Home / ಕವನ / ಕವಿತೆ / ಹದಿನಾಲ್ಕು ವರ್ಷಗಳ ನಂತರ

ಹದಿನಾಲ್ಕು ವರ್ಷಗಳ ನಂತರ

ಹದಿನಾಲ್ಕು ವರುಷಗಳ ಮೇಲೆ
ಸವಿನೆನಪುಗಳ ಬುತ್ತಿಯಲಿ
ಏನೇನೊ ಹಲವು ಕನಸನೆ ಹೊತ್ತು
ಮಣ್ಣ ವಾಸನೆ ಅರಸುತ ಹಳ್ಳಿಗೆ ನಡೆದೆ

ಕರಿಮಣ್ಣಿನ ಏರೆಹೊಲದ ದಿಬ್ಬದಿ
ನನ್ನೂರು ಕಾಣುವ ತವಕದಿ
ಹೆಜ್ಜೆಯ ಮೇಲೆ ಹೆಜ್ಜೆಯಿಡುತ ಇಳಿದಾಗ
ಜುಳು… ಜುಳು… ಹರಿಯುತಿಹಳು
ಕಷ್ಣೆಯುದರದೊಳಗಿನ `ಡೋಣಿ’

ಹದಿನಾಲ್ಕು ವರ್ಷಗಳ ಹಿಂದೆ
ಹೇಗಿತ್ತು ಹಾಗೆ ಇಂದಿಗು ಎಲ್ಲೆಲ್ಲೂ
ಪರಿಚಯದ ಮರುಛಾಯೆ
ಕಣ್ಮುಂದೆ ತುಂಬಿ ಮರುಕಳಿಸಿತ್ತು
ಮನದಿ ಇಲ್ಲುಂಡ ಸುಖವೆಲ್ಲ
ಬಾಲ್ಯದ ಬನವ ತವಕದಲಿ
ಹೊಕ್ಕಾಗ ಎಲ್ಲೆಡೆಗೂ ಹದಿನಾಲ್ಕು ವರ್ಷಗಳ
ಮುದುಡಿದ ಮುದಿ ನೆರಳು ಕವಿದಿತ್ತು

ವರುಣ ದುಬಾರಿಯಾಗಿದ್ದು…
ಎಲ್ಲೆಡೆ ಬಣ… ಬಣ
ನೆಲ ಜಲ – ಮನಗಳು
ನಿಂತ ಮರವಾಗಿದ್ದವು ಒಣಗಿ…

ಹೊಟ್ಟೆಪಾಡಿಗಾಗಿ ಗುಳೆ ಎದ್ದು ಹೋಗಿದ್ದ
ನನ್ನೂರಿನ ಅಣ್ಣ-ತಮ್ಮಂದಿರು
ಅಕ್ಕ-ತಂಗಿಯರು ಕಾಣದ
ಓಣೆಲ್ಲಾ ಮೌನ ಆವರಿಸಿತ್ತು

ಓಡಾಡಿ… ಆಡಿದ
ಬೆಚ್ಚಗಿನ ಮನೆಗಳೆಲ್ಲಾ ನೆಲಕೆ
ಕುಸಿದ ಮಣ್ಣಿನ ಗುಡ್ಡೆಗಳೆಲ್ಲ
ಹುಗಿದಿಟ್ಟುಕೊಂಡ ಬಾಲ್ಯದ ನೆನಪುಗಳೆಲ್ಲಾ
ಬಿದ್ದಿದ್ದವು ಮಾಸಿ ತಬ್ಬಲಿಯಾಗಿ

ಅಂದು ಗಿಜಿ-ಗಿಜಿ ತುಂಬಿದ
ಭೇದವೆಣಿಸದ ಮನಗಳು ಓಣಿಗಳು
ನಿರ್ಜೀವ ಸವೆತದ ಮುದುಡಿದ
ಆ ಹಿರಿಜೀವಗಳ ಅಸಹಾಯಕತೆ ಕಾಣುತ

ಕಣ್ಮುಂದೆ ಕಟ್ಟುತಲಿ
ಜೀವ ಮರಮರನೆ ಬಳಲಿತು
ಅವ್ವ-ಅಪ್ಪ- ಹೋದ
ಅಜ್ಜ-ಮುತ್ತಜ್ಜರು ಹೋದ
ಮನೆ-ಮನ-ಬರಿದಾಗಿತ್ತು

ಆ ಹಿರಿಜೀವಗಳ ಸ್ಪರ್ಶದ
ಪ್ರೀತಿ ಉಂಡ ಬಾಲ್ಯವು
ಅವರೊಡನೆ ಈ ಲೋಕವು ಹೋಯ್ತು
ಎಲ್ಲೋ ಮಣ್ಣಲ್ಲಡಗಿದ….
ಈ ಜಗದ ರೀತಿ ನೀತಿಯಿದು

ಹಸಿ ಗಾಯದಿ ಬಸಿವ
ನೆತ್ತರ ತೆರಹದಿ
ಬರಿಯ ವ್ಯಥೆಯೇ ಜೀವ ತುಂಬಿರಲು

ಸುಡು ಬಿಸಿಲಿನ ನಡು ಹಗಲು
ಮುಸ್ಸಂಜೆ ಕವಿದಿತ್ತು…
ಮನಕ್ಕೆಲ್ಲ ತಂಪು ಎರೆದಿತ್ತು
ಅಂದು ಇಂದಿನ ನಡುವೆ ತಿರುಗಿತ್ತು
ಹದಿನಾಲ್ಕು ವರ್ಷಗಳ
ಕಠೋರ ನಿಷ್ಕರುಣ ಕಾಲಚಕ್ರ

*****

 

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್‍ ಚಂದ್ರ