Home / ಕವನ / ಕವಿತೆ / ಹೂವಡಿಗಿತ್ತಿ

ಹೂವಡಿಗಿತ್ತಿ

ನಾದನಾಮಕ್ರಿಯಾ

ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ಸಂಪಗೆಯ ಮಲ್ಲಿಗೆಯ
ಸೊಂಪು ಸೇವಂತಿಗೆಯ
ಕಂಪೊಗೆವ ಜಾಜಿಯನು ಕೊಳ್ಳಿರಮ್ಮಾ!
ಕೆಂಪು-ಬಿಳಿ ತಾವರೆಯ
ಸುರಯಿ ಸುರಹೊನ್ನೆಗಳ
ಪೆಂಪುವಡೆದರಳುಗಳ ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ಒಮ್ಮೆಯೇ ಮೂಸಿದರು
ಜುಮ್ಮು ಜುಮ್ಮೆನುವುದೆದೆ,
ಕಮ್ಮನೆಯ ಹೂಗಳಿವು ಕೊಳ್ಳಿರಮ್ಮಾ!
ನಮ್ಮ ತೊಟಿಗರಣ್ಣ
ಹೆಮ್ಮೆಯಲಿ ಬೆಳೆಯಿಸಿದ
ಸೊಮ್ಮು ಈ ಅರಳುಗಳು, ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ… ಹೂವ ಕೊಳ್ಳಿರಮ್ಮಾ !


ಬರಿಯ ಹೊರಬಣ್ಣದಲಿ
ಮಿರುಗಿ ಕಣ್ಣನು ಸೆಳೆವ
ಬರಡುಗಂಪಿನವಲ್ಲ, ಕೊಳ್ಳಿರಮ್ಮಾ!
ಹುರುಳನೆಲ್ಲೆಡೆಯಲಿಯು
ಹರಡಿ ಮಂದಿಯ ಮನವ
ಬೆರಗುಗೊಳಿಸುವ ಅರಳು, ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ಬೆಳಗುಜಾವದಿ ಮೂಡಿ-
ದೆಳ ನೇಸರನು ನೋಡಿ
ನಲಿದು ಬಾಯ್ದೆರೆದರಳ ಕೊಳ್ಳಿರಮ್ಮಾ!
ಎಳೆಯ ನೇಸರು ಹೊನ್ನ
ಸೆಳೆಗದಿರ ಸೋಂಕಿಸಲು
ತಳೆದಿಹವು ಹೊಸಚೆಲುವ ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ !


ಅಳಿಯ ಬಳಗದ ಕಣ್ಣು-
ಗಳನು ತಪ್ಪಿಸಿ ತಂದೆ
ಗಳಿಲನೇ ನೀವೀಗ ಕೊಳ್ಳಿರಮ್ಮಾ!
ಅಳಿಯ ಬಳಗದ ಬಾಯ್ಗೆ
ಸಿಲುಕಿದರೆ ಈ ಅರಳಿ-
ನೆಳ ಎಸಳು ಸಹ ಸಿಗದು, ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ದೂರದೂರದಿ ನೋಡೆ
ತೋರದಿವುಗಳ ಸೊಬಗು
ಸೇರಿಸಲು ಮುಡಿಗಿವನು ಕೊಳ್ಳಿರಮ್ಮಾ!
ಸೇರಿಸಲು ಮುಡಿಗಿವನು
ಮುನಿದಿರೆಯು ನಿಮ್ಮವನು
ಸಾರಿಬರುವನು ಬಳಿಗೆ, ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ಸುರಲೋಕದರಳುಗಳು
ಸರಿಯೆನಿಸವಿವುಗಳಿಗೆ,
ಗರತಿಯರು ನೆರೆದೀಗ ಕೊಳ್ಳಿರಮ್ಮಾ!
ಗರತಿಯರೆ ನೀವು ಮುಡಿ-
ಗಿರಿಸಿದರೆ ಈ ಅರಳ
ಸುರರನ್ನು ಮೀರುವಿರಿ! ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ಮಡದಿಯರು ಮುಡಿಮುಡಿದು
ಬೆಡಗ ಬಳೆಯಿಸಿರೆಂದು
ಪಡುವೆನಾ ತವಕವನು ಕೊಳ್ಳಿರಮ್ಮಾ!
ಮುಡಿಯದಿರೆ ಈ ಹೂವು
ಕೆಡುತೆ ಸುಮ್ಮಗೆ ಬಾಡಿ
ಹುಡಿಗೂಡಿ ಹೋಗುವುವು; ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ಬೆಡಗಿನರಳಿವು ಬರಿದೆ
ಹುಡಿಗೂಡಿದರೆ ನಾನು
ತಡೆಯೆನೆದೆ ಮಿಡುಕನ್ನು ಕೊಳ್ಳಿರಮ್ಮಾ!
ಒಡೆಯ ತೋಟಿಗರಣ್ಣ
ಒಲವಿನಲಿ ಕೊಟ್ಟರಳ
ಕೆಡಿಸುವುದು ಸರಿಯಹುದೆ? ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!

೧೦
ಹುಡಿಯ ಕೂಡಿಸಿ ಹೂವ
ಕೆಡಿಸುವುದಕಿಂತಲೂ
ಕೊಡುವೆ ಹಾಗೆಯೆ ಮುಡಿದುಕೊಳ್ಳಿರಮ್ಮಾ!
ಮುಡಿಯೆ ಅರಳನು ನಿಮ್ಮ
ಬೆಡಗನ್ನು ನೋಡುತಲಿ
ಪಡೆವೆ ನಾ ನಲಿವನ್ನು ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!

೧೧
ಸಂಪಗೆಯ ಮಲ್ಲಿಗೆಯ
ಸೊಂಪು ಸೇವಂತಿಗೆಯ
ಕಂಪೊಗೆವ ಜಾಜಿಯನು ಕೊಳ್ಳಿರಮ್ಮಾ!
ಕೆಂಪು-ಬಿಳಿ ತಾವರೆಯ
ಸುರಯಿ ಸುರಹೊನ್ನೆಗಳ
ಪೆಂಪುವಡೆದರಳುಗಳ ಮುಡಿಯಿರಮ್ಮಾ!
ಮುಡಿಯಿರಮ್ಮಾಽ ಬೆಡಗ ಪಡೆಯಿರಮ್ಮಾ!
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...