ವಚನ ವಿಚಾರ – ಅತಿಮಥನ

ವಚನ ವಿಚಾರ – ಅತಿಮಥನ

ಅತಿಮಥನವೆಂಬ ಯೋಗವೆನ್ನ ಗತಿಗೆಡಿಸಿತ್ತಯ್ಯ
ದಿತಿಗೆಟ್ಟೆ ನಾನು ಅದರಿಂದ
ಅತಿಶಯದ ತಾತ್ಪರ್ಯ ಗುರುಭಕ್ತಿಯನರಿಯದೆ
ದಿತಿಗೆಟ್ಟೆನಯ್ಯ ತಾತ್ಪರ್‍ಯವನರಿಯದೆ
ತವಕಿಸುವ ಮನವನು ನಿಮ್ಮ ಕಡೆಗೆ ತೆಗೆದುಕೊಂಡು
ಅತಿಶಯದ ತಾತ್ಪರ್ಯ ಗುರುಭಕ್ತಿಯ ಈಯಯ್ಯಾ
ಕಪಿಲಸಿದ್ಧಮಲ್ಲಿಕಾರ್‍ಜುನಾ

[ಅತಿಮಥನ- ಅತಿಯಾದ ವಿಶ್ಲೇಷಣೆ, ದಿತಿಗೆಟ್ಟೆ-ಧೃತಿಗೆಟ್ಟೆ, ಗತಿ-ಚಲನೆ, ಬಾಳು, ಭವಿಷ್ಯ]

ಸಿದ್ಧರಾಮನ ವಚನ. ಇದು ಅತಿಯಾದ ವಿಶ್ಲೇಷಣೆಯ ಅಪಾಯವನ್ನು ಕುರಿತು ಹೇಳುವಂತಿದೆ. ಅತಿಮಥನದ ಪ್ರವೃತ್ತಿಯು ಮನಸ್ಸಿನ ನೆಮ್ಮದಿಯನ್ನು ಕೆಡಿಸುತ್ತದೆ. ಮಥನ ಅನ್ನುವುದು ಅಗತ್ಯ; ಆದರೂ ಅದು ಅತಿ ಆದಾಗ ತೊಂದರೆಕೊಡುವುದು ಖಚಿತ. ಸಿದ್ಧರಾಮನಂತೆಯೇ ಅಲ್ಲಮ ಕೂಡ ವಿಚಾರವೆಂಬುದು ಸಂದೇಹಕ್ಕೆ ಒಳಗು ಎನ್ನುತ್ತಾನೆ.

ಅತಿಯಾದ ಮಥನ ನನ್ನ ಗತಿಯನ್ನು ಕೆಡಿಸಿತ್ತು. ಆದ್ದರಿಂದಲೇ ಅತಿಶಯದ, ವಿಶೇಷವಾದ, ಆಶ್ಚರ್ಯಕರವಾದ, ಬಲು ನೆಮ್ಮದಿಯನ್ನು ತರುವ ಗುರು ಭಕ್ತಿಯನ್ನು ಅರಿಯದೆ ಹೋದೆ. ಗುರು ಭಕ್ತಿ ಅನ್ನುವುದನ್ನು ದೊಡ್ಡದಾದುದರ ಬಗ್ಗೆ ಇರುವ ವಿನಯವೆಂದೂ ಅರ್ಥಮಾಡಿಕೊಳ್ಳಬಹುದು. ಗುರುವಿನ ಬಗ್ಗೆ ಭಕ್ತಿ ಇಲ್ಲದೆ, ಅತಿ ಮಥನದಲ್ಲಿ ತೊಡಗಿ, ಗತಿಗೆಟ್ಟ ನನ್ನ ಮನಸ್ಸನ್ನು ದೇವರು ತನ್ನತ್ತ ತಿರುಗಿಸಿಕೊಂಡು ಎಲ್ಲ ಅರ್ಥದ ಸಾರಾಂಶರೂಪವಾಗಿರುವ ಗುರುಭಕ್ತಿಯನ್ನು ಕೊಡಲಿ ಎಂದು ಪ್ರಾರ್ಥಿಸುತ್ತಾನೆ ಸಿದ್ಧರಾಮ.

ದೇವರು ದೊಡ್ಡವನೇ ಇರಬಹುದು, ಆದರೆ ಕಣ್ಣಿಗೆ ಕಾಣುವ ‘ದೊಡ್ಡ’ ಸಂಗತಿಗಳ ಬಗ್ಗೆ ವಿನಯ, ಭಕ್ತಿ ಇರದಿದ್ದರೆ ನಿಜವಾಗಿ ದೊಡ್ಡವನಾದ ದೇವರು ಸಿಕ್ಕಲಾರ. ಅತಿಮಥನ ಎಂದೂ ನಿಲುಗಡೆಗೆ ಬಾರದು. ಎಲ್ಲ ಮಥನದ ಉದ್ದೇಶವೂ ಒಂದು ನಿರ್ಣಯವನ್ನು ತಲುಪುವುದೇ ತಾನೇ? ಹಾಗೆ ನಿಜವಾದ ತಾತ್ಪರ್ಯವೆಂದರೆ ಗುರುವಿನ ಕುರಿತ ಭಕ್ತಿ, ಅದು ಮಥನದಿಂದ ಅಲ್ಲ, ವಿಶ್ವಾಸದಿಂದ ಮೂಡುವುದು. ಅದು ಬೇಕು ಅನ್ನುತ್ತಾನೆ ಸಿದ್ಧರಾಮ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಿಂಚು
Next post ಏಕಾಂಗಿ

ಸಣ್ಣ ಕತೆ

  • ಆವಲಹಳ್ಳಿಯಲ್ಲಿ ಸಭೆ

    ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…