ಅಲ್ಲಿ ಮಲ್ಲಿಗೆಯ ಮುಗುಳುನಗೆ
ಮುಗ್ಧತೆಯ ನೋಟ
ಕಣ್ಣುಗಳಲ್ಲಿ ಸಂಜೆಯ ರಾಗರತಿ
ತುಟಿಯಂಚಿನಲಿ ಮಾಯವಾಗದ
ಲಾಸ್ಯ-ಪರಿಭಾಷೆ ಬೇಕಿಲ್ಲ
ಯೌವನದ ಕೋಟೆ ಆಳುತಿಹಳು
ತರುಣಿ,
ಮತ್ತವಳು ಮುಗುದೆ
ಭಾವಲಯದ ಹಯವೇರಿ
ಹದವರಿತು ನಡೆದಿಹಳು
ಅಹಮಿಕೆಯು ಎನಿತಿಲ್ಲ
ಕುಸುಮ ನಯನೆ.
ಅರಿತಷ್ಟು ಆಳ
ನುಡಿದಷ್ಟು ಭಾಷ್ಯ
ಬೊಗಸೆ ತುಂಬುವ ವದನ
ಪಿಕ ಕಂಠ ಭಾಗ್ಯೆ,
ಮೆಚ್ಚದವರಿಲ್ಲ ಮೋಹನಾಂಗಿಯ
ಮಧುರ ನಡೆಯು,
ಹದಿವಯಸ್ಸು ಹಸುಮನಸು
ಹುಸಿಯಿರದ ನುಡಿಯು
ಹಂಗಿನಲಿ ಹಳಹಳಿಕೆ
ಇಂಗಡದ ಗುಡಿ ಬಯಕೆ
ಸ್ವಾಭಿಮಾನವೇ ಗತ್ತು
ಅದೇ ಅವಳ ಸ್ವತ್ತು
*****
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು: ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮ ಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯ ದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.