Home / ಕವನ / ಕವಿತೆ / ನನ್ನೂರ ಬಾಲೆ

ನನ್ನೂರ ಬಾಲೆ

ನನ್ನೂರ ಬಾಲೆ
ರಸ ಕಾವ್ಯ ನವ್ವಾಲೆ
ಸಿಹಿ ನೀರ ತರಲೆಂದು ಅಂಗಳಕ ಇಳಿದಳಂದರೆ…
ಓಣಿಯ ಗಂಡು ಹೆಣ್ಣು ಒಟ್ಟಾಗಿ
ತೇಜಃ ಪುಂಜವು ಕಂಡಂತೆ
ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತ ನಿಲ್ಲುವರು.

ಅವಳೋ… ಕಂಡವರ ಕಣ್ಣುಗಳು ಕೆಟ್ಟದಿದು ಅನ್ನದ ಹಾಗೆ
ಸೂಕ್ಷ್ಮವಾಗಿ ಅತ್ತಿತ್ತ ನೋಡುತ್ತ
ಏನನ್ನೋ ಹುಡುಕುತ್ತ
ತೇಲುತ್ತ ನಡೆಯುವಳು ಚಾಣಾಕ್ಷಿ

ಒಳಗಿರುವ ಜೀವ
ಹೊರಗೆಲ್ಲೂ ಸುಳಿಯದಿರಲು
ಒಂದೆಳೆ ಕುಗ್ಗುವಳು ತರಳೆ
ಎಳೆ ಬಾಳೆ ಸುಳಿಗೆ ಬೆಂಕಿ ಝಳವು ಸೋಕಿದಂತೆ.

ಯಾಕಿಲ್ಲ ಯಾಕಿಲ್ಲ ವೆನುತಲಿ
ತನ್ನನ್ನು ತಾನೇ ಸಂಭಾಳಿಸಿ ಕೊಳುತಲಿ
ಸೇದೊ ಬಾವಿಯ ಸಾರುವಳು ಅಭಿಸಾರಿಕೆ.

ಮನಸಿಲ್ಲದ ಮನಸಿನಲಿ
ಆಗಲೂ ಅವಲೋಕನ ಮುಂದುವರಿಸಿ
ಕಂಠಕ್ಕೆ ಸರಕುಣಿಕೆ ಬಿಗಿವಳು
ಬಾವಿಯಲಿ ಇಳಿಬಿಟ್ಟು
ಗುಳು ಗುಳು ತುಂಬಿಸುವಳು ಕೊಡಗಳ.

ಕಲ್ಲು ಕಟ್ಟೆಯ ಪದ್ದಿಗೆ ತುಸುವೆ ಎಡ ಪಾದವ ತೂರಿಸಿ
ಹಾರುತ್ತ, ಹಾರುತ್ತ ಸೆಳೆಯುವಳು ಮೇಲೆ
ನೋಡುವ ಕಣ್ಣಿಗೆ ಹಬ್ಬವನು ತರುವಂತ ಲಾಸ್ಯದಲಿ
ಜಾನಪದ ಲೋಕದ ಐಸಿರಿ; ಕನ್ನಡ ಕುವರಿ.

ತುಂಬಿದ ಕೊಡದಂತ ಹುಡುಗಿ.
ತಲೆಯ ಮೇಲೊಂದು ಎಡದ ನಡುವಲ್ಲೊಂದು ಕೊಡವ
ಬಾಳೆ ಬಾಹುಗಳಲ್ಲಿ ಅವುಕಿ ಹಿಡಿದು
ಭಾರವನು ತೋಲಿಸುತ
ಹೆಜ್ಜೆಯನು ಹಾಕುವಳು ತ್ರಿಭಂಗಿ ಮುದ್ರೆಯಲಿ
ನನ್ನೂರ ಬೆಡಗಿನ ಬಿಡದಿ.

ಸಾಲದು ಎಂಬಂತೆ
ಹುಡುಕಿ ಹುಡುಕಿ ಮುತ್ತಿಟ್ಟ ಆ ತುಂಟ ಸೂರ್ಯ
ಮೂಗುತಿ ಮೇಲೆ ತುಳುಕಿದ ಹನಿಯೊಂದ
ಸುರ ಬಿಲ್ಲು ಮೂಡಿದವು.
ಅಂದಕ್ಕೆ ಮಕುಟವಿಟ್ಟಂತಾಯ್ತು.

ಮರೆಯಲ್ಲಿ ನಿಂತು
ಬಿಡದೆ ಎಲ್ಲವನು ಆಸ್ವಾದ ಮಾಡುತ್ತಿದ್ದ ಪೋರ
ಅಂತರಂಗದ ಚೋರ
ಇದುವೆ ಸಮಯವೆಂದ
ಛಂಗನೆ ಹೊರ ಜಿಗಿದು ಎದುರಿಗೆ ನಡೆದು ಬಂದ.

ಫಕ್ಕನೆ ಮಿನುಗಿದವು ಕಣ್ಣು
ಎದೆಯ ಸೆರಗು ಬೇರೆ ಸರಿದಿತ್ತು
ನಾಚಿ ರಂಗೇರಿ ಮುಖದಿರುವೆ
ತಾರಕದಲಿ ಮಿಡಿಯಿತು ಮಿದು ಹೃದಯದ ವೀಣೆ
*****

Tagged:

Leave a Reply

Your email address will not be published. Required fields are marked *

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...