ಊರ್ಮಿಳೆ

ಕರೆದರೂ ತಿರುಗದೆ
ಜಿಗಿದು ಓಡಿದಳಲ್ಲ,
ಯಾರಿವಳು ಎರಳೆಮರಿ ಎಂದಿರೆ?
ಇವಳೆ ಊರ್ಮಿಳೆ, ತುಂಬುಜಂಬುನೇರಳೆ
ನಮ್ಮ ಮಲೆನಾಡ ಸಿಹಿಪೇರಲೆ.
ನನಗು ಇವಳಿಗು ಸ್ನೇಹ ತೀರ ಈಚೆಗೆ ಎನ್ನಿ
ನನ್ನ ಕಂಡರೆ ನಾಚಿಕೆ,
ಪ್ರೀತಿಯಲಿ ಬಾ ಎಂದು ರಮಿಸಿದರೆ ನಿಲ್ಲುವಳು
ನಾಲ್ಕಾರು ಮಾರಾಚೆಗೆ –
ಮತ್ತೊಮ್ಮೆ ಕರೆದಾನೆ ಎಂಬಾಸೆ ಮಿನುಗುವುದು
ಕಣ್ಣ ತಿಳಿತೆರೆಯಾಚೆಗೆ.
ನಮ್ಮ ನಡುವಿನ ಇಂಥ ಅಂತರಕೆ ನಾನಿಟ್ಟೆ
ಚಾಕಲೇಟಿನ ಸೇತುವೆ!

ಪುಟ್ಟ ಕಣ್ದೊಟ್ಟಿಲಲಿ
ಮಿಂಚರಸದಲಿ ನೆನೆದ ಎರಡು ಕರಿಗೋಲಿ,
ಬಾನು ಕಡಲರಿಯದದರಾಳದಲಿ ಬ್ರಹ್ಮಾಂಡ
ಹೊಡೆಯುವುದು ಜೋಲಿ,
ತುಟಿ ತೆರೆದರಿವಳು-
ಬಾನು ಬುವಿಯನು ತಬ್ಬಿ
ಹಗಲು ಇರುಳನು ದಬ್ಬಿ
ಮರಮರದಿ ಹಾಡುವುವು ಹಕ್ಕಿ ಕೊರಳುಬ್ಬಿ;
ಹೂ ಸುರಿದು ಹಣ್ ಬಿರಿದು
ದಡದಡನೆ ಹೊಳೆ ಹರಿದು
ಇಳೆಗೆ ಮಳೆ ತುಳುಕುವುದು ಹೂಬಿಸಿಲು ಹಬ್ಬಿ!

ಕಿಲಕಿಲನೆ ನಕ್ಕಳೆಂದರೆ ಇವಳು
ಜಡಕು ಕಚಗುಳಿಯನಿಟ್ಟಂತೆ,
ಹರಿದ ಕರಿಮುಗಿಲಲ್ಲಿ ಮಲಗಿರುವ ಬಾನಿಗೆ
ಹುಣ್ಣಿಮೆಯ ಹಾಲು ಹರಿದಂತೆ,
ಕರಿಯ ಕಿರುಜಡೆ ಬೆಣ್ಣೆಗನ್ನೆ ಮೇಲಿಳಿದಿರಲು
ಮಿಂಚು ಮುಗಿಲಾಟದಂತೆ,
ಹೂಗಾಲನಿಟ್ಟು ಜಿಗಿದರೆ ಅದರ ಸ್ಪರ್ಶಕೇ
ಪುಳಕ ನೆಲಕೆ!

ತುಂಬುಕಿತ್ತಲೆಗೆನ್ನೆ ಮಿಂಚುಗಣ್ಣಿನ ಹುಡುಗಿ
ಹೂಮೈಯ ಬೆಡಗಿ!
ತಿಂಗಳನೆ ನಾಚಿಸುವ ಬೆಣ್ಣೆಗೆನ್ನೆಯೊಳೊಂದು
ಕಪ್ಪು ಕಲೆ ಮಿರುಗಿ
ಮುದ್ದು ಮುಖದೊಳಗೊಮ್ಮೆ ತುಂಟನಗೆ ತುಳುಕಿಸಲು
ನಾ ಮೈಯ ಮರೆತು,
ಮುತ್ತಮಳೆ ಸುರಿಸುವೆನು ನೋಯುವುದೊ ಹೂಗೆನ್ನೆ
ಎಂಬುದನೂ ಮರೆತು.

ನಿನ್ನಂಥ ನೆರೆಯಿರಲು
ಯಾವ ಭಾಗ್ಯಕೆ ನನಗೆ ಕಡಮೆ ಹೇಳು?
ನೀ ನನ್ನ ಬಳಿಯಲಿರೆ
ಮುಕ್ತಿಯೂ ಬೇಡ ಸಾಕಿಂಥ ಬಾಳು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರಸಿಕತೆ
Next post ಶ್ರೀ ಸತ್ಯ ಶಿವಯುಗದ ಕಲ್ಪತರಲಿ

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…