ಈದ್ ಮುಬಾರಕ್

ನೆತ್ತರ ಹೆಪ್ಪುಗಟ್ಟಿಸುವ ಅಮವಾಸ್ಯೆ ಕತ್ತಲು ಕಳೆದು
ಸಣ್ಣ ಗೆರೆಯಂತೆ ಮೂಡಿದ ಈದ್ ಕಾ ಚಾಂದ್
ಮೋಡಗಳಿಲ್ಲದ ಶುಭ್ರ ಅಗಸದಲ್ಲಿ ಕಾಣುತ್ತಿದ್ದಾನೆ ನೋಡು
ರಂಜಾನ್ ಹಬ್ಬದ ಸಣ್ಣ ಗೆರೆಯಂತಹ
ಚಂದ್ರನ ನೋಡಿದ ಮಗಳು ಓಡೋಡಿ ಬಂದು
“ಅಮ್ಮಿ ಈದ್ ಮುಬಾರಕ್” ಹಬ್ಬದ ಚಂದ್ರನ ಕಂಡೆನಮ್ಮಾ
ನಾಳೆ ಬಿರ್ಯಾನಿ, ಶುರಖುರಮಾ ಮಾಡುವೆಯಲ್ಲ?
ಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ
ಝಂ ಝಮ್‌ನಿಂದ ಪವಿತ್ರ ಸ್ನಾನ ಮಾಡುವೆ.
ಮೆಕ್ಕಾದಿಂದ ಬಂದ ಝಂ ಝಮ್ ತೀರ್ಥ ಇಟ್ಟಿರುವೆಯಲ್ಲ
ಎಂದು ಉಲಿದವಳೇ ಎಲ್ಲರಿಗೂ ಮುಬಾರಕ್ ಹೇಳಲು
ಜಿಂಕೆಯಂತೆ ಜಿಗಿಯುತ್ತಾ ಹಾರಿ ಹೋದಳು ಮಗಳು
ಮಗಳ ಸಂಭ್ರಮದ ಕುಣಿದಾಟ ನೋಡಿದ
ಅಮ್ಮಿಯ ಮನದಲ್ಲಿ ಸಂಭ್ರಮ ಮೂಡಿ
ಮರುಕ್ಷಣವೇ ಮಾಯವಾಗಿ ನಿಟ್ಟುಸಿರು ಹೊರಬಿತ್ತು.
ಮಗಳೇ ನಿನ್ನ ಬಾಲ್ಯದ ತುಂಬಾ ಅಮವಾಸ್ಯೆ ಕತ್ತಲು,
ಬೆಳಕಿನ ಬೀಜ ಎಲ್ಲಿಂದ ತರಲಿ ಹೇಳು?
ನಿನ್ನ ಬಾಲ್ಯದ ಹೂ ನಳನಳಿಸಿ ಅರಳುವಾಗಲೇ
ಬೀಡಿ, ಎಲೆ, ಹೊಗೆಸೊಪ್ಪಿನ ಘಾಟು ತಪ್ಪಿಸಲಾಗಲಿಲ್ಲ
ಅಕ್ಷರ ಕಲಿತು ಮನಸು ಅರಳುವ ಸಮಯ
ತುತ್ತಿನ ಚೀಲ ತುಂಬಲು ಎಸಳು ಬೆರಳುಗಳಿಂದ
ಬೀಡಿ ತಂಬಾಕು ತುಂಬಿ ಮಡಚುತ್ತಾ
ಮೊರ ಹಿಡಿದು ಕುಳಿತೆಯಲ್ಲ ನನ್ನೊಂದಿಗೆ
ಬಾಳ ನೊಗಕ್ಕೆ ಹೆಗಲು ನೀಡಿದೆಯಲ್ಲ!

ನನ್ನ ಬಡತನದ ಶಾಪ ನಿನಗೂ ತಟ್ಟಿತೆ ಮಗು
“ಅಬ್ಬಾ”ನ ಅಂತ್ಯವಾಗಿ ಇಂದಿಗೆ ಆರು ವರ್ಷ
ಮುಳ್ಳು ಹಾದಿಯಲ್ಲಿ ಬಾಳ ಪಯಣ ಸಾಗಿತ್ತು.
ಅನಿವಾರ್ಯದ ಬದುಕು ಜಟಕಾ ಬಂಡಿ ನೂಕುತ್ತಾ
ಕರಿಮುಗಿಲ ಮರೆಸುವ ಬುರ್ಖಾಕ್ಕೆ ತೇಪೆ ಹಾಕಿರುವೆ
ಜಿಂಕೆಯಂತೆ ಪುಟಿಯುತ್ತಿದ್ದ ಮಗಳನ್ನು ನೋಡಿ
ಮಗದೊಮ್ಮೆ ಕಿಟಕಿಯಾಚೆಗಿನ ಶೂನ್ಯವನ್ನು ದಿಟ್ಟಿಸಿ
ನಿಟ್ಟುಸಿರಿಟ್ಟ ಅಮ್ಮಿಯ ದೀರ್ಘ ಉಸಿರಿನ ಸದ್ದು
ಮರುಕ್ಷಣವೇ ಕರ್ತವ್ಯ ಜಾಗೃತವಾಯ್ತು
ಪಟಪಟನೆ ಬೀಡಿ ಕಟ್ಟುಗಳ ಹಾಕಿ
ಬೀಡಿ ಕಂಪನಿ ಮಾಲೀಕರಿಗೆ ಮುಟ್ಟಿಸಬೇಕಲ್ಲವೇ?
ಅವನಿಟ್ಟ ಬಿಡಿಕಾಸು ತಂದು ಸಂತೆಗೆ ಹೋದರೆ
ಎಲ್ಲವೂ ದುಬಾರಿ ಒಂದಕ್ಕಾದರೆ ಒಂದಕ್ಕಿಲ್ಲ
ಮಗಳಿಗೆ ಮೆಹಂದಿ ಹೊಸಬಟ್ಟೆ ಎಲ್ಲಿಂದ ತರಲಿ?
ಬಡವರ ರಂಜಾನ್ ಹೀಗೆಯೇ ನೋಡು.
ಯಾವ ಬಾಯಿಯಲ್ಲಿ ಉಲಿಯಲಿ
“ಈದ್ ಮುಬಾರಕ್” ಎಂದು.
*****
ಶುರಖುರಮಾ-ಸೇವಿಗೆ ಪಾಯಸ
ಝಮ್‌-ಮೆಕ್ಕಾದ ಪವಿತ್ರನೀರು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಿಳಿಯ ಪುಣ್ಯ
Next post ಇಗೊ ಸಂಜೆ, ಸಖಿ

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…