Home / ಕವನ / ಕವಿತೆ / ಅಂತರ

ಅಂತರ

ದಿನವಿಡೀ
ಮೈಮನಗಳನ್ನು ದುಡಿಸಿ
ಗೋಲಾಕಾರದ ಶೂನ್ಯದೊಂದಿಗೆ
ಹೊರಲಾಗದ ಬೇಗುದಿಯನ್ನು
ಹೊರುತ್ತ
ಮನೆ ಮುಟ್ಟುವಾಗ
ಮನ ಮುಟ್ಟುವ ನಿನ್ನ
ಸ್ವಾಗತದ ಮುಸಿ ನಗೆಯಲಿ
ಪ್ರೇಯಸಿಯ ಕಾತುರವನ್ನು ಕಂಡು
ರಿಕ್ತ ಕರವನ್ನು ನಿನ್ನ ನಡುವಿನ ಸುತ್ತ ಬಳಸಿ
ಹತ್ತಿರಕ್ಕೆ ಎಳೆಯುತ್ತ
ಸೋಫಾಗೆ ಒರಗಿ ಕಾಲು ಚಾಚಿ
ನಿನ್ನ ಸುಂದರ ನಯವಾದ
ಘನ ಹೆರಳನ್ನು ಬಿಡಿಸಿ ಹರಡಿ
ಅದರ ಮೇಲೆ ಕದಪನಿರಿಸಿ
ದುಮ್ಮಾನವನ್ನು ಹೊರಹಾಕುವ
ನಿನ್ನ ನಾಜೂಕು ಬೆರಳುಗಳಲ್ಲಿ
ನನ್ನ ತತ್ವರ ಬೆರಳುಗಳು ಸೇರಿಕೊಂಡು
ತುಸು ಹೊತ್ತು ಕ್ರೀಡಿಸುವಾಗ
‘ಇಂದಿನ ಸುದ್ದಿಯೇನೆಂದು’
ನೀನು ಕೇಳುತ್ತಿ, ನಾನು
ದಾದರಿನವರೆಗೂ ನನ್ನ ಜೊತೆ
ಬಸ್ಸಿನಲ್ಲಿ ಕುಳಿತ
ಸುಂದರ ನೀರೆಯ
ತುಂಟ ವಿವರಗಳ ಜಾಲದಲ್ಲಿ ಮರೆತು
ಆಟದಲ್ಲಿ ಮಗ್ನ ಕರಗಳನ್ನು
ಎದೆಗೊತ್ತಿ
ಮನಸ್ಸನ್ನು ಹಗುರವಾಗಿಸುವ
ಉಸಿರನ್ನು ಬಿಡುತ್ತ
ಕಣ್ಣು ತೆರೆವಾಗ
ಎದುರಿನ ಕಿಟಕಿಯ ಜಾಲಿಯಿಂದ
ದೂರಕ್ಕೆ ಹರಡಿರುವ ಆಕಾಶ
ಕಾಣಿಸುತ್ತದೆ.
ಆಗ ಒಮ್ಮೆಲೆ ನೆಲ ಮುಗಿಲುಗಳ
ದಟ್ಟ ಅಂತರದ ಅರಿವಾಗಿ
ಮನಸ್ಸು ಒಳಗೆಳೆದುಕೊಂಡು
ಅಂತರವನ್ನು ಅಳೆಯುವ
ಸೀಮಾ ರೇಖೆಯನ್ನು
ಹುಡುಕ ತೊಡಗುತ್ತದೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...