Home / ಕವನ / ಕವಿತೆ / ತನ್ನಷ್ಟಕ್ಕೆ

ತನ್ನಷ್ಟಕ್ಕೆ

ಭೂಮಿಯಾಳದಲ್ಲಿ ಮಾತ್ರ
ಈಜುವ ಪುರಾವೆಗಳಿವೆ
ಈ ಮರದ ಬೇರಿಗೆ
ಹೆಬ್ಬಂಡೆಯೂ ಮಿದು ಮಣ್ಣಾಗಿ
ಹುಡಿ ಹುಡಿಯೂ
ಮಿಸುಕುತ್ತದಂತೆ

ಕಾಣಲಾರದು
ನಮ್ಮಂಥ ಪಾಮರರಿಗೆ!

ಈ ಮರದ ಕೊಂಬೆ ಕೊಂಬೆಗಳಲ್ಲಿ
ನೇತು ಬೀಳಬಹುದು ಯಾರೂ
ಉಯ್ಯಾಲೆಯಾಡಬಹುದು
ಹತ್ತಿ ಕುಪ್ಪಳಿಸಿ ಕುಣಿದು
ಮರಹತ್ತಿ ಮರಕೋತಿಯಾಡಬಹುದು
ನೆಳಲಿನಲಿ ಕುಂಟೋಬಿಲ್ಲೆ……
ರೆಂಬೆಗಳ ಮರೆಯಲ್ಲಿ
ಗೂಡು ಕಟ್ಟಬಹುದು
ತಾವು ಹುಡುಕಬಹುದು!

ಮರ ಸಿಡುಕುವುದಿಲ್ಲ
ಚಡಪಡಿಸಿ ನೂಕುವುದಿಲ್ಲ
ಅಷ್ಟೇ ಅಲ್ಲ
ಯಾವ ಮಾಂತ್ರಿಕತೆಗೂ
ಮಿಡುಕುವುದೂ ಇಲ್ಲ!

ಅದು ಕೇಳುವುದಿಲ್ಲ ನೋಡುವುದಿಲ್ಲ
ನುಡಿಯುವುದೂ ಇಲ್ಲ.
ಅದರ ಅತೀತ ಬೇರಿಗೇ
ಪಂಚೇಂದ್ರಿಯಗಳಂಟಿಕೊಂಡು
ಬೇರು ಮಾತ್ರ ತುಡಿಯುವುದಂತೆ
ಒಳಗೇ,
ಏನು ಮಾಡುವುದು
ನಮ್ಮ ಕಣ್ಣಿಗದು ಕಾಣುವುದೇ ಇಲ್ಲ!

ಗಾಳಿ ಬೀಸಿದಾಗ
ಮಳೆ ಬಿದ್ದಾಗ
ಬಿಸಿಲು ಕಾಯಿಸಿದಾಗ
ಆ ಕ್ಷಣಕ್ಕೆ ಒಡ್ಡಿಕೊಳ್ಳುವುದು ಎಲೆಯೇ
ಮರ ನಿಂತಿರುತ್ತದಷ್ಟೇ ತನ್ನಷ್ಟಕ್ಕೇ!

ಏನೂ ಆಗಿಲ್ಲದಂತೆ!

ಅದಕ್ಕೆ ಅದರದ್ದೇ
ಜನ್ಮಾಂತರದ ಕಥೆಗಳು
ಜೊತೆಗೇ
ಹೊಳೆದೂ ಹೊಳೆಯದ ನಕ್ಷತ್ರಗಳು.
ನಂಟಿದ್ದೂ ಅಂಟಿಯೂ ಅಂಟದಂತೆ
ಹಿಂದಿಲ್ಲದೇ ಮುಂದಿಲ್ಲದೇ
ಬಯಲಲ್ಲಿ ವಿರಾಗಿಯಂತೆ
ನಿಂತ ಮರಕ್ಕೆ

ನಾವೆಷ್ಟಾದರೂ ಜೋತು ಬೀಳಬಹುದು
ಅದು ಆತುಕೊಳ್ಳುವುದಿಲ್ಲವಷ್ಟೇ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...