Home / ಕವನ / ಕವಿತೆ / ನನ್ನೂರ ಬಾಲೆ

ನನ್ನೂರ ಬಾಲೆ

ನನ್ನೂರ ಬಾಲೆ
ರಸ ಕಾವ್ಯ ನವ್ವಾಲೆ
ಸಿಹಿ ನೀರ ತರಲೆಂದು ಅಂಗಳಕ ಇಳಿದಳಂದರೆ…
ಓಣಿಯ ಗಂಡು ಹೆಣ್ಣು ಒಟ್ಟಾಗಿ
ತೇಜಃ ಪುಂಜವು ಕಂಡಂತೆ
ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತ ನಿಲ್ಲುವರು.

ಅವಳೋ… ಕಂಡವರ ಕಣ್ಣುಗಳು ಕೆಟ್ಟದಿದು ಅನ್ನದ ಹಾಗೆ
ಸೂಕ್ಷ್ಮವಾಗಿ ಅತ್ತಿತ್ತ ನೋಡುತ್ತ
ಏನನ್ನೋ ಹುಡುಕುತ್ತ
ತೇಲುತ್ತ ನಡೆಯುವಳು ಚಾಣಾಕ್ಷಿ

ಒಳಗಿರುವ ಜೀವ
ಹೊರಗೆಲ್ಲೂ ಸುಳಿಯದಿರಲು
ಒಂದೆಳೆ ಕುಗ್ಗುವಳು ತರಳೆ
ಎಳೆ ಬಾಳೆ ಸುಳಿಗೆ ಬೆಂಕಿ ಝಳವು ಸೋಕಿದಂತೆ.

ಯಾಕಿಲ್ಲ ಯಾಕಿಲ್ಲ ವೆನುತಲಿ
ತನ್ನನ್ನು ತಾನೇ ಸಂಭಾಳಿಸಿ ಕೊಳುತಲಿ
ಸೇದೊ ಬಾವಿಯ ಸಾರುವಳು ಅಭಿಸಾರಿಕೆ.

ಮನಸಿಲ್ಲದ ಮನಸಿನಲಿ
ಆಗಲೂ ಅವಲೋಕನ ಮುಂದುವರಿಸಿ
ಕಂಠಕ್ಕೆ ಸರಕುಣಿಕೆ ಬಿಗಿವಳು
ಬಾವಿಯಲಿ ಇಳಿಬಿಟ್ಟು
ಗುಳು ಗುಳು ತುಂಬಿಸುವಳು ಕೊಡಗಳ.

ಕಲ್ಲು ಕಟ್ಟೆಯ ಪದ್ದಿಗೆ ತುಸುವೆ ಎಡ ಪಾದವ ತೂರಿಸಿ
ಹಾರುತ್ತ, ಹಾರುತ್ತ ಸೆಳೆಯುವಳು ಮೇಲೆ
ನೋಡುವ ಕಣ್ಣಿಗೆ ಹಬ್ಬವನು ತರುವಂತ ಲಾಸ್ಯದಲಿ
ಜಾನಪದ ಲೋಕದ ಐಸಿರಿ; ಕನ್ನಡ ಕುವರಿ.

ತುಂಬಿದ ಕೊಡದಂತ ಹುಡುಗಿ.
ತಲೆಯ ಮೇಲೊಂದು ಎಡದ ನಡುವಲ್ಲೊಂದು ಕೊಡವ
ಬಾಳೆ ಬಾಹುಗಳಲ್ಲಿ ಅವುಕಿ ಹಿಡಿದು
ಭಾರವನು ತೋಲಿಸುತ
ಹೆಜ್ಜೆಯನು ಹಾಕುವಳು ತ್ರಿಭಂಗಿ ಮುದ್ರೆಯಲಿ
ನನ್ನೂರ ಬೆಡಗಿನ ಬಿಡದಿ.

ಸಾಲದು ಎಂಬಂತೆ
ಹುಡುಕಿ ಹುಡುಕಿ ಮುತ್ತಿಟ್ಟ ಆ ತುಂಟ ಸೂರ್ಯ
ಮೂಗುತಿ ಮೇಲೆ ತುಳುಕಿದ ಹನಿಯೊಂದ
ಸುರ ಬಿಲ್ಲು ಮೂಡಿದವು.
ಅಂದಕ್ಕೆ ಮಕುಟವಿಟ್ಟಂತಾಯ್ತು.

ಮರೆಯಲ್ಲಿ ನಿಂತು
ಬಿಡದೆ ಎಲ್ಲವನು ಆಸ್ವಾದ ಮಾಡುತ್ತಿದ್ದ ಪೋರ
ಅಂತರಂಗದ ಚೋರ
ಇದುವೆ ಸಮಯವೆಂದ
ಛಂಗನೆ ಹೊರ ಜಿಗಿದು ಎದುರಿಗೆ ನಡೆದು ಬಂದ.

ಫಕ್ಕನೆ ಮಿನುಗಿದವು ಕಣ್ಣು
ಎದೆಯ ಸೆರಗು ಬೇರೆ ಸರಿದಿತ್ತು
ನಾಚಿ ರಂಗೇರಿ ಮುಖದಿರುವೆ
ತಾರಕದಲಿ ಮಿಡಿಯಿತು ಮಿದು ಹೃದಯದ ವೀಣೆ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...