Home / ಕವನ / ಕವಿತೆ / ಶ್ರೀ ಜಯನ ಬೆಳಕು

ಶ್ರೀ ಜಯನ ಬೆಳಕು

ಕನ್ನಡದ ಬಾನಿನಲಿ ಮೂಡಿತದೊ ಬೆಳಕು,
ಪುಣ್ಯ ಕಣ್ದೆರೆದಂತೆ ಬೆಳಕು!
ಕನ್ನಡಿಗರೊಲುಮೆ ತೆರೆಹೊಮ್ಮಿಸುವ ಬೆಳಕು,
ಹೊನ್ನ ಕನಸನು ತರುವ ಹೊಸ ಕಳೆಯ ಬೆಳಕು,
ಮುನ್ನರಿಯದಚ್ಚರಿಯ ಮೆಚ್ಚು ಬೆಳಕು.
ಬೆಳ್ಳಿ ಬೆಳಗುವ ಬಾನ ಬೆಳ್ಳನೆಯ ಬೆಳಕು,
ಒಳ್ಳಿತೊಸರುವ ಹೆಸರ ದೊಡ್ಡ ಬೆಳಕು.
ಸೂರ್‍ಯ ಚಂದ್ರರು ಮುಳುಗಿ, ಸುತ್ತೆತ ಕಗ್ಗತ್ತಲೆಯ ಮೋಡ ಹೇರಿ.
ತೆರೆ ನರಳ್ವ ನಡುಗಡಲ ಹಡಗಿನೆಡೆ, ಮೂಡಗೆಂಪೇರಿ,
ಮತ್ತೊಮ್ಮೆ ಮೇಲ್ ನೆಗೆವ ದೇವರುರಿಗಣ್ಣಂತೆ ತೋರಿ,
ನೆಗೆಯುತ್ತಿದೆ ಮತ್ತೊಮ್ಮೆ ನಮಗದೋ ತುಂಬು ಬಾಳ್ ಬೀರಿ
ಹಿರಿಯ ಬೆಳಕೊಂದು ಸಿರಿ ಸಾರಿ.

ಆಡಿ, ಕುಣಿದಾಡಿ, ಜಲವೆಲ್ಲಾ!
ಪಾಡಿ, ಓ ಪಾಡಿ, ನೆಲವೆಲ್ಲಾ!
ಕೂಗಿ, ನಾಡೆಲ್ಲಾ, ಬೀಗಿ, ಬೀಡೆಲ್ಲಾ,
ಓಲಾಡಿ, ಊರೆಲ್ಲ, ಮೇಲಾಡಿ ಹಳ್ಳಿಗಾಡೆಲ್ಲಾ,
ಸೋಲು ನಮಗಿನ್ನಿಲ್ಲ, ಗೆಲವೆ ಇನ್ನೆಲ್ಲಾ!
ಭಯ ಚೆದರೆ, ಚಿಮ್ಮುತಿದೆ ಕಳಕಳಿಯ ಬೆಳಕು,
ದಯದ ತಣ್ಬೆಳಕು,
ಜಯದ ಕಣ್ಬೆಳಕು,
ನಯದ ನುಣ್ಬೆಳಕು!
ಬೆರಗೆನಿಸಿ, ಮುದ್ದೆನಿಸಿ, ಗೆಲುವೆನಿಸಿ, ಚೆಲುವೆನಿಸಿ,
ಅರಿವಾಗಿ, ಅರುಳಾಗಿ, ಅರಸಿಯ ತಿರುಳಾಗಿ,
ಬೆಳ್ಗೊಡೆಯ ನೆರಳಾಗಿ, ಭಕ್ತಿಯರಳಾಗಿ,
ತಂದೆ ತಾಯ್ಗೆಂದಿಲ್ಲದೊಲವ ಮಣಿಸಿ,
ಹಿರಿತಂದೆಗರಸಾಳ್ಕೆ ನೆಚ್ಚ ತಣಿಸಿ,
ತಂಗಿಯರ ಮೆರಸಿ ಕುಣಿಸಿ,
ಯದುಕುಲದ ಕಲ್ಪವೃಕ್ಷದ ಫಲದ ಸೊದೆಯೆನಿಸಿ ಮನೆಮನೆಯನುಣಿಸಿ,
ತುಂಬುತಿದೆ, ನೆರೆಯುತಿದೆ, ನೋಡಿ, ಆ ಬೆಳಕು !
ಆಳ ಬಾಳಲ್ಲಾ?
ನೋವು ನಲಿವಲ್ಲಾ ?
ಪಾವು ಚಂದ್ರಂಗಿಲ್ಲ ? ಕೋಳು ಸೂರ್‍ಯಂಗಿಲ್ಲ ?
ದೇವರ್ಗಮೆಡರುತೊಡರಿಲ್ಲಾ ?
ತಂದೆಯಿರ್‍ವರ ಸೆಳೆದು ತಂದನೇ ಅಳಲ ವಿಧಿ !
ನೊಂದನೇ ನಮ್ಮ ನಿಧಿ !
ನೊಂದು, ನೋವನು ನುಂಗಿ, ಮುಂಬರಿಯುತಿದೆ, ಅಚ್ಚ ಬೆಳಕು!
ಕೆಚ್ಚೆದೆಯ ಬೆಳಕು!
ಕಣ್ಣೀರ ತೊಡೆದು, ಮಿಡಿದು,
ತಣ್ಣನೆಯ ಹರಕೆಗಳ ಹೊನ್ನ ಮುಡಿ ಮುಡಿದು,
ತನ್ನ ಹೊಣೆಗಳ ಹೊರೆಗೆ ನಾಡವರ ನೆರವ ಕುರಿತಾಳ್ವ ನುಡಿ ನುಡಿದು,
ನಾಡವರ ಬಾಳಾದ ಬಾಳ ಬೆಳಕು,
ನರಸಿಂಹ ಕೃಷ್ಣರಿರ್‍ವರು ಕೂಡಿ ನೆರೆದರೆನೆ ತೇಜಸ್ವಿಯಾಗಿ,
ಎಳೆಯ ಹೆರೆಯೊಳೆ ತೊಳಗಿ ತುಂಬು ಹೆರೆಯಾಗಿ,
ಸಿರಿಯೊಡೆಯ ಜಯಚಾಮರಾಜೇಂದ್ರನೆಂಬೊಂದು ದಿವ್ಯಮಣಿ ಬೆಳಕು,
ಮೂಡಿ, ಕಳೆಗೂಡಿ,
ಕನ್ನಡದ ಚೆಲುವಿಗದೊ ಬೆಳಗುತಿದೆ, ನೋಡಿ,
ದೈವ ಕೃಪೆ ಕೂಡಿ,
ಬೆಳಗುತಿದೆ ನಮಗಾಗಿ ಆ ದೊಡ್ಡ ಬೆಳಕು,
ಶ್ರೀ ಜಯನ ಬೆಳಕು.
*****
೧೯೪೦

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...