Home / ಕವನ / ಕವಿತೆ / ಪೆರುಮಾಳನ ಕೆಂದಾವರೆ

ಪೆರುಮಾಳನ ಕೆಂದಾವರೆ

ಪೆರುಮಾಳನ ಕೆಂದಾವರೆ ಅರಳಿದೆ ನಸುನಕ್ಕೆ!
ಹರಿನೀಲದ ಬಾನೊಳಗಿನ ಸಿಂಧೂರದ ಚುಕ್ಕೆ.
ನಲಿವಿನ ನಲಿನವು ತಾನೇ ತಾನಾಗಿಯೆ ಬಿಚ್ಚೆ
ಏಳ್ಮಡಿ ಧಾಳಾಧೂಳಿಯ ಏಳ್ಳಣ್ಣದ ಕಿಚ್ಚೇ
ಕಾರಣತನುವಿನ ಕೃತಿಯೇ ಸವಿಯೇ ಹರಿವರಿಯೇ
ಮನುಹೃದಯದಿ ಚಿಗಿ ನಿಗಿನಿಗಿ ಜಿಗಿ ಮೇಲಕ್ಕುರಿಯೇ
ಹೆಸರಾಚೆಯ ಭಾವದ ಹೂ ಸುರಿಸಿದ ಹಿರಿ ಹಿಗ್ಗೇ
ಬೆಡಗಿನ ನುಡಿ ಮೌನದ ಕುಡಿಮುಗುಳೇ ಮುಮ್ಮೊಗ್ಗೇ.

ಪೆರುಮಾಳನ ಕೆಂದಾವರೆ ಬೆಳಕಿನ ಚೆಂದಿರುಳೇ
ಬಾಳಿನ ತಿರುಕೋಡೊಳಗಿನ ಬಲು ಅರಿವಿನ ಅರುಳೇ
ಕಗ್ಗೊನೆಗಾಣ್ಕೆಯ ಒಳಗಿನ ಅಕಲಂಕಿತ ಕೆಚ್ಚೇ
ನೆಲದೆದೆಯಲಿ ನೆಲೆಮಾಡೆಲೆ ಹೊನ್‌ಹೂ ಮನಮೆಚ್ಚೇ
ಗುಟ್ಟೇ ಹುಟ್ಟೇ ಮೊಟ್ಟೆಯೆ ಹುರುಳಡಗಿದ ಹೆಸರೇ
ನಿಷ್ಕಾಲದ ನಡುನೆತ್ತಿಯ ನೇಸರೆ ಹೊಂಬಸಿರೇ
ದಿವ್ಯಮುಹೂರ್ತದ ಅತಿಥಿಯೆ ಕಾದಿರುವದು ಈಗ
ಮೂರಾಳದ ಕತ್ತಲೆ ಅದ ಬೆಳಗಿಸು ಬಾ ಬೇಗ.

ಪೆರುಮಾಳನ ಕೆಂದಾವರೆ ರತ್ನಪ್ರಭೆ ಬೀರೆ.
ಇರುಳಿಂಗಿತು ಮರ್ತ್ಯರ ಸಂಕಲ್ಪವೆ ಹೊತ್ತುತಿರೆ
ಆನಂತ್ಯದ ತಪಚಿತ್ರಿತ ಚೀನಾಂಶುಕನಾಗೆ
ದಿವ್ಯಪ್ರತಾಪದ ಮಾಣಿಕ್ಯದ ಮೂರ್ತಿಯ ಹಾಗೆ
ಕಾರ್ಮೋಡದ ತಿಳಿನೀರಲಿ ಕೆಮ್ಮಿಂಚುರಿವಂತೆ
ಡಾಳಿಂಬರ ಮೈದುಂಬಿರೆ ತಾನೇ ಬಿರಿವಂತೆ
ನಿನ್ನಾ ಹಂಚಿಕೆ ಮಾಟಕೆ ಬೆಳಗಾದೊಲು ಹಣತೆ
ವಿಗ್ರಹಗಂಡೊಲು ಅಮರತೆ ನರನಾರಾಯಣತೆ.

ಪೆರುಮಾಳನ ಕೆಂದಾವರೆ ಬಾಳಿನ ತಾಣವಿದೋ
ವರ್ಣಕ್ರಮ ಬಣ್ಣ ಸರಂಗೊಂಡಿಹ ವೀಣೆಯಿದೋ
ದಿವ್ಯೇಚ್ಛೆಯೆ ಮೈದಾಳಿದೆ ನೇರಳೆ ಬಣ್ಣದೊಳು
ಶತದಳದೊಲು ದಳದಳದಲಿ ಮಣ್ಣಿನ ಕಣ್ಣಿನೊಳು
ನೆಲ ಬಾನಿಗು ನಿಚ್ಚಣಿಕೆಯ ನಿಲ್ಲಿಸು ನಿಲ್ಲಿಸೆಲೇ
ಮರ್ತ್ಯವು ಮರಣವನರಿಯದ ಹಾಗಿರಲಿಲ್ಲಿ ಸೆಲೆ
ಮಧುಮಂತ್ರದ ಛಂದಸ್ಸನು ಪಲ್ಲಟಿಸುವ ಹಾಗೆ
ಕಾಲನ ಕಂದರ ಮಾಡೈ ಮಾರ್ಕಂಡೆಯರಾಗೆ.

ಪೆರುಮಾಳನ ಕೆಂದಾವರೆ ನಲುಮೆಯ ನಲಿನವಿದೋ
ಗುರುಕಾರುಣ್ಯದ ಭಾವಜ್ವಾಲಾಮಾಲೆಯಿದೋ
ಎಂದೆಂದಿನ ಮೊಗದೊಳಗಿಹ ಹಿಗ್ಗಿನ ನಾಚಿಕೆಯೋ
ಬಾಳಿನ ಆಳವ ತುಂಬಿದ ಮಾಣಿಕವೀಚಿಕೆಯೋ
ಪ್ರಕೃತಿಯ ಪಾತಾಳದ ಎದೆಯಾಳವೆ ಬಿಕ್ಕುತಿರೆ
ಬಾ ಬಲವೇ ಬಾ ನಲಿವೇ ಚೆಲುವೇ ಉಕ್ಕುತಿರೆ.
ಬಿಸವಂದದ ನಂದನಬನ ಮಾಡೀ ಜಗವಿಂದು
ಬಾಳಾಗಲಿ ಚಿನ್ಮೋದದ ಮುತ್ತಿನ ಸರವೊಂದು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...