Home / ಕಥೆ / ಕಿರು ಕಥೆ / ಸಿದ್ಧಾಂತ

ಸಿದ್ಧಾಂತ

ಉಗ್ರಪ್ಪ ನಾಲ್ಕನೆಯ ಬಾರಿ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಸಾಧಿಸಿದ್ದ. ಅಭಿಮಾನಿಗಳು ಅತ್ಯಂತ ವೈಭವದಿಂದ ಅವನ ವಿಜಯೋತ್ಸವ ಆಚರಿಸಿದರು. ತೆರೆದ ವಾಹನದಲ್ಲಿ ಊರ ತುಂಬ ಮೆರೆಸಿದರು.

ಗೆಲುವಿನಿಂದ ಬೀಗಿಕೊಂಡಿದ್ದ ಉಗ್ರಪ್ಪನ ಬಳಿಗೆ ಬಂದ ಪತ್ರಕರ್ತನೊಬ್ಬ “ನೀವು ಕೂದಲೆಳೆಯಲ್ಲಿ ಸೋಲು ತಪ್ಪಸಿಕೊಂಡಿರಿ” ಎಂದ.

“ನಾನು ಸೋಲಿಲ್ಲದ ಸರದಾರ” ಅತ್ಯುತ್ಸಾಹದಿಂದ ಉದ್ಗರಿಸಿದ ಉಗ್ರಪ್ಪ.

“ನಿಮ್ಮ ಅಧಿಕಾರದ ಅವಧಿಗಳಲ್ಲಿ ಮತಕ್ಷೇತ್ರದ ಎಲ್ಲ ರಸ್ತೆಗಳನ್ನು ರಾಜಮಾರ್ಗಗಳನ್ನಾಗಿ ರೂಪಿಸುತ್ತೇನೆ ಎಂದಿದ್ದೀರಿ” ಪರ್ತಕರ್ತ ಹೇಳಿದ.

“ಹೌದು” ಚುಟುಕಾಗಿ ಉಲಿದ ಉಗ್ರಪ್ಪ.

“ಉದ್ದಿಮೆ ಸ್ಥಾಪಿಸಿ ನಿರುದ್ಯೋಗಿ ಯುವಕರಿಗೆ ಭವಿಷ್ಯ ನೀಡುತ್ತೇನೆಂದು ಪ್ರಮಾಣ ಮಾಡಿದ್ದೀರಿ”.

“ಅದು ನಿಜ”

“ರೈತರಿಗೆ ಉಚಿತ ವಿದ್ಯುತ್, ಪಂಪ್‌ಸೆಟ್ಟು, ಬೀಜ, ಗೊಬ್ಬರ ಪೂರೈಸಿ ಅನ್ನದಾತರನ್ನು ಬದುಕಿಸುತ್ತೇನೆ ಎಂದು ಘೋಷಿಸಿದ್ದೀರಿ”.

“ಹೌದು”.

“ಕುಡಿಯುವ ನೀರಿಗೆ ತೊಂದರೆ ಬಾರದಂತೆ ನೋಡಿಕೊಳ್ಳುತ್ತೇನೆ. ಹಸಿವಿನ ಸಂಕಟದಿಂದ ಜನರು ಸಾಯದಂತೆ ಎಚ್ಚರಿಕೆ ವಹಿಸುತ್ತೇನೆ. ನೂರಕ್ಕೆ ನೂರರಷ್ಟು ಜನರನ್ನು ಸಾಕ್ಷರರನ್ನಾಗಿಸಲು ಹೋರಾಡುತ್ತೇನೆ. ರೋಗ-ರುಜಿನಗಳಿಂದ ಜನರು ಸತ್ತು ಹೋಗದಂತೆ ಅಮೃತ ಕುಡಿಸುತ್ತೇನೆ ಎಂದು ನೂರಾರು ಸಭೆಗಳಲ್ಲಿ ಹೇಳುತ್ತಿದ್ದಿರಿ.”

“ಹೌದು… ಹೌದು… ಹೌದು.”

“ಆದರೆ ನೀವು ಏನನ್ನೂ ಮಾಡಲಿಲ್ಲ” ವಿಷಾದ ವ್ಯಕ್ತಪಡಿಸಿದ ಪತ್ರಕರ್ತ.

“ನನ್ನ ಗೆಲುವಿಗೆ ಅದೇ ಆಧಾರವಲ್ಲವೆ?” ನಗುತ್ತ ಕೇಳಿದ ಉಗ್ರಪ್ಪ.

ಅವನ ಪ್ರಶ್ನೆಗೆ ದಿಗಿಲುಗೊಂಡ ಪತ್ರಕರ್ತ ತುಸು ಏರುಧ್ವನಿಯಲ್ಲಿ ಹೇಳಿದ “ನೀವು ರಾಜಕಾರಣಿಗಳು ಬರಿ ಸುಳ್ಳು ಹೇಳುತ್ತೀರಿ. ಭರವಸೆಯ ಗಾಳಿ ಊದಿ ಜನರನ್ನು ರಬ್ಬರಿನ ಬಲೂನ್ ಆಗಿಸುತ್ತೀರಿ.”

“ಎಷ್ಟೇ ಆಗಲಿ ನೀವೂ ಪತ್ರಕರ್ತರು. ರಾಜಕಾರಣದ ಸಿದ್ಧಾಂತವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದೀರಿ” ಹ್ಹ ಹ್ಹ ಹ್ಹ…. ಎಂದು ಹಗುರಾಗಿ ನಕ್ಕ ಉಗ್ರಪ್ಪ. ಆ ಲಜ್ಜೆಗೇಡಿ ನಗೆ ಕಂಡು ಕೋಪಿಸಿಕೊಂಡ ಪತ್ರಕರ್ತ “ಇಂಥ ರಾಜಕಾರಣದಿಂದ ದೇಶಕ್ಕೇನು ಲಾಭ?” ಎಂದು ವ್ಯಂಗ್ಯದ ಬಾಣ ಎಸೆದ.

“ದೇಶಕ್ಕೇನೋ ಗೊತ್ತಿಲ್ಲ. ನನಗಂತೂ ಇದೆ. ನನ್ನ ನಂಬಿಕೊಂಡವರಿಗೂ ಅನುಕೂಲವಿದೆ” ಯಾವ ಮುಜುಗರವಿಲ್ಲದೆ ಹೇಳಿದ ಉಗ್ರಪ್ಪ.

“ಒಂದಿಲ್ಲ ಒಂದಿನ ಜನ ನಿಮ್ಮ ಸ್ವಾರ್ಥದ ಎದುರು ನಿಂತರೆ?”

“ಬಲೂನಿಗೆ ಗಾಳಿ ತುಂಬುವುದರಲ್ಲಿ ನಾನು ಚಾಣಾಕ್ಷ. ಹಾಗೆಯೇ ಉಬ್ಬಿದ ಬಲೂನುಗಳ ಗಾಳಿ ತೆಗೆಯುವ ತಂತ್ರದಲ್ಲಿ ನಾನು ಎಕ್ಸ್‌ಪರ್ಟು ಮಾರಾಯರೆ!” ಆತ್ಮವಿಶ್ವಾಸ ವ್ಯಕ್ತಪಡಿಸಿದ ಉಗ್ರಪ್ಪ.

ಪತ್ರಕರ್ತ ತುಟಿ ಹೊಲಿದುಕೊಂಡಂತೆ ಕುಳಿತ.

*****

 

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...