Home / ಕವನ / ಕವಿತೆ / ಸಂದೂಕದೊಳಗಣ ಕಡತ

ಸಂದೂಕದೊಳಗಣ ಕಡತ

ಅವನ ನೆನಪಿನ ಕಿರು
ಕಡತಗಳು ಹಾಗೆ ಇವೆ.
ಸಂದೂಕದ ಅಡಿಯಲ್ಲಿ ಅಲ್ಲಲ್ಲಿ
ಧೂಳಿನ ಲೇಪನಗೊಂಡು

ಎಡತಾಕುವ ಬೆಕ್ಕಿನಂತೆ
ಸದಾ ಹಿಂದೆ ಸುತ್ತುತ್ತಿದ್ದವ
ಅಪರೂಪದ ಬಿಳಿ ಪಾರಿವಾಳವಾದ.
ನನ್ನೆದೆಯ ಗೂಡಲ್ಲಿ
ಕಾಪಿಡುವೆ ನಿನ್ನ ಎಂದವ
ನನ್ನೊಡಲ ಚಿಗುರು ಚೆಲುವುಗಳನ್ನೆಲ್ಲಾ
ಚಿಂದಿಗೊಪ್ಪಿಸಿ ನಡೆದ.

ಸರದಿ ಸಾಲಿನ ಇರುವೆಗಳಂತೆ
ಕಾದು ನಿಂತವರ ಕಡೆಗಣಿಸಿ
ತೆಕೈಸಿ ಬಂದರೆ
ಇರುವೆಯ ಕಾಲಲ್ಲಿ ಹೊಸಕಿದಂತೆ
ಹಿಸುಕಿ ಹಾಕಿದ..
ನೋವಿನ ಕಟಕಟೆಯಲ್ಲಿ
ನಿಂತಾಗಲೆಲ್ಲಾ
ಕೊರೆವ ಗರಗಸದ ಆತ್ಮಗತ
ಪಾಟಿಸವಾಲು

ಆದರೀಗ.. ಈಗೀಗ
ಸಂದೂಕದ ಸಂದಿಗೊಂದಿಗಳು
ಮೇಲೈಯಲ್ಲಿ
ವಿಪರೀತ ಅಲಂಕೃತಗೊಂಡಿವೆ.
ಹೊಸ ಪುಸ್ತಕವೊಂದು ಸಂದೂಕದ
ಬೆನ್ನೇರಿದೆ.
ಬಿಚ್ಚಿ ಮೈ ಚಾಚಿದೆ
ಅರ್‍ವಾಚೀನ ಸೌಂದರ್ಯದ
ನಾವಿನ್ಯತೆ ತೊಟ್ಟು.

ಆದರೂ ನೆನಪುಗಳು ಬೆದರುತ್ತವೆ
ಹಿಡಿದಿಡಲಾಗದೇ
ಹಳೆಯ ಉಸಿರ ಬಸಿರ
ಕಡತಗಳ ತೆಗೆದೊಮ್ಮೆ
ನೋಡಬೇಕೆನಿಸುತ್ತದೆ
ಅದೇ ಗಟ್ಟಿತನವೇ?
ಇಲ್ಲ. ಗೆದ್ದಲುಗೊಂಡ
ಪುಡಿಪುಡಿಗೊಂಡ ಕಾಗದದ ಚೂರೇ
ಎಂದು.
ಓದಬಲ್ಲನೇ ನಾನು
ಹಳೆಯ ದಿಟ್ಟಿಯ ಹಿಡಿದು
ಕನ್ನಡಕದ ದೃಷ್ಟಿಯಲ್ಲಿ ಮುಳುಗಿದವಳಿಗೆ
ತಿಳಿದೀತೆ ಮೊಗೆವ ಮಮತೆಯ
ಮಧುರ ಧಾರೆಯ ಚುಕ್ಕಿ ಹೊಳಪು.
ಕಂಡೀತೆ ಮಗದೊಮ್ಮೆ
ಅವನಲ್ಲೂ ಈ ಚಳಕು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...