ಜನ ಮೆಚ್ಚಿದ ಶಿಕ್ಷಕ

ಕಾರ್ಯಾಲಯದಲ್ಲಿ ಶಿಕ್ಷಣಾಧಿಕಾರಿಗಳು ಕಡತ ನೋಡುವಲ್ಲಿ ಮಗ್ನರಾಗಿದ್ದರು. ಹೊರಗೆ ಕೂಗಾಟ ಕೇಳಿಸಿತು. “ಧಿಕ್ಕಾರ…. ಧಿಕ್ಕಾರ…. ಹಲ್ಕಾ ಶಿಕ್ಷಕನಿಗೆ ಧಿಕ್ಕಾರ.” ಧ್ವನಿ ಜೋರಾಗಿತ್ತು. ಸಾಹೇಬರು ಎದ್ದು ಹೊರಗೆ ಬಂದರು. ಆವರಣದ ತುಂಬ ಜನ. ಸಾಹೇಬರನ್ನು ಮತ್ತು ಅವರ ಹಿಂದೆ ಬಂದ ಸಿಬ್ಬಂದಿಯನ್ನು ಕಂಡು ಜನರ ಕೂಗು ಇನ್ನೂ ಮುಗಿಲಿಗೇರಿತ್ತು.

ಬಂದವರೆಲ್ಲ ಗ್ರಾಮಸ್ಥರು, ಅವರಲ್ಲಿ ಕೆಲವರನ್ನು ಗುರುತಿಸಿದ ಸಾಹೇಬರು “ಏನ್ರಿ ಗೌಡರೆ ಇದೆಲ್ಲ?” ಎಂದು ಕೇಳಿದರು. ಹಳ್ಳಿಯ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾಗಿದ್ದ ಅವರು ಮತ್ತು ಉಳಿದ ಸದಸ್ಯರು ಮುಂದೆ ಬಂದರು. “ನಮ್ಮೂರಿನ ಸಾಲಿಗೆ ಆ ಬೆಂಕಿಮಠ ಮಾಸ್ತರ ಬ್ಯಾಡ ಸಾಹೇಬರ” ಗೌಡರು ಪ್ರತಿಭಟನೆಯ ಧ್ವನಿಯಲ್ಲಿ ಹೇಳಿದರು. ಪರಿಸ್ಥಿತಿ ಗಂಭೀರವಾಗಿದೆಯೆಂದು ಸೂಕ್ಷ್ಮವಾಗಿ ಗ್ರಹಿಸಿಕೊಂಡ ಸಾಹೇಬರು ಅವರನ್ನು ಒಳಗೆ ಕರೆದುಕೊಂಡು ಹೋದರು.

ಕುಳಿತುಕೊಳ್ಳುತ್ತಿದ್ದಂತೆ ಗೌಡರು “ಸಾಹೇಬರ ಈಗಿಂದೀಗ ಆ ಹಲ್ಕಾ ಮಾಸ್ತರನನ್ನ ಟ್ರಾನ್ಸ್‌ಫರ್‍ ಮಾಡ್ರಿ. ನಮ್ಮ ಸಾಲಿಗೆ ಬ್ಯಾರೆ ಮಾಸ್ತರನ್ನ ಕೊಡ್ರಿ” ಎಂದು ತೀವ್ರವಾಗಿ ಒತ್ತಾಯಿಸಿದರು. ಈಗವರು ಬೇಡವೆನ್ನುತ್ತಿರುವ ಶಿಕ್ಷಕರಿಗೆ ಇದೇ ಗೌಡರು ಕಳೆದ ವರ್ಷ `ಜನ ಮೆಚ್ಚಿದ ಶಿಕ್ಷಕ’ ಪ್ರಶಸ್ತಿ ಕೊಡಿಸಿಕೊಂಡು ಮೆರವಣಿಗೆ ಹೋಗಿದ್ದರ ದೃಶ್ಯ ಕಣ್ಮುಂದೆ ತೇಲಿ ಹೋಯಿತು. ಈಗವರೇ ಮೆರವಣಿಗೆಯಲ್ಲಿ ಬಂದು ಅವನ ಬಗ್ಗೆ ಧಿಕ್ಕಾರ ಹೇಳುತ್ತಿರುವುದು ಸೋಜಿಗವೆನಿಸಿ “ಏನ್ರಿ ಗೌಡ್ರೆ ಹಕೀಕತ್ತು?” ಎಂದು ಪ್ರಶ್ನಿಸಿದರು.

“ಅಂವಾ ಮಾಸ್ತರ ಆಗಾಕ ಅಯೋಗ್ಯದಾನ ಸಹೇಬರ” ಎಂದು ಬೆಂಕಿಮಠನ ಬಗ್ಗೆ ವಿವರ ನೀಡಿದರು ಗೌಡರು. ಶಾಲೆಗೆ ಗೈರು ಆಗುವುದು, ಶಿಕ್ಷಕಿಯೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವುದು. ಪುಸ್ತಕ ಮಾರಿಕೊಳ್ಳುವುದು, ಶಾಲೆಯಲ್ಲಿ ವಾಸ್ತವ್ಯ ಹೂಡಿ ಇಸ್ಪೀಟ್ ಆಡುವುದು, ಕುಡಿಯುವುದು, ತಿನ್ನುವುದು, ಎಂಟು ದಿನಗಳ ಹಿಂದೆ ಏಳನೆಯ ತರಗತಿಯ ಹುಡುಗಿಯೊಬ್ಬಳ ಮೇಲೆ ಬಲಾತ್ಕರಿಸಲು ಯತ್ನಿಸಿದ್ದರ ಬಗ್ಗೆ ಹೇಳಿ “ಆ ನಾಲಾಯಕ ಮಾಸ್ತರ ನಮ್ಮ ಕೈಯಾಗ ಸಿಗಲಿಲ್ಲ. ಇಷ್ಟು ದಿನಾತು ಅವನ ಪತ್ತಾನೂ ಇಲ್ಲ. ಅಂವಾ ಶಿಕ್ಷಣ ಇಲಾಕೆಯಾಗ ಇರ್ಲಿಕ್ಕೆ ಅಯೋಗ್ಯ ಅದಾನ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಗೌಡರೆ, ಕಳೆದ ವರ್ಷ ಆ ಶಿಕ್ಷಕ ಛಲೋ ಸಜ್ಜನ ಮನುಷ್ಯ ಅದಾನ, ನೀವು ಅವನಿಗೆ ಪ್ರಶಸ್ತಿ ಕೊಡದಿದ್ರ ಇಲಾಖೆ ಎದುರು ಉಪವಾಸ ಕುಂದ್ರಿತೀನಿ ಅಂದ್ರಿ. ರಾಜಕೀಯ ಮಂದಿಯ ಒತ್ತಡ ತಂದ್ರಿ. ಅವನ ವರ್ತನೆ ನಿಮ್ಮ ಗಮನಕ್ಕೆ ಬಂದಿದ್ದಲೇನ್ರಿ?” ಸಾಹೇಬರು ಕೇಳಿದರು.

“ಹುತ್ತಿನ್ಯಾಗಿಂದ ಹೊರಗ ಬಂದಾಗ ಗೊತ್ತಾಗೊದಲ್ರಿ ಯಾವ ಹಾವು ಅಂತ!”

ಗೌಡರ ಮಾತು ಕೇಳುತ್ತಲೇ ಸಂಬಂಧಿಸಿದ ಕಾರಕೂನರನ್ನು ಕರೆಯಿಸಿದ ಸಾಹೇಬರು “ಈಗಿಂದೀಗ ಆ ಬೆಂಕಿಮಠ ಶಿಕ್ಷಕರನ್ನ ಸಸ್ಪೆಂಡ್ ಮಾಡಿದ ಕಾಗದ ಟೈಪ್ ಮಾಡಿಸ್ಗಂಡು ಬರ್‍ರಿ” ಎಂದರು.

“ಸಸ್ಪೆಂಡ್ ಮಾಡಿದ್ರ ಮತ್ತ ಆ ಮಾಸ್ತರಗ ಬಲ ಹೆಚ್ಚಿಗ ಬರ್ತೈತಿ ಸಾಹೇಬರ. ದೊಡ್ಡ ದೊಡ್ಡವರ ಕೈಗಳು ಸಸ್ಪೆಂಡ್ ಆದವರನ್ನು ಉಳಿಸಿಕೊಳ್ಳಾಕ ನೋಡ್ತಾವು. ಆ ಮಾಸ್ತರನ ಡಿಸ್ಮಿಸ್ ಮಾಡಬೇಕು. ಒಂದು ಹುಳಾ ನೂರು ಹುಳಾನ್ನ ಹುಟ್ಟುಸ್ತಾವು!” ಗೌಡರು ಒತ್ತಾಯಿಸಿದರು.

“ಗೌಡರೆ ನನ್ನ ಅಧಿಕಾರದ ಮಿತಿಯಾಗ ನಾನು ಕೆಲಸ ಮಾಡಬೇಕು. ನೀವು ಅದರ ಬಗ್ಗೆ ಕಾಗದ ಕೊಡ್ರಿ. ನಾನು ಮೇಲಿನ ಸಾಹೇಬರಿಗೆ ಕಳಿಸ್ತೀನಿ” ಹೀಗೆ ಹೇಳಿ ಕುಳಿತರು ಸಾಹೇಬರು.

ಹೊರಗೆ ಬೆಂಕಿಮಠ ಮಾಸ್ತರನ ವಿರುದ್ಧದ ಕೂಗು ಕೇಳಿಸುತ್ತಲೇ ಇತ್ತು.

*****

 

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆ ರಾತ್ರೆಯ ಮೊರೆತ
Next post ಸಿದ್ಧಾಂತ

ಸಣ್ಣ ಕತೆ

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

cheap jordans|wholesale air max|wholesale jordans|wholesale jewelry|wholesale jerseys