Home / ಕವನ / ಕವಿತೆ / ಕರುಳಿನ ಕೊರಗು

ಕರುಳಿನ ಕೊರಗು


ಮನವು ನಿನಗಾಗಿಯೇ ಮೊರೆಯುತಿದೆಯೇ-ಚಿನ್ನ
ನೆನಹು ನಿಡುಸುಯಿಲುಗಳ ಕರೆಯುತಿದೆಯೆ?
ಕನಸು ನಿನ್ನದೆ ಚಿತ್ರ ಬರೆಯುತಿದೆಯೇ-ನಿನ್ನ
ಇನಿದುದನಿ ಕಿವಿಗಳನ್ನು ಕೊರೆಯುತ್ತಿದೆಯೆ!


ತೆಳುದುಟಿಯ ತಿಳಿಜೊಲ್ಲು, ಬಿಳಿಯ ಮೊಳೆವಲ್ಲು – ಆ
ಎಳಗಲ್ಲಗಳ ಚೆಲ್ಲು, ಮೆಲುನಗೆಯ ಸೊಲ್ಲು,
ಎಳಯುತ್ತಲಿಹವು ನನ್ನೊಳಗೆ ನಿನ್ನೊಡನೆಯೇ
ಎಳಗೂಸೆ, ನಿನ್ನೆದುರು ನನ್ನ ಬಲ ಹುಲ್ಲು!


ಕೆಳೆಯ ಬಳ್ಳಿಯ ಮೊಳೆಯು ನೀನೆಂದು ಇದ್ದೆ-ಕಂ-
ಮಲರು ತನಿವಣ್ಣುಗಳ ಬೆಳೆವೆನೆಂದಿದ್ದೆ.
ಅಳಿಯಾಸೆಯಲಿ ಕಾಲ ಸೆಳೆದೊಯ್ಯೆ ತನಗೆಂದು
ಅಳಿದು ಕೆಳೆಯಾಶೆ ನಾ ಕಳವಳದಿ ಬಿದ್ದೆ!


ಸಾಕಾಯಿತೇನೆ ಸವಿಸವಿಯ ಕೂಳು-ನಿನಗೆ
ಬೇಕಾಯಿತೇನೆ ಕಣ್ಣೀರ ಕಾಳು !
ಸಕ್ಕರೆಯ ತನಿವಾಲನೊಕ್ಕರಿಸಿ ಸವುಳುಪ್ಪ-
ನಿಕ್ಕಿರುವ ನೀರ ಬಯಸುವರೆ ಹೇಳು !


ಆಗಸದ ತೊಟ್ಟಿಲಲಿ ತೂಗಾಡಲೆಂದು-ನೀ
ಹೋಗಿರುವೆಯೆನುತ ಬಗೆ ಹೇಳುತಿಹುದು ;
ತೂಗುದೊಟ್ಟಿಲ ಹಗ್ಗವಾಗಬೇಕೆಂದು- ತಾ-
ನೇಗಲೂ ಕರುಳು ಹುರಿಗೊಳ್ಳುತಿಹುದು.


ಎಂದಿನಂದದ ನಗೆಯ ಚೆಂದಮೊಗದಿಂದ-ನೀ
ಬಂದು ಕುಳಿತಿರಲು ತೊಡೆಯಲ್ಲಿ ಕಂದ !
ಒಂದೆ ಸವಿಮುತ್ತಿಡುವೆನೆಂದಿರಲು ಎಚ್ಚತ್ತು
ಕಂದೆರೆಯಲರಿತೆ ಹಾಳ್‌ಗನಸಿನಂದ!


ಎನಿತೊ ಮುತ್ತಿಟ್ಟಿದ್ದೆ, ನಲಿವ ಪಟ್ಟಿದ್ದೆ-ಮೈ-
ಮನಗಳನು ತಣಿವಿನಲಿ ತೇಲಬಿಟ್ಟಿದ್ದೆ;
ಕನಸಿನೀ ಮುತ್ತಿನಾ ಗುಣವೇನೊ! ಎದ್ದಾಗ
ಮನಸು ಮೈ ಮುಳ್‌ಬಲೆಗೆ ಬಿದ್ದ ಹಾಗಿದ್ದೆ.


ಸಂತೆ ಬಯಲಾದಂತೆ ಹೃದಯ ಹಾಳು!- ಹೆರರ
ಸಂತಸದ ಸುಗ್ಗಿಯದು ನನಗೆ ಬೀಳು!
ತಂತಿ ಕಿಳ್ತಿಹ ವೀಣೆಯಂತೆ ಬಾಳು-ಇದರ
ಅಂತವೆಲ್ಲಿದೆ ಮಗುವ ಹೇಳು, ಹೇಳು!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...