Home / ಕವನ / ಕವಿತೆ / ಗುಲಾಮ ಗೀತೆ

ಗುಲಾಮ ಗೀತೆ

ಬೇರು ಕಿತ್ತ ಮರ, ನಾರು ನನ್ನ ನರ
ಹಗ್ಗವಾಯಿತು ನಿಮಗೆ ಉರುಳು ನನಗೆ
ಸಾವ ನೇಯುವ ನೂಲು, ಭಾವ ಬತ್ತಿದ ಮಾಲು
ಬಣ್ಣ ಬಣ್ಣದ ನೇಯ್ಗೆ ಬಿದ್ದೆ ಬಲೆಗೆ.

ನಿಮ್ಮ ಅನ್ನದ ಅಗುಳು, ಯಾರೂ ತಿನ್ನದ ಉಗುಳು
ಕಾಲು ಒತ್ತುವ ಕಾಲ-ಎಲ್ಲ ನಾನು
ಹುಟ್ಟು ಹಬ್ಬದ ಕಾಳು, ಸತ್ತ ಸೂಚನೆ ಕೂಳು
ನಡುವೆ ನಡ ಮುರಿದಂಥ ನಗುವು ನಾನು.

ಕಲ್ಲುಕೋಟೆಯ ಬೆವರು, ಗುಡಿಯ ಗೋಪುರ ಸೂರು
ಆಣೆಕಟ್ಟ ನಿಟ್ಟುಸಿರು, ನೀರಾದ ನಂಬಿಗನು
ಓಣಿ ಓಣಿಯ ಪೊರಕೆ, ಶುದ್ಧ ಬಯ್ಗಳ ಹರಕೆ
ಗುಡಿಸುತ್ತ ಗುಡಿ-ಸುತ್ತ ತಾನೇ ಕಸವಾದವನು.

ಯುದ್ಧಕಾಲದ ಕವಚ, ನಿದ್ದೆ ಕಾಲದ ಕಾವಲು
ಕಾಲದ ಕಾಲಿಗೆ ಮೆಟ್ಟು ಮೈಯ್ಯಾದೆನು
ಈಜು ಬುರುಡೆಯ ರೀತಿ ಮೇಲೆದ್ದು ಬರುವಂಥ
ಕನಸುಗಳು ಸುಟ್ಟು ಕರುಕಾದೆನು.

ನಿಮ್ಮ ಕನಸಿನ ಮನಸು, ಸುಳ್ಳ ಹಿಂದಿನ ಸತ್ಯ
ಕಾನೂನು ಕಂಬಿಗಳ ಕರುಳು ನಾನು
ಚಳಿಗೆ ಉಣ್ಣೆಯ ಉಡುಪು, ಬಿಸಿಲು ಕಾಲದ ಕೊಡೆ
ಗುಡುಗು ಸಿಡಿಲುಗಳ ಕೊರಳು ನಾನು.

ನಿಮ್ಮ ಮದುವೆಗೆ ತಾಳಿ, ಹಾಸಿಗೆಯು ಪ್ರಸ್ತಕೆ
ಜೀವರಸ ಧಾರೆಯ ಎರೆದು ಕೊಟ್ಟಾಯ್ತು
ಜೋಲಿ ಹೊಡೆಯದ ನಾನು ಜೋಗುಳದ ಹಾಡು
ಅತ್ತು ಕರೆದರೆ ಇಲ್ಲಿ ಕತ್ತು ಹೋದೀತು.

ಏನ ಹೇಳಲಿ ನಾನು ಕಣ್ಣ ಕಸಿದರೊ ನನ್ನ
ಹೇಳುತ್ತ ಬಂದದ್ದೆ ನೋಟವಾಯ್ತು
ನಾಲಗೆಯ ಕಿತ್ತು ನೆತ್ತರ ಕುಡಿದರೊ
ಅಮಲಲ್ಲಿ ಅಂದದ್ದೆ ವೇದವಾಯ್ತು.

ಹುಲಿಯ ವೇಷಕೆ, ನನ್ನ ಚರ್‍ಮ ತಮಟೆ
ನೋವ ಕಾಯಿಸಿದಾಗ ಕೆರಳುಶಬ್ದ
ಗಬ್ಬ ಹತ್ತಿದ ಗೀತೆ ಹೇಗೆ ಹಾಡಲಿ ನಾನು
ನಿಮ್ಮ ಕಾಲ್ತುಳಿತಕ್ಕೆ ಜೀವ ಸ್ತಬ್ಧ.

ಒತ್ತೆಯಾದವು ಚಿತ್ತ ಮಾತು ಮೈ ಮುನಿಸು,
ತಿನಿಸುಗಳ ರಾಜ್ಯದಲಿ ಮೇವು ನಾನು
ಗೋಳ ಗೀತೆಯು ಇಲ್ಲಿ ಗುಲಾಮ ಗುರುವೆ
ಮುಕುತಿಯೆಂದರೆ ನಮ್ಮ ಮಣ್ಣು ಹುಣ್ಣು.

ಉದ್ದ ಹಾಸಿದ ನಿಮ್ಮ ಹೆಬ್ಬಾವ ಇತಿಹಾಸ
ಸೀಳಿ ಬಂದೀತು ಸತ್ಯ ನಾಳೆ ಬೆಳಕು
ಹೂತ ಭೂತದ ಬೆವರು ವರ್‍ತಮಾನದ ನೀರು
ಹರಿದೀತು ನೆಲ ತುಂಬ ತೆನೆಯು ತೂಗೀತು.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...