Home / ಲೇಖನ / ಇತರೆ / ವಚನ ವಿಚಾರ – ಅತಿಮಥನ

ವಚನ ವಿಚಾರ – ಅತಿಮಥನ

ಅತಿಮಥನವೆಂಬ ಯೋಗವೆನ್ನ ಗತಿಗೆಡಿಸಿತ್ತಯ್ಯ
ದಿತಿಗೆಟ್ಟೆ ನಾನು ಅದರಿಂದ
ಅತಿಶಯದ ತಾತ್ಪರ್ಯ ಗುರುಭಕ್ತಿಯನರಿಯದೆ
ದಿತಿಗೆಟ್ಟೆನಯ್ಯ ತಾತ್ಪರ್‍ಯವನರಿಯದೆ
ತವಕಿಸುವ ಮನವನು ನಿಮ್ಮ ಕಡೆಗೆ ತೆಗೆದುಕೊಂಡು
ಅತಿಶಯದ ತಾತ್ಪರ್ಯ ಗುರುಭಕ್ತಿಯ ಈಯಯ್ಯಾ
ಕಪಿಲಸಿದ್ಧಮಲ್ಲಿಕಾರ್‍ಜುನಾ

[ಅತಿಮಥನ- ಅತಿಯಾದ ವಿಶ್ಲೇಷಣೆ, ದಿತಿಗೆಟ್ಟೆ-ಧೃತಿಗೆಟ್ಟೆ, ಗತಿ-ಚಲನೆ, ಬಾಳು, ಭವಿಷ್ಯ]

ಸಿದ್ಧರಾಮನ ವಚನ. ಇದು ಅತಿಯಾದ ವಿಶ್ಲೇಷಣೆಯ ಅಪಾಯವನ್ನು ಕುರಿತು ಹೇಳುವಂತಿದೆ. ಅತಿಮಥನದ ಪ್ರವೃತ್ತಿಯು ಮನಸ್ಸಿನ ನೆಮ್ಮದಿಯನ್ನು ಕೆಡಿಸುತ್ತದೆ. ಮಥನ ಅನ್ನುವುದು ಅಗತ್ಯ; ಆದರೂ ಅದು ಅತಿ ಆದಾಗ ತೊಂದರೆಕೊಡುವುದು ಖಚಿತ. ಸಿದ್ಧರಾಮನಂತೆಯೇ ಅಲ್ಲಮ ಕೂಡ ವಿಚಾರವೆಂಬುದು ಸಂದೇಹಕ್ಕೆ ಒಳಗು ಎನ್ನುತ್ತಾನೆ.

ಅತಿಯಾದ ಮಥನ ನನ್ನ ಗತಿಯನ್ನು ಕೆಡಿಸಿತ್ತು. ಆದ್ದರಿಂದಲೇ ಅತಿಶಯದ, ವಿಶೇಷವಾದ, ಆಶ್ಚರ್ಯಕರವಾದ, ಬಲು ನೆಮ್ಮದಿಯನ್ನು ತರುವ ಗುರು ಭಕ್ತಿಯನ್ನು ಅರಿಯದೆ ಹೋದೆ. ಗುರು ಭಕ್ತಿ ಅನ್ನುವುದನ್ನು ದೊಡ್ಡದಾದುದರ ಬಗ್ಗೆ ಇರುವ ವಿನಯವೆಂದೂ ಅರ್ಥಮಾಡಿಕೊಳ್ಳಬಹುದು. ಗುರುವಿನ ಬಗ್ಗೆ ಭಕ್ತಿ ಇಲ್ಲದೆ, ಅತಿ ಮಥನದಲ್ಲಿ ತೊಡಗಿ, ಗತಿಗೆಟ್ಟ ನನ್ನ ಮನಸ್ಸನ್ನು ದೇವರು ತನ್ನತ್ತ ತಿರುಗಿಸಿಕೊಂಡು ಎಲ್ಲ ಅರ್ಥದ ಸಾರಾಂಶರೂಪವಾಗಿರುವ ಗುರುಭಕ್ತಿಯನ್ನು ಕೊಡಲಿ ಎಂದು ಪ್ರಾರ್ಥಿಸುತ್ತಾನೆ ಸಿದ್ಧರಾಮ.

ದೇವರು ದೊಡ್ಡವನೇ ಇರಬಹುದು, ಆದರೆ ಕಣ್ಣಿಗೆ ಕಾಣುವ ‘ದೊಡ್ಡ’ ಸಂಗತಿಗಳ ಬಗ್ಗೆ ವಿನಯ, ಭಕ್ತಿ ಇರದಿದ್ದರೆ ನಿಜವಾಗಿ ದೊಡ್ಡವನಾದ ದೇವರು ಸಿಕ್ಕಲಾರ. ಅತಿಮಥನ ಎಂದೂ ನಿಲುಗಡೆಗೆ ಬಾರದು. ಎಲ್ಲ ಮಥನದ ಉದ್ದೇಶವೂ ಒಂದು ನಿರ್ಣಯವನ್ನು ತಲುಪುವುದೇ ತಾನೇ? ಹಾಗೆ ನಿಜವಾದ ತಾತ್ಪರ್ಯವೆಂದರೆ ಗುರುವಿನ ಕುರಿತ ಭಕ್ತಿ, ಅದು ಮಥನದಿಂದ ಅಲ್ಲ, ವಿಶ್ವಾಸದಿಂದ ಮೂಡುವುದು. ಅದು ಬೇಕು ಅನ್ನುತ್ತಾನೆ ಸಿದ್ಧರಾಮ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...