Home / ಲೇಖನ / ಇತರೆ / ವಚನ ವಿಚಾರ – ಇದು ಯಾರ ಮೈ?

ವಚನ ವಿಚಾರ – ಇದು ಯಾರ ಮೈ?

ಎನ್ನೊಡಲಾದಡೆ ಎನ್ನಿಚ್ಚೆಯಲ್ಲಿರದೆ
ನಿನ್ನೊಡಲಾದಡೆ ನಿನ್ನಿಚ್ಛೆಯಲ್ಲಿರದೆ
ಅದು ಎನ್ನೊಡಲೂ ಅಲ್ಲ
ನಿನ್ನೊಡಲೂ ಅಲ್ಲ
ಅದು ನೀ ಮಾಡಿದ ಜಗದ ಬಿನ್ನಾಣದೊಡಲು
ಕಾಣಾ
ರಾಮನಾಥ

ಜೇಡರ ದಾಸಿಮಯ್ಯನ ವಚನ. ಇದು ನನ್ನ ಮೈಯಾದರೆ ನನ್ನ ಮಾತು ಕೇಳಬೇಕು, ಕೇಳುತ್ತಿಲ್ಲ. ದೇವರೇ, ಇದು ನಿನ್ನ ಮೈಯಾದರೆ ನಿನ್ನ ಮಾತು ಕೇಳುತ್ತಿರಬೇಕು. ಕೇಳುತ್ತಿಲ್ಲವಲ್ಲಾ? ಇದು ನನ್ನ ಒಡಲೂ ಅಲ್ಲ, ನಿನ್ನ ಒಡಲೂ ಅಲ್ಲ, ಈ ಲೋಕದ ಬಿನ್ನಾಣಕ್ಕೆ ಸಿಕ್ಕಿಬಿದ್ದ ಒಡಲು.

ಜೇಡರ ದಾಸಿಮಯ್ಯನ ಈ ಮಾತು ನಮ್ಮ ವ್ಯಕ್ತಿತ್ವಗಳು ಆದರ್ಶಗಳಿಂದ ಅಲ್ಲ, ನಮ್ಮ ಸುತ್ತಲ ವಾಸ್ತವ ಪರಿಸರದಿಂದ ರೂಪುಗೊಳ್ಳುತ್ತದೆ ಅನ್ನುವ ನಿಲುವಿನಿಂದ ಮೂಡಿದಂತಿದೆ. ಬಿನ್ನಾಣ ಎಂಬ ಮಾತಿಗೆ ತೋರಿಕೆಯ ವೈಭವ, ಆಕರ್ಷಣೆ ಇತ್ಯಾದಿ ಅರ್ಥಗಳೊಂದಿಗೆ ಅದು ವಿಜ್ಞಾನ ಎಂಬ ಮಾತಿನ ತದ್ಭವವೂ ಹೌದು.

ಈ ಲೋಕದ ವ್ಯವಹಾರದ ವಿಜ್ಞಾನ ನಮ್ಮ ನಮ್ಮ ವ್ಯಕ್ತಿತ್ವಗಳನ್ನು ತಿದ್ದುತ್ತದೆ, ನಮ್ಮ ಇಚ್ಛೆ ಅಂದುಕೊಳ್ಳುವುದೂ, ದೇವರ ಕಲ್ಪನೆಯೂ ನಮಗೆ ದೊರೆತ ಜಗತ್ತಿನ ಸಂಪರ್ಕದಿಂದಲೇ ಮೂಡಿದ್ದಲ್ಲವೇ? ಹಾಗಿದ್ದರೆ ನಾವು ಹೀಗೇಕೆ ಅನ್ನುವುದಕ್ಕೆ ನಮ್ಮ ಸುತ್ತಲ ಜಗತ್ತೇ ಕಾರಣ ಎಂದೆನ್ನಬಹುದೇ?

ಆಗದೇನೋ. ಯಾಕೆಂದರೆ ಜಗತ್ತಿನ ಇಚ್ಛೆಯಂತೆ ನಡೆಯಬೇಕೆನ್ನುವ ಬಲವಂತ, ದೇವರ ಆದರ್ಶದಂತೆ ಇರಲಾಗದ ಯಾತನೆ ಇವುಗಳ ಇಬ್ಬಂದಿಯೇ ದಾಸಿಮಯ್ಯನಿಗೆ ಮುಖ್ಯವಾದಂತೆ ತೋರುತ್ತದೆ. ಇವೆಲ್ಲದರ ಮೂಲದಲ್ಲಿರುವುದು ಕೂಡ ನಾನು ಅನ್ನುವ ಕಲ್ಪನೆಯನ್ನು ವಿವರಿಸಿಕೊಳ್ಳಲಾಗದ ತೊಳಲಾಟವೇ ಇರಬಹುದು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...