ಗುಲಾಮ ಗೀತೆ

ಬೇರು ಕಿತ್ತ ಮರ, ನಾರು ನನ್ನ ನರ
ಹಗ್ಗವಾಯಿತು ನಿಮಗೆ ಉರುಳು ನನಗೆ
ಸಾವ ನೇಯುವ ನೂಲು, ಭಾವ ಬತ್ತಿದ ಮಾಲು
ಬಣ್ಣ ಬಣ್ಣದ ನೇಯ್ಗೆ ಬಿದ್ದೆ ಬಲೆಗೆ.

ನಿಮ್ಮ ಅನ್ನದ ಅಗುಳು, ಯಾರೂ ತಿನ್ನದ ಉಗುಳು
ಕಾಲು ಒತ್ತುವ ಕಾಲ-ಎಲ್ಲ ನಾನು
ಹುಟ್ಟು ಹಬ್ಬದ ಕಾಳು, ಸತ್ತ ಸೂಚನೆ ಕೂಳು
ನಡುವೆ ನಡ ಮುರಿದಂಥ ನಗುವು ನಾನು.

ಕಲ್ಲುಕೋಟೆಯ ಬೆವರು, ಗುಡಿಯ ಗೋಪುರ ಸೂರು
ಆಣೆಕಟ್ಟ ನಿಟ್ಟುಸಿರು, ನೀರಾದ ನಂಬಿಗನು
ಓಣಿ ಓಣಿಯ ಪೊರಕೆ, ಶುದ್ಧ ಬಯ್ಗಳ ಹರಕೆ
ಗುಡಿಸುತ್ತ ಗುಡಿ-ಸುತ್ತ ತಾನೇ ಕಸವಾದವನು.

ಯುದ್ಧಕಾಲದ ಕವಚ, ನಿದ್ದೆ ಕಾಲದ ಕಾವಲು
ಕಾಲದ ಕಾಲಿಗೆ ಮೆಟ್ಟು ಮೈಯ್ಯಾದೆನು
ಈಜು ಬುರುಡೆಯ ರೀತಿ ಮೇಲೆದ್ದು ಬರುವಂಥ
ಕನಸುಗಳು ಸುಟ್ಟು ಕರುಕಾದೆನು.

ನಿಮ್ಮ ಕನಸಿನ ಮನಸು, ಸುಳ್ಳ ಹಿಂದಿನ ಸತ್ಯ
ಕಾನೂನು ಕಂಬಿಗಳ ಕರುಳು ನಾನು
ಚಳಿಗೆ ಉಣ್ಣೆಯ ಉಡುಪು, ಬಿಸಿಲು ಕಾಲದ ಕೊಡೆ
ಗುಡುಗು ಸಿಡಿಲುಗಳ ಕೊರಳು ನಾನು.

ನಿಮ್ಮ ಮದುವೆಗೆ ತಾಳಿ, ಹಾಸಿಗೆಯು ಪ್ರಸ್ತಕೆ
ಜೀವರಸ ಧಾರೆಯ ಎರೆದು ಕೊಟ್ಟಾಯ್ತು
ಜೋಲಿ ಹೊಡೆಯದ ನಾನು ಜೋಗುಳದ ಹಾಡು
ಅತ್ತು ಕರೆದರೆ ಇಲ್ಲಿ ಕತ್ತು ಹೋದೀತು.

ಏನ ಹೇಳಲಿ ನಾನು ಕಣ್ಣ ಕಸಿದರೊ ನನ್ನ
ಹೇಳುತ್ತ ಬಂದದ್ದೆ ನೋಟವಾಯ್ತು
ನಾಲಗೆಯ ಕಿತ್ತು ನೆತ್ತರ ಕುಡಿದರೊ
ಅಮಲಲ್ಲಿ ಅಂದದ್ದೆ ವೇದವಾಯ್ತು.

ಹುಲಿಯ ವೇಷಕೆ, ನನ್ನ ಚರ್‍ಮ ತಮಟೆ
ನೋವ ಕಾಯಿಸಿದಾಗ ಕೆರಳುಶಬ್ದ
ಗಬ್ಬ ಹತ್ತಿದ ಗೀತೆ ಹೇಗೆ ಹಾಡಲಿ ನಾನು
ನಿಮ್ಮ ಕಾಲ್ತುಳಿತಕ್ಕೆ ಜೀವ ಸ್ತಬ್ಧ.

ಒತ್ತೆಯಾದವು ಚಿತ್ತ ಮಾತು ಮೈ ಮುನಿಸು,
ತಿನಿಸುಗಳ ರಾಜ್ಯದಲಿ ಮೇವು ನಾನು
ಗೋಳ ಗೀತೆಯು ಇಲ್ಲಿ ಗುಲಾಮ ಗುರುವೆ
ಮುಕುತಿಯೆಂದರೆ ನಮ್ಮ ಮಣ್ಣು ಹುಣ್ಣು.

ಉದ್ದ ಹಾಸಿದ ನಿಮ್ಮ ಹೆಬ್ಬಾವ ಇತಿಹಾಸ
ಸೀಳಿ ಬಂದೀತು ಸತ್ಯ ನಾಳೆ ಬೆಳಕು
ಹೂತ ಭೂತದ ಬೆವರು ವರ್‍ತಮಾನದ ನೀರು
ಹರಿದೀತು ನೆಲ ತುಂಬ ತೆನೆಯು ತೂಗೀತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post Thomas Hardy ಯ “The Return of the Native” ಸ್ವ-ಅಸ್ತಿತ್ವದ ನೆರಳು
Next post ಏಕೆ ಗೆಳತಿ ವಿರಹವೇದನೆ?

ಸಣ್ಣ ಕತೆ

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…