Home / ಕವನ / ಕವಿತೆ / ಕರಿಯ ಪ್ರತಿಮೆ

ಕರಿಯ ಪ್ರತಿಮೆ

ನಮ್ಮೂರಿನ ಕರಿಯ
ಕಂಠದೊಳಗಿನ ಕೆಂಡದುರಿಯಲ್ಲಿ
ಕೊಂಡ ಹಾಯುವ ಗೆಳೆಯ
ಬಯಸುತ್ತಾನೆ ಮನೆಯ
ಕನಸುತ್ತಾನೆ ಬೆಳೆಯ-
ತೆನ ತೂಗೀತು! ಮನೆ ಮಾಗೀತು
ಕುಡಿಕೆ ಮಡಕೆಗಳಲ್ಲಿ ಒರತೆ ಹುಟ್ಟೀತು ಎಂದು?

ಆಗಸ್ಟ್ ಹದಿನೈದು ಹರಿಯಿತು
ಚಿಂದಿ ಬಾಳಿನ ಬಟ್ಟೆ
ಜನವರಿ ಇಪ್ಪತ್ತಾರು ಮರೆಯಿತು
ಜನಮನದ ಚಿಟ್ಟೆ
ಏಪ್ರಿಲ್ ಹದಿನಾಲ್ಕು- ಮತ್ತೊಂದು ಮೆಲುಕು.

ಅಂಬೇಡ್ಕರ್ ಆತ್ಮವಿಶ್ವಾಸ ಹರಿದದ್ದು
ಕೆಂಡಮಂಡಲ ಮನಸಿನಲ್ಲಿ
ಚಲನೆ ಚಕ್ರ ಜಡತೆಯನ್ನು ಜರೆದದ್ದು
ಕೊಳಕು ಮಂಡಲ ಮೆದುಳಿನಲ್ಲಿ.

ನಮ್ಮ ಕರಿಯ, ಮೇಲೆದ್ದು ಮೆರವಣಿಗೆ ಸೇರಿದ
ಹೊರಾಟ ಹೊತ್ತಿ ಉರಿಯುವಾಗ ಒಳಗೇ ಕರಗಿದ
ಕಾಣಲೇಬೇಕು ಅಂಬೇಡ್ಕರ್ ಎಂದು ಕೊರಗಿದ
ಬೀದಿ ಬೀದಿಯಲ್ಲಿ ಬೆವರು ಬಿತ್ತಿ ಕಂಗಾಲಾಗಿ ತಿರುಗಿದ

ಬಿರುಗಾಳಿಯಲ್ಲಿ ತರಗೆಲೆ ಹಾರುತ್ತಿರುವಾಗ
ವಿಧಾನಸೌಧದ ಮೆಟ್ಟಿಲು ಮೆಟ್ಟಲು ಬಂದ
ಕೂಗುತ್ತಿರುವ ಕಂಠಗಳು ಸೊಂಟಮುರಿದು
ಬಿಕ್ಕುವ ಮನಸ್ಸು ಕಣ್ಣಿಗೆ ಬಂದು ನೋಡಿದ-

ಕರಿಯ ಮೈ ಕಲ್ಲಾಗಿ ನಿಂತಿರುವ
ಅಂಬೇಡ್ಕರ್ ಪ್ರತಿಮೆ ಕಂಡ ಕರಿಯ
ಅಂಬೆಗಾಲಿಡುತ್ತ ಹತ್ತಿರ ಬಂದ
ತನಗೇ ಕೋಟು ಬೂಟು ಹಾಕಿ
ಕಲ್ಲು ನಿಲ್ಲಿಸಿದಂತೆ ಕಂಡು
ದೊಪ್ಪನೆ ಮೂರ್ಛೆಗೆ ಸಂದ!

ಅಂಬೇಡ್ಕರ್ ಕೈ ಕೆಳಗಿಳಿಯಲಿಲ್ಲ
ಕರಿಯನ ಮೈ ಸವರಲಿಲ್ಲ!
ಮೂರ್ಛೆಯೊಂದಿಗೆ ಮಾತಾಡಲಿಲ್ಲ
ಯಾಕೆಂದರೆ ಅದು ಸರ್‍ಕಾರಿ ಪ್ರತಿಮೆ
ಆಚರಣೆಗೆ ಹುಟ್ಟಿದ ಹದಿನಾಲ್ಕರ ಒಲುಮೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...