Home / ಲೇಖನ / ಇತರೆ / ಒಂದು ಒಳ್ಳೆಯ ಪೊರಕೆ !

ಒಂದು ಒಳ್ಳೆಯ ಪೊರಕೆ !

ಪ್ರಿಯ ಸಖಿ,
ಇಂದು
ನಮ್ಮ ದೇಶದ
ಬಹು ಮುಖ್ಯ ಅರಕೆ
ಒಂದು
ಒಳ್ಳೆಯ ಪೊರಕೆ !
ಮೊನ್ನೆ ಏನೋ ಓದುತ್ತಿದ್ದಾಗ ಕಣ್ಣಿಗೆ ಬಿದ್ದ ಬಿ. ಆರ್. ಲಕ್ಷ್ಮಣರಾವ್ ಅವರ ಈ ಹನಿಗವನ ತಟ್ಟನೆ ಗಮನಹಿಡಿದಿರಿಸಿತು. ಈ ಪುಟ್ಟ ಪದ್ಯದಲ್ಲಿ ಎಷ್ಟೊಂದು ಅರ್ಥ ತುಂಬಿದೆಯೆಲ್ಲವೇ ಸಖೀ?

ಇಂದು ದೇಶದ ತುಂಬೆಲ್ಲಾ ಭ್ರಷ್ಟಾಚಾರ, ಲಂಚಗುಳಿತನ, ಜಾತೀಯತೆ, ಸ್ವಾರ್ಥ ರಾಜಕಾರಣ, ಅನಕ್ಷರತೆ, ಮೌಢ್ಯ, ಪರಸ್ಪರ ಕಚ್ಚಾಟ…. ಇತ್ಯಾದಿ ಏನೆಲ್ಲಾ ಕಸಗಳು ತುಂಬಿ ಹೋಗಿವೆ. ಇವಗಳ ಜೊತೆಗಿದ್ದು ನಾವೂ ಇದರಲ್ಲಿ ಒಂದಾಗಿ ಹೋಗಿದ್ದೇವೆ. ದೇಶದ ಪರಿಸ್ಥಿತಿಯ ಬಗೆಗೆ ಆಗೀಗ ಗೊಣಗುಟ್ಟಿಕೊಂಡರೂ ‘ನಮ್ಮೊಬ್ಬರಿಂದ ಏನು ಸಾಧ್ಯ’ ಎಂದು ಸಮಜಾಯಿಷಿ ಮಾಡಿಕೊಂಡು ಬಿಡುತ್ತೇವೆ. ‘ದೇಶದ ಕುರಿತು ನನಗೇನು’ ಎಂದು ಜನ ನಿರ್ಲಕ್ಷ ತೋರಲಾರಂಭಿಸಿದರೆ ಆ ದೇಶಕ್ಕೆ ಭವಿಷ್ಯವೇ ಇಲ್ಲ ಎನ್ನುತ್ತಾನೆ ರೂಸೋ.

ಈ ಕಸವನ್ನು ಗುಡಿಸಲು ಎಲ್ಲಿಂದಲಾದರೂ ಯಾರಾದರೂ ಪ್ರಾರಂಭಿಸಲೇ ಬೇಕಲ್ಲವೇ? ಅದಕ್ಕೆ ಬೇಕಿರುವುದು ಒಂದು ಒಳ್ಳೆಯ ಪೊರಕೆ ಎಂದಿದ್ದಾರೆ ಕವಿ. ಹಾಗಾದರೆ ಆ ಪೊರಕೆ ಯಾವುದು? ನನಗನ್ನಿಸುವುದು ಬಹುಶಃ ‘ಜಾಗೃತಿ’ ಎಂಬ ಪೊರಕೆಯೇ ಇದಕ್ಕೆ ಉತ್ತರ. ಜಾಗೃತಿ ಎಂಬ ಪೊರಕೆಗೆ ಶಿಕ್ಷಣ, ದೇಶಪ್ರೇಮ, ವೈಚಾರಿಕ ಪ್ರಜ್ಞೆ ನಿಸ್ವಾರ್ಥತೆ, ವಿವೇಚನೆ, ನಂಬಿಕೆ, ಶ್ರದ್ಧೆ, ಆತ್ಮಸ್ಥೈರ್ಯ….. ಇತ್ಯಾದಿ ಪೊರಕೆ ಕಡ್ಡಿಗಳೇ ಬಲ! ಇಂತಹ ನೂರಾರು ಕಡ್ಡಿಗಳು ಸೇರಿ ತಾನೆ ‘ಜಾಗೃತಿ’ ಎಂಬ ಒಂದು ಪೊರಕೆಯಾಗುವುದು?

ನಿಜಕ್ಕೂ ನಾವು ಈಗ ಮಾಡಬೇಕಿರುವುದು ಇಂತಹ ಪೊರಕೆ ಕಡ್ಡಿಗಳ ಸೃಷ್ಟಿ. ಇದು ಸುಲಭವೂ ಅಲ್ಲ. ಅಸಾಧ್ಯವೂ ಅಲ್ಲ! ಮಾನವ ಮನಸ್ಸು ಮಾಡಿದರೆ ಯಾವುದು ತಾನೇ ಸಾಧ್ಯವಿಲ್ಲ? ಎಲ್ಲಕ್ಕೂ ಮುಖ್ಯವಾಗಿ ಮನಸ್ಸು ಮಾಡಬೇಕಷ್ಟೇ! ದಿಟ್ಟ ಮನಸ್ಸಿನಿಂದ ಪುಟ್ಟ ಹೆಜ್ಜೆ ಇಡುತ್ತಲೇ ಇಂತಹ ಪೊರಕೆ ಕಡ್ಡಿಗಳನ್ನು ಸೃಷ್ಟಿಸಿದರೆ ಪೊರಕೆ ತಾನಾಗಿ ಎಲ್ಲ ಕಡೆಯಿಂದಲೂ ಏಳುತ್ತದೆ. ತಾನೇ ಕಸಗುಡಿಸುತ್ತದೆ. ಸ್ವಚ್ಚ ಮಾಡುತ್ತದೆ. ಇಂತಹ ಒಂದು ಒಳ್ಳೆಯ ಪೊರಕೆಗಾಗಿ ಒಂದು ಪೊರಕೆ ಕಡ್ಡಿಯನ್ನಾದರೂ ಸೃಷ್ಟಿಸುವುವಕ್ಕೆ ನಾವು ಪ್ರಯತ್ನಿಸಿದರೆ ಅದಕ್ಕಿಂತಾ ಒಳ್ಳೆಯ ಕೆಲಸ ಇನ್ನಾವುದಿದೆ? ಅಲ್ಲವೇ ಸಖಿ?
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...