ಗುಲಾಮ ಗೀತೆ

ಬೇರು ಕಿತ್ತ ಮರ, ನಾರು ನನ್ನ ನರ
ಹಗ್ಗವಾಯಿತು ನಿಮಗೆ ಉರುಳು ನನಗೆ
ಸಾವ ನೇಯುವ ನೂಲು, ಭಾವ ಬತ್ತಿದ ಮಾಲು
ಬಣ್ಣ ಬಣ್ಣದ ನೇಯ್ಗೆ ಬಿದ್ದೆ ಬಲೆಗೆ.

ನಿಮ್ಮ ಅನ್ನದ ಅಗುಳು, ಯಾರೂ ತಿನ್ನದ ಉಗುಳು
ಕಾಲು ಒತ್ತುವ ಕಾಲ-ಎಲ್ಲ ನಾನು
ಹುಟ್ಟು ಹಬ್ಬದ ಕಾಳು, ಸತ್ತ ಸೂಚನೆ ಕೂಳು
ನಡುವೆ ನಡ ಮುರಿದಂಥ ನಗುವು ನಾನು.

ಕಲ್ಲುಕೋಟೆಯ ಬೆವರು, ಗುಡಿಯ ಗೋಪುರ ಸೂರು
ಆಣೆಕಟ್ಟ ನಿಟ್ಟುಸಿರು, ನೀರಾದ ನಂಬಿಗನು
ಓಣಿ ಓಣಿಯ ಪೊರಕೆ, ಶುದ್ಧ ಬಯ್ಗಳ ಹರಕೆ
ಗುಡಿಸುತ್ತ ಗುಡಿ-ಸುತ್ತ ತಾನೇ ಕಸವಾದವನು.

ಯುದ್ಧಕಾಲದ ಕವಚ, ನಿದ್ದೆ ಕಾಲದ ಕಾವಲು
ಕಾಲದ ಕಾಲಿಗೆ ಮೆಟ್ಟು ಮೈಯ್ಯಾದೆನು
ಈಜು ಬುರುಡೆಯ ರೀತಿ ಮೇಲೆದ್ದು ಬರುವಂಥ
ಕನಸುಗಳು ಸುಟ್ಟು ಕರುಕಾದೆನು.

ನಿಮ್ಮ ಕನಸಿನ ಮನಸು, ಸುಳ್ಳ ಹಿಂದಿನ ಸತ್ಯ
ಕಾನೂನು ಕಂಬಿಗಳ ಕರುಳು ನಾನು
ಚಳಿಗೆ ಉಣ್ಣೆಯ ಉಡುಪು, ಬಿಸಿಲು ಕಾಲದ ಕೊಡೆ
ಗುಡುಗು ಸಿಡಿಲುಗಳ ಕೊರಳು ನಾನು.

ನಿಮ್ಮ ಮದುವೆಗೆ ತಾಳಿ, ಹಾಸಿಗೆಯು ಪ್ರಸ್ತಕೆ
ಜೀವರಸ ಧಾರೆಯ ಎರೆದು ಕೊಟ್ಟಾಯ್ತು
ಜೋಲಿ ಹೊಡೆಯದ ನಾನು ಜೋಗುಳದ ಹಾಡು
ಅತ್ತು ಕರೆದರೆ ಇಲ್ಲಿ ಕತ್ತು ಹೋದೀತು.

ಏನ ಹೇಳಲಿ ನಾನು ಕಣ್ಣ ಕಸಿದರೊ ನನ್ನ
ಹೇಳುತ್ತ ಬಂದದ್ದೆ ನೋಟವಾಯ್ತು
ನಾಲಗೆಯ ಕಿತ್ತು ನೆತ್ತರ ಕುಡಿದರೊ
ಅಮಲಲ್ಲಿ ಅಂದದ್ದೆ ವೇದವಾಯ್ತು.

ಹುಲಿಯ ವೇಷಕೆ, ನನ್ನ ಚರ್‍ಮ ತಮಟೆ
ನೋವ ಕಾಯಿಸಿದಾಗ ಕೆರಳುಶಬ್ದ
ಗಬ್ಬ ಹತ್ತಿದ ಗೀತೆ ಹೇಗೆ ಹಾಡಲಿ ನಾನು
ನಿಮ್ಮ ಕಾಲ್ತುಳಿತಕ್ಕೆ ಜೀವ ಸ್ತಬ್ಧ.

ಒತ್ತೆಯಾದವು ಚಿತ್ತ ಮಾತು ಮೈ ಮುನಿಸು,
ತಿನಿಸುಗಳ ರಾಜ್ಯದಲಿ ಮೇವು ನಾನು
ಗೋಳ ಗೀತೆಯು ಇಲ್ಲಿ ಗುಲಾಮ ಗುರುವೆ
ಮುಕುತಿಯೆಂದರೆ ನಮ್ಮ ಮಣ್ಣು ಹುಣ್ಣು.

ಉದ್ದ ಹಾಸಿದ ನಿಮ್ಮ ಹೆಬ್ಬಾವ ಇತಿಹಾಸ
ಸೀಳಿ ಬಂದೀತು ಸತ್ಯ ನಾಳೆ ಬೆಳಕು
ಹೂತ ಭೂತದ ಬೆವರು ವರ್‍ತಮಾನದ ನೀರು
ಹರಿದೀತು ನೆಲ ತುಂಬ ತೆನೆಯು ತೂಗೀತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post Thomas Hardy ಯ “The Return of the Native” ಸ್ವ-ಅಸ್ತಿತ್ವದ ನೆರಳು
Next post ಏಕೆ ಗೆಳತಿ ವಿರಹವೇದನೆ?

ಸಣ್ಣ ಕತೆ

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…