Home / ಕವನ / ಕವಿತೆ / ಬೆವರುಗಳ್ಳರು

ಬೆವರುಗಳ್ಳರು

ಮೋಡ ಬೆವರಿದಾಗ ನೆಲ ಹಸಿರಾಗ್ತೈತಿ.
ರೈತರು ಬೆವರಿದಾಗ ದೇಶದ ಹಸಿವು ಇಂಗ್ತೈತಿ.
ಕೂಲಿ ಕಾರ್‍ಮಿಕರು ಬೆವರಿದರೆ ದೇಶದ ಪ್ರಗತಿಯಾಗ್ತೈತಿ.

ಬೆವರದಿದ್ದರೆ-
ಈ ಕಾಯ ಗೆಲುವಾಗದು ಕಾರ್ಯದಕ್ಷತೆ ಹೆಚ್ಚಲಾರದು
ಕೆಲಸದಲ್ಲಿ ಏಕಾಗ್ರತೆ ತನ್ಮಯತೆ ಸುಳಿಯಲಾರದು
ಮನಕ್ಕೆ ಆನಂದ ಸಿಗಲಾರದು

ಈ ಬೆವರ ಹನಿಗಳು ಅಡೆತಡೆಯಿಲ್ಲದೆ
ಹರಿದು ತಾವು ನಡೆದಾಡುವ ನೆಲವ ನೆನೆಸಿ
ತಂಪುಗೊಳಿಸಿ ಫಲವು ಫಲಿಸಿ
ಮತ್ತೊಬ್ಬರ ಮನವ ತಣಿಸುತಿರೆ….

ಇನ್ನು ಕೆಲವರಲ್ಲಿ ಹೊರ ಬರದ ಬೆವರು
ಒಳಗೊಳಗೆ ಹೆಪ್ಪು ಗಟ್ಟಿ ಮಲಗಿರಲು
ಇಂತಹವರು ಬದುಕನ್ನು
ತಮ್ಮ ಬೆವರಿನಲ್ಲಿ ತೇಲಿಸಲಾರರು
ಬೇರೆಯವರ ಬೆವರಿನಲ್ಲಿ ಅಟ್ಟಹಾಸದಿಂದ
ಕೇಕೆ ಹಾಕಿ ಕುಣಿಯುತ್ತಾರೆ ಬದುಕುತ್ತಾರೆ ಕೂಡ

ಈ ದೇಹದಲ್ಲಿ ರಕ್ತ ಬೆವರು ಬೇರೆ ಬೇರೆ
ಶುದ್ಧ ರಕ್ತಕೆ ಸುರಿಯಲೇಬೇಕು ಬೆವರು ಹೊರಗೆ
ಎಷ್ಟೋ ಜನ ಗುಲಾಮರು ಕೂಲಿ ಕಾರ್ಮಿಕರು ರೈತರು
ಬೆವರುವುದೇ ಬದುಕೆಂದು ತಿಳಿದು
ಅದರಲ್ಲೇ ಹೂತು ಹೋಗಿದ್ದಾರೆ

ಒಂದು ಚೂರು ಬೆವರದ ದೇವರು
ಬ್ರಹ್ಮಜ್ಞಾನಿಗಳೂ ಏಸಿ ರೂಮಿನಲ್ಲಿ ಕುಳಿತವರು
ರಾಜಕೀಯ ಮಂದಿಗಳಿಗೇನು ತಿಳಿದೀತು
ಬೆವರ ಮಹಿಮೆ ಬೆವರ ಬೆಲೆ

ಬೆವರ ಸುರಿಸದವರು ಸೃಷ್ಟಿಸಿದ ಧರ್ಮಗ್ರಂಥಗಳು
ಬೆವರ ಹನಿಗಳಿಗೆ ನೇಣಾದವು ಕುಣಿಕೆಯಾದವು
ಅನ್ನ ಸೃಷ್ಟಿಸುವ ಸದಾಕಾಲ ದುಡಿಯುವ ದೇಹಗಳು
ಗಮ್ಮೆಂದು ಸುರಿಸುವ ಬೆವರು
ಅಮೃತಕೆ ಸಮಾನ

ದುಡಿತದ ಬೆವರಿನಲಿ ವಿದ್ಯುತ್‌ ಸಂಚಾರವಿದೆ
ನಿರಂಕುಶ ಮನವಿದೆ ದಣಿವಿದೆ ರುಚಿಯಿದೆ
ಹೊಸದಿಟ್ಟ ಹೆಜ್ಜೆಯಿದೆ ಹೊಸ ಹುರುಪಿದೆ
ಹಾಡುಗಳಿವೆ ದನಿಯಿದೆ ಹೊಸ ಬೆಳಕಿದೆ
ಬೆವರಿಂದಲೇ ಹುಟ್ಟಿದವು ವಿವಿಧ ಹೋರಾಟಗಳು

ಶತಶತಮಾನಗಳಿಂದ
ವೈಭವದಿಂದ ಉಣ್ಣುತ್ತಾ ಢೇಕರಿಸುತ್ತಾ ಬಂದವರ
ಬೆವರೇ ನಿಜ ಬೆವರೆಂದು ನಂಬಿಸಿ
ಮತ್ತೊಬ್ಬರ ಸಮಾಧಿ ಮೇಲೆ
ಸೌಧ ಕಟ್ಟುವವರೇ ಹೆಚ್ಚು

ಏಸಿ ರೂಮಿನಲಿ ಕುಳಿತ ಇವರು
ತಮ್ಮ ಬೆವರಿನ ಜಲ ರಂದ್ರಗಳಿಗೆ
ವಿವಿಧ ಬಗೆಯ ಅತ್ತರು ಲೋಶನ್‌ಗಳು
ಸೆಂಟ್‌ಗಳನ್ನು ಜಡೆದು ತುಂಬಿ
ಬೆವರ ಬೆಲೆ ಕಳೆದವರು

ಬೆವರ ಪರಂಪರೆಗೆ ಕಿಚ್ಚು ಇಟ್ಟವರು
ಇವರು ಬೆವರುಗಳ್ಳರು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...