Home / ಕವನ / ಕವಿತೆ / ಕಡಲಿನಾಳದ ನದಿ

ಕಡಲಿನಾಳದ ನದಿ


ಜೀಯಾ
ಹೀಗೆ ನಿನ್ನ ಮುಂದೆ
ಒಳಗಿನದೆಲ್ಲ ಸುರಿದು
ಖಾಲಿಯಾಗಿ ನಿಂತುದು
ಅದೆಷ್ಟನೆಯ ಸಲವೋ
ಲೆಕ್ಕವಿಟ್ಟಿರಬಹುದು ನೀನು.
ಮತ್ತೆ ಮತ್ತೆ ನನ್ನ ತುಂಬುವವನು
ಕರುಣಾಳು ನೀನೇ ತಾನೇ?

ಅಬ್ಬರದ ಶರಧಿಯಲಿ
ಅಲೆವ ಮೀನು ನಾನು
ದಿಕ್ಕು ತಪ್ಪುತ್ತ ಬೆಚ್ಚಿ ಸ್ತಬ್ಧವಾಗುತ್ತ
ಅಲೆಗಳು ಕೊಂಡೊಯ್ದಾಗ ದಡಕ್ಕೆ
ಗುರುತ್ವ ಸೆಳೆದರೆ ಒಳಕ್ಕೆ
ಸಾಕು ಬೇಕುಗಳ ಏತಾಪಾತಾ
ಈಜುವುದೆಂಬುದೂ ಈಗ
ಜಾಡಿಗೆ ಬಿದ್ದ ಉಸಿರು.

ನೀರೆಣ್ಣೆಗೆ ಬೆಂಕಿ ಹೊತ್ತಿ
ಶರಧಿಯ ಬಾಹುಗಳ
ಚಾಚುತ್ತವೆ ಕೆನ್ನಾಲಿಗೆ
ಅತ್ತಲಿಂದ ನುಣುಚಿಕೊಂಡು
ಇತ್ತ ತಿರುಗಿದರೆ
ಉಸಿರು ಕಟ್ಟುವ
ಮತ್ತೆ ಬಿಡುವ ಪ್ರಾಣಾಯಾಮ.
ತುಂಬುವವರ ಸುರಿಯುವವರ
ಯಾರ್‍ಯಾರದೋ ಕೈಚಳಕ!
ಒಳಗಿನ ಹೊರಗಿನ
ಯಾವ್ಯಾವುದೋ ಅಸಂಬದ್ಧ ಲೆಕ್ಕ.


ಮೊರೆವ ಕಡಲಿನಾಳದಲೆಲ್ಲೋ
ತಣ್ಣಗೆ ಹರಿವ ನದಿಯಿದೆಯಂತೆ
ಅಲ್ಲಿ ಸಿಹಿ ನೀರಿನ
ನುಣುಪು ಮರಳಿನೆದೆ
ಮೇಲೆ ನೀರು
ಸದ್ದಿಲ್ಲದೇ ಮಲಗುತ್ತದಂತೆ
ಒಂದಕ್ಕೆ ಇನ್ನೊಂದು
ಮೌನದಲಿ ಲಾಲಿ
ಹಾಡುತ್ತವಂತೆ
ಕಾಣದಂತೆ ಎತ್ತಲೋ ಸಾಗುತ್ತವಂತೆ

ಹೊರಗೆಂಬುದಿಲ್ಲ
ಒಳಗೆಂಬುದಿಲ್ಲ.

ತೋರು ನನಗೆ ಜೀಯಾ
ಆ ಕಡಲಿನಾಳದ
ನದಿಯ ತೋರು ನನಗೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...