Home / ಕವನ / ಕವಿತೆ / ನನ್ನೂರ ಬಾಲೆ

ನನ್ನೂರ ಬಾಲೆ

ನನ್ನೂರ ಬಾಲೆ
ರಸ ಕಾವ್ಯ ನವ್ವಾಲೆ
ಸಿಹಿ ನೀರ ತರಲೆಂದು ಅಂಗಳಕ ಇಳಿದಳಂದರೆ…
ಓಣಿಯ ಗಂಡು ಹೆಣ್ಣು ಒಟ್ಟಾಗಿ
ತೇಜಃ ಪುಂಜವು ಕಂಡಂತೆ
ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತ ನಿಲ್ಲುವರು.

ಅವಳೋ… ಕಂಡವರ ಕಣ್ಣುಗಳು ಕೆಟ್ಟದಿದು ಅನ್ನದ ಹಾಗೆ
ಸೂಕ್ಷ್ಮವಾಗಿ ಅತ್ತಿತ್ತ ನೋಡುತ್ತ
ಏನನ್ನೋ ಹುಡುಕುತ್ತ
ತೇಲುತ್ತ ನಡೆಯುವಳು ಚಾಣಾಕ್ಷಿ

ಒಳಗಿರುವ ಜೀವ
ಹೊರಗೆಲ್ಲೂ ಸುಳಿಯದಿರಲು
ಒಂದೆಳೆ ಕುಗ್ಗುವಳು ತರಳೆ
ಎಳೆ ಬಾಳೆ ಸುಳಿಗೆ ಬೆಂಕಿ ಝಳವು ಸೋಕಿದಂತೆ.

ಯಾಕಿಲ್ಲ ಯಾಕಿಲ್ಲ ವೆನುತಲಿ
ತನ್ನನ್ನು ತಾನೇ ಸಂಭಾಳಿಸಿ ಕೊಳುತಲಿ
ಸೇದೊ ಬಾವಿಯ ಸಾರುವಳು ಅಭಿಸಾರಿಕೆ.

ಮನಸಿಲ್ಲದ ಮನಸಿನಲಿ
ಆಗಲೂ ಅವಲೋಕನ ಮುಂದುವರಿಸಿ
ಕಂಠಕ್ಕೆ ಸರಕುಣಿಕೆ ಬಿಗಿವಳು
ಬಾವಿಯಲಿ ಇಳಿಬಿಟ್ಟು
ಗುಳು ಗುಳು ತುಂಬಿಸುವಳು ಕೊಡಗಳ.

ಕಲ್ಲು ಕಟ್ಟೆಯ ಪದ್ದಿಗೆ ತುಸುವೆ ಎಡ ಪಾದವ ತೂರಿಸಿ
ಹಾರುತ್ತ, ಹಾರುತ್ತ ಸೆಳೆಯುವಳು ಮೇಲೆ
ನೋಡುವ ಕಣ್ಣಿಗೆ ಹಬ್ಬವನು ತರುವಂತ ಲಾಸ್ಯದಲಿ
ಜಾನಪದ ಲೋಕದ ಐಸಿರಿ; ಕನ್ನಡ ಕುವರಿ.

ತುಂಬಿದ ಕೊಡದಂತ ಹುಡುಗಿ.
ತಲೆಯ ಮೇಲೊಂದು ಎಡದ ನಡುವಲ್ಲೊಂದು ಕೊಡವ
ಬಾಳೆ ಬಾಹುಗಳಲ್ಲಿ ಅವುಕಿ ಹಿಡಿದು
ಭಾರವನು ತೋಲಿಸುತ
ಹೆಜ್ಜೆಯನು ಹಾಕುವಳು ತ್ರಿಭಂಗಿ ಮುದ್ರೆಯಲಿ
ನನ್ನೂರ ಬೆಡಗಿನ ಬಿಡದಿ.

ಸಾಲದು ಎಂಬಂತೆ
ಹುಡುಕಿ ಹುಡುಕಿ ಮುತ್ತಿಟ್ಟ ಆ ತುಂಟ ಸೂರ್ಯ
ಮೂಗುತಿ ಮೇಲೆ ತುಳುಕಿದ ಹನಿಯೊಂದ
ಸುರ ಬಿಲ್ಲು ಮೂಡಿದವು.
ಅಂದಕ್ಕೆ ಮಕುಟವಿಟ್ಟಂತಾಯ್ತು.

ಮರೆಯಲ್ಲಿ ನಿಂತು
ಬಿಡದೆ ಎಲ್ಲವನು ಆಸ್ವಾದ ಮಾಡುತ್ತಿದ್ದ ಪೋರ
ಅಂತರಂಗದ ಚೋರ
ಇದುವೆ ಸಮಯವೆಂದ
ಛಂಗನೆ ಹೊರ ಜಿಗಿದು ಎದುರಿಗೆ ನಡೆದು ಬಂದ.

ಫಕ್ಕನೆ ಮಿನುಗಿದವು ಕಣ್ಣು
ಎದೆಯ ಸೆರಗು ಬೇರೆ ಸರಿದಿತ್ತು
ನಾಚಿ ರಂಗೇರಿ ಮುಖದಿರುವೆ
ತಾರಕದಲಿ ಮಿಡಿಯಿತು ಮಿದು ಹೃದಯದ ವೀಣೆ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...