Home / ಕವನ / ಕವಿತೆ / ಕೆದಾರ ಮರಣಮೃದಂಗ

ಕೆದಾರ ಮರಣಮೃದಂಗ

ದೈವ ಸನ್ನಿಧಿಯ ಚೈತನ್ಯದಲಿ
ಹಿಡಿದ ಹೂಮಾಲೆ ಧೂಪದೀಪ ಶ್ರೀಗಂಧ
ಸ್ವರ್ಗದೊಳಗೋಡಾಡಿ ದೇವಪಾದತಲದಲಿ ನಿಂತಕ್ಷಣ
ಕನಸು ನನಸಾಗಿಸಿಕೊಂಡ ಭಾವತೃಪ್ತಿ.

ಹರಹರ ಮಹಾದೇವ ಹರಹರ ಮಹಾದೇವ
ಪರಾತ್ಪರಾಶಿವನ ಮಂತ್ರ ಎಲ್ಲರೆದೆ ತುಂಬ
ಆ ಬೆಟ್ಟ ಈ ಬೆಟ್ಟ ಅಲ್ಲಿಯದೋ ಪ್ರಪಾತ
ಹಚ್ಚಹಸಿರು ಇಳಿಜಾರು ಅಂಕುಡೊಂಕು
ಮೋಡಮುಸುಕು ಮಳೆಯೊಳಗೆಲ್ಲ ಪ್ರತಿಧ್ವನಿ ತುಂಬಿ

ಭಾರಹೊತ್ತ ಇಳಿಸಂಜೆಗೆ ಸುಸ್ತಾಯಿತೆ?
ಇಲ್ಲವೇ ಇಲ್ಲ; ಸುತ್ತೆಲ್ಲ ದೀಪಸಾಲುಗಳು
ಝಗಮಗಿಸುವ ಜಾತ್ರಾಮೆರವಣಿಗೆ
ಘಂಟಾನಾದಕೆ ಪುರಾಣ ಪುಣ್ಯ ಎಚ್ಚೆತ್ತು

ಸಾಕ್ಷಾತ್ ಸ್ವರ್ಗ ಶಿವ ಪದತಲ
ಕಾತರದ ಮನಗಳಿಗೆ ಪುಣ್ಯ ಒಳಗಿಳಿಸಿಕೊಳ್ಳುವ ಕ್ಷಣ
ಪುಣ್ಯದ ಬೀಡು ಉಕ್ಕುಕ್ಕಿ ಹರಿವ
ಭಕ್ತರ ಭಾವನೊರೆತೊರೆ

ದೂರಬೆಟ್ಟದಾಚೆ ಅದೇನೋ ಹೊಂಚು
ಮೋಡಗಳಿಗೆ ರೆಕ್ಕೆಹೊಡೆದು ಮಳೆಯೊಳಗಿಳಿದ
ಸಂಚಿನಾ ಪಕ್ಷಿಗೆ ಕತ್ತಲೆ ಹಿತವಾಗಿ
ಅದರೊಡಲ ಸೀಳಿ ಗಕ್ಕನೆ ನೆಗೆಯಿತು ಕೆದಾರಕೊಳ್ಳಕೆ
ಬೆಚ್ಚಿಬಿದ್ದ ಬೆಟ್ಟದೊಡಲ ಗರ್‍ಭಪಾತ
ಕಲ್ಲುಮಣ್ಣು ಮರಳು ಗಿಡಮರಗಳು ಜರಿದು
ಕ್ಷಣಕ್ಷಣಕೂ ಧುಮ್ಮಿಕ್ಕಿ ಹೊರಹೊಮ್ಮಿ
ಹಿಡಿತಕೆ ಬಾರದೆ ಪ್ರಳಯತಾಂಡವ

ದೇವಸನ್ನಿಧಿಯ ಭಕ್ತರ ಧ್ವನಿ ಮಾರ್‍ಧನಿಸಿ
ಹರಹರ ಮಹಾದೇವ ಹರಹರಮಹಾದೇವ
ಕಾಪಾಡು ಮೃತ್ಯುಂಜಯ ದೈನ್ಯತೆಯ ಕೂಗು ಮತ್ತೆ
ಮತ್ತೆ ಹರಕೆಗಳೆದೆಗೆ ಮರಣಮೃದಂಗ ಸದ್ದು;
ನೋಡು ನೋಡುತಿರೆ ಮನೆಮಠಗಳು ಉರುಳಿ
ಅಲ್ಲೋಲಕಲ್ಲೋಲ ಕೊಚ್ಚಿ ಕೊಚ್ಚಿ ಹೋಗುವ ರಾಶಿರಾಶಿ ಹೆಣಗಳು.

ಅಲಕನಂದಾ ಮಂದಾಕಿನಿ ಭಾಗೀರತಿ
ಸುತ್ತಿಸುಳಿದಾಡಿ ಬಳುಕಿ ಶಿವನೊಲಿಸಲು ಸೋತರೆ?
ಕಠೋರ ಎದೆಯವನೆ ಕಲ್ಲಾಗಿ ಕುಳಿತವನೆ
ಮುಕ್ಕಣ್ಣನೆ ಕಿಚ್ಚು ರೊಚ್ಚು ಹೊತ್ತವನೆ
ವಿಜ್ಞಾನ ಜಗದ ಹಮ್ಮುಬಿಮ್ಮುಗಳಿಗೆ ಬೇಸರವಾಯಿತೆ!
ತಪಸ್ಸಿನೇಕಾಂತಕ್ಕೆ ಭಗ್ನವಾಯಿತೆ ತಂದೆ!!
ಬಾರಿಸಿಯೇ ಬಿಟ್ಟೆ ಮರಣಮೃದಂಗ

ಗಿರಿ ಕಂದರ ಕೊಳ್ಳಗಳೆದೆಗಳ ತುಂಬ
ಹೆಣಗಳ ರಾಶಿರಾಶಿ ಬೀಸಾಕಿ ತಣ್ಣಗಾದೆಯಾ ಮಹಾದೇವ
ಬಂದಿದ್ದರೆಲ್ಲ ಅವರಿಲ್ಲಿ ನಿನ್ನ ಸಾಕ್ಷಾತ್ಕಾರಕೆ
ಹಾರೈಸಿದ್ದೇನು ಶಿವನೆ
ಹೊಸಕಿ ಹೊಸಕಿ ಇಳೆಸುಡುಗಾಡಿಸಿ
ಕಣ್ರೆಪ್ಪೆ ಮುಚ್ಚಿ ಹಾಗೆಯೇ ಸ್ನಾನಕೆ ಕುಳಿತಿರುವೆ.
ಭೋರ್‍ಗರೆವ ಪ್ರಳಯರಾತ್ರಿಗೆ ಚಂದ್ರಕಾಂತನೇ…
ಭಾವಪರವಶದೊಳಗೆ ಭಜಿಸಿದ ಭಕ್ತರನು
ನಿನ್ನ ಮರಣಮೃದಂಗಕ್ಕೆ ತಾಂಡವನೃತ್ಯಕ್ಕೆ
ಎಳೆದೊಯ್ದೆಯೋ;
ನೀನೇ ಹುಚ್ಚೆದ್ದು ಕುಣಿದು
ಕಿಚ್ಚು ಶಮನಿಸಿಕೊಂಡೆಯೋ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...