Home / ಕವನ / ಕವಿತೆ / ಸುಳಿ

ಸುಳಿ

ನಾ ತಿಳಿಯದ್ದೆ ಶಿವಮೊಗ್ಗೆಯ ಈ ಹೊಳೆ?
ನನ್ನ ಕೌಮಾರ್‍ಯ ಕಂಠ ಒಡೆದದ್ದೆ ಇವಳ ತೊಡೆಮೇಲೆ.
ಇವಳ ಹೊಳೆಮೈಯನ್ನು ಸೆಳೆದು
ಆಳಗಳಲ್ಲಿ ಇಳಿದು
ಸೆಳವುಗಳಲ್ಲಿ ಬೇರಲುಗಿ ಕೊಚ್ಚಿ ಹೋಗಿದ್ದೇನೆ;
ಸಕ್ಕರೆ ದಂಡೆಗಳಲ್ಲಿ ಅಕ್ಕರೆಯುಕ್ಕಿ ಮಲಗಿ
ಬಿಳಲು ಬಿಟ್ಟಿದ್ದೇನೆ ಪ್ರೀತಿಗೆ,
ಇವಳ ಮೀನುಮೈಯ ಜುಳು ಜುಳು ತಂಪಿನಲ್ಲಿ
ಕೊಳಲು ನುಡಿಸಿದ್ದೇನೆ ಬದುಕಿಗೆ,
ವಾರಾನ್ನಕ್ಕೆ ಬೆಳೆದು ಕೊಯಿಲಾಗಿ, ಕೊಯಿಲಾದರೂ ಉಯಿಲಾಗಿ,
ಉಯಿಲಾದರೂ ಬಯಲಾಗದೆ ಉಳಿದಿದ್ದೇನೆ ಇವಳ ಗೂಢಕ್ಕೆ.
ಇಷ್ಟೆಲ್ಲ ಕೊಟ್ಟು ಪಡೆದು
ನಾ ತಿಳಿಯದ್ದೆ ಶಿವಮೊಗ್ಗೆಯ ಈ ಹೊಳೆ
ಹೆತ್ತ ಜಾಗಕ್ಕೆ ನನ್ನ ನಿಲಿಸಿ ಹೊಡೆದ ಮೊಳೆ?

ಸಾಕಿದ ಬೆಕ್ಕಂಥ ಸಲಿಗೆ ಹೊಳೆ ಹಠಾತ್ತಾನೆ
ಸೊಕ್ಕು ತಿರುಗಿ ತಿಪ್ಪರಲಾಗ ಹಾಕಿಸಬರುವುದೆ?
ನಡುನೀರಿನಲ್ಲಿ ಈಜುತ್ತಿರುವಾಗ ಮೊನ್ನೆ
ಗಳಿಗೆಬಟ್ಟಲು ಸರಸರ ಸರಿದು ಬಂದಂತೆ
ಫಕ್ಕನೆ ದೊಡ್ಡ ಸುಳಿ-
ಮೊಳೆಕಾಲಿನಿಂದ ಮರತಲೆಯವರೆಗೆ
ಬಳೆ ಬಳೆ ಮೇಲಕ್ಕೆ ಬೆಳೆದು
ಗರಗರ ತಿರುಗುವ ಬಗುರಿಯನ್ನ
ನೀರಲ್ಲಿ ಕೊರೆದು ತೆಗೆದಿರುವ ಥರ.
ನಾನೋ ಸಾವು ಕಂಡಂತೆ ಚೀರಿ
ಸತ್ತೆನೋ ಎಂದು ಆಕಾಶದುದ್ದ ಒದರಿ-
ಅರೆ ಇದೇನು!
ಎಳೆಯುತ್ತಿರುವುದು ಹೊಳೆಸುಳಿಯಲ್ಲ ಹಾವು!
ಹಾವಲ್ಲ ಹಗೆ,
ಹಗೆಯಲ್ಲ ಮುಕ್ಕಿ ಮುತ್ತಿಟ್ಟದ್ದ ಪರಿಚಿತ ನಗೆ!
ಅಲೆ‌ಅಲೆಯಾಗಿ ಬೀಸಿ ಬರುವ
ರಾಡಿ ರಾಡಿ ರಾವಣಧಗೆ.
ಕಂಡ ಹೊಳೆಯ ಹೊಟ್ಟೆಯಿಂದ
ಕಾಣದ ಪಾತಾಳಗಳೆದ್ದು
ಎಲಾ! ಯಾರಿದು ಸುತ್ತ?
ಈ ಇವಳು, ಹೆತ್ತ ಕರುಳು,
ಎಂದೋ ಗತಿಸಿದ್ದ ಜುಟ್ಟು ಬಿಟ್ಟ ತಂದೆಯ ನೆರಳು,
ಕತ್ತು ಹಿಸುಕ ಬರುತ್ತಿರುವ ವಾರದ ಹುಡುಗನ ಹತ್ತೂ ಬೆರಳು!
ಬೆವರಿದೆ, ಯಮಸಾಹಸ ಎದ್ದು,
ನಾಲಿಗೆ ಕತ್ತಿ ಹಿರಿದು,
ಎತ್ತಿ ಎತ್ತಿ ಬೀಸಿದೆ.
ನೆತ್ತಿ ಬಿರಿದು ಫಕಫಕನೆ ನಗುತ್ತ,
ವಿಕಾರ ಕೇಕೆ ಕೂಗುತ್ತ,
ಸೀಳಿಬಿತ್ತು ಸೊಕ್ಕಿ ಬೆಳೆದಿದ್ದ ಮೂರೂ ದೇಹ.
ನಿಧಾನ ಮೇಲೆದ್ದು ನಡೆದ ಅದರೊಳಗಿಂದ
ಚಿಕ್ಕಂದು ನನ್ನ ಸಾಕಿದ್ದ
ದಟ್ಟ ವಿಭೂತಿ ಪಟ್ಟೆಗಳ
ಉಗ್ಗ ದುಗ್ಗಾಭಟ್ಟ
ಮರೆತೊಟ್ಟು ಸಾಧಿಸಬಂದಿದ್ದ ಬಲು ಹಳೆಯ ವೈರ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...