Home / ಕವನ / ಕವಿತೆ / ನನಗೋ ಇಂಥ ಹೆಳವು…

ನನಗೋ ಇಂಥ ಹೆಳವು…

ಅಯ್ಯೋ…ನೋಡಲ್ಲಿ ಕಂದನನ್ನು
ಅದೇನು ಹೀಗೆ ಏರುತ್ತಿದೆ ಮೆಟ್ಟಿಲಿನಂತೆ?
ಮರಕ್ಕಾತು ಜಡವಾಗಿ ಕೂತಿದ್ದಕ್ಕೇ
ಅವನನ್ನೇನು ಕೊರಡೆಂದುಕೊಂಡಿದೆಯೋ?

ಕಾಲುಚಕ್ರ ಸೋತ ಹೊತ್ತಲ್ಲಿ
ಮರಕ್ಕೊರಗುತ್ತಾನೆ ಕುಸಿದು
ಅವನೊಂದಿಗೇ ಮರಕ್ಕೂ
ಅದರ ಮೇಲಿನ
ಸಕಲೆಂಟು ಜೀವಜಂತುಗಳಿಗೂ
ಗಾಢ ಮೈಮರೆವಿನ ವಿಸ್ಮೃತಿ.

ಕಂದನಿಗೇನು ಗೊತ್ತು ಪಾಪ?
ಅವನೋ ಎದ್ದರೆ
ತಿರುಗಾಲ ತಿಪ್ಪನಂತಾ ಅಲೆಮಾರಿ
ಕೂತರೆ ಹೆಬ್ಬಂಡೆಯಂತಾ ಸೋಮಾರಿ

ಇದಕ್ಕದೆಂಥಾ ಹುಚ್ಚು ಉಮೇದೋ?
ಮರವೋ
ಗಾಢ ನಿದ್ದೆ ಹೋದ ಅವನೋ
ಮೂಲೆ ಹಿಡಿದ
ಮುರುಕು ಕುರ್ಚಿಯೋ
ಯಾವುದಾದರೂ ಸರಿ
ಅದರ ಮೈಮೇಲೆ ಏರಿ
ಹಿಪ್ ಹಿಪ್ ಹುರ್ರೇ ಸಡಗರ.

ನೀನಾದರೂ ಹೇಳಬಾರದೇ
ಅದವನ ದೇಹವೆಂದು?
ಅದನ್ನೇ ಮೆಟ್ಟಿಲಾಗಿಸಿ
ಪುಟ್ಟ ಪುಟಾಣಿ
ಅಂಬೆಗಾಲಿಕ್ಕುತ್ತಾ
ಮೆಲ್ಲಗೆ ತೊಡೆಯೇರಿ ಕುಳಿತು
ಅದೋ ನೋಡು
ನಗು ಮುಕ್ಕಳಿಸುತಿದೆ ಮೊಗ,
ಥೇಟ್ ಪೀಠಾಧಿಪತಿಯ ಠೀವಿ!

ಮತ್ತೆ ನೋಡಿಗ
ಹುಮ್ಮಸ್ಸಿನಲಿ ಮೇಲೇರಿ
ಪಕ್ಕೆಲುಬಿನ ಮೆಟ್ಟಿಲಿಗೆ
ಗುಲಾಬಿ ಕಾಲಿನ ಪಾದವೂರಿದೆ
ಅವನಿಗೋ ಕಚಗುಳಿಯಾದರೂ ಆಗಬಾರದೇ?
ಮಿಸುಕಿದರೆ ಕೇಳು!

ಅಲೆಲೆ…ನೋಡು
ಹೊಟ್ಟೆಯುಬ್ಬಿಗೆ
ಇನ್ನೊಂದು ಪಾದ!
ಬಿಗಿ ಹಿಡಿತಕ್ಕೆ ಅವನದೇ ಜುಟ್ಟು!
ಹುರುಪಿನ ಏರು
ದಿಗ್ವಿಜಯದ ನಗೆ
ಅವಿರತ ಚಾರಣ
ಆಯಾಸವೇ ಆಗದಲ್ಲಾ ಕಂದನಿಗೆ?
ಅವನಿಗೋ ಎಚ್ಚರವಿಲ್ಲಾ
ಇದಕ್ಕೋ ಸುಸ್ತೆಂಬುದೇ ಇಲ್ಲಾ!

ಈಗವನ ಎದೆಯೂ
ಕಂದನಿನ್ನೊಂದು
ಪಾದಕ್ಕೆ ಸೋಪಾನವಾಯ್ತೇ?
ನೇರ ಮೂಗಿನುಬ್ಬಿಗೆ ಬಾಯಿ!
ನೆಕ್ಕಿ ಚೀಪಿ ರುಚಿ ನೋಡಿ….
ಮುಂದುವರೆದಿದೆ ದಿಗ್ವಿಜಯ ಯಾತ್ರೆ!

ಈಗ ನೋಡು,
ಏರುತ್ತಾ ಏರುತ್ತಾ
ಅವನ ಕತ್ತಿನ ಬಲಕ್ಕೊಂದು ಪಾದ
ಎಡಕ್ಕೊಂದು ಪಾದ
ಕುತ್ತಿಗೆಯ ಕುಳಿಯೇ
ಮತ್ತೊಂದು ಮಜಲು.

ಅವನ ಜುಟ್ಟು ಹಿಡಿದೇ
ಹಿಂದೆ ಮುಂದಾಗುವ ಸರ್ಕಸ್ಸು
ಅಯ್ಯೋ ಕಂದ ಬಿದ್ದಾತು ಎಚ್ಚರ…
ನೋಡವನ ತಲೆಯ ಮೇಲೆಯೇ ಕೂತು
ಮರಕ್ಕೊರಗಿದ ಭಂಗಿ!
ಥೇಟ್ ಕಳಸವಿಟ್ಟಂತೆ ತಲೆ ಮೇಲೆ…
ಪುಟಾಣಿ ಪುಟ್ಟ ಕೈ ಬಡಿಯುತ್ತಾ
ಕೇಕೆ… ಚಪ್ಪಾಳೇ…
ವಿಜಯೋತ್ಸವ…

ಕಂಡೋರ ದಿಟ್ಟಿ ತಾಕೀತು ಕಂದಮ್ಮಗೆ
ಮೂಲೆ ಕಸಬರಿಕೆ
ನಾಲ್ಕು ಕಡ್ಡಿಯ ಸುಟ್ಟು
ನೀವಳಿಸಿ ಒಗೆಯಬಾರದೇ ಆಚೆಗೆ?

ಇಷ್ಟೆಲ್ಲವಾದರೂ
ಅವನಿಗೋ ಮೈಮೇಲೆ ಖಬರಿಲ್ಲ.
ಕುಂಭಕರ್ಣನ ನಿದ್ದೆ
ಈ ಕಂದಮ್ಮನಿಗೋ
ಎಲ್ಲವೂ ಆಡಿದ್ದೇ ಆಟ.

ಅವನು ದಯಾಳು
ತಲೆಯೇರಿದ ಕಂದನನು
ಖಂಡಿತಾ ಬೇಕೆಂದೇ
ಕೊಡವಿ ಕೆಡವಲಾರ….

ಆದರವನಿಗೆ ಪಾಪ…
ಮೈಮೇಲಿನೆಚ್ಚರವೇ ಇಲ್ಲದೇ
ಧಡಕ್ಕನೆದ್ದು ಮೈ ಕೊಡವಿದರೆ….

ಕೊಡವಿದರೆ….
ಗತಿಯೇನು ಕಂದನದು?

ನನಗೋ ಇಂಥ ಹೆಳವು…
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...