Home / ಕವನ / ಕವಿತೆ / ನನಗೋ ಇಂಥ ಹೆಳವು…

ನನಗೋ ಇಂಥ ಹೆಳವು…

ಅಯ್ಯೋ…ನೋಡಲ್ಲಿ ಕಂದನನ್ನು
ಅದೇನು ಹೀಗೆ ಏರುತ್ತಿದೆ ಮೆಟ್ಟಿಲಿನಂತೆ?
ಮರಕ್ಕಾತು ಜಡವಾಗಿ ಕೂತಿದ್ದಕ್ಕೇ
ಅವನನ್ನೇನು ಕೊರಡೆಂದುಕೊಂಡಿದೆಯೋ?

ಕಾಲುಚಕ್ರ ಸೋತ ಹೊತ್ತಲ್ಲಿ
ಮರಕ್ಕೊರಗುತ್ತಾನೆ ಕುಸಿದು
ಅವನೊಂದಿಗೇ ಮರಕ್ಕೂ
ಅದರ ಮೇಲಿನ
ಸಕಲೆಂಟು ಜೀವಜಂತುಗಳಿಗೂ
ಗಾಢ ಮೈಮರೆವಿನ ವಿಸ್ಮೃತಿ.

ಕಂದನಿಗೇನು ಗೊತ್ತು ಪಾಪ?
ಅವನೋ ಎದ್ದರೆ
ತಿರುಗಾಲ ತಿಪ್ಪನಂತಾ ಅಲೆಮಾರಿ
ಕೂತರೆ ಹೆಬ್ಬಂಡೆಯಂತಾ ಸೋಮಾರಿ

ಇದಕ್ಕದೆಂಥಾ ಹುಚ್ಚು ಉಮೇದೋ?
ಮರವೋ
ಗಾಢ ನಿದ್ದೆ ಹೋದ ಅವನೋ
ಮೂಲೆ ಹಿಡಿದ
ಮುರುಕು ಕುರ್ಚಿಯೋ
ಯಾವುದಾದರೂ ಸರಿ
ಅದರ ಮೈಮೇಲೆ ಏರಿ
ಹಿಪ್ ಹಿಪ್ ಹುರ್ರೇ ಸಡಗರ.

ನೀನಾದರೂ ಹೇಳಬಾರದೇ
ಅದವನ ದೇಹವೆಂದು?
ಅದನ್ನೇ ಮೆಟ್ಟಿಲಾಗಿಸಿ
ಪುಟ್ಟ ಪುಟಾಣಿ
ಅಂಬೆಗಾಲಿಕ್ಕುತ್ತಾ
ಮೆಲ್ಲಗೆ ತೊಡೆಯೇರಿ ಕುಳಿತು
ಅದೋ ನೋಡು
ನಗು ಮುಕ್ಕಳಿಸುತಿದೆ ಮೊಗ,
ಥೇಟ್ ಪೀಠಾಧಿಪತಿಯ ಠೀವಿ!

ಮತ್ತೆ ನೋಡಿಗ
ಹುಮ್ಮಸ್ಸಿನಲಿ ಮೇಲೇರಿ
ಪಕ್ಕೆಲುಬಿನ ಮೆಟ್ಟಿಲಿಗೆ
ಗುಲಾಬಿ ಕಾಲಿನ ಪಾದವೂರಿದೆ
ಅವನಿಗೋ ಕಚಗುಳಿಯಾದರೂ ಆಗಬಾರದೇ?
ಮಿಸುಕಿದರೆ ಕೇಳು!

ಅಲೆಲೆ…ನೋಡು
ಹೊಟ್ಟೆಯುಬ್ಬಿಗೆ
ಇನ್ನೊಂದು ಪಾದ!
ಬಿಗಿ ಹಿಡಿತಕ್ಕೆ ಅವನದೇ ಜುಟ್ಟು!
ಹುರುಪಿನ ಏರು
ದಿಗ್ವಿಜಯದ ನಗೆ
ಅವಿರತ ಚಾರಣ
ಆಯಾಸವೇ ಆಗದಲ್ಲಾ ಕಂದನಿಗೆ?
ಅವನಿಗೋ ಎಚ್ಚರವಿಲ್ಲಾ
ಇದಕ್ಕೋ ಸುಸ್ತೆಂಬುದೇ ಇಲ್ಲಾ!

ಈಗವನ ಎದೆಯೂ
ಕಂದನಿನ್ನೊಂದು
ಪಾದಕ್ಕೆ ಸೋಪಾನವಾಯ್ತೇ?
ನೇರ ಮೂಗಿನುಬ್ಬಿಗೆ ಬಾಯಿ!
ನೆಕ್ಕಿ ಚೀಪಿ ರುಚಿ ನೋಡಿ….
ಮುಂದುವರೆದಿದೆ ದಿಗ್ವಿಜಯ ಯಾತ್ರೆ!

ಈಗ ನೋಡು,
ಏರುತ್ತಾ ಏರುತ್ತಾ
ಅವನ ಕತ್ತಿನ ಬಲಕ್ಕೊಂದು ಪಾದ
ಎಡಕ್ಕೊಂದು ಪಾದ
ಕುತ್ತಿಗೆಯ ಕುಳಿಯೇ
ಮತ್ತೊಂದು ಮಜಲು.

ಅವನ ಜುಟ್ಟು ಹಿಡಿದೇ
ಹಿಂದೆ ಮುಂದಾಗುವ ಸರ್ಕಸ್ಸು
ಅಯ್ಯೋ ಕಂದ ಬಿದ್ದಾತು ಎಚ್ಚರ…
ನೋಡವನ ತಲೆಯ ಮೇಲೆಯೇ ಕೂತು
ಮರಕ್ಕೊರಗಿದ ಭಂಗಿ!
ಥೇಟ್ ಕಳಸವಿಟ್ಟಂತೆ ತಲೆ ಮೇಲೆ…
ಪುಟಾಣಿ ಪುಟ್ಟ ಕೈ ಬಡಿಯುತ್ತಾ
ಕೇಕೆ… ಚಪ್ಪಾಳೇ…
ವಿಜಯೋತ್ಸವ…

ಕಂಡೋರ ದಿಟ್ಟಿ ತಾಕೀತು ಕಂದಮ್ಮಗೆ
ಮೂಲೆ ಕಸಬರಿಕೆ
ನಾಲ್ಕು ಕಡ್ಡಿಯ ಸುಟ್ಟು
ನೀವಳಿಸಿ ಒಗೆಯಬಾರದೇ ಆಚೆಗೆ?

ಇಷ್ಟೆಲ್ಲವಾದರೂ
ಅವನಿಗೋ ಮೈಮೇಲೆ ಖಬರಿಲ್ಲ.
ಕುಂಭಕರ್ಣನ ನಿದ್ದೆ
ಈ ಕಂದಮ್ಮನಿಗೋ
ಎಲ್ಲವೂ ಆಡಿದ್ದೇ ಆಟ.

ಅವನು ದಯಾಳು
ತಲೆಯೇರಿದ ಕಂದನನು
ಖಂಡಿತಾ ಬೇಕೆಂದೇ
ಕೊಡವಿ ಕೆಡವಲಾರ….

ಆದರವನಿಗೆ ಪಾಪ…
ಮೈಮೇಲಿನೆಚ್ಚರವೇ ಇಲ್ಲದೇ
ಧಡಕ್ಕನೆದ್ದು ಮೈ ಕೊಡವಿದರೆ….

ಕೊಡವಿದರೆ….
ಗತಿಯೇನು ಕಂದನದು?

ನನಗೋ ಇಂಥ ಹೆಳವು…
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...