Home / ಕವನ / ಕವಿತೆ / ಬಯಕೆ

ಬಯಕೆ

ನಿನ್ನನರಿಯುವ ಅರಿವ ಚೆನ್ನ ನನಗೀಯುವುದು,
ನನ್ನ ಈ ಬಯಕೆಯನು ಹಣ್ಣಿಸೈ ನೀನೊಲಿದು !


ಹೆರರು ತನ್ನವರೆಂಬ ಅರಿಕೆ ನಸುವಿಲ್ಲದೆಯೆ
ನೆರೆದಿರುವ ಗರತಿಯರ ನೆರವಿಯನು ಕಡೆಗಣಿಸಿ,
ತೊರೆದ ಮೊಲೆವಾಲುಣಿಸಿ ಹೊರೆಯುವಾ ತಾಯನ್ನು
ಮರೆಯದೇ ಗುರುತಿಸುವ ಕಿರಿಯ ತರಳನ ತೆರದಿ-
ನಿನ್ನನರಿಯುವ ಅರಿವ
ಚೆನ್ನ ನನಗೀಯುವುದು !


ಚೆಲು-ಚೆಲುವ ಅಲರುಗಳು ಇಳೆಯೊಳಗೆ ಬಹಳಿರಲು
ಅಲರುಣಿಯು ಹುರುಳಿರದ ಅಲರುಗಳನುಳಿದುಳಿದು
ಉಲಿದಾಡಿ ಹಾರಾಡಿ ನಲಿಯುತಿರುವಾಗಲೇ
ಬಲುಬಂಡ ತಳೆದಿರುವ ಅಲರುಗಳ ತಿಳಿವಂತೆ-
ನರಿರಿಯುವ ಅರಿವ
ಚೆನ್ನ ನನಗೀಯುವುದು !


ಸಾಕಿದವನೆನ್ನದೇ ನೂಕುತಿರಿಯುವ ತುಂಟ
ಆಕಳೊಲು ನನ್ನ ಬಗೆ ಕಾಕುತನವನು ತಳೆದು,
ಬೇಕುಬೇಕಾದಂತೆ ಅಲೆಯುತಿದೆ ಅದನಿಂದು
ಜೋಕೆಯಲಿ ಒಂದೆಡೆಗೆ ಬಿಗಿಯಲಿಕೆ ಬರುವಂತೆ
ನಿನ್ನನರಿಯುವ ಅರಿವ
ಚೆನ್ನ, ನನಗೀಯುವುದು!


ಕಂಪ ಕಾಣುವ, ಮೂಗನಿಂಪನರಿಯುವ ಕಿವಿಯ,
ಸೊಂಪ ನೋಡುವ ಕಣ್ಣ, ತಂಪ ತಿಳಿಯುವ ತೊವಲ,
ಕೊಂಪೆಯೊಳು ಹಾಕು ಇವು ಬೇಡಬೇಡವೊ ಸಾಕು,
ಪೆಂಪಿಗನೆ ನಾನಿನ್ನ ತಿಳಿಯುವುದದೇ ಬೇಕು !
ನಿನ್ನನರಿಯುವ ಅರಿವ
ಚೆನ್ನ ನನಗೀಯುವುದು !
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...