ಸೀನಿಯರ್ ಕ್ರಿಕೆಟಿಗನ ಸಂಜೆ

ಕಿವಿ ಬಿರಿವ ಬೊಬ್ಬೆ, ಭೋರಿಡುವ ಜನಸಾಗರ.
ಓವರಿಗೆ ಎರಡೆರಡು ಫೋರುಗಳ ಗುಡುಗು
ನಡುವೆ ಸಿಕ್ಸರ್ ಸಿಡಿಲು,
ಸೃಷ್ಟಿಯಾಗುತ್ತಿದೆ ಮಿಂಚಿನೋಟದ ಕವಿತೆ
ಮೈದಾನದಲ್ಲೆ ಕಣ್ಣಿದಿರು!
ಕಣ್ಣು ಹರಿದಲ್ಲೆಲ್ಲ ಬಾವುಟದ ಆವುಟ
ಕುಣಿದು ಧೀಂಕಿಡುವ ಸಹಸ್ರಾರು ಭಕ್ತರ
ಆನಂದ ನೃತ್ಯ!
ಚಿತ್ರ ಕ್ಲಿಕ್ಕಿಸುತ್ತಿರುವ ಥರಾವರಿ ಕ್ಯಾಮೆರಾ,
ಲಾಠಿ ಬೀಸುವ ಖಾಕಿ ಟೊಣಪರನ್ನೂ ತಳ್ಳಿ
ಫೀಲ್ಡಿನೊಳಕ್ಕೆ ನುಗ್ಗಿ ಮುಟ್ಟಿ ಓಡುವ ಪಡ್ಡೆ ಹುಡುಗು ಹೋರಿಗಳು,
ಮೆಚ್ಚಿ ಮನಸ್ಸಿನಲ್ಲೆ ಬಾಚಿ ಮುತ್ತಿಡುವ
ಕಾಲೇಜು ಬೆಡಗಿಯರು;
ಟಿ.ವಿ.ಗೆ ಅಂಟಿಕೂತ ಲಕ್ಷಲಕ್ಷಜನಕ್ಕೆ
ಆನಂದೊದ್ರೇಕ;
ಕಣ್ಣಂಚಿನಲ್ಲಿ ಕೊಂಚ ತುಳುಕು, ಗದ್ಗದ ಕಂಠ.
ಮಾರನೆ ಬೆಳಿಗ್ಗೆ
ವೃತ್ತಪತ್ರಿಕೆಗೆ ಪರದಾಟ, ಸುದ್ದಿಗೆ ಸುಗ್ಗಿ
ಬ್ಯಾಟು ಬೀಸುತ್ತಿರುವ ಅರ್ಜುನ ಪರಾಕ್ರಮದ
ದಿಟ್ಟ ಭಂಗಿಯ ಚೀರುಚಿತ್ರ,
ಆಳುವ ಪ್ರಧಾನಿಗೇ ಅಬ್ಬ ಎನ್ನಿಸುವ ಜಯಕಾರ ಸತ್ಕಾರ;
ರಾಜಕಾರಣಿಗೆ ಸಲ್ಲುವ ನಕಲಿ ಮಾಲಲ್ಲ,
ನೂರಕ್ಕೆ ನೂರು ಎಲ್ಲ ಹೃತ್ಪುರ್ವಕ
ತಟ್ಟತಳ ತನಕ.

ಆ ಎಲ್ಲ ವೈಭವ ಕಳೆದ ಕಾರ್ತಿಕದಲ್ಲಿ.
ಹಿಂದಿದ್ದ ಹದ್ದುಗಣ್ಣಿನ ಹರಿತ ಈಗೆಲ್ಲಿ ?
ಸಿಡಿಗುಂಡಿನಂತೆ ಭರ್ರೆಂದು ನುಗ್ಗುವ ಚೆಂಡು
ಬಳಿ ಬರುವ ತನಕ ಸುಳಿವೇ ಸಿಗುವುದಿಲ್ಲ;
ಬ್ಯಾಟಿನಂಚಿಗೆ ಬಡಿದು ಸ್ಲಿಪ್ಪಲ್ಲೆ ಕ್ಯಾಚು,
ಮುನ್ನುಗ್ಗಿ ಬೀಸಿದರೆ ಕಣ್ಣು ತಪ್ಪಿಸಿ ಚೆಂಡು ಬೆನ್ನಲ್ಲೆ ಸ್ಟಂಪು,
ಕೆಲವೇ ನಿಮಿಷ, ಮತ್ತೆ ಪೆವಿಲಿಯನ್ ಕಡೆ ಪಯಣ!
ತಗ್ಗಿಸಿದ ತಲೆ, ನೀರು ತುಂಬುತ್ತಿರುವ ಕಣ್ಣು,
ಕೆನ್ನೆಗೆ ಛಟೀರೆಂದು ಬಾರಿಸಿದಳೆಂಬಂತೆ
ಇರಿದು ನೋಡುವ ಹೆಣ್ಣು,
ಸುತ್ತ ಗ್ಯಾಲರಿಯಿಂದ ಅಟ್ಟಿ ಹೀಯಾಳಿಸುವ
ಗೇಲಿ, ವ್ಯಂಗ್ಯದ ಕೂಗು,
ಮೂದಲಿಕೆ ಚೂರಿನುಡಿ, ಎಲ್ಲವೂ ಕೇಳಿಸುವಂತೆ,
“ದಿಟ್ಟ ಹೋರಾಟಗಳ ಸಾರಿ ಸಾವಿರ ಬಾರಿ
ಗೆದ್ದು, ಯಾವಾಗಲೋ ಒಮ್ಮೆ ಬಿದ್ದರೆ ಮಲ್ಲ
ಗೌರವದ ಶಿಖರದಿಂದುರುಳಿ ಗೋರಿಗೆ ದಾರಿ
ಹೊಳೆಯಲ್ಲಿ ಹುಣಿಸೆ ತೊಳೆದಂತೆ ಹಿಂದಿನದೆಲ್ಲ”

ಆದರೆ ಇದಂತು ನಿಜ
ಹಿಂದೆ ಕೈ ಹಿಡಿದಿದ್ದ ಮ್ಯಾಜಿಕ್ ಕೈಕೊಟ್ಟಿದೆ
ಕಿತ್ತುಹಾಕುವ ಮೊದಲು ಭರತವಾಕ್ಯದ ಮಾತು
ಆಡಿ ಬಿಡು ನೀನೇ;
ಕ್ಯೂನಲ್ಲಿ ನಿಂತು ನಿನ್ನನ್ನೇ ನೋಡುತ್ತ
ಕಾಯುತ್ತಿರುವ ಹುಡುಗ
ಬರಲಿ ಟೀಮಿನ ಒಳಗೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೇದಿ ಒಂದು
Next post ತವರೂರ ಹಾದಿಯಲಿ

ಸಣ್ಣ ಕತೆ

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

cheap jordans|wholesale air max|wholesale jordans|wholesale jewelry|wholesale jerseys