Home / ಲೇಖನ / ಹಾಸ್ಯ / ಸಾರುವೆ ಜನಾಃ ಸುಖಿನೋಭವಂತು!

ಸಾರುವೆ ಜನಾಃ ಸುಖಿನೋಭವಂತು!

ಪಕ್ಕದ ಬೀದಿ ಪುರಾಣಿಕರು ಜೋತಿಷ್ಯ ಶಾಸ್ತ್ರದಲ್ಲಿ ಭಾರಿ ಪ್ರವೀಣರು. ಯಜ್ಞ ಯಾಗಾದಿಗಳು, ಹೋಮ, ವ್ರತಾಚರಣೆ ಯಾವುದೇ ಇರಲಿ-ಯಾರ ಮನೆಯಲ್ಲೇ ಆಗಲಿ ಪುರಾಣಿಕರು ಅಲ್ಲಿ ಹಾಜರು. ಸುತ್ತಮುತ್ತಲ ಊರಿನವರೆಲ್ಲಾ ಪುರೋಹಿತ ಕಾರ್‍ಯಕ್ಕೆ ಪುರಾಣಿಕರನ್ನೇ ಅವಲಂಬಿಸಿದ್ದರು. ಪುರಾಣಿಕರಲ್ಲಿ ಒಂದು ಆಕರ್‍ಷಣೆ ಎಂದರೆ ಇವರ ಹಾಸ್ಯಪ್ರಜ್ಞೆ. ಯಾವುದೇ ಸಂದರ್ಭದಲ್ಲಿಯೂ ಇವರ ಬಳಿ ಕೋಪ, ಅಸಹನೆ ಸುಳಿಯುತ್ತಿರಲಿಲ್ಲ. ಮಂತ್ರೋಚ್ಚಾರಣೆ ಸಮಯದಲ್ಲೂ ಹಾಸ್ಯ ಚಟಾಕಿ ಹಾರಿಸುತ್ತ, ನೆರೆದಿದ್ದ ಜನರ‍ನ್ನೆಲ್ಲಾ ಸೂಜಿಗಲ್ಲಿನಂತೆ ಆಕರ್‍ಷಿಸುತ್ತಿದ್ದರು.

ಕಂಟ್ರಾಕ್ಟರ್ ಕಾಂತಯ್ಯನವರು ಮೂರು ಅಂತಸ್ತಿನ ಭಾರೀ ಮನೆಯನ್ನು ಕಟ್ಟಿಸುತ್ತಿದ್ದರು. ಕಟ್ಟಡದ ಎರಡನೆಯ ಮಹಡಿ ಎಬ್ಬಿಸಲು ಸಾರುವೆ ಕಟ್ಟಿ ಸಿದ್ದಗೊಳಿಸುತ್ತಿದ್ದರು. ನಲವತ್ತು-ಐವತ್ತು ಕೆಲಸದ ಆಳುಗಳು ಸಾರುವೆ ಮೇಲೆ ಸರ್ಕಸ್ ಮಾಡುವ ರೀತಿ ಸಿಮೆಂಟ್, ಗಾರೆ ಇತ್ಯಾದಿಗಳನ್ನು ಬಾಂಡ್ಲೆಗಳಲ್ಲಿ ಹೊತ್ತು ಹತ್ತುತ್ತ ಏದುಸಿರು ಬಿಡುತ್ತ ಕೆಲಸ ಮಾಡುತ್ತಿದ್ದರು. ಕೆಲವೇ ದಿನಗಳಲ್ಲಿ ಕಟ್ಟಡ ಮೇಲೆದ್ದಿತು.

‘ಗೃಹಪ್ರವೇಶ’ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಬೇಕೆಂದು ಯೋಜಿಸಿದ್ದ ಕಂಟ್ರಾಕ್ಟರ್ ಕಾಂತಯ್ಯನವರು ಮುಹೂರ್ತ ಇರಿಸಲು ಪುರಾಣಿಕರ ಮನೆಗೆ ಎಡತಾಕಿದರು. “ಓಹ್, ಕಾಂತಯ್ಯನವರು…. ಬರೋಣ ವಾಗಲಿ, ತಮ್ಮ ದರ್ಶನವೇ ಇತ್ತೀಚಿಗೆ ಆಗಲಿಲ್ಲ. ಕಟ್ಟಡದ ಉಸ್ತುವಾರಿಯಲ್ಲಿ ಕೊಂಚ ‘ಬಿಜಿ’ ಆಗಿದ್ದಿರಬಹುದು. ಬನ್ನಿ, ಕೂತುಕೊಳ್ಳಿ ಕಾಫಿ ಅಥವಾ ಚಹ? ನೀವು ಯಾವುದನ್ನು ಅಪ್ಪಣೆ ಮಾಡಿದರೆ ಅದು ಸಿದ್ದವೆಂದು ತಿಳಿಯಿರಿ” -ಪುರಾಣಿಕರ ಅಂಬೋಣ. “ಪುರಾಣಿಕರೇ, ಕಾಫಿ-ಚಹಾ ಅದೆಲ್ಲಾ ಇರಲಿ; ಈಗ ನಾನು ಬಂದಿರುವ ಉದ್ದೇಶ ಇಷ್ಟೆ-ಗೃಹಪ್ರವೇಶಕ್ಕೆ ಸೂಕ್ತ ಮುಹೂರ್ತ ಇಟ್ಟು ಕೊಡಿ. ಇನ್ನು ಒಂದೆರಡು ವಾರಗಳಲ್ಲಿ ಆದರೆ ಸೂಕ್ತವಾಗುತ್ತೆ. ಕೊಂಚ ಪಂಚಾಂಗ ಅವಕೋಕಿಸೋಣವಾಗಲಿ” ಎಂದೆನ್ನುತ್ತ ಕಾಂತಯ್ಯನವರು ಕಾಫಿ ಬಟ್ಟಲನ್ನು ಕೈಗೆ ಹಿಡಿದುಕೊಂಡರು. “ಕಾಂತಯ್ಯನವರೇ ನಾನು ಒಂದು ಸಲ ನಿಮ್ಮ ಕಟ್ಟಡವನ್ನು ಸೂಕ್ಷ್ಮವಾಗಿ ಅವಲೋಕಿಸಿ ವಾಸ್ತು ಪರಿಶೀಲಿಸಿ ನಂತರ ಮುಹೂರ್ತ ಗುರುತು ಹಾಕಿಕೊಡುತ್ತೇನೆ” ಎಂದರು. ಕಾಂತಯ್ಯನವರ ಸಂಗಡ ಕಟ್ಟಡವನ್ನು ಪರಿಶೀಲಿಸಿ ಸೂಕ್ತ ದಿನವನ್ನು ಗೊತ್ತುಮಾಡಿಕೊಟ್ಟರು.

“ಇನ್ನೂಂದು ವಿಚಾರ: ಅನ್ನದಾನ ಯಥೇಚ್ಚವಾಗಿ ನಡೆಸಬೇಕು. ಕೆಲಸದ ಆಳುಗಳಿಗೆಲ್ಲಾ ಭರ್‍ಜರಿ ಔತಣ ಏರ್‍ಪಾಡಾಗಬೇಕು. ನೋಡಿ ಆ ಸಾರುವೆ ಮೇಲೆ ಹತ್ತಿ ಜೀವ ಭಯವನ್ನು ಲೆಕ್ಕಿಸದೆ ಹೇಗೆಲ್ಲಾ ಕೆಲಸ ಮಾಡುತ್ತಿದ್ದಾರೆ. ಅವರನ್ನು ಸಂತೋಷಪಡಿಸಿದ್ದೇ ಆದರೆ ನಿಮಗೆ ಖಂಡಿತ ಏಳಿಗೆ.” “ಖಂಡಿತಾ ಆಗಬಹುದು” ಕಾಂತಯ್ಯನವರ ಅಂಬೋಣ.

ಗೃಹಪ್ರವೇಶದ ದಿನ ಹೋಮ-ಹವನ ಇತ್ಯಾದಿ ಸಾಂಗವಾಗಿ ನೆರೆವೇರಿತು. ಘಟಾನು ಘಟಿ ಪುತೋಹಿತ ವರ್ಗದವರೆಲ್ಲಾ ಆಹ್ವಾನಿತರಾಗಿದ್ದರು. ವೇದಮಂತ್ರ ಉದ್ಘೋಷದಿಂದ ಸಬೆ ಮುಳುಗಿತ್ತು. ಮಹಾಮಂಗಳಾರತಿ, ನಂತರದ ಅಶೀರ್ವಾದ ಮಂತ್ರಗಳೆಲ್ಲಾ ಮುಗಿದ ನಂತರ ಪುರಾಣಿಕರು “ಸಾರುವೆ ಜನಾಃ ಸುಖಿನೋ ಭವಂತು” ಎಂದು ಹೇಳುತ್ತಾ ತೀರ್‍ಥಪ್ರಸಾದ ಕೊಡಲು ಮುಂದಾದರು. ಬಂದಿದ್ದ ವಿದ್ವನ್ಮಣಿ ಗಳೆನಿಸಿದ ಪುರೋಹಿತ ವರ್‍ಗ ಪುರಾಣಿಕರ ನುಡಿಯನ್ನು ಕೇಳುತ್ತಾ ಆಶ್ಚರ್‍ಯ ವ್ಯಕ್ತಪಡಿಸುತ್ತ “ಏನು? ‘ಸಾರುವೆ ಜನಾಃ’ ಅನ್ನುತ್ತಿದ್ದಾರಲ್ಲ ‘ಸರ್ವೇ ಜನಾಃ’ ಅಂತ ಹೇಳಬೇಕಾಗಿರುವುದನ್ನು ತಪ್ಪು ತಪ್ಪಾಗಿ ಹೇಳುತ್ತಿದ್ದಾರಲ್ಲಾ? ಅದೂ ನಮ್ಮ‌ಎದುರಿಗೆ” ಎನ್ನುತ್ತಾ ಎಲ್ಲರೂ “ಪುರಾಣಿಕರೇ ನೀವು ತಪ್ಪಾಗಿ ಹೇಳುತ್ತಿದ್ದೀರಿ; ‘ಅದು ಸರ್ವೇ ಜನಾಃ…. ಎಂದಿರಬೇಕು” ಎಂದು ತಕರಾರು ಎತ್ತಿದರು. ಪುರಾಣಿಕರು ಎದ್ದು ನಿಂತು “ನೋಡಿ, ನಾನು ಸಾರುವೆ ಜನಾಃ ಎಂದೇ ಹೇಳಿರುವುದು; ಈ ಕಟ್ಟಡದ ಸಾರುವೆಯ ಮೇಲೆ ಜೀವ ಭಯ ಬಿಟ್ಟು ಶಕ್ತಿಗೂ ಮೀರಿದ ಭಾರವನ್ನು ಹೊತ್ತು ಮನೆ ಕಟ್ಟಲು ಸಹಕಾರ ಕೊಟ್ಟ ಈ ಕೆಲಸಗಾರರ ಭವಿಷ್ಯ ಚಿನ್ನಾಗಿರ ಬೇಕಲ್ಲವೆ? ಅವರಿಂದ ತಾನೆ ನಮ್ಮಮಹಡಿ ಮನೆಗಳು? ಕೊಂಚ ಯೋಚಿಸಿ ಸಾರುವೆ ಜನ ಸುಖವಾಗಿರಲಿ ಎಂದು ಬಯಸಿದ್ದು ನನ್ನ ತಪ್ಪೆ?” ಎಂದು ಪ್ರಶ್ನಿಸಿದರು. ಬಂದಿದ್ದ ಪುರೋಹಿತ ವರ್‍ಗದವರು ಪುರಾಣಿಕರು ಹೇಳಿದ್ದರಲ್ಲಿ ಸತ್ಯಾಂಶವಿದೆ ಎಂದು ತಿಳಿದು “ತಲೆದೂಗಿ ತಾವೂ ‘ಸಾರುವೇ ಜನಾಃ ಸುಖಿನೋಭವಂತು ಎಂದು ದನಿಗೂಡಿಸಿದರು.’
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...