Home / ಕವನ / ಕವಿತೆ / ಊರ್ಮಿಳೆ

ಊರ್ಮಿಳೆ

ಕರೆದರೂ ತಿರುಗದೆ
ಜಿಗಿದು ಓಡಿದಳಲ್ಲ,
ಯಾರಿವಳು ಎರಳೆಮರಿ ಎಂದಿರೆ?
ಇವಳೆ ಊರ್ಮಿಳೆ, ತುಂಬುಜಂಬುನೇರಳೆ
ನಮ್ಮ ಮಲೆನಾಡ ಸಿಹಿಪೇರಲೆ.
ನನಗು ಇವಳಿಗು ಸ್ನೇಹ ತೀರ ಈಚೆಗೆ ಎನ್ನಿ
ನನ್ನ ಕಂಡರೆ ನಾಚಿಕೆ,
ಪ್ರೀತಿಯಲಿ ಬಾ ಎಂದು ರಮಿಸಿದರೆ ನಿಲ್ಲುವಳು
ನಾಲ್ಕಾರು ಮಾರಾಚೆಗೆ –
ಮತ್ತೊಮ್ಮೆ ಕರೆದಾನೆ ಎಂಬಾಸೆ ಮಿನುಗುವುದು
ಕಣ್ಣ ತಿಳಿತೆರೆಯಾಚೆಗೆ.
ನಮ್ಮ ನಡುವಿನ ಇಂಥ ಅಂತರಕೆ ನಾನಿಟ್ಟೆ
ಚಾಕಲೇಟಿನ ಸೇತುವೆ!

ಪುಟ್ಟ ಕಣ್ದೊಟ್ಟಿಲಲಿ
ಮಿಂಚರಸದಲಿ ನೆನೆದ ಎರಡು ಕರಿಗೋಲಿ,
ಬಾನು ಕಡಲರಿಯದದರಾಳದಲಿ ಬ್ರಹ್ಮಾಂಡ
ಹೊಡೆಯುವುದು ಜೋಲಿ,
ತುಟಿ ತೆರೆದರಿವಳು-
ಬಾನು ಬುವಿಯನು ತಬ್ಬಿ
ಹಗಲು ಇರುಳನು ದಬ್ಬಿ
ಮರಮರದಿ ಹಾಡುವುವು ಹಕ್ಕಿ ಕೊರಳುಬ್ಬಿ;
ಹೂ ಸುರಿದು ಹಣ್ ಬಿರಿದು
ದಡದಡನೆ ಹೊಳೆ ಹರಿದು
ಇಳೆಗೆ ಮಳೆ ತುಳುಕುವುದು ಹೂಬಿಸಿಲು ಹಬ್ಬಿ!

ಕಿಲಕಿಲನೆ ನಕ್ಕಳೆಂದರೆ ಇವಳು
ಜಡಕು ಕಚಗುಳಿಯನಿಟ್ಟಂತೆ,
ಹರಿದ ಕರಿಮುಗಿಲಲ್ಲಿ ಮಲಗಿರುವ ಬಾನಿಗೆ
ಹುಣ್ಣಿಮೆಯ ಹಾಲು ಹರಿದಂತೆ,
ಕರಿಯ ಕಿರುಜಡೆ ಬೆಣ್ಣೆಗನ್ನೆ ಮೇಲಿಳಿದಿರಲು
ಮಿಂಚು ಮುಗಿಲಾಟದಂತೆ,
ಹೂಗಾಲನಿಟ್ಟು ಜಿಗಿದರೆ ಅದರ ಸ್ಪರ್ಶಕೇ
ಪುಳಕ ನೆಲಕೆ!

ತುಂಬುಕಿತ್ತಲೆಗೆನ್ನೆ ಮಿಂಚುಗಣ್ಣಿನ ಹುಡುಗಿ
ಹೂಮೈಯ ಬೆಡಗಿ!
ತಿಂಗಳನೆ ನಾಚಿಸುವ ಬೆಣ್ಣೆಗೆನ್ನೆಯೊಳೊಂದು
ಕಪ್ಪು ಕಲೆ ಮಿರುಗಿ
ಮುದ್ದು ಮುಖದೊಳಗೊಮ್ಮೆ ತುಂಟನಗೆ ತುಳುಕಿಸಲು
ನಾ ಮೈಯ ಮರೆತು,
ಮುತ್ತಮಳೆ ಸುರಿಸುವೆನು ನೋಯುವುದೊ ಹೂಗೆನ್ನೆ
ಎಂಬುದನೂ ಮರೆತು.

ನಿನ್ನಂಥ ನೆರೆಯಿರಲು
ಯಾವ ಭಾಗ್ಯಕೆ ನನಗೆ ಕಡಮೆ ಹೇಳು?
ನೀ ನನ್ನ ಬಳಿಯಲಿರೆ
ಮುಕ್ತಿಯೂ ಬೇಡ ಸಾಕಿಂಥ ಬಾಳು!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...