Home / ಕವನ / ಕವಿತೆ / ಕರಿಯ ಪ್ರತಿಮೆ

ಕರಿಯ ಪ್ರತಿಮೆ

ನಮ್ಮೂರಿನ ಕರಿಯ
ಕಂಠದೊಳಗಿನ ಕೆಂಡದುರಿಯಲ್ಲಿ
ಕೊಂಡ ಹಾಯುವ ಗೆಳೆಯ
ಬಯಸುತ್ತಾನೆ ಮನೆಯ
ಕನಸುತ್ತಾನೆ ಬೆಳೆಯ-
ತೆನ ತೂಗೀತು! ಮನೆ ಮಾಗೀತು
ಕುಡಿಕೆ ಮಡಕೆಗಳಲ್ಲಿ ಒರತೆ ಹುಟ್ಟೀತು ಎಂದು?

ಆಗಸ್ಟ್ ಹದಿನೈದು ಹರಿಯಿತು
ಚಿಂದಿ ಬಾಳಿನ ಬಟ್ಟೆ
ಜನವರಿ ಇಪ್ಪತ್ತಾರು ಮರೆಯಿತು
ಜನಮನದ ಚಿಟ್ಟೆ
ಏಪ್ರಿಲ್ ಹದಿನಾಲ್ಕು- ಮತ್ತೊಂದು ಮೆಲುಕು.

ಅಂಬೇಡ್ಕರ್ ಆತ್ಮವಿಶ್ವಾಸ ಹರಿದದ್ದು
ಕೆಂಡಮಂಡಲ ಮನಸಿನಲ್ಲಿ
ಚಲನೆ ಚಕ್ರ ಜಡತೆಯನ್ನು ಜರೆದದ್ದು
ಕೊಳಕು ಮಂಡಲ ಮೆದುಳಿನಲ್ಲಿ.

ನಮ್ಮ ಕರಿಯ, ಮೇಲೆದ್ದು ಮೆರವಣಿಗೆ ಸೇರಿದ
ಹೊರಾಟ ಹೊತ್ತಿ ಉರಿಯುವಾಗ ಒಳಗೇ ಕರಗಿದ
ಕಾಣಲೇಬೇಕು ಅಂಬೇಡ್ಕರ್ ಎಂದು ಕೊರಗಿದ
ಬೀದಿ ಬೀದಿಯಲ್ಲಿ ಬೆವರು ಬಿತ್ತಿ ಕಂಗಾಲಾಗಿ ತಿರುಗಿದ

ಬಿರುಗಾಳಿಯಲ್ಲಿ ತರಗೆಲೆ ಹಾರುತ್ತಿರುವಾಗ
ವಿಧಾನಸೌಧದ ಮೆಟ್ಟಿಲು ಮೆಟ್ಟಲು ಬಂದ
ಕೂಗುತ್ತಿರುವ ಕಂಠಗಳು ಸೊಂಟಮುರಿದು
ಬಿಕ್ಕುವ ಮನಸ್ಸು ಕಣ್ಣಿಗೆ ಬಂದು ನೋಡಿದ-

ಕರಿಯ ಮೈ ಕಲ್ಲಾಗಿ ನಿಂತಿರುವ
ಅಂಬೇಡ್ಕರ್ ಪ್ರತಿಮೆ ಕಂಡ ಕರಿಯ
ಅಂಬೆಗಾಲಿಡುತ್ತ ಹತ್ತಿರ ಬಂದ
ತನಗೇ ಕೋಟು ಬೂಟು ಹಾಕಿ
ಕಲ್ಲು ನಿಲ್ಲಿಸಿದಂತೆ ಕಂಡು
ದೊಪ್ಪನೆ ಮೂರ್ಛೆಗೆ ಸಂದ!

ಅಂಬೇಡ್ಕರ್ ಕೈ ಕೆಳಗಿಳಿಯಲಿಲ್ಲ
ಕರಿಯನ ಮೈ ಸವರಲಿಲ್ಲ!
ಮೂರ್ಛೆಯೊಂದಿಗೆ ಮಾತಾಡಲಿಲ್ಲ
ಯಾಕೆಂದರೆ ಅದು ಸರ್‍ಕಾರಿ ಪ್ರತಿಮೆ
ಆಚರಣೆಗೆ ಹುಟ್ಟಿದ ಹದಿನಾಲ್ಕರ ಒಲುಮೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...