Home / ಕವನ / ಕವಿತೆ / ಕೆದಾರ ಮರಣಮೃದಂಗ

ಕೆದಾರ ಮರಣಮೃದಂಗ

ದೈವ ಸನ್ನಿಧಿಯ ಚೈತನ್ಯದಲಿ
ಹಿಡಿದ ಹೂಮಾಲೆ ಧೂಪದೀಪ ಶ್ರೀಗಂಧ
ಸ್ವರ್ಗದೊಳಗೋಡಾಡಿ ದೇವಪಾದತಲದಲಿ ನಿಂತಕ್ಷಣ
ಕನಸು ನನಸಾಗಿಸಿಕೊಂಡ ಭಾವತೃಪ್ತಿ.

ಹರಹರ ಮಹಾದೇವ ಹರಹರ ಮಹಾದೇವ
ಪರಾತ್ಪರಾಶಿವನ ಮಂತ್ರ ಎಲ್ಲರೆದೆ ತುಂಬ
ಆ ಬೆಟ್ಟ ಈ ಬೆಟ್ಟ ಅಲ್ಲಿಯದೋ ಪ್ರಪಾತ
ಹಚ್ಚಹಸಿರು ಇಳಿಜಾರು ಅಂಕುಡೊಂಕು
ಮೋಡಮುಸುಕು ಮಳೆಯೊಳಗೆಲ್ಲ ಪ್ರತಿಧ್ವನಿ ತುಂಬಿ

ಭಾರಹೊತ್ತ ಇಳಿಸಂಜೆಗೆ ಸುಸ್ತಾಯಿತೆ?
ಇಲ್ಲವೇ ಇಲ್ಲ; ಸುತ್ತೆಲ್ಲ ದೀಪಸಾಲುಗಳು
ಝಗಮಗಿಸುವ ಜಾತ್ರಾಮೆರವಣಿಗೆ
ಘಂಟಾನಾದಕೆ ಪುರಾಣ ಪುಣ್ಯ ಎಚ್ಚೆತ್ತು

ಸಾಕ್ಷಾತ್ ಸ್ವರ್ಗ ಶಿವ ಪದತಲ
ಕಾತರದ ಮನಗಳಿಗೆ ಪುಣ್ಯ ಒಳಗಿಳಿಸಿಕೊಳ್ಳುವ ಕ್ಷಣ
ಪುಣ್ಯದ ಬೀಡು ಉಕ್ಕುಕ್ಕಿ ಹರಿವ
ಭಕ್ತರ ಭಾವನೊರೆತೊರೆ

ದೂರಬೆಟ್ಟದಾಚೆ ಅದೇನೋ ಹೊಂಚು
ಮೋಡಗಳಿಗೆ ರೆಕ್ಕೆಹೊಡೆದು ಮಳೆಯೊಳಗಿಳಿದ
ಸಂಚಿನಾ ಪಕ್ಷಿಗೆ ಕತ್ತಲೆ ಹಿತವಾಗಿ
ಅದರೊಡಲ ಸೀಳಿ ಗಕ್ಕನೆ ನೆಗೆಯಿತು ಕೆದಾರಕೊಳ್ಳಕೆ
ಬೆಚ್ಚಿಬಿದ್ದ ಬೆಟ್ಟದೊಡಲ ಗರ್‍ಭಪಾತ
ಕಲ್ಲುಮಣ್ಣು ಮರಳು ಗಿಡಮರಗಳು ಜರಿದು
ಕ್ಷಣಕ್ಷಣಕೂ ಧುಮ್ಮಿಕ್ಕಿ ಹೊರಹೊಮ್ಮಿ
ಹಿಡಿತಕೆ ಬಾರದೆ ಪ್ರಳಯತಾಂಡವ

ದೇವಸನ್ನಿಧಿಯ ಭಕ್ತರ ಧ್ವನಿ ಮಾರ್‍ಧನಿಸಿ
ಹರಹರ ಮಹಾದೇವ ಹರಹರಮಹಾದೇವ
ಕಾಪಾಡು ಮೃತ್ಯುಂಜಯ ದೈನ್ಯತೆಯ ಕೂಗು ಮತ್ತೆ
ಮತ್ತೆ ಹರಕೆಗಳೆದೆಗೆ ಮರಣಮೃದಂಗ ಸದ್ದು;
ನೋಡು ನೋಡುತಿರೆ ಮನೆಮಠಗಳು ಉರುಳಿ
ಅಲ್ಲೋಲಕಲ್ಲೋಲ ಕೊಚ್ಚಿ ಕೊಚ್ಚಿ ಹೋಗುವ ರಾಶಿರಾಶಿ ಹೆಣಗಳು.

ಅಲಕನಂದಾ ಮಂದಾಕಿನಿ ಭಾಗೀರತಿ
ಸುತ್ತಿಸುಳಿದಾಡಿ ಬಳುಕಿ ಶಿವನೊಲಿಸಲು ಸೋತರೆ?
ಕಠೋರ ಎದೆಯವನೆ ಕಲ್ಲಾಗಿ ಕುಳಿತವನೆ
ಮುಕ್ಕಣ್ಣನೆ ಕಿಚ್ಚು ರೊಚ್ಚು ಹೊತ್ತವನೆ
ವಿಜ್ಞಾನ ಜಗದ ಹಮ್ಮುಬಿಮ್ಮುಗಳಿಗೆ ಬೇಸರವಾಯಿತೆ!
ತಪಸ್ಸಿನೇಕಾಂತಕ್ಕೆ ಭಗ್ನವಾಯಿತೆ ತಂದೆ!!
ಬಾರಿಸಿಯೇ ಬಿಟ್ಟೆ ಮರಣಮೃದಂಗ

ಗಿರಿ ಕಂದರ ಕೊಳ್ಳಗಳೆದೆಗಳ ತುಂಬ
ಹೆಣಗಳ ರಾಶಿರಾಶಿ ಬೀಸಾಕಿ ತಣ್ಣಗಾದೆಯಾ ಮಹಾದೇವ
ಬಂದಿದ್ದರೆಲ್ಲ ಅವರಿಲ್ಲಿ ನಿನ್ನ ಸಾಕ್ಷಾತ್ಕಾರಕೆ
ಹಾರೈಸಿದ್ದೇನು ಶಿವನೆ
ಹೊಸಕಿ ಹೊಸಕಿ ಇಳೆಸುಡುಗಾಡಿಸಿ
ಕಣ್ರೆಪ್ಪೆ ಮುಚ್ಚಿ ಹಾಗೆಯೇ ಸ್ನಾನಕೆ ಕುಳಿತಿರುವೆ.
ಭೋರ್‍ಗರೆವ ಪ್ರಳಯರಾತ್ರಿಗೆ ಚಂದ್ರಕಾಂತನೇ…
ಭಾವಪರವಶದೊಳಗೆ ಭಜಿಸಿದ ಭಕ್ತರನು
ನಿನ್ನ ಮರಣಮೃದಂಗಕ್ಕೆ ತಾಂಡವನೃತ್ಯಕ್ಕೆ
ಎಳೆದೊಯ್ದೆಯೋ;
ನೀನೇ ಹುಚ್ಚೆದ್ದು ಕುಣಿದು
ಕಿಚ್ಚು ಶಮನಿಸಿಕೊಂಡೆಯೋ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...