Home / ಕವನ / ಕವಿತೆ / ಶ್ರೀ ಜಯನ ಬೆಳಕು

ಶ್ರೀ ಜಯನ ಬೆಳಕು

ಕನ್ನಡದ ಬಾನಿನಲಿ ಮೂಡಿತದೊ ಬೆಳಕು,
ಪುಣ್ಯ ಕಣ್ದೆರೆದಂತೆ ಬೆಳಕು!
ಕನ್ನಡಿಗರೊಲುಮೆ ತೆರೆಹೊಮ್ಮಿಸುವ ಬೆಳಕು,
ಹೊನ್ನ ಕನಸನು ತರುವ ಹೊಸ ಕಳೆಯ ಬೆಳಕು,
ಮುನ್ನರಿಯದಚ್ಚರಿಯ ಮೆಚ್ಚು ಬೆಳಕು.
ಬೆಳ್ಳಿ ಬೆಳಗುವ ಬಾನ ಬೆಳ್ಳನೆಯ ಬೆಳಕು,
ಒಳ್ಳಿತೊಸರುವ ಹೆಸರ ದೊಡ್ಡ ಬೆಳಕು.
ಸೂರ್‍ಯ ಚಂದ್ರರು ಮುಳುಗಿ, ಸುತ್ತೆತ ಕಗ್ಗತ್ತಲೆಯ ಮೋಡ ಹೇರಿ.
ತೆರೆ ನರಳ್ವ ನಡುಗಡಲ ಹಡಗಿನೆಡೆ, ಮೂಡಗೆಂಪೇರಿ,
ಮತ್ತೊಮ್ಮೆ ಮೇಲ್ ನೆಗೆವ ದೇವರುರಿಗಣ್ಣಂತೆ ತೋರಿ,
ನೆಗೆಯುತ್ತಿದೆ ಮತ್ತೊಮ್ಮೆ ನಮಗದೋ ತುಂಬು ಬಾಳ್ ಬೀರಿ
ಹಿರಿಯ ಬೆಳಕೊಂದು ಸಿರಿ ಸಾರಿ.

ಆಡಿ, ಕುಣಿದಾಡಿ, ಜಲವೆಲ್ಲಾ!
ಪಾಡಿ, ಓ ಪಾಡಿ, ನೆಲವೆಲ್ಲಾ!
ಕೂಗಿ, ನಾಡೆಲ್ಲಾ, ಬೀಗಿ, ಬೀಡೆಲ್ಲಾ,
ಓಲಾಡಿ, ಊರೆಲ್ಲ, ಮೇಲಾಡಿ ಹಳ್ಳಿಗಾಡೆಲ್ಲಾ,
ಸೋಲು ನಮಗಿನ್ನಿಲ್ಲ, ಗೆಲವೆ ಇನ್ನೆಲ್ಲಾ!
ಭಯ ಚೆದರೆ, ಚಿಮ್ಮುತಿದೆ ಕಳಕಳಿಯ ಬೆಳಕು,
ದಯದ ತಣ್ಬೆಳಕು,
ಜಯದ ಕಣ್ಬೆಳಕು,
ನಯದ ನುಣ್ಬೆಳಕು!
ಬೆರಗೆನಿಸಿ, ಮುದ್ದೆನಿಸಿ, ಗೆಲುವೆನಿಸಿ, ಚೆಲುವೆನಿಸಿ,
ಅರಿವಾಗಿ, ಅರುಳಾಗಿ, ಅರಸಿಯ ತಿರುಳಾಗಿ,
ಬೆಳ್ಗೊಡೆಯ ನೆರಳಾಗಿ, ಭಕ್ತಿಯರಳಾಗಿ,
ತಂದೆ ತಾಯ್ಗೆಂದಿಲ್ಲದೊಲವ ಮಣಿಸಿ,
ಹಿರಿತಂದೆಗರಸಾಳ್ಕೆ ನೆಚ್ಚ ತಣಿಸಿ,
ತಂಗಿಯರ ಮೆರಸಿ ಕುಣಿಸಿ,
ಯದುಕುಲದ ಕಲ್ಪವೃಕ್ಷದ ಫಲದ ಸೊದೆಯೆನಿಸಿ ಮನೆಮನೆಯನುಣಿಸಿ,
ತುಂಬುತಿದೆ, ನೆರೆಯುತಿದೆ, ನೋಡಿ, ಆ ಬೆಳಕು !
ಆಳ ಬಾಳಲ್ಲಾ?
ನೋವು ನಲಿವಲ್ಲಾ ?
ಪಾವು ಚಂದ್ರಂಗಿಲ್ಲ ? ಕೋಳು ಸೂರ್‍ಯಂಗಿಲ್ಲ ?
ದೇವರ್ಗಮೆಡರುತೊಡರಿಲ್ಲಾ ?
ತಂದೆಯಿರ್‍ವರ ಸೆಳೆದು ತಂದನೇ ಅಳಲ ವಿಧಿ !
ನೊಂದನೇ ನಮ್ಮ ನಿಧಿ !
ನೊಂದು, ನೋವನು ನುಂಗಿ, ಮುಂಬರಿಯುತಿದೆ, ಅಚ್ಚ ಬೆಳಕು!
ಕೆಚ್ಚೆದೆಯ ಬೆಳಕು!
ಕಣ್ಣೀರ ತೊಡೆದು, ಮಿಡಿದು,
ತಣ್ಣನೆಯ ಹರಕೆಗಳ ಹೊನ್ನ ಮುಡಿ ಮುಡಿದು,
ತನ್ನ ಹೊಣೆಗಳ ಹೊರೆಗೆ ನಾಡವರ ನೆರವ ಕುರಿತಾಳ್ವ ನುಡಿ ನುಡಿದು,
ನಾಡವರ ಬಾಳಾದ ಬಾಳ ಬೆಳಕು,
ನರಸಿಂಹ ಕೃಷ್ಣರಿರ್‍ವರು ಕೂಡಿ ನೆರೆದರೆನೆ ತೇಜಸ್ವಿಯಾಗಿ,
ಎಳೆಯ ಹೆರೆಯೊಳೆ ತೊಳಗಿ ತುಂಬು ಹೆರೆಯಾಗಿ,
ಸಿರಿಯೊಡೆಯ ಜಯಚಾಮರಾಜೇಂದ್ರನೆಂಬೊಂದು ದಿವ್ಯಮಣಿ ಬೆಳಕು,
ಮೂಡಿ, ಕಳೆಗೂಡಿ,
ಕನ್ನಡದ ಚೆಲುವಿಗದೊ ಬೆಳಗುತಿದೆ, ನೋಡಿ,
ದೈವ ಕೃಪೆ ಕೂಡಿ,
ಬೆಳಗುತಿದೆ ನಮಗಾಗಿ ಆ ದೊಡ್ಡ ಬೆಳಕು,
ಶ್ರೀ ಜಯನ ಬೆಳಕು.
*****
೧೯೪೦

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...