ಹೂವಡಿಗಿತ್ತಿ

ನಾದನಾಮಕ್ರಿಯಾ

ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ಸಂಪಗೆಯ ಮಲ್ಲಿಗೆಯ
ಸೊಂಪು ಸೇವಂತಿಗೆಯ
ಕಂಪೊಗೆವ ಜಾಜಿಯನು ಕೊಳ್ಳಿರಮ್ಮಾ!
ಕೆಂಪು-ಬಿಳಿ ತಾವರೆಯ
ಸುರಯಿ ಸುರಹೊನ್ನೆಗಳ
ಪೆಂಪುವಡೆದರಳುಗಳ ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ಒಮ್ಮೆಯೇ ಮೂಸಿದರು
ಜುಮ್ಮು ಜುಮ್ಮೆನುವುದೆದೆ,
ಕಮ್ಮನೆಯ ಹೂಗಳಿವು ಕೊಳ್ಳಿರಮ್ಮಾ!
ನಮ್ಮ ತೊಟಿಗರಣ್ಣ
ಹೆಮ್ಮೆಯಲಿ ಬೆಳೆಯಿಸಿದ
ಸೊಮ್ಮು ಈ ಅರಳುಗಳು, ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ… ಹೂವ ಕೊಳ್ಳಿರಮ್ಮಾ !


ಬರಿಯ ಹೊರಬಣ್ಣದಲಿ
ಮಿರುಗಿ ಕಣ್ಣನು ಸೆಳೆವ
ಬರಡುಗಂಪಿನವಲ್ಲ, ಕೊಳ್ಳಿರಮ್ಮಾ!
ಹುರುಳನೆಲ್ಲೆಡೆಯಲಿಯು
ಹರಡಿ ಮಂದಿಯ ಮನವ
ಬೆರಗುಗೊಳಿಸುವ ಅರಳು, ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ಬೆಳಗುಜಾವದಿ ಮೂಡಿ-
ದೆಳ ನೇಸರನು ನೋಡಿ
ನಲಿದು ಬಾಯ್ದೆರೆದರಳ ಕೊಳ್ಳಿರಮ್ಮಾ!
ಎಳೆಯ ನೇಸರು ಹೊನ್ನ
ಸೆಳೆಗದಿರ ಸೋಂಕಿಸಲು
ತಳೆದಿಹವು ಹೊಸಚೆಲುವ ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ !


ಅಳಿಯ ಬಳಗದ ಕಣ್ಣು-
ಗಳನು ತಪ್ಪಿಸಿ ತಂದೆ
ಗಳಿಲನೇ ನೀವೀಗ ಕೊಳ್ಳಿರಮ್ಮಾ!
ಅಳಿಯ ಬಳಗದ ಬಾಯ್ಗೆ
ಸಿಲುಕಿದರೆ ಈ ಅರಳಿ-
ನೆಳ ಎಸಳು ಸಹ ಸಿಗದು, ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ದೂರದೂರದಿ ನೋಡೆ
ತೋರದಿವುಗಳ ಸೊಬಗು
ಸೇರಿಸಲು ಮುಡಿಗಿವನು ಕೊಳ್ಳಿರಮ್ಮಾ!
ಸೇರಿಸಲು ಮುಡಿಗಿವನು
ಮುನಿದಿರೆಯು ನಿಮ್ಮವನು
ಸಾರಿಬರುವನು ಬಳಿಗೆ, ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ಸುರಲೋಕದರಳುಗಳು
ಸರಿಯೆನಿಸವಿವುಗಳಿಗೆ,
ಗರತಿಯರು ನೆರೆದೀಗ ಕೊಳ್ಳಿರಮ್ಮಾ!
ಗರತಿಯರೆ ನೀವು ಮುಡಿ-
ಗಿರಿಸಿದರೆ ಈ ಅರಳ
ಸುರರನ್ನು ಮೀರುವಿರಿ! ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ಮಡದಿಯರು ಮುಡಿಮುಡಿದು
ಬೆಡಗ ಬಳೆಯಿಸಿರೆಂದು
ಪಡುವೆನಾ ತವಕವನು ಕೊಳ್ಳಿರಮ್ಮಾ!
ಮುಡಿಯದಿರೆ ಈ ಹೂವು
ಕೆಡುತೆ ಸುಮ್ಮಗೆ ಬಾಡಿ
ಹುಡಿಗೂಡಿ ಹೋಗುವುವು; ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!


ಬೆಡಗಿನರಳಿವು ಬರಿದೆ
ಹುಡಿಗೂಡಿದರೆ ನಾನು
ತಡೆಯೆನೆದೆ ಮಿಡುಕನ್ನು ಕೊಳ್ಳಿರಮ್ಮಾ!
ಒಡೆಯ ತೋಟಿಗರಣ್ಣ
ಒಲವಿನಲಿ ಕೊಟ್ಟರಳ
ಕೆಡಿಸುವುದು ಸರಿಯಹುದೆ? ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!

೧೦
ಹುಡಿಯ ಕೂಡಿಸಿ ಹೂವ
ಕೆಡಿಸುವುದಕಿಂತಲೂ
ಕೊಡುವೆ ಹಾಗೆಯೆ ಮುಡಿದುಕೊಳ್ಳಿರಮ್ಮಾ!
ಮುಡಿಯೆ ಅರಳನು ನಿಮ್ಮ
ಬೆಡಗನ್ನು ನೋಡುತಲಿ
ಪಡೆವೆ ನಾ ನಲಿವನ್ನು ಕೊಳ್ಳಿರಮ್ಮಾ!
ಕೊಳ್ಳಿರಮ್ಮಾಽ ಹೂವ ಕೊಳ್ಳಿರಮ್ಮಾ!

೧೧
ಸಂಪಗೆಯ ಮಲ್ಲಿಗೆಯ
ಸೊಂಪು ಸೇವಂತಿಗೆಯ
ಕಂಪೊಗೆವ ಜಾಜಿಯನು ಕೊಳ್ಳಿರಮ್ಮಾ!
ಕೆಂಪು-ಬಿಳಿ ತಾವರೆಯ
ಸುರಯಿ ಸುರಹೊನ್ನೆಗಳ
ಪೆಂಪುವಡೆದರಳುಗಳ ಮುಡಿಯಿರಮ್ಮಾ!
ಮುಡಿಯಿರಮ್ಮಾಽ ಬೆಡಗ ಪಡೆಯಿರಮ್ಮಾ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುಂದರ ಶ್ರೀಮಂತ
Next post ಅದ್ವೈತ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

cheap jordans|wholesale air max|wholesale jordans|wholesale jewelry|wholesale jerseys