Home / ಕವನ / ಕವಿತೆ / ಕಾಂಟೆಸಾದಲ್ಲಿ ಕಾವ್ಯ

ಕಾಂಟೆಸಾದಲ್ಲಿ ಕಾವ್ಯ

ಕಾಂಟೆಸಾದಲ್ಲಿ ಕೂತಾಗ ಕಾವ್ಯವಾಗದಿದ್ದರೆ
ಕುಂಟುನೆಪದ ಭವ್ಯತೆಯಲ್ಲಿ ಬತ್ತಿ ಹೋಗುತ್ತೇನೆ.
ಉರಳುವ ಚಕ್ರದಲ್ಲಿ ನರಳುವ ಕರುಳು-
ಕಾರಿರುಳ ಕಾರಲ್ಲಿ ಕಾಲಿಡುತ್ತಾನೆ ಕೌರವ;
ವಂದಿ ಮಾಗಧರು ನಂದಿ ಹೋದ ಹಾದಿಯಲ್ಲಿ
ಬರಿತಲೆಯ ಬರಿಗಾಲ ನಿಜ ಮಾನವ!

ಮತ್ತೊಬ್ಬ ಹತ್ತುತ್ತಿದ್ದಾನೆ ವೃಷಭಾಚಲಕ್ಕೆ
ಜಗತ್ತನ್ನು ಗೆದ್ದ ದೊಡ್ಡಸ್ತಿಕೆಯ ಶಿಖರಕ್ಕೆ
ಗೆದ್ದವರು ಎಷ್ಟೋ ಜನ! ಎಲ್ಲಿ ಬರೆಸಲಿ ಶಾಸನ?
ನಿರಸನಗೊಂಡದ್ದೇ ನಿಜವಾದ ಕವನ.

ಮೃತ್ಯುವೇ ಮೈವೆತ್ತ ಮುತ್ತುರತ್ನದ ಕಿರೀಟ
ಇಲ್ಲಿ ಆಸ್ಥಾನದಲ್ಲಿ ನೀಲಾಂಜನೆಯ ನೃತ್ಯ!
ಬಿಟ್ಟ ಕಣ್ಣುಗಳಲ್ಲಿ ಭ್ರಮೆಯ ಬೆಟ್ಟಗಳು
ಕುಸಿದು ಕುಪ್ಪೆಯಾಗುವುದರಲ್ಲಿ ಎಂಥ ಸತ್ಯ!

ಒಳಗೆ ತತ್ತಿಯೊಡೆದು ಹುಟ್ಟಿದೆ ಕತ್ತಿಕಾಳಗ
ತುಂಬಿ ಬರುತ್ತಿದೆ ನೆನಪಿನ ಕೊಳಗ;
ಬದುವಿನ ಮೇಲೆ ಚಿಟ್ಟೆ ಹಿಡಿಯುವಾಗ
ಹಾವು ಹೆಡೆ ಬಿಚ್ಚಿದ್ದು;
ಬುಸುಗುಡುವ ಬೆವರಲ್ಲಿ ಬಿಸಿಲ ಕುಡಿದು
ಕಣ್ಣುಗಳಲ್ಲಿ ಬಣ್ಣದ ಚಿತ್ತಾರ ಬಿಡಿಸಿದ್ದು;
ಬಸ್ಸಿಗೆ ಕಾಸಿಲ್ಲದೆ ಕಾಲಲ್ಲಿ ಕಾವ್ಯ ಬರೆದದ್ದು;
ಹಸಿದ ಹೊಟ್ಟೆಯ ಒಳಗೆ ಕನಸುಗಳು ಕಚ್ಚಿದ್ದು-
ಕತ್ತಲೆಯ ಕಟ್ಟುಗಳನ್ನು ಬಿಚ್ಚಿಕೊಳ್ಳುತ್ತದೆ
ಬುದ್ಧ ಬೆಳಕಿನ ಬುತ್ತಿ:

ಕಾವ್ಯ ತುಂಬಿಕೊಳ್ಳಬೇಕು ಕಾಂಟೆಸಾದ ಒಳಗೆ
ನೆನಪಾಗುತ್ತಲೇ ಇರಬೇಕು ಬರಿಗಾಲ ನಡಿಗೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...