Home / ಕವನ / ಕವಿತೆ / ಹೊಳಲು

ಹೊಳಲು

ಚಂದಿರನು ನಡುಗಗನ ವೊಂದಿರಲು ಮೌಕ್ತಿಕದ
ಅಂದಣವದೆತ್ತಿರಲು ಅಂದವೆನೆ ಪರರೆಲ್ಲ
ಹಿಂದಣಾ ದಿನಕಿಂತ ಸಂಧಿಸಿದ ಈ ರಜನಿ
ಭಾರತದಿ ಬಂತು ಹೊಳಲು

ಚಂದಿರನು ತಂಬೆಳಕ ನಗುವಿಡಲು ಅಪಹಾಸ
ದಂದಣವನೆತ್ತಿರಲು ಲಗುಬಿಗಿಯ ಪರರಾಳು
ಮಂದಿಗಳು ತಿಳಿದೇಳಲಗೊ! ಯೋಗಿ ಕರೆಯುತಿರೆ
ಬಾರೆನುತ ಬಂತು ಹೊಳಲು

ಕೀಳಕೀಳಲಿ ಪುಟ್ಟಿ ಮೇಲೆ ಮೇಲೇರುತಲಿ
ಆಳುತಲಿ ಜನಮನವ ಶೂಲಕೊಡ್ಡುತ ಸುರಿಸಿ
ಬಾಳ ಜೀವನ ಜಲವನಾಲಿಯರಿಯದಲಳಿಯೆ
ಜನರಿಳಿದು ಬಂದ ಹೊಳಲು

ಕಾಳು ಕಡ್ಡಿಯ ತೂರಿ ಮೇಲೆ ಮೇಲರಿಸುತ
ನಾಳಿನಾ ನವಯುಗಕೆ ಮೇಲೆನಿಪ ಬೀಜಗಳ
ಹೂಳುವರು ಬರಲಾಗಿ ಕಾಲ ಬಂದಿದೆಯೆನುತ
ಜನಜನದ ನುಡಿಯ ಹೊಳಲು

ಇದು ವಹ್ನಿಗಿರಿ ಇದುವೆ ಮಳೆವಹ್ನಿ ಹೊಳೆವಹ್ನಿ!
ಇದುವುಕ್ಕಿ ಧರೆಯೆಲ್ಲ ತಳಮಳಿಸಿ ನಡುಗುತಿದೆ
ಅದೊ! ಸೊಕ್ಕಿದಾಭಾವ! ತಳಹದಿಯು ಕುಸಿಬಿತ್ತು!
ಮರಳುತಿಹ ಯುಗದ ಹೊಳಲು

ಇದು ಸಿಡಿಲು ಕಾರ್ಮೋಡ ಪ್ರಳಯ ಜಲಧಾರೆಯಿವು
ಇದು ಝರಿಯ ಜಲಧಾರೆ ಇಳೆಗಿಳಿವ ದೇವನದಿ!
ಅದೋ! ವಹ್ನಿ ಕಬ್ಬೊಗೆಯು ಅಳಿದನಿವು ಸಿಡಿದವವು
ಚರಕದರೆ ತಿರುಗೆ! ಹೊಳಲು

ವಿಷಘಳಿಗೆ ಪರಜನಕೆ ಮಧುಯೋಗ ಭಾರತಕೆ
ಹಸಿದು ಶಂಕರಿ ನಿಲ್ಲಲದು ಪ್ರಲಯ ಪರಜನಕೆ
ಬಸಿಯಲೆಂಧಕ ರುಧಿರವದುನೆಲಕೆ ಶ್ರೀ ಶಾಂತಿ
ಎನುತೆನುವ ನರರ ಹೊಳಲು

ಹಸುಳೆಯಂದದಿ ನಕ್ಕು ಮಧುರ ಭಾವವ ಬೀರಿ
ಹೊಸತೆರನ ಜಿಹ್ವೆಯಲಿ ಸುಧೆಯ ಜಾಹ್ನವಿಯುದಿಸೆ
ಹೊಸಯುಗದ ಗಂಧವಹನಿದೊ ಗಾಂಧಿ ಏಳುತಿಹ
ಎನುತೆನುವ ನಾಡ! ಹೊಳಲು

ಅಲ್ಲೋಲ ಕಲ್ಲೋಲ ಉದಧಿಗಳು ಎಚ್ಚೆತ್ತು!
ಎಲ್ಲೆಲ್ಲು ಸಲ್ಲಾಪ ಕುದಿವ ಮನದಾಶಯದ
ಹೊಲ್ಲೆ ಹದ ಸುಳಿವಿರದ! ಮಧುಯುಗವು ಮರಳುತಿರೆ
ಉಲ್ಲಾಸದೊರೆಯ ಹೊಳಲು
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...