Home / ಕವನ / ಕವಿತೆ / ಹೂವಡಿಗಿತ್ತಿ

ಹೂವಡಿಗಿತ್ತಿ

ನಾದನಾಮಕ್ರಿಯಾ

ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ಸಂಪಗೆಯ ಮಲ್ಲಿಗೆಯ
ಸೊಂಪು ಸೇವಂತಿಗೆಯ
ಕಂಪೊಗೆವ ಜಾಜಿಯನು ಕೊಳ್ಳಿರಮ್ಮಾ!
ಕೆಂಪು-ಬಿಳಿ ತಾವರೆಯ
ಸುರಯಿ ಸುರಹೊನ್ನೆಗಳ
ಪೆಂಪುವಡೆದರಳುಗಳ ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ಒಮ್ಮೆಯೇ ಮೂಸಿದರು
ಜುಮ್ಮು ಜುಮ್ಮೆನುವುದೆದೆ,
ಕಮ್ಮನೆಯ ಹೂಗಳಿವು ಕೊಳ್ಳಿರಮ್ಮಾ!
ನಮ್ಮ ತೊಟಿಗರಣ್ಣ
ಹೆಮ್ಮೆಯಲಿ ಬೆಳೆಯಿಸಿದ
ಸೊಮ್ಮು ಈ ಅರಳುಗಳು, ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ… ಹೂವ ಕೊಳ್ಳಿರಮ್ಮಾ !


ಬರಿಯ ಹೊರಬಣ್ಣದಲಿ
ಮಿರುಗಿ ಕಣ್ಣನು ಸೆಳೆವ
ಬರಡುಗಂಪಿನವಲ್ಲ, ಕೊಳ್ಳಿರಮ್ಮಾ!
ಹುರುಳನೆಲ್ಲೆಡೆಯಲಿಯು
ಹರಡಿ ಮಂದಿಯ ಮನವ
ಬೆರಗುಗೊಳಿಸುವ ಅರಳು, ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ಬೆಳಗುಜಾವದಿ ಮೂಡಿ-
ದೆಳ ನೇಸರನು ನೋಡಿ
ನಲಿದು ಬಾಯ್ದೆರೆದರಳ ಕೊಳ್ಳಿರಮ್ಮಾ!
ಎಳೆಯ ನೇಸರು ಹೊನ್ನ
ಸೆಳೆಗದಿರ ಸೋಂಕಿಸಲು
ತಳೆದಿಹವು ಹೊಸಚೆಲುವ ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ !


ಅಳಿಯ ಬಳಗದ ಕಣ್ಣು-
ಗಳನು ತಪ್ಪಿಸಿ ತಂದೆ
ಗಳಿಲನೇ ನೀವೀಗ ಕೊಳ್ಳಿರಮ್ಮಾ!
ಅಳಿಯ ಬಳಗದ ಬಾಯ್ಗೆ
ಸಿಲುಕಿದರೆ ಈ ಅರಳಿ-
ನೆಳ ಎಸಳು ಸಹ ಸಿಗದು, ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ದೂರದೂರದಿ ನೋಡೆ
ತೋರದಿವುಗಳ ಸೊಬಗು
ಸೇರಿಸಲು ಮುಡಿಗಿವನು ಕೊಳ್ಳಿರಮ್ಮಾ!
ಸೇರಿಸಲು ಮುಡಿಗಿವನು
ಮುನಿದಿರೆಯು ನಿಮ್ಮವನು
ಸಾರಿಬರುವನು ಬಳಿಗೆ, ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ಸುರಲೋಕದರಳುಗಳು
ಸರಿಯೆನಿಸವಿವುಗಳಿಗೆ,
ಗರತಿಯರು ನೆರೆದೀಗ ಕೊಳ್ಳಿರಮ್ಮಾ!
ಗರತಿಯರೆ ನೀವು ಮುಡಿ-
ಗಿರಿಸಿದರೆ ಈ ಅರಳ
ಸುರರನ್ನು ಮೀರುವಿರಿ! ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ಮಡದಿಯರು ಮುಡಿಮುಡಿದು
ಬೆಡಗ ಬಳೆಯಿಸಿರೆಂದು
ಪಡುವೆನಾ ತವಕವನು ಕೊಳ್ಳಿರಮ್ಮಾ!
ಮುಡಿಯದಿರೆ ಈ ಹೂವು
ಕೆಡುತೆ ಸುಮ್ಮಗೆ ಬಾಡಿ
ಹುಡಿಗೂಡಿ ಹೋಗುವುವು; ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ಬೆಡಗಿನರಳಿವು ಬರಿದೆ
ಹುಡಿಗೂಡಿದರೆ ನಾನು
ತಡೆಯೆನೆದೆ ಮಿಡುಕನ್ನು ಕೊಳ್ಳಿರಮ್ಮಾ!
ಒಡೆಯ ತೋಟಿಗರಣ್ಣ
ಒಲವಿನಲಿ ಕೊಟ್ಟರಳ
ಕೆಡಿಸುವುದು ಸರಿಯಹುದೆ? ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!

೧೦
ಹುಡಿಯ ಕೂಡಿಸಿ ಹೂವ
ಕೆಡಿಸುವುದಕಿಂತಲೂ
ಕೊಡುವೆ ಹಾಗೆಯೆ ಮುಡಿದುಕೊಳ್ಳಿರಮ್ಮಾ!
ಮುಡಿಯೆ ಅರಳನು ನಿಮ್ಮ
ಬೆಡಗನ್ನು ನೋಡುತಲಿ
ಪಡೆವೆ ನಾ ನಲಿವನ್ನು ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!

೧೧
ಸಂಪಗೆಯ ಮಲ್ಲಿಗೆಯ
ಸೊಂಪು ಸೇವಂತಿಗೆಯ
ಕಂಪೊಗೆವ ಜಾಜಿಯನು ಕೊಳ್ಳಿರಮ್ಮಾ!
ಕೆಂಪು-ಬಿಳಿ ತಾವರೆಯ
ಸುರಯಿ ಸುರಹೊನ್ನೆಗಳ
ಪೆಂಪುವಡೆದರಳುಗಳ ಮುಡಿಯಿರಮ್ಮಾ!
ಮುಡಿಯಿರಮ್ಮಾಽ ಬೆಡಗ ಪಡೆಯಿರಮ್ಮಾ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...