Home / ಕವನ / ಕವಿತೆ / ಗುಲಾಮ ಗೀತೆ

ಗುಲಾಮ ಗೀತೆ

ಬೇರು ಕಿತ್ತ ಮರ, ನಾರು ನನ್ನ ನರ
ಹಗ್ಗವಾಯಿತು ನಿಮಗೆ ಉರುಳು ನನಗೆ
ಸಾವ ನೇಯುವ ನೂಲು, ಭಾವ ಬತ್ತಿದ ಮಾಲು
ಬಣ್ಣ ಬಣ್ಣದ ನೇಯ್ಗೆ ಬಿದ್ದೆ ಬಲೆಗೆ.

ನಿಮ್ಮ ಅನ್ನದ ಅಗುಳು, ಯಾರೂ ತಿನ್ನದ ಉಗುಳು
ಕಾಲು ಒತ್ತುವ ಕಾಲ-ಎಲ್ಲ ನಾನು
ಹುಟ್ಟು ಹಬ್ಬದ ಕಾಳು, ಸತ್ತ ಸೂಚನೆ ಕೂಳು
ನಡುವೆ ನಡ ಮುರಿದಂಥ ನಗುವು ನಾನು.

ಕಲ್ಲುಕೋಟೆಯ ಬೆವರು, ಗುಡಿಯ ಗೋಪುರ ಸೂರು
ಆಣೆಕಟ್ಟ ನಿಟ್ಟುಸಿರು, ನೀರಾದ ನಂಬಿಗನು
ಓಣಿ ಓಣಿಯ ಪೊರಕೆ, ಶುದ್ಧ ಬಯ್ಗಳ ಹರಕೆ
ಗುಡಿಸುತ್ತ ಗುಡಿ-ಸುತ್ತ ತಾನೇ ಕಸವಾದವನು.

ಯುದ್ಧಕಾಲದ ಕವಚ, ನಿದ್ದೆ ಕಾಲದ ಕಾವಲು
ಕಾಲದ ಕಾಲಿಗೆ ಮೆಟ್ಟು ಮೈಯ್ಯಾದೆನು
ಈಜು ಬುರುಡೆಯ ರೀತಿ ಮೇಲೆದ್ದು ಬರುವಂಥ
ಕನಸುಗಳು ಸುಟ್ಟು ಕರುಕಾದೆನು.

ನಿಮ್ಮ ಕನಸಿನ ಮನಸು, ಸುಳ್ಳ ಹಿಂದಿನ ಸತ್ಯ
ಕಾನೂನು ಕಂಬಿಗಳ ಕರುಳು ನಾನು
ಚಳಿಗೆ ಉಣ್ಣೆಯ ಉಡುಪು, ಬಿಸಿಲು ಕಾಲದ ಕೊಡೆ
ಗುಡುಗು ಸಿಡಿಲುಗಳ ಕೊರಳು ನಾನು.

ನಿಮ್ಮ ಮದುವೆಗೆ ತಾಳಿ, ಹಾಸಿಗೆಯು ಪ್ರಸ್ತಕೆ
ಜೀವರಸ ಧಾರೆಯ ಎರೆದು ಕೊಟ್ಟಾಯ್ತು
ಜೋಲಿ ಹೊಡೆಯದ ನಾನು ಜೋಗುಳದ ಹಾಡು
ಅತ್ತು ಕರೆದರೆ ಇಲ್ಲಿ ಕತ್ತು ಹೋದೀತು.

ಏನ ಹೇಳಲಿ ನಾನು ಕಣ್ಣ ಕಸಿದರೊ ನನ್ನ
ಹೇಳುತ್ತ ಬಂದದ್ದೆ ನೋಟವಾಯ್ತು
ನಾಲಗೆಯ ಕಿತ್ತು ನೆತ್ತರ ಕುಡಿದರೊ
ಅಮಲಲ್ಲಿ ಅಂದದ್ದೆ ವೇದವಾಯ್ತು.

ಹುಲಿಯ ವೇಷಕೆ, ನನ್ನ ಚರ್‍ಮ ತಮಟೆ
ನೋವ ಕಾಯಿಸಿದಾಗ ಕೆರಳುಶಬ್ದ
ಗಬ್ಬ ಹತ್ತಿದ ಗೀತೆ ಹೇಗೆ ಹಾಡಲಿ ನಾನು
ನಿಮ್ಮ ಕಾಲ್ತುಳಿತಕ್ಕೆ ಜೀವ ಸ್ತಬ್ಧ.

ಒತ್ತೆಯಾದವು ಚಿತ್ತ ಮಾತು ಮೈ ಮುನಿಸು,
ತಿನಿಸುಗಳ ರಾಜ್ಯದಲಿ ಮೇವು ನಾನು
ಗೋಳ ಗೀತೆಯು ಇಲ್ಲಿ ಗುಲಾಮ ಗುರುವೆ
ಮುಕುತಿಯೆಂದರೆ ನಮ್ಮ ಮಣ್ಣು ಹುಣ್ಣು.

ಉದ್ದ ಹಾಸಿದ ನಿಮ್ಮ ಹೆಬ್ಬಾವ ಇತಿಹಾಸ
ಸೀಳಿ ಬಂದೀತು ಸತ್ಯ ನಾಳೆ ಬೆಳಕು
ಹೂತ ಭೂತದ ಬೆವರು ವರ್‍ತಮಾನದ ನೀರು
ಹರಿದೀತು ನೆಲ ತುಂಬ ತೆನೆಯು ತೂಗೀತು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...