Home / ಕವನ / ಕವಿತೆ / ಶ್ರೀ ಜಯನ ಬೆಳಕು

ಶ್ರೀ ಜಯನ ಬೆಳಕು

ಕನ್ನಡದ ಬಾನಿನಲಿ ಮೂಡಿತದೊ ಬೆಳಕು,
ಪುಣ್ಯ ಕಣ್ದೆರೆದಂತೆ ಬೆಳಕು!
ಕನ್ನಡಿಗರೊಲುಮೆ ತೆರೆಹೊಮ್ಮಿಸುವ ಬೆಳಕು,
ಹೊನ್ನ ಕನಸನು ತರುವ ಹೊಸ ಕಳೆಯ ಬೆಳಕು,
ಮುನ್ನರಿಯದಚ್ಚರಿಯ ಮೆಚ್ಚು ಬೆಳಕು.
ಬೆಳ್ಳಿ ಬೆಳಗುವ ಬಾನ ಬೆಳ್ಳನೆಯ ಬೆಳಕು,
ಒಳ್ಳಿತೊಸರುವ ಹೆಸರ ದೊಡ್ಡ ಬೆಳಕು.
ಸೂರ್‍ಯ ಚಂದ್ರರು ಮುಳುಗಿ, ಸುತ್ತೆತ ಕಗ್ಗತ್ತಲೆಯ ಮೋಡ ಹೇರಿ.
ತೆರೆ ನರಳ್ವ ನಡುಗಡಲ ಹಡಗಿನೆಡೆ, ಮೂಡಗೆಂಪೇರಿ,
ಮತ್ತೊಮ್ಮೆ ಮೇಲ್ ನೆಗೆವ ದೇವರುರಿಗಣ್ಣಂತೆ ತೋರಿ,
ನೆಗೆಯುತ್ತಿದೆ ಮತ್ತೊಮ್ಮೆ ನಮಗದೋ ತುಂಬು ಬಾಳ್ ಬೀರಿ
ಹಿರಿಯ ಬೆಳಕೊಂದು ಸಿರಿ ಸಾರಿ.

ಆಡಿ, ಕುಣಿದಾಡಿ, ಜಲವೆಲ್ಲಾ!
ಪಾಡಿ, ಓ ಪಾಡಿ, ನೆಲವೆಲ್ಲಾ!
ಕೂಗಿ, ನಾಡೆಲ್ಲಾ, ಬೀಗಿ, ಬೀಡೆಲ್ಲಾ,
ಓಲಾಡಿ, ಊರೆಲ್ಲ, ಮೇಲಾಡಿ ಹಳ್ಳಿಗಾಡೆಲ್ಲಾ,
ಸೋಲು ನಮಗಿನ್ನಿಲ್ಲ, ಗೆಲವೆ ಇನ್ನೆಲ್ಲಾ!
ಭಯ ಚೆದರೆ, ಚಿಮ್ಮುತಿದೆ ಕಳಕಳಿಯ ಬೆಳಕು,
ದಯದ ತಣ್ಬೆಳಕು,
ಜಯದ ಕಣ್ಬೆಳಕು,
ನಯದ ನುಣ್ಬೆಳಕು!
ಬೆರಗೆನಿಸಿ, ಮುದ್ದೆನಿಸಿ, ಗೆಲುವೆನಿಸಿ, ಚೆಲುವೆನಿಸಿ,
ಅರಿವಾಗಿ, ಅರುಳಾಗಿ, ಅರಸಿಯ ತಿರುಳಾಗಿ,
ಬೆಳ್ಗೊಡೆಯ ನೆರಳಾಗಿ, ಭಕ್ತಿಯರಳಾಗಿ,
ತಂದೆ ತಾಯ್ಗೆಂದಿಲ್ಲದೊಲವ ಮಣಿಸಿ,
ಹಿರಿತಂದೆಗರಸಾಳ್ಕೆ ನೆಚ್ಚ ತಣಿಸಿ,
ತಂಗಿಯರ ಮೆರಸಿ ಕುಣಿಸಿ,
ಯದುಕುಲದ ಕಲ್ಪವೃಕ್ಷದ ಫಲದ ಸೊದೆಯೆನಿಸಿ ಮನೆಮನೆಯನುಣಿಸಿ,
ತುಂಬುತಿದೆ, ನೆರೆಯುತಿದೆ, ನೋಡಿ, ಆ ಬೆಳಕು !
ಆಳ ಬಾಳಲ್ಲಾ?
ನೋವು ನಲಿವಲ್ಲಾ ?
ಪಾವು ಚಂದ್ರಂಗಿಲ್ಲ ? ಕೋಳು ಸೂರ್‍ಯಂಗಿಲ್ಲ ?
ದೇವರ್ಗಮೆಡರುತೊಡರಿಲ್ಲಾ ?
ತಂದೆಯಿರ್‍ವರ ಸೆಳೆದು ತಂದನೇ ಅಳಲ ವಿಧಿ !
ನೊಂದನೇ ನಮ್ಮ ನಿಧಿ !
ನೊಂದು, ನೋವನು ನುಂಗಿ, ಮುಂಬರಿಯುತಿದೆ, ಅಚ್ಚ ಬೆಳಕು!
ಕೆಚ್ಚೆದೆಯ ಬೆಳಕು!
ಕಣ್ಣೀರ ತೊಡೆದು, ಮಿಡಿದು,
ತಣ್ಣನೆಯ ಹರಕೆಗಳ ಹೊನ್ನ ಮುಡಿ ಮುಡಿದು,
ತನ್ನ ಹೊಣೆಗಳ ಹೊರೆಗೆ ನಾಡವರ ನೆರವ ಕುರಿತಾಳ್ವ ನುಡಿ ನುಡಿದು,
ನಾಡವರ ಬಾಳಾದ ಬಾಳ ಬೆಳಕು,
ನರಸಿಂಹ ಕೃಷ್ಣರಿರ್‍ವರು ಕೂಡಿ ನೆರೆದರೆನೆ ತೇಜಸ್ವಿಯಾಗಿ,
ಎಳೆಯ ಹೆರೆಯೊಳೆ ತೊಳಗಿ ತುಂಬು ಹೆರೆಯಾಗಿ,
ಸಿರಿಯೊಡೆಯ ಜಯಚಾಮರಾಜೇಂದ್ರನೆಂಬೊಂದು ದಿವ್ಯಮಣಿ ಬೆಳಕು,
ಮೂಡಿ, ಕಳೆಗೂಡಿ,
ಕನ್ನಡದ ಚೆಲುವಿಗದೊ ಬೆಳಗುತಿದೆ, ನೋಡಿ,
ದೈವ ಕೃಪೆ ಕೂಡಿ,
ಬೆಳಗುತಿದೆ ನಮಗಾಗಿ ಆ ದೊಡ್ಡ ಬೆಳಕು,
ಶ್ರೀ ಜಯನ ಬೆಳಕು.
*****
೧೯೪೦

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...