Home / ಕವನ / ಕವಿತೆ / ಈದ್ ಮುಬಾರಕ್

ಈದ್ ಮುಬಾರಕ್

ನೆತ್ತರ ಹೆಪ್ಪುಗಟ್ಟಿಸುವ ಅಮವಾಸ್ಯೆ ಕತ್ತಲು ಕಳೆದು
ಸಣ್ಣ ಗೆರೆಯಂತೆ ಮೂಡಿದ ಈದ್ ಕಾ ಚಾಂದ್
ಮೋಡಗಳಿಲ್ಲದ ಶುಭ್ರ ಅಗಸದಲ್ಲಿ ಕಾಣುತ್ತಿದ್ದಾನೆ ನೋಡು
ರಂಜಾನ್ ಹಬ್ಬದ ಸಣ್ಣ ಗೆರೆಯಂತಹ
ಚಂದ್ರನ ನೋಡಿದ ಮಗಳು ಓಡೋಡಿ ಬಂದು
“ಅಮ್ಮಿ ಈದ್ ಮುಬಾರಕ್” ಹಬ್ಬದ ಚಂದ್ರನ ಕಂಡೆನಮ್ಮಾ
ನಾಳೆ ಬಿರ್ಯಾನಿ, ಶುರಖುರಮಾ ಮಾಡುವೆಯಲ್ಲ?
ಬೆಳಿಗ್ಗೆ ಸೂರ್ಯ ಹುಟ್ಟುವ ಮುನ್ನವೇ
ಝಂ ಝಮ್‌ನಿಂದ ಪವಿತ್ರ ಸ್ನಾನ ಮಾಡುವೆ.
ಮೆಕ್ಕಾದಿಂದ ಬಂದ ಝಂ ಝಮ್ ತೀರ್ಥ ಇಟ್ಟಿರುವೆಯಲ್ಲ
ಎಂದು ಉಲಿದವಳೇ ಎಲ್ಲರಿಗೂ ಮುಬಾರಕ್ ಹೇಳಲು
ಜಿಂಕೆಯಂತೆ ಜಿಗಿಯುತ್ತಾ ಹಾರಿ ಹೋದಳು ಮಗಳು
ಮಗಳ ಸಂಭ್ರಮದ ಕುಣಿದಾಟ ನೋಡಿದ
ಅಮ್ಮಿಯ ಮನದಲ್ಲಿ ಸಂಭ್ರಮ ಮೂಡಿ
ಮರುಕ್ಷಣವೇ ಮಾಯವಾಗಿ ನಿಟ್ಟುಸಿರು ಹೊರಬಿತ್ತು.
ಮಗಳೇ ನಿನ್ನ ಬಾಲ್ಯದ ತುಂಬಾ ಅಮವಾಸ್ಯೆ ಕತ್ತಲು,
ಬೆಳಕಿನ ಬೀಜ ಎಲ್ಲಿಂದ ತರಲಿ ಹೇಳು?
ನಿನ್ನ ಬಾಲ್ಯದ ಹೂ ನಳನಳಿಸಿ ಅರಳುವಾಗಲೇ
ಬೀಡಿ, ಎಲೆ, ಹೊಗೆಸೊಪ್ಪಿನ ಘಾಟು ತಪ್ಪಿಸಲಾಗಲಿಲ್ಲ
ಅಕ್ಷರ ಕಲಿತು ಮನಸು ಅರಳುವ ಸಮಯ
ತುತ್ತಿನ ಚೀಲ ತುಂಬಲು ಎಸಳು ಬೆರಳುಗಳಿಂದ
ಬೀಡಿ ತಂಬಾಕು ತುಂಬಿ ಮಡಚುತ್ತಾ
ಮೊರ ಹಿಡಿದು ಕುಳಿತೆಯಲ್ಲ ನನ್ನೊಂದಿಗೆ
ಬಾಳ ನೊಗಕ್ಕೆ ಹೆಗಲು ನೀಡಿದೆಯಲ್ಲ!

ನನ್ನ ಬಡತನದ ಶಾಪ ನಿನಗೂ ತಟ್ಟಿತೆ ಮಗು
“ಅಬ್ಬಾ”ನ ಅಂತ್ಯವಾಗಿ ಇಂದಿಗೆ ಆರು ವರ್ಷ
ಮುಳ್ಳು ಹಾದಿಯಲ್ಲಿ ಬಾಳ ಪಯಣ ಸಾಗಿತ್ತು.
ಅನಿವಾರ್ಯದ ಬದುಕು ಜಟಕಾ ಬಂಡಿ ನೂಕುತ್ತಾ
ಕರಿಮುಗಿಲ ಮರೆಸುವ ಬುರ್ಖಾಕ್ಕೆ ತೇಪೆ ಹಾಕಿರುವೆ
ಜಿಂಕೆಯಂತೆ ಪುಟಿಯುತ್ತಿದ್ದ ಮಗಳನ್ನು ನೋಡಿ
ಮಗದೊಮ್ಮೆ ಕಿಟಕಿಯಾಚೆಗಿನ ಶೂನ್ಯವನ್ನು ದಿಟ್ಟಿಸಿ
ನಿಟ್ಟುಸಿರಿಟ್ಟ ಅಮ್ಮಿಯ ದೀರ್ಘ ಉಸಿರಿನ ಸದ್ದು
ಮರುಕ್ಷಣವೇ ಕರ್ತವ್ಯ ಜಾಗೃತವಾಯ್ತು
ಪಟಪಟನೆ ಬೀಡಿ ಕಟ್ಟುಗಳ ಹಾಕಿ
ಬೀಡಿ ಕಂಪನಿ ಮಾಲೀಕರಿಗೆ ಮುಟ್ಟಿಸಬೇಕಲ್ಲವೇ?
ಅವನಿಟ್ಟ ಬಿಡಿಕಾಸು ತಂದು ಸಂತೆಗೆ ಹೋದರೆ
ಎಲ್ಲವೂ ದುಬಾರಿ ಒಂದಕ್ಕಾದರೆ ಒಂದಕ್ಕಿಲ್ಲ
ಮಗಳಿಗೆ ಮೆಹಂದಿ ಹೊಸಬಟ್ಟೆ ಎಲ್ಲಿಂದ ತರಲಿ?
ಬಡವರ ರಂಜಾನ್ ಹೀಗೆಯೇ ನೋಡು.
ಯಾವ ಬಾಯಿಯಲ್ಲಿ ಉಲಿಯಲಿ
“ಈದ್ ಮುಬಾರಕ್” ಎಂದು.
*****
ಶುರಖುರಮಾ-ಸೇವಿಗೆ ಪಾಯಸ
ಝಮ್‌-ಮೆಕ್ಕಾದ ಪವಿತ್ರನೀರು

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...