Home / ಲೇಖನ / ಹಾಸ್ಯ / ಮೂರನೇ ಮದಿವಿ ಮಹಾಸಂಕಟ

ಮೂರನೇ ಮದಿವಿ ಮಹಾಸಂಕಟ

(ಮುಂದಿನ ಸಲ ಮದುವೆಯಾಗಲು ಸಿದ್ಧನಾದ ಮುದಿ ಮದುಮಗನೊಬ್ಬನು ತನ್ನ ಜೊತೆಯ ರಾಯರಾಡಿದ ಮಾತಿಗೆ ಉತ್ತರರೂಪವಾಗಿ ಮಾತನಾಡುವನು.)

….ನೀವೀಗೇನ್‌ ಮಾತಾಡಿದಿರ ರಾಯರಽ ಬರಾಬ್ಬರೀ ನೋಡಿರಿ…! ನಾನೂ ನಿಮ್ಮ ಮತದಂವನಽ ಏನ್ರೆಪಾ! ಇಷ್ಟು ವಯಸ್ಸಾದ ಮ್ಯಾಲ ಲಗ್ನ ಆಗೂದಂದರ ನಗ್ಗೇಡ ಕೆಲಸಽ! ಅದಕ್ಕಂತ ನಾನೂ-ಹೆಂಡತಿ ಸತ್ತು ಎರಡು ತಿಂಗಳಾಗಿ ಹೋದರೂ ಇನ್ನೂ ಲಗ್ನದ ಮಾತು ತಗದಿದ್ದೇ ಇಲ್ಲ…! ನನಗೂ-ದೇವರ ದಯದಿಂದ ಭಂಗಾರದಂಥ ಐದು ಹುಡುಗೋರು ಅವಽ! ದೇವರು ಹೊಟ್ಟೀ ಪೂರ್‌ತೆ ನಾಕು ಕೂರಿಗಿ ಭೂಮಿನೂ ಕೊಟ್ಟಾನ! ಎಲ್ಲಾ ನೆಟ್ಟಗಽ ಅದಽ ಆನ್ರಿ….! ಆದರ ನೋಡ್ರಿ, ಹೊರಗಿಂದ ಬಂದು ಮನಿವಳಗ ಕಾಲಿಟ್ಟ ಕೂಡಲೇ ಎದಿ ‘ಧಸ್’ ಅಂತ್ಽದ!! ಮನಿ ಭಣಾಭಣಾ ಸುರೀತಽದ! ಎದ್ದ ಬಡೀಲಿಕ್ಕೆ ಬಂದ್ಹಾಂಗ ಆಗತಽದ…! ಮನಿವೊಳಗ ಯಾರಾದರೂ ಬಂದರ ಎದ್ದು ಒಂದು ತಂಬಿಗಿ ನೀರು ಕೊಡಲಿಕ್ಕೆ ಸುದ್ದಾ ಯಾರೂ ಇಲ್ಲದ್ಹಾಂಗ ಆತಲಾ ಅಂತ ಅನಸತಽದ….

“ಹುಡುಗೂರಾರೆ ದೊಡ್ಡ್ವ ಆಗ್ಯಾವ ಅಂತೀರೇನು! ಹಾಂಗೂ ಇಲ್ಲ… ಕಚೇರಿಂದಽ ಬರೂದರೊಳಗ ಒಂದು ಮಣಕಾಲ ಒಡದಕೊಂಡಿರತದಽ ಒಂದು ತಲೀಗೇ ಪೆಟ್ಟು ಹಚ್ಚಿಕೊಂಡಿರತಽದ… ನೋಡ್ರಿ ಮನೀಗೆ ಬರೂದರೊಳಗ ಸರ್‍ಯೊಮರ್‍ಯೊ ನಡದಿರತಽದ ಹಾಂಗಽ ದಿನಾ! ಪಾಪ ಅಕ್ಕ ಮುದಿಕಿ; ಆಕಿ ಕಡಿಂದಽ ಈ ಹುಡಗರನ್ನ ಸಂಭಾಳಸೂದು ಆಗೂದಿಲ್ಲ. ಈ ಹುಡಗೋರಕಿಂತಾ ಆಕೀ ತಾಪಽ ನನಗ ಹೆಚ್ಚಾಗೇದ. ಈ ಹುಡಗೋರ ತಾಪಕ್ಕಾಗಿ ಬ್ಯಾಸತ್ತು ತಮ್ಮ ಊರಿಗ್ಹೋಗತೀನಂತ ದಿನಕ್ಕೊಮ್ಮೆ ಹೊಂಟ ನಿಂದರತಾಳ! ಪರದೇಶಿ ಹುಡಗೋರು, ಬಿಟ್ಟು ಹೋಗಬ್ಯಾಡ…’ ಅಂತ ಮತ್ತ ಆಕಿ ಕೈಕಾಲು ಹಿಡಕೊಂಡು, ಸಮಾಧಾನ ಮಾಡಿ ಇರಿಸಿಕೂಳ್ಳೂಪ್ರಸಂಗ ಬರತಽದ ನನಗ! ಮತ್ತ ನಮ್ಮ ಅಕ್ಕನ ಬಾಯಂದ್ರ ನಿಮಗ ಗೊತ್ತಿಲ್ಲೇನು! ಒಮ್ಮೆ ಸುರು ಮಾಡಿದಳಂದರ ಮುಗಸೂ ಮಾತಽ ಇಲ್ಲ!

“ನಮ್ಮಕ್ಕ ಏನಂಶಾಳ ಗೊತ್ತದಽ ಏನು? ’ಅಲ್ಲಪಾ, ಮದಿವಿ ಬಿಡಲಿಕ್ಕೆ ನೀಯೇನು ಮುದಕಽ ತದಕಽ… ಒಳ್ಳೇ ನನಕಿಂತ ಮೂರು ವರ್ಷಕ್ಕ’ ಸಣ್ಣಾವಾ! ಐವತ್ತು ವರ್ಷಕ್ಕ ಯಾರೂ ಲಗ್ನಾನ, ಮಾಡಿಕೊಳ್ಳೂಽದಿಲ್ಲ? ದೊಡ್ಡ ಕಾಕಾ ಅವರ ನಾಕನೇ ಮದಿವಿ ಐವತ್ತುಮೂರು ವರ್ಷಕ್ಕ ಆಗಿತ್ತು. ಮುಂದ ನಾಕು ಮಕ್ಕಳನ್ನ ಹಡೆದು ಕಕ್ಕೀನ ಮೊದಲು ತೀರಿಕೂಂಡರು. ಈಗಂತೂ ಹೆಣ್ಣು ಬೇಕಾದಷ್ಟು ದೊಡ್ಡ್ವೂ ಸಿಗತಾವ… ಆಗಿನ್ಹಾಂಗೇನು ಎಂಟು ಹತ್ತು ವರ್ಷದ ಕನ್ಯಾಽ ಇರತಾವಽ? ಈಽಗ ನಿ ಮದಿವೀ ಮಾಡಿ ಕೊಳ್ಳಲಿಕ್ಕೆ ತಯಾರಾಗು ಹೆಣ್ಣಿಗೇನು ಕಡಿಮಿ! ವರದಕ್ಷಿಣೀ ಕೊಟ್ಟು ಹೆಣ್ಣು ಕೊಡತಾರ ಬೇಕ್ಕಾದವರು-! ನಾ ಮುದುಕಿ ದುಡದು ದುಡದು ಸಾಯಬೇಕಂತೀನಿ… ಅದೇನಿಲ್ಲ… ನೀ ಲಗ್ನಾ ಮಾಡಿಕೂಂಡರ ಇಲ್ಲಿ ಇರತೀನಿ; ಇಲ್ಲದಿದ್ದರೆ ನಾ ಹೋಗತೀನಿ!’ ಅಂತ ನೋಟೀಸ ಕೊಟ್ಟಾಂಗ ಮಾಡ್ಯಾಳ ಅಕ್ಕ.

“ನನಗೂ ಪಂಚೇತೇ ಬಿದ್ದಽದ ಏನ್ರೆಪಾ! ಲಗ್ನ ಬ್ಯಾಡಽ ಬ್ಯಾಡಾ- ಅಂತ ನಿಶ್ಚಯ ಮಾಡಿದ್ದೆ; ಅದರ ಅಕ್ಕನ ಕಿರಿ ಕಿರ ತಾಳಲಾರದಷ್ಟು-ಆಗೇದ. ವರದಕ್ಷಿಣೀ ಅಂತೂ ತಗೊಳ್ಳೂ ಹಾಂಗಿಲ್ಲಾ ಅಗ; ಅಕ್ಕಗ ಹೇಳಿ-ಬಿಟ್ಟೇನಿ! ಯಾರಾದಾದರೂ ಬಡವರದು ಹೆಣ್ಣು ಮಾಡಿಕೊಂಡರ ಅವರಿಗೂ ಒಂದು ರೀತಿಂದಽ ಸಹಾಯ ಮಾಡಿದ್ಹಾಂಗ ಆಗತದ; ಅಕ್ಕನ ಕಿಟಿ ಕಿಟೀನೂ ತಪ್ಪತಽದ; ಹುಡಗೂರ ತಾಪಾದರೂ ಕಡಿಮಿ ಆದೀತು, ಅಂತ ಆಶಾ! ಮುಂದ ದೇವರು ಏನ ಮಾಡಸತಾನ ನೋಡಬೇಕು! ವಯಸ್ಸೂ ಹೆಚ್ಚೂ ಕಡಿಮೆ ಆಗ್ತಾವಾಽ ಈ ಮಾತೇನೋ ಖರೆ ಅನ್ರಿ! ದೊಡ್ಡ ಕನ್ಯಾನಽ ನೋಡಿ ಮಾಡಿಕೊಬೇಕು! ಆದರ ನಮ್ಮ ಎರಡನೇ ಕುಟುಂಬ ಮುತ್ತಯಿದಿ ತನದಿಂದಽನಽ ತೀರಿಕೊಳ್ಳಲಿಲ್ಲೇನು? ಅದೆಲ್ಲಾ ದೇವರ ಕೈಯಾಗಿನ ಮಾತೇನ್ರೆಪಾ; ನಾವು ಎಷ್ಟರವರು? ಹರೀ! ನಮ್ಮಪ್ಪಾ, ಎಲ್ಲಾ ನಿನ್ನ ಇಚ್ಛಾ! ಹೌದಲ್ಲೋ ರಾಯರಽ ನಿವಽ ಹೇಳ್ರಿ!

(ರಾಯರ ಬಾಯಿ ಒಣಗಿ ಹೋಗಿದ್ದಿತು. ನಾಲಗೆಯೆ ಏಳದಂತಾಗಿದ್ದಿತು. ಮದುವಣಿಗನನ್ನು ಬರೀ ಗುರುಗುಟ್ಟಿ ನೋಡತೊಡಗಿದ್ದರು.)
*****

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...