ನನಗೋ ಇಂಥ ಹೆಳವು…

ಅಯ್ಯೋ…ನೋಡಲ್ಲಿ ಕಂದನನ್ನು
ಅದೇನು ಹೀಗೆ ಏರುತ್ತಿದೆ ಮೆಟ್ಟಿಲಿನಂತೆ?
ಮರಕ್ಕಾತು ಜಡವಾಗಿ ಕೂತಿದ್ದಕ್ಕೇ
ಅವನನ್ನೇನು ಕೊರಡೆಂದುಕೊಂಡಿದೆಯೋ?

ಕಾಲುಚಕ್ರ ಸೋತ ಹೊತ್ತಲ್ಲಿ
ಮರಕ್ಕೊರಗುತ್ತಾನೆ ಕುಸಿದು
ಅವನೊಂದಿಗೇ ಮರಕ್ಕೂ
ಅದರ ಮೇಲಿನ
ಸಕಲೆಂಟು ಜೀವಜಂತುಗಳಿಗೂ
ಗಾಢ ಮೈಮರೆವಿನ ವಿಸ್ಮೃತಿ.

ಕಂದನಿಗೇನು ಗೊತ್ತು ಪಾಪ?
ಅವನೋ ಎದ್ದರೆ
ತಿರುಗಾಲ ತಿಪ್ಪನಂತಾ ಅಲೆಮಾರಿ
ಕೂತರೆ ಹೆಬ್ಬಂಡೆಯಂತಾ ಸೋಮಾರಿ

ಇದಕ್ಕದೆಂಥಾ ಹುಚ್ಚು ಉಮೇದೋ?
ಮರವೋ
ಗಾಢ ನಿದ್ದೆ ಹೋದ ಅವನೋ
ಮೂಲೆ ಹಿಡಿದ
ಮುರುಕು ಕುರ್ಚಿಯೋ
ಯಾವುದಾದರೂ ಸರಿ
ಅದರ ಮೈಮೇಲೆ ಏರಿ
ಹಿಪ್ ಹಿಪ್ ಹುರ್ರೇ ಸಡಗರ.

ನೀನಾದರೂ ಹೇಳಬಾರದೇ
ಅದವನ ದೇಹವೆಂದು?
ಅದನ್ನೇ ಮೆಟ್ಟಿಲಾಗಿಸಿ
ಪುಟ್ಟ ಪುಟಾಣಿ
ಅಂಬೆಗಾಲಿಕ್ಕುತ್ತಾ
ಮೆಲ್ಲಗೆ ತೊಡೆಯೇರಿ ಕುಳಿತು
ಅದೋ ನೋಡು
ನಗು ಮುಕ್ಕಳಿಸುತಿದೆ ಮೊಗ,
ಥೇಟ್ ಪೀಠಾಧಿಪತಿಯ ಠೀವಿ!

ಮತ್ತೆ ನೋಡಿಗ
ಹುಮ್ಮಸ್ಸಿನಲಿ ಮೇಲೇರಿ
ಪಕ್ಕೆಲುಬಿನ ಮೆಟ್ಟಿಲಿಗೆ
ಗುಲಾಬಿ ಕಾಲಿನ ಪಾದವೂರಿದೆ
ಅವನಿಗೋ ಕಚಗುಳಿಯಾದರೂ ಆಗಬಾರದೇ?
ಮಿಸುಕಿದರೆ ಕೇಳು!

ಅಲೆಲೆ…ನೋಡು
ಹೊಟ್ಟೆಯುಬ್ಬಿಗೆ
ಇನ್ನೊಂದು ಪಾದ!
ಬಿಗಿ ಹಿಡಿತಕ್ಕೆ ಅವನದೇ ಜುಟ್ಟು!
ಹುರುಪಿನ ಏರು
ದಿಗ್ವಿಜಯದ ನಗೆ
ಅವಿರತ ಚಾರಣ
ಆಯಾಸವೇ ಆಗದಲ್ಲಾ ಕಂದನಿಗೆ?
ಅವನಿಗೋ ಎಚ್ಚರವಿಲ್ಲಾ
ಇದಕ್ಕೋ ಸುಸ್ತೆಂಬುದೇ ಇಲ್ಲಾ!

ಈಗವನ ಎದೆಯೂ
ಕಂದನಿನ್ನೊಂದು
ಪಾದಕ್ಕೆ ಸೋಪಾನವಾಯ್ತೇ?
ನೇರ ಮೂಗಿನುಬ್ಬಿಗೆ ಬಾಯಿ!
ನೆಕ್ಕಿ ಚೀಪಿ ರುಚಿ ನೋಡಿ….
ಮುಂದುವರೆದಿದೆ ದಿಗ್ವಿಜಯ ಯಾತ್ರೆ!

ಈಗ ನೋಡು,
ಏರುತ್ತಾ ಏರುತ್ತಾ
ಅವನ ಕತ್ತಿನ ಬಲಕ್ಕೊಂದು ಪಾದ
ಎಡಕ್ಕೊಂದು ಪಾದ
ಕುತ್ತಿಗೆಯ ಕುಳಿಯೇ
ಮತ್ತೊಂದು ಮಜಲು.

ಅವನ ಜುಟ್ಟು ಹಿಡಿದೇ
ಹಿಂದೆ ಮುಂದಾಗುವ ಸರ್ಕಸ್ಸು
ಅಯ್ಯೋ ಕಂದ ಬಿದ್ದಾತು ಎಚ್ಚರ…
ನೋಡವನ ತಲೆಯ ಮೇಲೆಯೇ ಕೂತು
ಮರಕ್ಕೊರಗಿದ ಭಂಗಿ!
ಥೇಟ್ ಕಳಸವಿಟ್ಟಂತೆ ತಲೆ ಮೇಲೆ…
ಪುಟಾಣಿ ಪುಟ್ಟ ಕೈ ಬಡಿಯುತ್ತಾ
ಕೇಕೆ… ಚಪ್ಪಾಳೇ…
ವಿಜಯೋತ್ಸವ…

ಕಂಡೋರ ದಿಟ್ಟಿ ತಾಕೀತು ಕಂದಮ್ಮಗೆ
ಮೂಲೆ ಕಸಬರಿಕೆ
ನಾಲ್ಕು ಕಡ್ಡಿಯ ಸುಟ್ಟು
ನೀವಳಿಸಿ ಒಗೆಯಬಾರದೇ ಆಚೆಗೆ?

ಇಷ್ಟೆಲ್ಲವಾದರೂ
ಅವನಿಗೋ ಮೈಮೇಲೆ ಖಬರಿಲ್ಲ.
ಕುಂಭಕರ್ಣನ ನಿದ್ದೆ
ಈ ಕಂದಮ್ಮನಿಗೋ
ಎಲ್ಲವೂ ಆಡಿದ್ದೇ ಆಟ.

ಅವನು ದಯಾಳು
ತಲೆಯೇರಿದ ಕಂದನನು
ಖಂಡಿತಾ ಬೇಕೆಂದೇ
ಕೊಡವಿ ಕೆಡವಲಾರ….

ಆದರವನಿಗೆ ಪಾಪ…
ಮೈಮೇಲಿನೆಚ್ಚರವೇ ಇಲ್ಲದೇ
ಧಡಕ್ಕನೆದ್ದು ಮೈ ಕೊಡವಿದರೆ….

ಕೊಡವಿದರೆ….
ಗತಿಯೇನು ಕಂದನದು?

ನನಗೋ ಇಂಥ ಹೆಳವು…
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಾಜಕೀಯ ಶಕ್ತಿಯಾಗಿ ಕನ್ನಡ
Next post ಧೂಮಪಾನ

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…