ಪರಮಹಂಸ

ಏನಿದೀ ಜಿಗಿದಾಟ
ಕಿವಿಹರಿವ ಕೂಗಾಟ
ಇದುವರೆಗು ಕೇಳರಿಯದೀ ಆರ್ಭಟ?
ಕಳೆದ ಸಂತಮಹಾಂತರಾರು ಕಾಣದ ನೆಲೆಯ ಕಂಡನೆಂಬಂತೆ
ಇವನಾಡುವಾಟ!
ಅವರಿವರ ನಾಲಗೆಯ ಕಿತ್ತು
ತಲೆಯೊಳು ನೆಟ್ಟು
ಬೆಳೆಸಿಹನು ಇವನೊಂದು ಭಾರಿ ಮಂಡೆ.
ರಮಣ ಅರವಿಂದ ನುಡಿಯುವರು ಬುರುಡೆಯೊಳಿಂದ
ಅವರು ಹೊರಜಿಗಿಯೆ ಇದು ಖಾಲಿಹಂಡೆ!

ಯಾರದೋ ಗದ್ದೆಯಲಿ ನಿನ್ನ ದನ ಮೇಯಿಸುವುದಿನ್ನು ಸಾಕು;
ಕಂಡಕಂಡವರೆಲ್ಲ ತುಡುಗುದನ ಎಂದೊಯ್ದು
ದೊಡ್ಡಿಗಟ್ಟುವ ರಂಪ ಏಕೆ ಬೇಕು?
ಇರುವೆರಡು ಪುಡಿಕಾಸ
ನಾಲ್ಕು ಅಡಿ ನೆಲಕೊಳಲು ಹಾಕು,
ಆದ ಕೈಬಿಟ್ಟು
ನೆರೆಬೇಲಿ ತರಿದು
ನಾ ಸುರಭಿಕುಲಸ್ವಾಮಿಯೆನುವುದು ಬರಿ ಧಿಮಾಕು.

ಈಗೀಗ ನಡುಹರೆಯ,
ಮರ್ಮಸ್ಥಾನವ ಮೆಟ್ಟಿ ನಡೆದು ಬರುತಿದ್ದಾನೆ ನರ್ಮಸಚಿವ;
ಉತ್ಥಾನಪಾದರೆದೆ ಮೇಲೆಯೇ
ನಗುನಗುತ
ತುತ್ತುಗೊಳೆ ನಿಲುವಂಥ ಅಗ್ನಿಪಾದ.
ಸಪ್ತಸಾಗರದಡಿಯ ಪಾತಾಳದೊಡಲಲ್ಲಿ
ಅಬ್ಬರಿಸಿ ಒರಲುತಿರೆ ತೋಳ ಕರಡಿ, ಹೊರಗೆ
ಹಣೆಯ ಮಣೆಯಲಿ ಪರಮಹಂಸ ಪಾದದ ರಜವ
ಮೆರೆಸುವನು ‘ವೈರಾಗ್ಯ ಷಟ್ಕ’ ಹಾಡಿ.

ಅರಿವು ವರಿಸುವ ಮುಂಚೆ
ಗುರುಮಹಾರಾಜ ಪೀಠದ ಬಯಕೆ ಎದೆಯೊಳುರಿಯೆ,
ಕುಣಿದಾಡಿ ಬೊಬ್ಬಿಡಲು ಬಯಕೆ ಮುತ್ತಿದ ಜೀವ
ಮೌನದಲಿ ನಿಂತರಿವೆಗೆಣೆಯೆ?
ನಿನ್ನ ಪ್ರಾಣಕೆ ಪರಿಧಿಯೊಡ್ಡಿ ಸುತ್ತುತಲಿರಲು
ಈ ಮಣ್ಣ ನೂರು ಬಣ್ಣ,
ಅದ ಜಿಗಿದ ಮೇಲೆನ್ನು
‘ನನ್ನ ಸಾಧನೆಯ ಗುರಿ ಬ್ರಹ್ಮ, ಅದೆ ಅತ್ಮಕನ್ನ.’

ಸುಗ್ಗಿ ಬರೆ ಬೀಗಿ ಮಾಗಿಗೆ ಕೊರಗಿ ಬಳಲುವನು
ಈ ಪರಮಹಂಸ!
ಪಾಮರರು ಬನ್ನಿರೋ, ಅಡಿಯೊಳಿಡಿ ಹಣೆಯ
ಇವ ಅರವಿಂದರಂಶ!
ಎಲ್ಲೊ ಹುಟ್ಟಿದ ಗಿಡವನಿದರ ನಿಜಭೂಮಿಯೊಳು
ನೆಡಬಾರದೇನೊ ಭಗವಂತ?
ಬಿಸಿಲ ಹಣ್ಣಾಗದೆ ರಸತುಂಬಿ ಕಳಿವಂತೆ ಕೃಪೆಮಾಡೊ,
ಬದುಕಲೀ ಭ್ರಾಂತ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕುಟುಂಬ ಯೋಜನೆ
Next post ನಾವು ಕಮಲದ ಹೂಗಳು

ಸಣ್ಣ ಕತೆ

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…