Home / ಕವನ / ಕವಿತೆ / ಸಾವು

ಸಾವು

ಕಂಡಿರುವೆ ಮೂರು ಸಲ ಇವನ ಮೋರೆ,
ಮನೆಯಂಗಳಕೆ ನುಗ್ಗಿ ಹೀಚು ಹರಿವಾಗ,
ನೋಡುವರ ಕೈಕಟ್ಟಿ ಹಗಲೆ ಲೂಟಿಯ ಹೊಡೆವ ದರೋಡೆಕೋರ
ಹಂಡೆಯಂಥಾ ಹೊಟ್ಟೆ, ಕಿರುಬೆಂಡುಗಾಲು,
ಉಂಡದ್ದು ಉದರ ಸೇರದ ಯಾವ ರೋಗವೋ!
ತಿನಿಮೋರೆ ಚಂದವೋ, ಅರಕೆ ಅತೃಪ್ತಿಗಳೆ
ತೇದ ಇದ್ದಿಲಿನಲ್ಲಿ ಗೆರೆನಿಂತೆ ಬರಲುಮುಖ;
ರೆಪ್ಪೆ ತಡೆಯೂ ಇರದ ಬತ್ತುಗಣ್ಣೊಡಲಲ್ಲಿ
ನೆತ್ತರನೆ ಹೆಪ್ಪುಗಟ್ಟಿಸುವ ಥಣ್ಣನೆ ಬೆಳಕುಗೋಲಿ,
ಜೋಲ್ವ ಗೊಣೆಸಿಂಬಳದ ಬಣ್ಣದಾಲಿ;
ಕಪ್ಪು ಹಾವಂಥ ಉದ್ದನೆ ನಂಜುಗೈ ಚಾಚಿ,
ಉತ್ತಬಿತ್ತಗಳನ್ನೆ ಹೆಕ್ಕಿ,
ಹುಬ್ಬೆತ್ತಿ ನಗುವ ಲೊಟಕರಿಸಿ ನೆಕ್ಕಿ.

ಈಚೀಚೆ ಎಲ್ಲೆಲ್ಲು ಇವನ ನೆರಳು-
ಮೂಳೆಗಣ್ಣಿನ ಸುತ್ತ ಕರಿಯುಂಗುರವ ಬೆಳೆದ
ಮೂವತ್ತು ದಾಟಿರುವ ಬ್ರಹ್ಮಚಾರಿ;
ಆಳತೋಳಿಗೆ ದಬ್ಬಿ ಮಗುವನು, ಸಮಾಜದಲಿ
ಭಾಷಣದ ಸೇವೆ ನಡೆಸಿಹ ಶ್ರೀಮತಿ;
ಅಕ್ಕಿಯಂಗಡಿ ಮುಂದೆ ಮೈಲುದ್ದ ಕ್ಯೂನಿಂತು,
ಬೆವರಿಡುವ ಮುಖವ ಚೀಲದಲೆ ಒರೆಸುತ್ತಿರುವ
ಕಂಗಾಲುಗಣ್ಣಿನ ಸ್ವತಂತ್ರ ಗಣರಾಜ್ಯ;
ತಿವಿದಾಗ ಎಚ್ಚತ್ತು ಗಡಬಡಿಸಿ ಕೈಯೆತ್ತಿ
ನಿರ್ಣಯವ ಪಾಸುಮಾಡುವ ಪಕ್ಷ ಬಹುಮತ;
– ಇಲ್ಲೆಲ್ಲ ಆಡಿದಂತಿದೆ ಇವನ ಬೆರಳು.

ಇವನ ಮೈ ಒಮ್ಮೊಮ್ಮೆ ಬೆಳೆದು ಹರಡುವುದು
ಮಣ್ಣು ಮುಗಿಲಿನ ನಡುವೆ ನಂಜುತೆರೆಯಾಗಿ
ನಡುನಡುವೆ ಹರುಕಾಗಿ ಮೋಡಿ ಕೂಗುವುದು.
ಕಾರು ಮೋಟರು ರೈಲು ಕೈಗಾಡಿ ಪ್ಲೇನು,
ನರ ನಾಯಿ ಗಿಡ ಬಳ್ಳಿ ಕಾಗೆ ಗಿಳಿ ಮೀನು,
ಮಗು ಮುದುಕ ಮೊಳಕೆ ಮರ ಮಿಡಿ ಹೀಚು ಹಣ್ಣು-
ಎಲ್ಲಕ್ಕು ಸ್ಫರ್ಧೆ ಆಗ
ಹರುಕಿನಲಿ ತೂರುವಾಗ.
ತೆರೆ ತೂರಿದರೆ ಉಳಿವು
ತಡೆದು ಕೆಡೆದರೆ ಮುಗಿವು.
ತೆರೆ ಬಡಿದು ಸಿಡಿದ ಹರಣದ ಹರಹು ಕಂಡಾಗ
ಬೆರಗಾಗಿ ಬುದ್ಧಿಗನಿಸುವುದು,
ಸಾವೆ ಪ್ರಕೃತಿ, ಬಾಳೆ ವಿಕೃತಿ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...