Home / ಕವನ / ಕವಿತೆ / ತನ್ನಷ್ಟಕ್ಕೆ

ತನ್ನಷ್ಟಕ್ಕೆ

ಭೂಮಿಯಾಳದಲ್ಲಿ ಮಾತ್ರ
ಈಜುವ ಪುರಾವೆಗಳಿವೆ
ಈ ಮರದ ಬೇರಿಗೆ
ಹೆಬ್ಬಂಡೆಯೂ ಮಿದು ಮಣ್ಣಾಗಿ
ಹುಡಿ ಹುಡಿಯೂ
ಮಿಸುಕುತ್ತದಂತೆ

ಕಾಣಲಾರದು
ನಮ್ಮಂಥ ಪಾಮರರಿಗೆ!

ಈ ಮರದ ಕೊಂಬೆ ಕೊಂಬೆಗಳಲ್ಲಿ
ನೇತು ಬೀಳಬಹುದು ಯಾರೂ
ಉಯ್ಯಾಲೆಯಾಡಬಹುದು
ಹತ್ತಿ ಕುಪ್ಪಳಿಸಿ ಕುಣಿದು
ಮರಹತ್ತಿ ಮರಕೋತಿಯಾಡಬಹುದು
ನೆಳಲಿನಲಿ ಕುಂಟೋಬಿಲ್ಲೆ……
ರೆಂಬೆಗಳ ಮರೆಯಲ್ಲಿ
ಗೂಡು ಕಟ್ಟಬಹುದು
ತಾವು ಹುಡುಕಬಹುದು!

ಮರ ಸಿಡುಕುವುದಿಲ್ಲ
ಚಡಪಡಿಸಿ ನೂಕುವುದಿಲ್ಲ
ಅಷ್ಟೇ ಅಲ್ಲ
ಯಾವ ಮಾಂತ್ರಿಕತೆಗೂ
ಮಿಡುಕುವುದೂ ಇಲ್ಲ!

ಅದು ಕೇಳುವುದಿಲ್ಲ ನೋಡುವುದಿಲ್ಲ
ನುಡಿಯುವುದೂ ಇಲ್ಲ.
ಅದರ ಅತೀತ ಬೇರಿಗೇ
ಪಂಚೇಂದ್ರಿಯಗಳಂಟಿಕೊಂಡು
ಬೇರು ಮಾತ್ರ ತುಡಿಯುವುದಂತೆ
ಒಳಗೇ,
ಏನು ಮಾಡುವುದು
ನಮ್ಮ ಕಣ್ಣಿಗದು ಕಾಣುವುದೇ ಇಲ್ಲ!

ಗಾಳಿ ಬೀಸಿದಾಗ
ಮಳೆ ಬಿದ್ದಾಗ
ಬಿಸಿಲು ಕಾಯಿಸಿದಾಗ
ಆ ಕ್ಷಣಕ್ಕೆ ಒಡ್ಡಿಕೊಳ್ಳುವುದು ಎಲೆಯೇ
ಮರ ನಿಂತಿರುತ್ತದಷ್ಟೇ ತನ್ನಷ್ಟಕ್ಕೇ!

ಏನೂ ಆಗಿಲ್ಲದಂತೆ!

ಅದಕ್ಕೆ ಅದರದ್ದೇ
ಜನ್ಮಾಂತರದ ಕಥೆಗಳು
ಜೊತೆಗೇ
ಹೊಳೆದೂ ಹೊಳೆಯದ ನಕ್ಷತ್ರಗಳು.
ನಂಟಿದ್ದೂ ಅಂಟಿಯೂ ಅಂಟದಂತೆ
ಹಿಂದಿಲ್ಲದೇ ಮುಂದಿಲ್ಲದೇ
ಬಯಲಲ್ಲಿ ವಿರಾಗಿಯಂತೆ
ನಿಂತ ಮರಕ್ಕೆ

ನಾವೆಷ್ಟಾದರೂ ಜೋತು ಬೀಳಬಹುದು
ಅದು ಆತುಕೊಳ್ಳುವುದಿಲ್ಲವಷ್ಟೇ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...