೆ
ಘಂಟಾನಾದಕೆ ಪುರಾಣ ಪುಣ್ಯ ಎಚ್ಚೆತ್ತು

ಸಾಕ್ಷಾತ್ ಸ್ವರ್ಗ ಶಿವ ಪದತಲ
ಕಾತರದ ಮನಗಳಿಗೆ ಪುಣ್ಯ ಒಳಗಿಳಿಸಿಕೊಳ್ಳುವ ಕ್ಷಣ
ಪುಣ್ಯದ ಬೀಡು ಉಕ್ಕುಕ್ಕಿ ಹರಿವ
ಭಕ್ತರ ಭಾವನೊರೆತೊರೆ

ದೂರಬೆಟ್ಟದಾಚೆ ಅದೇನೋ ಹೊಂಚು
ಮೋಡಗಳಿಗೆ ರೆಕ್ಕೆಹೊಡೆದು ಮಳೆಯೊಳಗಿಳಿದ
ಸಂಚಿನಾ ಪಕ್ಷಿಗೆ ಕತ್ತಲೆ ಹಿತವಾಗಿ
ಅದರೊಡಲ ಸೀಳಿ ಗಕ್ಕನೆ ನೆಗೆಯಿತು ಕೆದಾರಕೊಳ್ಳಕೆ
ಬೆಚ್ಚಿಬಿದ್ದ ಬೆಟ್ಟದೊಡಲ ಗರ್‍ಭಪಾತ
ಕಲ್ಲುಮಣ್ಣು ಮರಳು ಗಿಡಮರಗಳು ಜರಿದು
ಕ್ಷಣಕ್ಷಣಕೂ ಧುಮ್ಮಿಕ್ಕಿ ಹೊರಹೊಮ್ಮಿ
ಹಿಡಿತಕೆ ಬಾರದೆ ಪ್ರಳಯತಾಂಡವ

ದೇವಸನ್ನಿಧಿಯ ಭಕ್ತರ ಧ್ವನಿ ಮಾರ್‍ಧನಿಸಿ
ಹರಹರ ಮಹಾದೇವ ಹರಹರಮಹಾದೇವ
ಕಾಪಾಡು ಮೃತ್ಯುಂಜಯ ದೈನ್ಯತೆಯ ಕೂಗು ಮತ್ತೆ
ಮತ್ತೆ ಹರಕೆಗಳೆದೆಗೆ ಮರಣಮೃದಂಗ ಸದ್ದು;
ನೋಡು ನೋಡುತಿರೆ ಮನೆಮಠಗಳು ಉರುಳಿ
ಅಲ್ಲೋಲಕಲ್ಲೋಲ ಕೊಚ್ಚಿ ಕೊಚ್ಚಿ ಹೋಗುವ ರಾಶಿರಾಶಿ ಹೆಣಗಳು.

ಅಲಕನಂದಾ ಮಂದಾಕಿನಿ ಭಾಗೀರತಿ
ಸುತ್ತಿಸುಳಿದಾಡಿ ಬಳುಕಿ ಶಿವನೊಲಿಸಲು ಸೋತರೆ?
ಕಠೋರ ಎದೆಯವನೆ ಕಲ್ಲಾಗಿ ಕುಳಿತವನೆ
ಮುಕ್ಕಣ್ಣನೆ ಕಿಚ್ಚು ರೊಚ್ಚು ಹೊತ್ತವನೆ
ವಿಜ್ಞಾನ ಜಗದ ಹಮ್ಮುಬಿಮ್ಮುಗಳಿಗೆ ಬೇಸರವಾಯಿತೆ!
ತಪಸ್ಸಿನೇಕಾಂತಕ್ಕೆ ಭಗ್ನವಾಯಿತೆ ತಂದೆ!!
ಬಾರಿಸಿಯೇ ಬಿಟ್ಟೆ ಮರಣಮೃದಂಗ

ಗಿರಿ ಕಂದರ ಕೊಳ್ಳಗಳೆದೆಗಳ ತುಂಬ
ಹೆಣಗಳ ರಾಶಿರಾಶಿ ಬೀಸಾಕಿ ತಣ್ಣಗಾದೆಯಾ ಮಹಾದೇವ
ಬಂದಿದ್ದರೆಲ್ಲ ಅವರಿಲ್ಲಿ ನಿನ್ನ ಸಾಕ್ಷಾತ್ಕಾರಕೆ
ಹಾರೈಸಿದ್ದೇನು ಶಿವನೆ
ಹೊಸಕಿ ಹೊಸಕಿ ಇಳೆಸುಡುಗಾಡಿಸಿ
ಕಣ್ರೆಪ್ಪೆ ಮುಚ್ಚಿ ಹಾಗೆಯೇ ಸ್ನಾನಕೆ ಕುಳಿತಿರುವೆ.
ಭೋರ್‍ಗರೆವ ಪ್ರಳಯರಾತ್ರಿಗೆ ಚಂದ್ರಕಾಂತನೇ…
ಭಾವಪರವಶದೊಳಗೆ ಭಜಿಸಿದ ಭಕ್ತರನು
ನಿನ್ನ ಮರಣಮೃದಂಗಕ್ಕೆ ತಾಂಡವನೃತ್ಯಕ್ಕೆ
ಎಳೆದೊಯ್ದೆಯೋ;
ನೀನೇ ಹುಚ್ಚೆದ್ದು ಕುಣಿದು
ಕಿಚ್ಚು ಶಮನಿಸಿಕೊಂಡೆಯೋ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ