Home / ಕವನ / ಕವಿತೆ / ಸೂಜಿ-ಗಲ್ಲು

ಸೂಜಿ-ಗಲ್ಲು

ಬೆಂಗಳೂರಲ್ಲಿ ಬಸ್ಸು ಹತ್ತಿದರೆ
ಊರು ಸೇರುವುದೇ ಒಂದು ಬದುಕು.

ಬರ್ರೆಂದು ಬೀಸುತ್ತ ಬರುವ ಸೊಕ್ಕಿದ ಲಾರಿಗಳು
ಪಕ್ಕೆಲುಬು ಮುರಿದು ಬಿಕ್ಕುತ್ತ ಕೂರುತ್ತವೆ.
ನೆಲದ ಮೇಲಿನ ಹಕ್ಕಿಯಾಗುವ ಕಾರುಗಳು
ಹಾಡು ಹರಿದು ಚಿಂದಿಯಾಗಿ ಚೀರುತ್ತವೆ.

ಸಾಯಬೇಕೆನ್ನುವ ಸೇಡಿನಲ್ಲಿ
ಕಣ್ಣುಮುಚ್ಚಾಲೆಯಾಡುವ ರೊಚ್ಚಿನಲ್ಲಿ
ನೆತ್ತರು ಬರೆದ ಬರಹ ಓದಲಾರದೆ
ಕಣ್ಣು ಮುಚ್ಚುತ್ತೇನೆ.

ಇದ್ದಕ್ಕಿದ್ದಂತೆ ಬ್ರೇಕು ಬುಸುಗುಟ್ಟಿದಾಗ
ಥಟ್ಟನೆ ಕಣ್ತೆರೆದು ಪಕ್ಕಕ್ಕೆ ನೋಡುತ್ತೇನೆ-
ಅಲ್ಲಿ ಜೊತೆಗೆ ಬರಲಾಗದೆ ಹಿಂದಕ್ಕೆ ಓಡುವ ಹೊಲಗಳು
ಹೊಲಗಳಲ್ಲಿ ಹಿಂದೆ ಮುಂದೆ ನೋಡದೆ ಎದ್ದ ಹುತ್ತಗಳು!

ಹೊಲದಲ್ಲಿ ಬೆಳೆದ ಈ ಹುತ್ತಗಳಲ್ಲಿ
ಹೂವು ಅರಳಬಾರದೆ ಎಂದುಕೊಳ್ಳುತ್ತೇನೆ
ಆದರೆ ಹಾವು ಬುಸ್ಸೆನ್ನುತ್ತದೆ.

ನಿತ್ಯ ಅದೇ ಗೋಳು ಅದೇ ಬಾಳು
ಫ್ಯೂಡಲ್ ಲಾರಿಗಳು ಕ್ಯಾಪಿಟಲ್ ಕಾರುಗಳು
ಹಿಗ್ಗಾಮುಗ್ಗ ನುಗ್ಗುವ ಕನಸುಗಳು
ನುಚ್ಚುನೂರಾದ ಬಿಡಿಭಾಗಗಳು
ಛಂದಸ್ಸಿನಲ್ಲಿ ಛಿದ್ರವಾದ ಮಾತ್ರೆ ಗಣಗಳು
ಗೊಣಗುತ್ತವೆ; ಒಣಗುತ್ತವೆ ನೂರಾರು ಬಣ್ಣಗಳು.
ಆಗ ನೀರಿಗೆ ಬಿದ್ದ ಸುಣ್ಣವಾಗುತ್ತೇನೆ-
ಹೇಳಿ ಬಂಧುಗಳೇ
ಮತ್ತೆ ಬರಬೇಕೆ ಇಲ್ಲಿಗೆ?
ತಿನ್ನುವ ತುತ್ತು ಅನ್ನಕ್ಕೂ ಕನ್ನ ಹಾಕುವ
ಬಾಳಿನ ಬಗ್ಗೆ ಕನಸುತ್ತ;
ಸಾವಿನ ಲೆಕ್ಕ ಬರೆಯುವ ಬುಕ್ಕಿನಲ್ಲಿ
ಬೆಳ್ಳಿ ಚುಕ್ಕಿಗಳನ್ನು ಬಿಡಿಸುತ್ತ;
ಸೃಷ್ಟಿಬೀಜದ ಬಸುರಿ ಹೊಲಗಳಲ್ಲಿ
ಲಯದ ಭಯ ಬುಸುಗುಡುವ ಹುತ್ತ ಕಾಣುತ್ತ-

ಹೇಳಿ ಬಂಧುಗಳೇ ಹೇಳಿ
ಮತ್ತೆ ಬರಬೇಕೆ ಇಲ್ಲಿಗೆ?
ಬಿಟ್ಟರೂ ಬಿಡದ ಈ ನನ್ನ ಸೂಜಿ-ಗಲ್ಲಿಗೆ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...