Home / ಕವನ / ಕವಿತೆ / ಪರಮಹಂಸ

ಪರಮಹಂಸ

ಏನಿದೀ ಜಿಗಿದಾಟ
ಕಿವಿಹರಿವ ಕೂಗಾಟ
ಇದುವರೆಗು ಕೇಳರಿಯದೀ ಆರ್ಭಟ?
ಕಳೆದ ಸಂತಮಹಾಂತರಾರು ಕಾಣದ ನೆಲೆಯ ಕಂಡನೆಂಬಂತೆ
ಇವನಾಡುವಾಟ!
ಅವರಿವರ ನಾಲಗೆಯ ಕಿತ್ತು
ತಲೆಯೊಳು ನೆಟ್ಟು
ಬೆಳೆಸಿಹನು ಇವನೊಂದು ಭಾರಿ ಮಂಡೆ.
ರಮಣ ಅರವಿಂದ ನುಡಿಯುವರು ಬುರುಡೆಯೊಳಿಂದ
ಅವರು ಹೊರಜಿಗಿಯೆ ಇದು ಖಾಲಿಹಂಡೆ!

ಯಾರದೋ ಗದ್ದೆಯಲಿ ನಿನ್ನ ದನ ಮೇಯಿಸುವುದಿನ್ನು ಸಾಕು;
ಕಂಡಕಂಡವರೆಲ್ಲ ತುಡುಗುದನ ಎಂದೊಯ್ದು
ದೊಡ್ಡಿಗಟ್ಟುವ ರಂಪ ಏಕೆ ಬೇಕು?
ಇರುವೆರಡು ಪುಡಿಕಾಸ
ನಾಲ್ಕು ಅಡಿ ನೆಲಕೊಳಲು ಹಾಕು,
ಆದ ಕೈಬಿಟ್ಟು
ನೆರೆಬೇಲಿ ತರಿದು
ನಾ ಸುರಭಿಕುಲಸ್ವಾಮಿಯೆನುವುದು ಬರಿ ಧಿಮಾಕು.

ಈಗೀಗ ನಡುಹರೆಯ,
ಮರ್ಮಸ್ಥಾನವ ಮೆಟ್ಟಿ ನಡೆದು ಬರುತಿದ್ದಾನೆ ನರ್ಮಸಚಿವ;
ಉತ್ಥಾನಪಾದರೆದೆ ಮೇಲೆಯೇ
ನಗುನಗುತ
ತುತ್ತುಗೊಳೆ ನಿಲುವಂಥ ಅಗ್ನಿಪಾದ.
ಸಪ್ತಸಾಗರದಡಿಯ ಪಾತಾಳದೊಡಲಲ್ಲಿ
ಅಬ್ಬರಿಸಿ ಒರಲುತಿರೆ ತೋಳ ಕರಡಿ, ಹೊರಗೆ
ಹಣೆಯ ಮಣೆಯಲಿ ಪರಮಹಂಸ ಪಾದದ ರಜವ
ಮೆರೆಸುವನು ‘ವೈರಾಗ್ಯ ಷಟ್ಕ’ ಹಾಡಿ.

ಅರಿವು ವರಿಸುವ ಮುಂಚೆ
ಗುರುಮಹಾರಾಜ ಪೀಠದ ಬಯಕೆ ಎದೆಯೊಳುರಿಯೆ,
ಕುಣಿದಾಡಿ ಬೊಬ್ಬಿಡಲು ಬಯಕೆ ಮುತ್ತಿದ ಜೀವ
ಮೌನದಲಿ ನಿಂತರಿವೆಗೆಣೆಯೆ?
ನಿನ್ನ ಪ್ರಾಣಕೆ ಪರಿಧಿಯೊಡ್ಡಿ ಸುತ್ತುತಲಿರಲು
ಈ ಮಣ್ಣ ನೂರು ಬಣ್ಣ,
ಅದ ಜಿಗಿದ ಮೇಲೆನ್ನು
‘ನನ್ನ ಸಾಧನೆಯ ಗುರಿ ಬ್ರಹ್ಮ, ಅದೆ ಅತ್ಮಕನ್ನ.’

ಸುಗ್ಗಿ ಬರೆ ಬೀಗಿ ಮಾಗಿಗೆ ಕೊರಗಿ ಬಳಲುವನು
ಈ ಪರಮಹಂಸ!
ಪಾಮರರು ಬನ್ನಿರೋ, ಅಡಿಯೊಳಿಡಿ ಹಣೆಯ
ಇವ ಅರವಿಂದರಂಶ!
ಎಲ್ಲೊ ಹುಟ್ಟಿದ ಗಿಡವನಿದರ ನಿಜಭೂಮಿಯೊಳು
ನೆಡಬಾರದೇನೊ ಭಗವಂತ?
ಬಿಸಿಲ ಹಣ್ಣಾಗದೆ ರಸತುಂಬಿ ಕಳಿವಂತೆ ಕೃಪೆಮಾಡೊ,
ಬದುಕಲೀ ಭ್ರಾಂತ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...