Home / ಕವನ / ಕವಿತೆ / ಸ್ವಪ್ನದ ದೋಣಿ

ಸ್ವಪ್ನದ ದೋಣಿ

ಇಳಿ ಬಿಸಿಲಿನ ಎಲೆಯ ಮೇಲೆ ಕಿರಣಗಳು
ಮೂಡಿ ನಂದಾದೀಪ ಅರಳಿದೆ. ಕಂಬ ಬಳಸಿದ
ಬಳ್ಳಿಯ ತುಂಬ ಬಿಳಿ ಮೊಗ್ಗು ಬಿರಿದು, ಶಬ್ದಗಳು
ಹಸನಾದ ಬೀದಿಯ ತುಂಬ ಹರಡಿದೆ. ಅಲ್ಲಿ
ಕವಿಯ ಪರೀಕ್ಷೆ ನಡೆದಿದೆ. ಹೊಲದಲ್ಲಿ ಹಸಿ
ಜೋಳದ ತೆನೆಯಲಿ ಹಾಲು ಚಿಮ್ಮುತ್ತಿದೆ. ಮತ್ತೆ
ಮೌನ ಸಂಜೆಯಲಿ ಅವನ ನೆನಪುಗಳು ನೆತ್ತಿಗೆ
ಸವರಿ ಬೆಳ್ಳಕ್ಕಿಗಳು ಹಾರಿ ಹೋಗಿವೆ ತಿಳಿಸಂಜೆ.

ಪುಟ್ಟ ಹಕ್ಕಿಗಳ ಗೂಡು ಹಾಡು, ಕಡಲ
ಅಲೆ ಅಲೆಯ ಪ್ರತಿಬಿಂಬಿಸಿ, ಚಿಪ್ಪಿನಲ್ಲಿ ಅರಳಿತು ಮುತ್ತು.
ತೆಂಗಿನ ಗರಿಯ ಸಂದಿಯಿಂದ ಚೌತಿ ಚಂದ್ರಮ
ಇಣುಕಿ ಸ್ಪರ್ಶಿಸಿದೆ ಪ್ರಣಯ ಜೋಡಿಗಳ, ಹೊಸ
ವಾರ್ತೆ ನಾಳೆಗೆ ಅಚ್ಚಾಗಲು ಸಿದ್ಧವಾಗಿದೆ. ಜಾರಿದೆ
ಕಚಗುಳಿ ಇಟ್ಟ ಸೂರ್ಯ ಕಿರಣಗಳು, ರಾತ್ರಿಯ
ಕಪ್ಪು ಪರದೆಯ ತುಂಬ ಚಲನ ಚಿತ್ರಗಳ ರೀಲು.
ಆಗಸದಲ್ಲಿ ಹರಡಿವೆ ಅವನ ಕಣ್ಣುಗಳ ಮಿನುಗು.

ಹೂಗಳ ಸುವಾಸನೆ ಹೀರಿದ ಹಕ್ಕಿಗಳು ಹಾಡು
ತೊಟ್ಟಿಲು ತೂಗುತ್ತಿದ್ದಾಳೆ ತಾಯಿ. ತೊನೆ ಹಾಲು ತುಂಬಿ
ಎದೆಯ ಭಾವಕೆ ಬೇರುಗಳಲಿ ಇಳಿದ ತಂಪು ಲಾಲಿ.
ಕತ್ತಲೆಯ ರಾತ್ರಿಯಲ್ಲಿ ಹೊಸ ಬೆಳಕಿನ ಜಾಡು,
ಹಿಡಿದು ಕಾಲ ಮೈಲುಗಳು ಬಳಸಿ, ಪಯಣ
ಹೊರಟಿದೆ. ಹೆದ್ದಾರಿ ತುಂಬ ಕಪ್ಪು ನೆರಳುಗಳಾಟ.
ಜಗದ ಬೆಳಕಿಗೆ ಸೂರ್ಯ ಕಣ್ಣು ಮುಚ್ಚಿದ್ದಾನೆ.
ಪುಟ್ಟ ಮಗುವಿನ ಕೈಗಳು ಕೊರಳುಗಳ ತಬ್ಬಿವೆ.
ಏಕಾಂತ ಮೌನದಲಿ ಸುವಾಸನೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...