Home / ಕವನ / ಕವಿತೆ / ಅನಾಥ

ಅನಾಥ


ನಿಜ ಮಾರಾಯರೆ
ನಿಮ್ಮಂತೆ ದೊಡ್ಡಜಾತಿಯ ಗುಡ್ಡಗರ್ಭದಲ್ಲಿ
ಹುಟ್ಟಿದವ ನಾನಲ್ಲ;
ಅಂಥ ದೌರ್ಭಾಗ್ಯ ನನ್ನದಲ್ಲ.
ದಿಡ್ಡಿಬಾಗಿಲ ಬಳಿ ಗೊಡ್ಡು ಬಾಯಿಯ ತೆರೆದು
ಬುಗುಬುಗು ಬಂಡಿ ಬಿಡುವವನಲ್ಲ;
ಚಂದ್ರಬೆಳಕಿನಲ್ಲಿ ಲಾಂದ್ರ ಹುಡುಕುವ ನಿಮ್ಮ
ಸಂದಿಮನ ನನಗಿಲ್ಲ.

ನ್ಯಾಯ ಬುತ್ತಿಕಟ್ಟಿ ನೆತ್ತಿ ಮೇಲಿಟ್ಟುಕೊಂಡ
ನಕ್ಕಿ ಮುಖದ ಮಾರಾಯರೆ
ಮತ್ತೆಮತ್ತೇಕೆ ಎಳೆಯುವಿರಿ ಕಬ್ಬಿಣದ ಮೈಮೇಲೆ
ದಬ್ಬಳದ ಬರೆ?
ನನಗೆ ನೆನಪಿದೆ: ನಾನು ನಿಮ್ಮವನಲ್ಲ
ನಿಮ್ಮ ಹಳೆ ಆಸ್ತಿ ಅಸ್ಥಿ ನನಗೆ ಬೇಕಿಲ್ಲ
ಬುರುಗು ಬುದ್ಧಿ ನನ್ನದಲ್ಲ.

ಒಂದು ವೇಳೆ
ನಿಮ್ಮ ಏರ್‌ಕಂಡೀಷನ್ಡ್ ಮನೆಯಲ್ಲಿ ಹುಟ್ಟಿದ್ದರೆ
ಜಂಗಿಸಿದರೂ ಜಗ್ಗದ ದೊಡ್ಡ ಗೋಡೆಯ
ಗೂಡೆವನದಲ್ಲಿ ನನ್ನ ಸಾಕಿದ್ದರೆ
ಲಂಗರು ಹಾಕಿ ನೀವು ನಿಂತಿದ್ದರೆ
ಜುಟ್ಟು ಜುಟ್ಟಿಗೆ ಜೋಲಿ ಕಟ್ಟಿ
ಕೆಂಪು ಕಹಳೆಯೂದುತ್ತಿದ್ದೆ.
ನಿಮ್ಮ ಗಟಾರಿನ ಮುಂದೆ ಗುಟುರು ಹಾಕುತ್ತಿದ್ದೆ.
ಬೆಲೆಯಿಲ್ಲದ ಎಲೆಗಳಿಗೆ ಕೊಳೆತ ಕಸಕಡ್ಡಿ ಗುಡ್ಡೆಗಳಿಗೆ
ಸುಂಟರಗಾಳಿಯ ಹಂಟರಾಗುತ್ತಿದ್ದೆ:
ನಾನು ನಾನೇ ಆಗುತ್ತಿದ್ದೆ.


ನಿಮಗೂ ಅಷ್ಟೆ ಮಾರಾಯರೆ
ನನ್ನನ್ನು ನಿಮ್ಮವನು ಎಂದುಕೊಂಡವರೆ
ನನ್ನ ಬಾಳಿನ ಸುತ್ತ ಬೇಲಿ ಕಟ್ಟುವವರೆ
ಬೇಸಿಗೆಯಲ್ಲೇ ನಿಮ್ಮ ವರ್ಷವೃಷ್ಟಿ!
ಬಂಜೆಬಾನಿಂದ ಪುಷ್ಪವೃಷ್ಟಿ!
ನೀವು ಹಾಕುವ ಹಾರ ಬಲು ಭಾರ ಸ್ವಾಮಿ
ನಡೆಯಲಾರೆ ನಾನು ತಡೆಯಲಾರೆ
ಅಲ್ಲಿ ಕರೆಯುವ ಆ ಕೆಂಪು ಕಂಗಳ ಬಿಟ್ಟು
ತಣ್ಣನೆಯ ತಂಗಳನು ತಿನ್ನಲಾರೆ.
ನಿಮ್ಮವರಾದ ನನ್ನ ಅಪ್ಪ ಅಮ್ಮನ ಖುಷಿಯ
ಕಂದನಾದದ್ದು ನನ್ನ ತಪ್ಪಲ್ಲ;
ನಾನು ನಿಮ್ಮವನೂ ಅಲ್ಲ.


ಹೊರಟೆ;
ಭೂತಬಾಯಿಗೆ ಬಿರಟೆ
ಹೊಡೆದು ಹೊರಟೆ
ಕಳ್ಳು ಕುಡಿದು ಕಾಡಿಸುವ ಕೊಳ್ಳಿದೆವ್ವಗಳಿಗೆ ದಕ್ಕದೆ
ದಮ್ಮು ಕಟ್ಟಿ ಹೊರಟೆ.
ಮರಳು ನೆಲದಲ್ಲಿ ದೈತ್ಯ ನೆರಳು
ಗೋಮಾಳೆ ಹಿಚುಕುವ ಭೂತ ಬೆರಳು
ಅಡ್ಡ ಹಳಿಗಳ ಮೇಲೆ ಚಕ್ರದುರುಳು.
ಕೊರಳ ಕೊಡದೆ ಕ್ಷಣಮಾತ್ರ ಕಂಪಿಸದೆ
ನನ್ನವರ ನಾನು ಹುಡುಕಿ ಹೊರಟೆ

ಅಲ್ಲೊಂದು ಇಲ್ಲೊಂದು ನನ್ನವೇ ಮುಖ ಕಂಡು
ಮುಂಬಾಗಿಲ ಮುಗುಳ್ನಗೆಯಲ್ಲಿ ಮೈಮರೆತು
ಅದು ಹುಣ್ಣಿಮೆ ಹೊತ್ತು!
ಕ್ಷಣ ಕಳೆದು ಕಣ್ಣು ಬಿಟ್ಟರೆ ಅಯ್ಯೋ! ಕಗ್ಗತ್ತಲು!
ನಗ್ನಕಪ್ಪಿನಲ್ಲಿ ವಿಕಟ ನಗೆ ಎತ್ತಲು.
ಬಾಯ್ತೆಗೆದ ಭೂತಭೂಮಿಯ ಕೋರೆದಾಡೆಗಳಂತೆ ಕೊಳ್ಳಿ-
ಕುಣಿತ.
ನುಗ್ಗಲೇಬೇಕೆಂಬ ನೊಗ ಹೊತ್ತು ನಿಂತ ನಾನು
ಅನಾಥ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...