Home / ಕವನ / ಕವಿತೆ / ಸೀನಿಯರ್ ಕ್ರಿಕೆಟಿಗನ ಸಂಜೆ

ಸೀನಿಯರ್ ಕ್ರಿಕೆಟಿಗನ ಸಂಜೆ

ಕಿವಿ ಬಿರಿವ ಬೊಬ್ಬೆ, ಭೋರಿಡುವ ಜನಸಾಗರ.
ಓವರಿಗೆ ಎರಡೆರಡು ಫೋರುಗಳ ಗುಡುಗು
ನಡುವೆ ಸಿಕ್ಸರ್ ಸಿಡಿಲು,
ಸೃಷ್ಟಿಯಾಗುತ್ತಿದೆ ಮಿಂಚಿನೋಟದ ಕವಿತೆ
ಮೈದಾನದಲ್ಲೆ ಕಣ್ಣಿದಿರು!
ಕಣ್ಣು ಹರಿದಲ್ಲೆಲ್ಲ ಬಾವುಟದ ಆವುಟ
ಕುಣಿದು ಧೀಂಕಿಡುವ ಸಹಸ್ರಾರು ಭಕ್ತರ
ಆನಂದ ನೃತ್ಯ!
ಚಿತ್ರ ಕ್ಲಿಕ್ಕಿಸುತ್ತಿರುವ ಥರಾವರಿ ಕ್ಯಾಮೆರಾ,
ಲಾಠಿ ಬೀಸುವ ಖಾಕಿ ಟೊಣಪರನ್ನೂ ತಳ್ಳಿ
ಫೀಲ್ಡಿನೊಳಕ್ಕೆ ನುಗ್ಗಿ ಮುಟ್ಟಿ ಓಡುವ ಪಡ್ಡೆ ಹುಡುಗು ಹೋರಿಗಳು,
ಮೆಚ್ಚಿ ಮನಸ್ಸಿನಲ್ಲೆ ಬಾಚಿ ಮುತ್ತಿಡುವ
ಕಾಲೇಜು ಬೆಡಗಿಯರು;
ಟಿ.ವಿ.ಗೆ ಅಂಟಿಕೂತ ಲಕ್ಷಲಕ್ಷಜನಕ್ಕೆ
ಆನಂದೊದ್ರೇಕ;
ಕಣ್ಣಂಚಿನಲ್ಲಿ ಕೊಂಚ ತುಳುಕು, ಗದ್ಗದ ಕಂಠ.
ಮಾರನೆ ಬೆಳಿಗ್ಗೆ
ವೃತ್ತಪತ್ರಿಕೆಗೆ ಪರದಾಟ, ಸುದ್ದಿಗೆ ಸುಗ್ಗಿ
ಬ್ಯಾಟು ಬೀಸುತ್ತಿರುವ ಅರ್ಜುನ ಪರಾಕ್ರಮದ
ದಿಟ್ಟ ಭಂಗಿಯ ಚೀರುಚಿತ್ರ,
ಆಳುವ ಪ್ರಧಾನಿಗೇ ಅಬ್ಬ ಎನ್ನಿಸುವ ಜಯಕಾರ ಸತ್ಕಾರ;
ರಾಜಕಾರಣಿಗೆ ಸಲ್ಲುವ ನಕಲಿ ಮಾಲಲ್ಲ,
ನೂರಕ್ಕೆ ನೂರು ಎಲ್ಲ ಹೃತ್ಪುರ್ವಕ
ತಟ್ಟತಳ ತನಕ.

ಆ ಎಲ್ಲ ವೈಭವ ಕಳೆದ ಕಾರ್ತಿಕದಲ್ಲಿ.
ಹಿಂದಿದ್ದ ಹದ್ದುಗಣ್ಣಿನ ಹರಿತ ಈಗೆಲ್ಲಿ ?
ಸಿಡಿಗುಂಡಿನಂತೆ ಭರ್ರೆಂದು ನುಗ್ಗುವ ಚೆಂಡು
ಬಳಿ ಬರುವ ತನಕ ಸುಳಿವೇ ಸಿಗುವುದಿಲ್ಲ;
ಬ್ಯಾಟಿನಂಚಿಗೆ ಬಡಿದು ಸ್ಲಿಪ್ಪಲ್ಲೆ ಕ್ಯಾಚು,
ಮುನ್ನುಗ್ಗಿ ಬೀಸಿದರೆ ಕಣ್ಣು ತಪ್ಪಿಸಿ ಚೆಂಡು ಬೆನ್ನಲ್ಲೆ ಸ್ಟಂಪು,
ಕೆಲವೇ ನಿಮಿಷ, ಮತ್ತೆ ಪೆವಿಲಿಯನ್ ಕಡೆ ಪಯಣ!
ತಗ್ಗಿಸಿದ ತಲೆ, ನೀರು ತುಂಬುತ್ತಿರುವ ಕಣ್ಣು,
ಕೆನ್ನೆಗೆ ಛಟೀರೆಂದು ಬಾರಿಸಿದಳೆಂಬಂತೆ
ಇರಿದು ನೋಡುವ ಹೆಣ್ಣು,
ಸುತ್ತ ಗ್ಯಾಲರಿಯಿಂದ ಅಟ್ಟಿ ಹೀಯಾಳಿಸುವ
ಗೇಲಿ, ವ್ಯಂಗ್ಯದ ಕೂಗು,
ಮೂದಲಿಕೆ ಚೂರಿನುಡಿ, ಎಲ್ಲವೂ ಕೇಳಿಸುವಂತೆ,
“ದಿಟ್ಟ ಹೋರಾಟಗಳ ಸಾರಿ ಸಾವಿರ ಬಾರಿ
ಗೆದ್ದು, ಯಾವಾಗಲೋ ಒಮ್ಮೆ ಬಿದ್ದರೆ ಮಲ್ಲ
ಗೌರವದ ಶಿಖರದಿಂದುರುಳಿ ಗೋರಿಗೆ ದಾರಿ
ಹೊಳೆಯಲ್ಲಿ ಹುಣಿಸೆ ತೊಳೆದಂತೆ ಹಿಂದಿನದೆಲ್ಲ”

ಆದರೆ ಇದಂತು ನಿಜ
ಹಿಂದೆ ಕೈ ಹಿಡಿದಿದ್ದ ಮ್ಯಾಜಿಕ್ ಕೈಕೊಟ್ಟಿದೆ
ಕಿತ್ತುಹಾಕುವ ಮೊದಲು ಭರತವಾಕ್ಯದ ಮಾತು
ಆಡಿ ಬಿಡು ನೀನೇ;
ಕ್ಯೂನಲ್ಲಿ ನಿಂತು ನಿನ್ನನ್ನೇ ನೋಡುತ್ತ
ಕಾಯುತ್ತಿರುವ ಹುಡುಗ
ಬರಲಿ ಟೀಮಿನ ಒಳಗೆ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...