Home / ಕವನ / ಕವಿತೆ / ಹೂವು

ಹೂವು

ಕರೆಯದಿರು ಕೈ ಮಾಡಿ ನೆನೆಸದಿರು ಕನಸಿನಲಿ
ನಿನ್ನ ದೃಷ್ಟಿಯು ಇತ್ತ ಸುಳಿಯದಿರಲಿ
ನನ್ನ ಒಲುಮೆಯ ನೀನು ಬಯಸದಿರು ಎಂದಿಗೂ
ಚಿತ್ತವಳಿಪನು ನನಗೆ ತಳೆಯದಿರಲಿ

ನಾನೊಂದು ನಿಷ್ಪಾಪಿ ಹೂವು ಸುಖದಿಂದಿರುವೆ
ದೃಷ್ಟಿ ತಾಕಿದರಾನು ಬಾಡಿಯೇನು
ಮುಟ್ಟಲೇತಕೆ ಮುಂದೆ? ಬಾಳಲಾರೆನು ತುಂಬಿ
ಸೃಷ್ಟಿಗೀತೆಯನೆಂತು ಹಾಡಿಯೇನು

ಜನುಮವಿತ್ತನ ಪಾದ ಸೇರಲೆಂದೆಂಬಾಸೆ
ನನ್ನ ಪಾವಿತ್ರ್ಯವನು ಉಳಿಸು ಗುಂಗಿ
ಹುಡಿಯಲ್ಲಿ ಹೊರಳುವೊಲು ಮಾಡದಿರು ಕಾಡದಿರು
ಒಂದೆ ಅರೆನಿಮಿಷವನು ಇಲ್ಲಿ ತಂಗಿ

ನನ್ನ ಸೌಂದರ್ಯವದು ಈಶನಿಗೆ ಮೀಸಲಿದೆ
ನನ್ನ ಸೌರಭ್ಯವೂ ಅವನಿಗಾಗಿ
ಸುಮ್ಮನೇತಕೆ ಬಯಕೆ? ಜಾರಿಸದಿರೆನ್ನನ್ನು
ಒಂದೇ ನಿಮಿಷದ ಅಧಮ ಸೌಖ್ಯಕಾಗಿ

ಮೊರೆಯದಿರು ಮನಸಿನಲಿ ಮರೆಯದಿರು ಮೆಲು ನುಡಿಯ
ಇರಲಿ ತುಂಬಿಯೆ ನಮ್ಮ ಸೋದರತನ
ಚ್ಯುತಿ ಬರದೆ ಸತ್ಯದಾ ಸಾಧನೆಯು ನಡೆದಿರಲಿ
ತುಂಬಿರಲಿ ಸಂತಸದಿ ನಮ್ಮೀ ಮನ

ದಾರಿತಪ್ಪುವ ಚಿಂತೆ ನನಗಿಲ್ಲ ಭಾರವನು
ಗುರುದೇವ ಹೊತ್ತಿರಲು ಓ ಸೋದರ
ಬೀಳಲಿರೆ ಹಿಡಿಯುವನು ಕೈಯಿಂದಲೆತ್ತುವನು
ಏತಕ್ಕೆ ಸಾಕಿನ್ನು ಈ ಕಾತರ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...