Home / ಕವನ / ಕವಿತೆ / ಮಲ್ಲಿಗೆಯೆಂಬ ಪರಿಮಳ ಸಾಲೆ

ಮಲ್ಲಿಗೆಯೆಂಬ ಪರಿಮಳ ಸಾಲೆ

ಬಿಳಿಮಲ್ಲಿಗೆಯ ಕಂಪು ಕೊಳೆತು
ನಾರುವುದು ಗಾಳಿಗಂಧ ಆಡದ ಕಡೆಯಲ್ಲಿ
ತುರುಕಿ ಬಲವಂತ
ಮುಚ್ಚಿ ಹೊರತೋರದಂತೆ
ಅದುಮಿ ಇಟ್ಟು ಬಿಟ್ಟರೆ.
ಕೊಳೆಯದಂತಿಡಬೇಕು,
ಕೆಡದಂತಿರಬೇಕು.

ಮಲ್ಲಿಗೆ ಅರಳುವುದು
ಎಲರ ಅಲೆಯೊಳಗೆ ತೇಲಿ
ಪರಿಮಳ ಸಾಲೆಯಾಗಿ
ಪರಮಲೋಕವನ್ನೇ ಕಣ್ಣಲ್ಲಿ ಮೆರೆಸುವುದು

ಗೊತ್ತಲ್ಲ ನಿನಗೆ,
ಪ್ರೇಮದ ಕಣ್ಣು ತೆರೆದು ಕೊಂಡಷ್ಟು
ಮುದಗೊಳ್ಳುತ್ತದೆ ಮಲ್ಲಿಗೆ ಮನಸ್ಸು
ಎಷ್ಟೆಲ್ಲಾ ಜೀವಗಳ ಸೆಳೆವ ಯೋಗ
ಹೂದಾನಿಯಲ್ಲಿ ಬಿರಿದ ಮೊಗ್ಗು,
ಬಯಲ ಕೊನೆಯಲ್ಲಿ ಅರಳಿದ ಹೂ
ಇಬ್ಬನಿಯಿಂದಲೇ ಒದ್ದೆಯಾಗುತ್ತವೆ
ಮುಂಜಾನೆಯ ಹತ್ತಿ ಬಿಳುಪಿನ
ಹೊಸ ಭಾಷ್ಯ
ಉಕ್ಕಿ ಪಲ್ಲವಿಸುತ್ತವೆ
ಗಿಡ ಬಳ್ಳಿ ಚಿಗುರು ಹೂ ಹಣ್ಣು
ಕಪ್ಪುಮಣ್ಣಿನ ಸಾರ ಬೇರು
ಕಾಂಡದಲ್ಲೆಲ್ಲಾ ಕಸುವುಕ್ಕಿಸಿ
ಗರಿಗೆದರುತ್ತದೆ ಬಯಕೆ
ಕಾಮದ ತೋರಬೆರಳಿಗೆ
ಮಲ್ಲಿಗೆ ಹಾರ ಪ್ರೇಮದುಂಗುರ ತೊಡುಗೆ
ಘಮ್ ಘಮಲು…

ಮಲ್ಲಿಗೆಯ ಮೈದೊಗಲ ಮಾಯೆ
ದಾಹದ ನಾಲಿಗೆಗಳ ತೆರೆದುಬಿಡುವುದು
ಮುತ್ತುವ ದುಂಬಿಗಳ ಮೆಚ್ಚು ನೆಚ್ಚು
ಕಕ್ಕುವ ಹಿಕ್ಕೆಯಾಗಲುಬಹುದು
ಮಲ್ಲಿಗೆ ನುಣುಪುತನ
ಮಿದುತನ ವಿಷಮ ಬಾಹುಗಳಲ್ಲಿ
ಬಂಧಿಯಾಗಿ ಪುಡಿಗಟ್ಟಿ ಹೋಗದಂತಿರಬೇಕು

ಗೊತ್ತು ಮಾಡಿಕೊಳ್ಳಬೇಕು
ಕಿರು ನಾರೇ ಆದರೂ ಸಾಕು
ಹೆಣಿಗೆಯಲ್ಲಿ ಹೊದ್ದ ಗಡಸು ಬಂಧ
ಮಲ್ಲಿಗೆ ಮುದುರಿಕೊಂಡರೂ,
ಕಮರಿಹೋದರೂ
ಕಳೆದುಕೊಳ್ಳದಂತೆ ಪರಿಮಳದ ಸ್ನಿಗ್ಧ ಆನಂದ
ಸದಾ ಕಾಯುವುದು ಹೆಣ್ಣಹೆರಳಿಗೆ
ಮಾಲೆಯಾಗಿ
ಇಲ್ಲ ಗುಡಿಯ ಗಣಪನ
ಕೊರಳ ಹಾರವಾಗಿ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...