Home / ಲೇಖನ / ಇತರೆ / ಮೂವತ್ತೈದು ಪೈಸೆಗೊಂದು ಮಸಾಲೆದೋಸೆ…!?

ಮೂವತ್ತೈದು ಪೈಸೆಗೊಂದು ಮಸಾಲೆದೋಸೆ…!?

ನಾಟಕ ಕಂಪನಿಗಳ ಕಡೆಗೆ ಹೋಗಲು ಬಾರದೆಂದು ಬೇಸತ್ತ ನಂತರ ಬೆಳೆದಿದ್ದ ಜಡೆಯನ್ನು ಕಟ್ ಮಾಡಿಸಿದೆ. ಪ್ಯಾಂಟ್, ಶರ್ಟ್ ಹೊಲಿಸಿ, ಹೊಸ ಚಪ್ಪಲಿ ಕೊಂಡುಕೊಂಡು ತಿರುಗಾಡಲಾರಂಭಿಸಿದೆ. ಆಗಲು ಊರಲ್ಲಿ ಬೈಯ್ಯಲಾರಂಭಿಸಿದರು. “ಹೀಗೆ ನಡೆದಾಡಿದ್ರೆ ಛಲೋ ಅಲ್ಲೋ ತಮ್ಮಾ.. ಕಂಡಾಪಟ್ಟೆ ಓದಿದಿ, ಏನಾದ್ರು ಕೆಲಸ ಹುಡುಕಬಾರದು” ಅಂದ್ರು. ಕೆಲಸಕ್ಕೆಂದು ಸುಳ್ಳು ಹೇಳಿ ನಾಲ್ಕು ಎಕರೆ ಜಮೀನ್ ಬೇರೆ ಮಾರಿದ್ದೆ. ನಮ್ಮ ತಾಯಿ ಬಂಧು ಬಳಗ ಎಲ್ಲರೂ “ನೀನೊಂದು ನಮ್ಮನೆಗೆ ಇದಿಮಾಯಿ, ಊರುಬಿಟ್ಹೋಗು, ಕೆಲಸ ತಗೊಂಡು ಬಾ” ಎಂದು ಸಿಟ್ಟಿನ ಭರದಲ್ಲಿ ಬೈದಿದ್ದರು.

ನನಗೆ ಜಿಗುಪ್ಸೆಯಾಯಿತು. ಪಕ್ಕದ ಮನೆಯವರು ಹುಬ್ಬಳ್ಳಿಯಲ್ಲಿ ಏನೋ ಕೆಲ್ಸ ಮಾಡ್ತಿದ್ದಾರೆ, ಅಂತ ತಿಳಿದಿದ್ದೆ. ಅವರ ವಿಳಾಸ ತಗೊಂಡು ಕಿಸೆಯಲ್ಲಿ ಒಂದು ಸ್ವಲ್ಪ ರೊಕ್ಕ ಇಟ್ಟುಕೊಂಡು ಹಂಗೆ ಬಸ್ ಹತ್ತಿದೆ. ಅಂತೂ ಹುಬ್ಬಳ್ಳಿ ಶಹರ್‌ದಲ್ಲಿ ಇಳಿದಾಗ ಕೇವಲ ಇಪ್ಪತ್ತು ರೂಪಾಯಿ ಮಾತ್ರ ಉಳಿದಿತು. ಹೊಟ್ಟೆ ಹಸಿತಿತ್ತು. ನಾಲ್ಕಾಣೆ ಕೊಟ್ಟು ನಾಷ್ಟ ಮಾಡಿದೆ. ಅವರವರಿಗೆ ಕೇಳುತ್ತಾ, ನಮ್ಮ ಪಕ್ಕದಮನೆಯವರಿದ್ದ ವಿಳಾಸಕ್ಕೆ ಬಂದು ತಲುಪಿದೆ. ಕೆಲಸಕ್ಕೆ ಹೋಗುವ ಭರಾಟೆಯಲ್ಲಿದ್ದ ಅವರು ನಿರುತ್ಸಾಹದಿಂದ ನನ್ನ ಕಡೆ ನೋಡಿ, “ನೀನ್ಯಾಕೆ ಬಂದೆ ಇಷ್ಟು ದೂರ? ಎಂದು ಬೈದರು. ಕೆಲಸ ಹುಡುಕಿಕೊಂಡು ಬಂದೆ ಎಂದೆ. “ನನಗೇ ಕೆಲಸ ಇಲ್ಲ ಅಂತ ಸಾಯ್ತಿದೀನಿ, ನಿನಗೆಲ್ಲಿಂದ ಕೆಲಸ ಸಿಗ್ತದೆ? ಇಲ್ಲೆ ರೂಮ್‌ನಲ್ಲಿರು” ಎಂದು ಹೊರಗಡೆ ಹೋದರು.

ಅವರೆಲ್ಲಿಯೋ ಖಾನಾವಳಿಯ ಎಲ್ಲಿ ಊಟ ಮಾಡುತ್ತಿದ್ದರು. ನನಗೆ ಒಂದು ದಿನವೂ ಕೂಡ ಊಟಕ್ಕೆ ಕರೆಯಲಿಲ್ಲ. ಇನ್ನು ಕಿಸೆಯಲ್ಲಿ ಇಪ್ಪತ್ತು ರೂಪಾಯಿ ಇತ್ತಲ್ಲಾ ನೋಡೋಣ ಎಂದು ಬಂದಾಗಲೆಲ್ಲಾ ಕೆಲಸ ಕೊಡಿಸಿ ಎಂದು ವಿನಂತಿಸುತ್ತಿದ್ದೆ. ಊಟ, ನಾಷ್ಟ ಎಂದು ಖಾನಾವಳಿಗೆ ಹೋದರೆ, ಎರಡು ದಿವಸದಲ್ಲಿ ಎಲ್ಲಾ ರೊಕ್ಕ ಮುಗಿದು ಹೋಗ್ತದೆ, ಎಂದು ಭಾವಿಸಿ, ಒಂದು ಹೊತ್ತು ಮಾತ್ರ ಹೋಟೆಲ್‌ಗೆ ಹೋಗಿ, ಮಸಾಲೆ ದೋಸೆ, ಒಂದು ಚಹಾ.. ಹೇಳುತ್ತಿದ್ದೆ. ಎರಡೂ ಸೇರಿ ಅರವತ್ತು ಪೈಸ ಮಾಲೀಕನ ಕೈಗಿತ್ತು ಹೊರಬರುತ್ತಿದ್ದೆ.

ರೂಮು ಮಹಡಿ ಮೇಲೆ ಇತ್ತು. ಸಂಜೆ ಹೊಟ್ಟೆ ಹಸಿದಾಗ ರೂಮ್ ನ ಕೆಳಗೆ ಹಾಕಿದ್ದ ಒಂದು ಹತ್ತಿ ಮರವಿತ್ತು. ಆ ಮರದಿಂದ ಬಿದ್ದ ಹಣ್ಣುಗಳನ್ನು ನಿಧಾನವಾಗಿ ಆರಿಸಿಕೊಂಡು, ಯಾರಾದರೂ ನೋಡಿಯಾರು ಎಂಬ ಭಯದಿಂದ ನಾಲ್ಕಾರು ತಿಂದು, ಹಾಗೆ ನೀರು ಕುಡಿದು ಮಲಗುತ್ತಿದ್ದೆ. ಬೆಳಿಗಿನ ನಾಷ್ಟ ಯಾವ ಕಾರಣಕ್ಕೂ ಇರುತ್ತಿರಲಿಲ್ಲ. ಪುನಃ ಒಂದು ಗಂಟೆಗೆ ಆ ಹೋಟೆಲ್‌ಗೆ ಹೋದಾಗ, ಆ ಹೋಟೆಲ್ ಮಾಲೀಕನು ಮುವತ್ತೈದು ಪೈಸ ದೋಸೆಗೆ ಬಂದಿದ್ದಾನೆ ನೋಡ್ರಾಪ್ಪಾ, ಎಂದು ಗೇಲಿ ಮಾಡುತ್ತಿದ್ದರು. ಹೀಗೆ ನಾಲ್ಕಾರು ದಿನ ಕಳೆಯಿತು. ರೂಮ್‌ನವರು ನನ್ನನ್ನು ಅಲ್ಲಿ ಇಟ್ಟುಕೊಳ್ಳಲು ಯಾಕೋ ಇಷ್ಟ ಪಡಲಿಲ್ಲ. ನಾಳೆ ಎಲ್ಲಿಯಾದರು ರೂಮ್ ನೋಡಿಕೊಂಡು ಹೋಗು, ಇಲ್ಲಿ ಇರೋದು ಬೇಡ, ಎಂದು ಕಟ್ಟಕಡೆಯದಾಗಿ ಹೇಳಿದರು. ನನಗೆ ಮನಸ್ಸಿಗೆ ಕಸಿವಿಸಿಯಾಗಿ, ಒಂದು ತಿಂಗಳು ರೂಮ್ ಮಾಡಿಕೊಂಡಿದ್ದು, ಯಾವುದಾದರೂ ಫ್ಯಾಕ್ಟರಿ ಕೂಲಿ ಕೆಲಸಕ್ಕೆ ಹೋಗಬೇಕೆಂದು ತೀರ್ಮಾನಿಸಿದೆ. ಜೋಬಿನಲ್ಲಿ ೧೨ ರೂಪಾಯಿ ಮಾತ್ರ ಉಳಿದಿತು. ಎಷ್ಟು ದೂರವಿದ್ದರೂ ನಮ್ಮಂತವರು ಕಾಲ್ನಡಿಗೆಯಲ್ಲಿ ಹೋಗಬೇಕಲ್ಲಾ? ಎಂದು ರೂಮ್ ಹುಡುಕಲು ಹೋದೆ…ಹೋದೆ.. ಹಳೇ ಹುಬ್ಬಳ್ಳಿ ದಾಟಿ ಹೋದೆ. ಬಯಲು ಪ್ರದೇಶ. ಅಲ್ಲಿ ಚರಂಡಿಗಳದ್ದೇ ಸಾಮ್ರಾಜ್ಯ. ದುರ್ವಾಸನೆಗಳ ಮೇಲಾಟವೇ ಇತ್ತು. ಅಲ್ಲಿ ಹತ್ತಿರದಲ್ಲಿ ಎರಡು-ಮೂರು ರೂಮ್‌ಗಳು ಕಂಡವು. ಅವುಗಳನ್ನೇ ನೋಡುತ್ತ ನಿಂತೆ. ಒಬ್ಬ ಆ ಕಡೆಯಿಂದ ಬಂದವನು “ಏನ್ ಬೇಕಾಯಿತ್ತೋ ತಮ್ಮಾ?” ಎಂದಂದ. ನಾನು ಸಣ್ಣದಾಗಿ ಹೇಳಿದೆ. ಅವನು ಆ ರೂಮ್‌ಗಳನ್ನು ತೋರಿಸುತ್ತಾ, ಆ ಮೊದಲನೇ ರೂಮ್ ನನ್ನದೆ ಹತ್ತು ರೂಪಾಯಿ ಬಾಡಿಗೆ, ಕೊಡು ಇಲ್ಲಿ ಎಂದ. ನನಗೂ ಆ ರೂಮ್‌ನ ಸಹವಾಸದಿಂದ ದೂರವಿದ್ದರಾಯ್ತು ಎಂದು ಭಾವಿಸಿ, ಹತ್ತು ರೂಪಾಯಿ ಕೊಟ್ಟೆ. ಅವನು ಆ ಕಡೆ ಎಲ್ಲಿಯೋ ಹೋದ. ನಾನು ಖುಷಿಯಿಂದ ರೂಮ್‌ಗೆ ಬಂದೆ.

ಮಾರನೇ ದಿನ ಬ್ಯಾಗ್‌ನಲ್ಲಿ ನನ್ನ ಸಾಮಾನುಗಳನ್ನು ಇಟ್ಟುಕೊಂಡು, ಅಡ್ವಾನ್ಸ್ ಕೊಟ್ಟಿದ್ದ ರೂಮ್‌ನ್ನು ಹುಡುಕಿಕೊಂಡು ಹೊರಟೆ. ನಮ್ಮ ರೂಮ್‌ನವನು ನಾನೂ ನೋಡುತೇನೆ ನಡಿ ಎಂದು ನನ್ನ ಜೊತೆ ಬಂದ. ಅವನೆ ಆಟೋದಲ್ಲಿ ಕರೆದುಕೊಂಡು ಹೋದ. ಸ್ಥಳಬಂದಾಗ ಕೆಳಗಿಳಿದು – ನಾನು ಅವನಿಗೆ “ಇದೇ ನೋಡಣ್ಣ ರೂಮ್” ಎಂದು ತೋರಿಸಿದ. ಹತ್ತಿರ ಹೋಗಿ ನೋಡಿದೆವು. ಅಲ್ಲೊಂದು ಮುರುಕಲು ಟೇಬಲ್ ಮೇಲೆ ಅನಾಥ ಹೆಣವೊಂದನ್ನು ವೈದ್ಯರು ಕೊಯ್ಯುತ್ತಿದ್ದರು. ಅದು ಹೆಣ ಕೊಯ್ಯುವ ಮನೆ. ಖಚಿತವಾಯಿತು. ನಮ್ಮ ರೂಮ್‌ನವ ನನಗೊಂದು ಏಟು ಕೊಟ್ಟು ಎಳೆದುಕೊಂಡು ಬಂದು ಸಿಕ್ಕಾಪಟ್ಟೆ ಬೈದ. ಅಂದು ಆಘಾತಗೊಂಡು ದುಃಖಿಸುತ್ತಾ ಮಲಗಿಕೊಂಡೆ. ಅವನಿಗೆ ನನ್ನ ವ್ಯಥೆ ಅರ್ಥವಾಯಿತೇನೋ? ಮಾರನೇ ದಿನ ಬೆಳಗ್ಗೆ ಕೆ.ಎಂ.ಸಿ. ಆಸ್ಪತ್ರೆಯ ಲೈಬ್ರರಿಯನ್‌ರವರಿಗೆ ಪರಿಚಯಿಸಿದ.

ನನ್ನ ದಯನೀಯ ಪರಿಸ್ಥಿತಿಯನ್ನು ನೋಡಿ, ಕೆಲಸ ಕೊಡಿಸುತ್ತೇನೆಂದು ಹೇಳಿ, ನನಗೆ ಊಟ ಹಾಕಿಸಿ, ಅವರೆ ಬಸ್ ಚಾರ್ಜ್ ಖರ್ಚು ಮಾಡಿಕೊಂಡು, ಅಂದಿನ ಗ್ರಂಥಾಲಯ ಇಲಾಖೆಯ ಮುಖ್ಯಸ್ಥರಾಗಿದ್ದ ಎನ್.ಡಿ.ಬಗರಿಯವರಿಗೆ ಪರಿಚಯಿಸಿದರು. ಆಗ ತಾನೇ ಗ್ರಂಥಾಲಯ ಇಲಾಖೆ ಬೆಳೆಯುತ್ತಿರುವ ಕಾಲಘಟ್ಟವಾಗಿತ್ತು. ಅದೇನೋ ಅಭಿಮಾನ ಬಂತೋ ನನ್ನ ಮೇಲೆ ಗೊತ್ತಿಲ್ಲ? ಹಾಸನದಲ್ಲಿ ಕೆಲಸ ಮಾಡಲೆಂದು ಡ್ಯೂಟಿಯ ಆದೇಶ ಕೈಗಿತ್ತರು.
*****
ಅನುಭವದ ಆಲಯದೊಳು
ಅಲುಗಾಡದಿರಯ್ಯ!
ಅನುಭವದ ಆಲಯದೊಳು
ಚಂಚಲಿಸದಿರಯ್ಯ!
ಅನುಭವದ ಆಲಯದೊಳು
ಅನುಭಾವಗೊಂಡು
ನೀ ಅಮರವಾಗಯ್ಯ!

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...