Home / ಕವನ / ಕವಿತೆ / ಮರಿ ಪಿಶಾಚಿ ಪದ್ಯ

ಮರಿ ಪಿಶಾಚಿ ಪದ್ಯ

ಭಾಗ-೧

ಒಮ್ಮೆ ಒಂದು ಮರಿಪಿಶಾಚಿ
ಊರ ಸುತ್ತಲದಕೆ ತೋಚಿ

ಪೊಟರೆಯಿಂದ ಇಳಿಯಿತು
ಧೈರ್ಯದಿಂದ ನಡೆಯಿತು

ನಡೆದು ನಡೆದು ಬರಲು ಕೊನೆ
ಬಿತ್ತು ಕಣ್ಣಿಗೊಂದು ಮನೆ

ಬಾಗಿಲಿಗೆ ಬೀಗವಿತ್ತು
ಕಿಟಕಿ ಮಾತ್ರ ತೆರದೆ ಇತ್ತು

ಅರೆ! ಎಂದು ಮರಿಪಿಶಾಚಿ
ಇಣುಕಿತಲ್ಲಿ ಕತ್ತು ಚಾಚಿ

ಯಾರು ಇಲ್ಲ ಮನೆಯ ಒಳಗೆ
ಹೋಗಿರುವರು ಎಲ್ಲೋ ಹೊರಗೆ

ಎಷ್ಟಾದರೂ ಪಿಶಾಚಿ ತಾನೆ
ಹಾರಿಯೇ ಬಿಟ್ಟಿತು ಧುಡುಕ್ಕನೆ

ಕುರ್ಚಿ ಮೇಜು ತೂಗುಯ್ಯಾಲೆ
ಕುಣಿದಾಡಿತು ಕೆಳಗೆ ಮೇಲೆ

ಮೂಗಿಗೆ ಬಡಿಯಲು ಏನೋ ವಾಸನೆ
ಹೊಕ್ಕು ನೋಡಿತು ಅಡುಗೆ ಕೋಣೆ

ಮೂಲೆಯಲೊಂದು ಒಂಟೆ ಡುಬ್ಬ
ಕವಚಿದ ಹಾಗೆ ಬೆಲ್ಲದ ಡಬ್ಬ

ಅರೆ! ಎಂದು ಮರಿಪಿಶಾಚಿ
ಇಣುಕಿತಲ್ಲಿ ಕತ್ತು ಚಾಚಿ

ಬೆಲ್ಲದ ಪಸೆ ಮೈ ಕೈ ಸವರಿ
ಬಿದ್ದೇಬಿಟ್ಟಿತು ಒಳಕ್ಕೆ ಜಾರಿ

ಮೇಲೆ ನೆಗೆಯೋಕಾಗೋದಿಲ್ಲ
ಉಂಡೆ ಬೆಲ್ಲ ಸುತ್ತಲೆಲ್ಲ

ಸರಿ! ಎಂದು ಮರಿಪಿಶಾಚಿ
ಮೆಲ್ಲತೊಡಗಿತು ಬಾಚಿ ಬಾಚಿ

ಮೆದ್ದು ಕೈ ಕಾಲು ಮಂಡೆ
ಆಯಿತೊಂದು ಬೆಲ್ಲದುಂಡೆ

ಅಷ್ಟರಲಿ ಸದ್ದು ಹೊರಗೆ
ಬಾಗಿಲು ಕಿರ್ರನೆ ತೆರೆದ ಹಾಗೆ

ಮನುಷ್ಯರ ಕಾಲ ಸಪ್ಪಳ
ಮುರಿದ ಹಾಗೆ ಹಪ್ಪಳ

ಮರಿ ಪಿಶಾಚಿ ಡಬ್ಬದೊಳಗೆ
ಬೆವರತೊಡಗಿತು ಮೆಲ್ಲಗೆ

ಭಾಗ-೨

ಅಡುಗೆ ಭಟ್ಟ ಸುಬ್ಬಾಭಟ್ಟ
ಒಲೆಯ ಮೇಲೆ ಎಸರನಿಟ್ಟ

ಅಂದು ರಾಮನವಮಿ ದಿವಸ
ಆದ್ದರಿಂದ ಪಾಯಸ

ಎಸರು ಕುದಿಯಿತು ತಳಮಳ
ಪಿಶಾಚಿಗೇಕೊ ಕಳವಳ

ಸುಬ್ಬಾಭಟ್ಟ ಹುಡುಕಿದ
ಬೆಲ್ಲದ ಡಬ್ಬ ತಡಕಿದ

ಕೈಗೆ ಸಿಕ್ಕ ದೊಡ್ಡ ಉಂಡೆ
ಸೇರಿತು ಪಾಯಸದ ಹಂಡೆ

ನೋಡಲೇನು! ಮರಿಪಿಶಾಚಿ
ಕುಂಯ್ಯೋ ಮುರ್ರೋ ಎಂದು ಕಿರುಚಿ

ಕಿಟಕಿಯಿಂದ ಒಂದೇ ನೆಗೆತ
ಬೇಡಿ ತಿನುವೆನೆನ್ನುತ

ಕೆಳಗೆ ಬಿದ್ದ ಸುಬ್ಬಾಭಟ್ಟ
ಒಂದು ವಾರ ಮಲಗಿಬಿಟ್ಟ

ಆಗಿದ್ದಾನೆ ಸಣಕಲು
ಹೇಳುತ್ತಾನೆ ಈಗಲೂ

ಇಂಥ ವಿಚಿತ್ರ ಕಂಡದ್ದಿಲ್ಲ
ಹಾರುವಂಥ ಉಂಡೆ ಬೆಲ್ಲ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...