Home / ಕವನ / ಕವಿತೆ / ಈದ್ ಮುಬಾರಕ್

ಈದ್ ಮುಬಾರಕ್

ನೆತ್ತರ ಹೆಪ್ಪುಗಟ್ಟಿಸುವ ಅಮವಾಸ್ಯೆ ಕತ್ತಲು ಕಳೆದು
ಸಣ್ಣ ಗೆರೆಯಂತೆ ಮೂಡಿದ ಈದ್ ಕಾ ಚಾಂದ್
ಮೋಡಗಳಿಲ್ಲದ ಶುಭ್ರ ಅಗಸದಲ್ಲಿ ಕಾಣುತ್ತಿದ್ದಾನೆ ನೋಡು
ರಂಜಾನ್ ಹಬ್ಬದ ಸಣ್ಣ ಗೆರೆಯಂತಹ
ಚಂದ್ರನ ನೋಡಿದ ಮಗಳು ಓಡೋಡಿ ಬಂದು
“ಅಮ್ಮಿ ಈದ್ ಮುಬಾರಕ್” ಹಬ್ಬದ ಚಂದ್ರನ ಕಂಡೆನಮ್ಮಾ
ನಾಳೆ ಬಿರ್ಯಾನಿ, ಶುರಖುರಮಾ ಮಾಡುವೆಯಲ್ಲ?
ಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ
ಝಂ ಝಮ್‌ನಿಂದ ಪವಿತ್ರ ಸ್ನಾನ ಮಾಡುವೆ.
ಮೆಕ್ಕಾದಿಂದ ಬಂದ ಝಂ ಝಮ್ ತೀರ್ಥ ಇಟ್ಟಿರುವೆಯಲ್ಲ
ಎಂದು ಉಲಿದವಳೇ ಎಲ್ಲರಿಗೂ ಮುಬಾರಕ್ ಹೇಳಲು
ಜಿಂಕೆಯಂತೆ ಜಿಗಿಯುತ್ತಾ ಹಾರಿ ಹೋದಳು ಮಗಳು
ಮಗಳ ಸಂಭ್ರಮದ ಕುಣಿದಾಟ ನೋಡಿದ
ಅಮ್ಮಿಯ ಮನದಲ್ಲಿ ಸಂಭ್ರಮ ಮೂಡಿ
ಮರುಕ್ಷಣವೇ ಮಾಯವಾಗಿ ನಿಟ್ಟುಸಿರು ಹೊರಬಿತ್ತು.
ಮಗಳೇ ನಿನ್ನ ಬಾಲ್ಯದ ತುಂಬಾ ಅಮವಾಸ್ಯೆ ಕತ್ತಲು,
ಬೆಳಕಿನ ಬೀಜ ಎಲ್ಲಿಂದ ತರಲಿ ಹೇಳು?
ನಿನ್ನ ಬಾಲ್ಯದ ಹೂ ನಳನಳಿಸಿ ಅರಳುವಾಗಲೇ
ಬೀಡಿ, ಎಲೆ, ಹೊಗೆಸೊಪ್ಪಿನ ಘಾಟು ತಪ್ಪಿಸಲಾಗಲಿಲ್ಲ
ಅಕ್ಷರ ಕಲಿತು ಮನಸು ಅರಳುವ ಸಮಯ
ತುತ್ತಿನ ಚೀಲ ತುಂಬಲು ಎಸಳು ಬೆರಳುಗಳಿಂದ
ಬೀಡಿ ತಂಬಾಕು ತುಂಬಿ ಮಡಚುತ್ತಾ
ಮೊರ ಹಿಡಿದು ಕುಳಿತೆಯಲ್ಲ ನನ್ನೊಂದಿಗೆ
ಬಾಳ ನೊಗಕ್ಕೆ ಹೆಗಲು ನೀಡಿದೆಯಲ್ಲ!

ನನ್ನ ಬಡತನದ ಶಾಪ ನಿನಗೂ ತಟ್ಟಿತೆ ಮಗು
“ಅಬ್ಬಾ”ನ ಅಂತ್ಯವಾಗಿ ಇಂದಿಗೆ ಆರು ವರ್ಷ
ಮುಳ್ಳು ಹಾದಿಯಲ್ಲಿ ಬಾಳ ಪಯಣ ಸಾಗಿತ್ತು.
ಅನಿವಾರ್ಯದ ಬದುಕು ಜಟಕಾ ಬಂಡಿ ನೂಕುತ್ತಾ
ಕರಿಮುಗಿಲ ಮರೆಸುವ ಬುರ್ಖಾಕ್ಕೆ ತೇಪೆ ಹಾಕಿರುವೆ
ಜಿಂಕೆಯಂತೆ ಪುಟಿಯುತ್ತಿದ್ದ ಮಗಳನ್ನು ನೋಡಿ
ಮಗದೊಮ್ಮೆ ಕಿಟಕಿಯಾಚೆಗಿನ ಶೂನ್ಯವನ್ನು ದಿಟ್ಟಿಸಿ
ನಿಟ್ಟುಸಿರಿಟ್ಟ ಅಮ್ಮಿಯ ದೀರ್ಘ ಉಸಿರಿನ ಸದ್ದು
ಮರುಕ್ಷಣವೇ ಕರ್ತವ್ಯ ಜಾಗೃತವಾಯ್ತು
ಪಟಪಟನೆ ಬೀಡಿ ಕಟ್ಟುಗಳ ಹಾಕಿ
ಬೀಡಿ ಕಂಪನಿ ಮಾಲೀಕರಿಗೆ ಮುಟ್ಟಿಸಬೇಕಲ್ಲವೇ?
ಅವನಿಟ್ಟ ಬಿಡಿಕಾಸು ತಂದು ಸಂತೆಗೆ ಹೋದರೆ
ಎಲ್ಲವೂ ದುಬಾರಿ ಒಂದಕ್ಕಾದರೆ ಒಂದಕ್ಕಿಲ್ಲ
ಮಗಳಿಗೆ ಮೆಹಂದಿ ಹೊಸಬಟ್ಟೆ ಎಲ್ಲಿಂದ ತರಲಿ?
ಬಡವರ ರಂಜಾನ್ ಹೀಗೆಯೇ ನೋಡು.
ಯಾವ ಬಾಯಿಯಲ್ಲಿ ಉಲಿಯಲಿ
“ಈದ್ ಮುಬಾರಕ್” ಎಂದು.
*****
ಶುರಖುರಮಾ-ಸೇವಿಗೆ ಪಾಯಸ
ಝಮ್‌-ಮೆಕ್ಕಾದ ಪವಿತ್ರನೀರು

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...