ಸುಳಿ

ನಾ ತಿಳಿಯದ್ದೆ ಶಿವಮೊಗ್ಗೆಯ ಈ ಹೊಳೆ?
ನನ್ನ ಕೌಮಾರ್‍ಯ ಕಂಠ ಒಡೆದದ್ದೆ ಇವಳ ತೊಡೆಮೇಲೆ.
ಇವಳ ಹೊಳೆಮೈಯನ್ನು ಸೆಳೆದು
ಆಳಗಳಲ್ಲಿ ಇಳಿದು
ಸೆಳವುಗಳಲ್ಲಿ ಬೇರಲುಗಿ ಕೊಚ್ಚಿ ಹೋಗಿದ್ದೇನೆ;
ಸಕ್ಕರೆ ದಂಡೆಗಳಲ್ಲಿ ಅಕ್ಕರೆಯುಕ್ಕಿ ಮಲಗಿ
ಬಿಳಲು ಬಿಟ್ಟಿದ್ದೇನೆ ಪ್ರೀತಿಗೆ,
ಇವಳ ಮೀನುಮೈಯ ಜುಳು ಜುಳು ತಂಪಿನಲ್ಲಿ
ಕೊಳಲು ನುಡಿಸಿದ್ದೇನೆ ಬದುಕಿಗೆ,
ವಾರಾನ್ನಕ್ಕೆ ಬೆಳೆದು ಕೊಯಿಲಾಗಿ, ಕೊಯಿಲಾದರೂ ಉಯಿಲಾಗಿ,
ಉಯಿಲಾದರೂ ಬಯಲಾಗದೆ ಉಳಿದಿದ್ದೇನೆ ಇವಳ ಗೂಢಕ್ಕೆ.
ಇಷ್ಟೆಲ್ಲ ಕೊಟ್ಟು ಪಡೆದು
ನಾ ತಿಳಿಯದ್ದೆ ಶಿವಮೊಗ್ಗೆಯ ಈ ಹೊಳೆ
ಹೆತ್ತ ಜಾಗಕ್ಕೆ ನನ್ನ ನಿಲಿಸಿ ಹೊಡೆದ ಮೊಳೆ?

ಸಾಕಿದ ಬೆಕ್ಕಂಥ ಸಲಿಗೆ ಹೊಳೆ ಹಠಾತ್ತಾನೆ
ಸೊಕ್ಕು ತಿರುಗಿ ತಿಪ್ಪರಲಾಗ ಹಾಕಿಸಬರುವುದೆ?
ನಡುನೀರಿನಲ್ಲಿ ಈಜುತ್ತಿರುವಾಗ ಮೊನ್ನೆ
ಗಳಿಗೆಬಟ್ಟಲು ಸರಸರ ಸರಿದು ಬಂದಂತೆ
ಫಕ್ಕನೆ ದೊಡ್ಡ ಸುಳಿ-
ಮೊಳೆಕಾಲಿನಿಂದ ಮರತಲೆಯವರೆಗೆ
ಬಳೆ ಬಳೆ ಮೇಲಕ್ಕೆ ಬೆಳೆದು
ಗರಗರ ತಿರುಗುವ ಬಗುರಿಯನ್ನ
ನೀರಲ್ಲಿ ಕೊರೆದು ತೆಗೆದಿರುವ ಥರ.
ನಾನೋ ಸಾವು ಕಂಡಂತೆ ಚೀರಿ
ಸತ್ತೆನೋ ಎಂದು ಆಕಾಶದುದ್ದ ಒದರಿ-
ಅರೆ ಇದೇನು!
ಎಳೆಯುತ್ತಿರುವುದು ಹೊಳೆಸುಳಿಯಲ್ಲ ಹಾವು!
ಹಾವಲ್ಲ ಹಗೆ,
ಹಗೆಯಲ್ಲ ಮುಕ್ಕಿ ಮುತ್ತಿಟ್ಟದ್ದ ಪರಿಚಿತ ನಗೆ!
ಅಲೆ‌ಅಲೆಯಾಗಿ ಬೀಸಿ ಬರುವ
ರಾಡಿ ರಾಡಿ ರಾವಣಧಗೆ.
ಕಂಡ ಹೊಳೆಯ ಹೊಟ್ಟೆಯಿಂದ
ಕಾಣದ ಪಾತಾಳಗಳೆದ್ದು
ಎಲಾ! ಯಾರಿದು ಸುತ್ತ?
ಈ ಇವಳು, ಹೆತ್ತ ಕರುಳು,
ಎಂದೋ ಗತಿಸಿದ್ದ ಜುಟ್ಟು ಬಿಟ್ಟ ತಂದೆಯ ನೆರಳು,
ಕತ್ತು ಹಿಸುಕ ಬರುತ್ತಿರುವ ವಾರದ ಹುಡುಗನ ಹತ್ತೂ ಬೆರಳು!
ಬೆವರಿದೆ, ಯಮಸಾಹಸ ಎದ್ದು,
ನಾಲಿಗೆ ಕತ್ತಿ ಹಿರಿದು,
ಎತ್ತಿ ಎತ್ತಿ ಬೀಸಿದೆ.
ನೆತ್ತಿ ಬಿರಿದು ಫಕಫಕನೆ ನಗುತ್ತ,
ವಿಕಾರ ಕೇಕೆ ಕೂಗುತ್ತ,
ಸೀಳಿಬಿತ್ತು ಸೊಕ್ಕಿ ಬೆಳೆದಿದ್ದ ಮೂರೂ ದೇಹ.
ನಿಧಾನ ಮೇಲೆದ್ದು ನಡೆದ ಅದರೊಳಗಿಂದ
ಚಿಕ್ಕಂದು ನನ್ನ ಸಾಕಿದ್ದ
ದಟ್ಟ ವಿಭೂತಿ ಪಟ್ಟೆಗಳ
ಉಗ್ಗ ದುಗ್ಗಾಭಟ್ಟ
ಮರೆತೊಟ್ಟು ಸಾಧಿಸಬಂದಿದ್ದ ಬಲು ಹಳೆಯ ವೈರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಗು
Next post ಶೂನ್ಯ ರಮೆಯೊ ಜೊನ್ನ ಉಮೆಯೊ

ಸಣ್ಣ ಕತೆ

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

cheap jordans|wholesale air max|wholesale jordans|wholesale jewelry|wholesale jerseys