Home / ಕವನ / ಕವಿತೆ / ಮಲ್ಲಿಗೆಯೆಂಬ ಪರಿಮಳ ಸಾಲೆ

ಮಲ್ಲಿಗೆಯೆಂಬ ಪರಿಮಳ ಸಾಲೆ

ಬಿಳಿಮಲ್ಲಿಗೆಯ ಕಂಪು ಕೊಳೆತು
ನಾರುವುದು ಗಾಳಿಗಂಧ ಆಡದ ಕಡೆಯಲ್ಲಿ
ತುರುಕಿ ಬಲವಂತ
ಮುಚ್ಚಿ ಹೊರತೋರದಂತೆ
ಅದುಮಿ ಇಟ್ಟು ಬಿಟ್ಟರೆ.
ಕೊಳೆಯದಂತಿಡಬೇಕು,
ಕೆಡದಂತಿರಬೇಕು.

ಮಲ್ಲಿಗೆ ಅರಳುವುದು
ಎಲರ ಅಲೆಯೊಳಗೆ ತೇಲಿ
ಪರಿಮಳ ಸಾಲೆಯಾಗಿ
ಪರಮಲೋಕವನ್ನೇ ಕಣ್ಣಲ್ಲಿ ಮೆರೆಸುವುದು

ಗೊತ್ತಲ್ಲ ನಿನಗೆ,
ಪ್ರೇಮದ ಕಣ್ಣು ತೆರೆದು ಕೊಂಡಷ್ಟು
ಮುದಗೊಳ್ಳುತ್ತದೆ ಮಲ್ಲಿಗೆ ಮನಸ್ಸು
ಎಷ್ಟೆಲ್ಲಾ ಜೀವಗಳ ಸೆಳೆವ ಯೋಗ
ಹೂದಾನಿಯಲ್ಲಿ ಬಿರಿದ ಮೊಗ್ಗು,
ಬಯಲ ಕೊನೆಯಲ್ಲಿ ಅರಳಿದ ಹೂ
ಇಬ್ಬನಿಯಿಂದಲೇ ಒದ್ದೆಯಾಗುತ್ತವೆ
ಮುಂಜಾನೆಯ ಹತ್ತಿ ಬಿಳುಪಿನ
ಹೊಸ ಭಾಷ್ಯ
ಉಕ್ಕಿ ಪಲ್ಲವಿಸುತ್ತವೆ
ಗಿಡ ಬಳ್ಳಿ ಚಿಗುರು ಹೂ ಹಣ್ಣು
ಕಪ್ಪುಮಣ್ಣಿನ ಸಾರ ಬೇರು
ಕಾಂಡದಲ್ಲೆಲ್ಲಾ ಕಸುವುಕ್ಕಿಸಿ
ಗರಿಗೆದರುತ್ತದೆ ಬಯಕೆ
ಕಾಮದ ತೋರಬೆರಳಿಗೆ
ಮಲ್ಲಿಗೆ ಹಾರ ಪ್ರೇಮದುಂಗುರ ತೊಡುಗೆ
ಘಮ್ ಘಮಲು…

ಮಲ್ಲಿಗೆಯ ಮೈದೊಗಲ ಮಾಯೆ
ದಾಹದ ನಾಲಿಗೆಗಳ ತೆರೆದುಬಿಡುವುದು
ಮುತ್ತುವ ದುಂಬಿಗಳ ಮೆಚ್ಚು ನೆಚ್ಚು
ಕಕ್ಕುವ ಹಿಕ್ಕೆಯಾಗಲುಬಹುದು
ಮಲ್ಲಿಗೆ ನುಣುಪುತನ
ಮಿದುತನ ವಿಷಮ ಬಾಹುಗಳಲ್ಲಿ
ಬಂಧಿಯಾಗಿ ಪುಡಿಗಟ್ಟಿ ಹೋಗದಂತಿರಬೇಕು

ಗೊತ್ತು ಮಾಡಿಕೊಳ್ಳಬೇಕು
ಕಿರು ನಾರೇ ಆದರೂ ಸಾಕು
ಹೆಣಿಗೆಯಲ್ಲಿ ಹೊದ್ದ ಗಡಸು ಬಂಧ
ಮಲ್ಲಿಗೆ ಮುದುರಿಕೊಂಡರೂ,
ಕಮರಿಹೋದರೂ
ಕಳೆದುಕೊಳ್ಳದಂತೆ ಪರಿಮಳದ ಸ್ನಿಗ್ಧ ಆನಂದ
ಸದಾ ಕಾಯುವುದು ಹೆಣ್ಣಹೆರಳಿಗೆ
ಮಾಲೆಯಾಗಿ
ಇಲ್ಲ ಗುಡಿಯ ಗಣಪನ
ಕೊರಳ ಹಾರವಾಗಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...