ತನ್ನಷ್ಟಕ್ಕೆ

ಭೂಮಿಯಾಳದಲ್ಲಿ ಮಾತ್ರ
ಈಜುವ ಪುರಾವೆಗಳಿವೆ
ಈ ಮರದ ಬೇರಿಗೆ
ಹೆಬ್ಬಂಡೆಯೂ ಮಿದು ಮಣ್ಣಾಗಿ
ಹುಡಿ ಹುಡಿಯೂ
ಮಿಸುಕುತ್ತದಂತೆ

ಕಾಣಲಾರದು
ನಮ್ಮಂಥ ಪಾಮರರಿಗೆ!

ಈ ಮರದ ಕೊಂಬೆ ಕೊಂಬೆಗಳಲ್ಲಿ
ನೇತು ಬೀಳಬಹುದು ಯಾರೂ
ಉಯ್ಯಾಲೆಯಾಡಬಹುದು
ಹತ್ತಿ ಕುಪ್ಪಳಿಸಿ ಕುಣಿದು
ಮರಹತ್ತಿ ಮರಕೋತಿಯಾಡಬಹುದು
ನೆಳಲಿನಲಿ ಕುಂಟೋಬಿಲ್ಲೆ……
ರೆಂಬೆಗಳ ಮರೆಯಲ್ಲಿ
ಗೂಡು ಕಟ್ಟಬಹುದು
ತಾವು ಹುಡುಕಬಹುದು!

ಮರ ಸಿಡುಕುವುದಿಲ್ಲ
ಚಡಪಡಿಸಿ ನೂಕುವುದಿಲ್ಲ
ಅಷ್ಟೇ ಅಲ್ಲ
ಯಾವ ಮಾಂತ್ರಿಕತೆಗೂ
ಮಿಡುಕುವುದೂ ಇಲ್ಲ!

ಅದು ಕೇಳುವುದಿಲ್ಲ ನೋಡುವುದಿಲ್ಲ
ನುಡಿಯುವುದೂ ಇಲ್ಲ.
ಅದರ ಅತೀತ ಬೇರಿಗೇ
ಪಂಚೇಂದ್ರಿಯಗಳಂಟಿಕೊಂಡು
ಬೇರು ಮಾತ್ರ ತುಡಿಯುವುದಂತೆ
ಒಳಗೇ,
ಏನು ಮಾಡುವುದು
ನಮ್ಮ ಕಣ್ಣಿಗದು ಕಾಣುವುದೇ ಇಲ್ಲ!

ಗಾಳಿ ಬೀಸಿದಾಗ
ಮಳೆ ಬಿದ್ದಾಗ
ಬಿಸಿಲು ಕಾಯಿಸಿದಾಗ
ಆ ಕ್ಷಣಕ್ಕೆ ಒಡ್ಡಿಕೊಳ್ಳುವುದು ಎಲೆಯೇ
ಮರ ನಿಂತಿರುತ್ತದಷ್ಟೇ ತನ್ನಷ್ಟಕ್ಕೇ!

ಏನೂ ಆಗಿಲ್ಲದಂತೆ!

ಅದಕ್ಕೆ ಅದರದ್ದೇ
ಜನ್ಮಾಂತರದ ಕಥೆಗಳು
ಜೊತೆಗೇ
ಹೊಳೆದೂ ಹೊಳೆಯದ ನಕ್ಷತ್ರಗಳು.
ನಂಟಿದ್ದೂ ಅಂಟಿಯೂ ಅಂಟದಂತೆ
ಹಿಂದಿಲ್ಲದೇ ಮುಂದಿಲ್ಲದೇ
ಬಯಲಲ್ಲಿ ವಿರಾಗಿಯಂತೆ
ನಿಂತ ಮರಕ್ಕೆ

ನಾವೆಷ್ಟಾದರೂ ಜೋತು ಬೀಳಬಹುದು
ಅದು ಆತುಕೊಳ್ಳುವುದಿಲ್ಲವಷ್ಟೇ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಹಿತ್ಯದ ಸ್ವಯಂಪ್ರಜ್ಞೆ
Next post ಪ್ರಾರ್ಥನೆ

ಸಣ್ಣ ಕತೆ

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…