Home / ಕವನ / ಕವಿತೆ / ಸಾವು

ಸಾವು

ಕಂಡಿರುವೆ ಮೂರು ಸಲ ಇವನ ಮೋರೆ,
ಮನೆಯಂಗಳಕೆ ನುಗ್ಗಿ ಹೀಚು ಹರಿವಾಗ,
ನೋಡುವರ ಕೈಕಟ್ಟಿ ಹಗಲೆ ಲೂಟಿಯ ಹೊಡೆವ ದರೋಡೆಕೋರ
ಹಂಡೆಯಂಥಾ ಹೊಟ್ಟೆ, ಕಿರುಬೆಂಡುಗಾಲು,
ಉಂಡದ್ದು ಉದರ ಸೇರದ ಯಾವ ರೋಗವೋ!
ತಿನಿಮೋರೆ ಚಂದವೋ, ಅರಕೆ ಅತೃಪ್ತಿಗಳೆ
ತೇದ ಇದ್ದಿಲಿನಲ್ಲಿ ಗೆರೆನಿಂತೆ ಬರಲುಮುಖ;
ರೆಪ್ಪೆ ತಡೆಯೂ ಇರದ ಬತ್ತುಗಣ್ಣೊಡಲಲ್ಲಿ
ನೆತ್ತರನೆ ಹೆಪ್ಪುಗಟ್ಟಿಸುವ ಥಣ್ಣನೆ ಬೆಳಕುಗೋಲಿ,
ಜೋಲ್ವ ಗೊಣೆಸಿಂಬಳದ ಬಣ್ಣದಾಲಿ;
ಕಪ್ಪು ಹಾವಂಥ ಉದ್ದನೆ ನಂಜುಗೈ ಚಾಚಿ,
ಉತ್ತಬಿತ್ತಗಳನ್ನೆ ಹೆಕ್ಕಿ,
ಹುಬ್ಬೆತ್ತಿ ನಗುವ ಲೊಟಕರಿಸಿ ನೆಕ್ಕಿ.

ಈಚೀಚೆ ಎಲ್ಲೆಲ್ಲು ಇವನ ನೆರಳು-
ಮೂಳೆಗಣ್ಣಿನ ಸುತ್ತ ಕರಿಯುಂಗುರವ ಬೆಳೆದ
ಮೂವತ್ತು ದಾಟಿರುವ ಬ್ರಹ್ಮಚಾರಿ;
ಆಳತೋಳಿಗೆ ದಬ್ಬಿ ಮಗುವನು, ಸಮಾಜದಲಿ
ಭಾಷಣದ ಸೇವೆ ನಡೆಸಿಹ ಶ್ರೀಮತಿ;
ಅಕ್ಕಿಯಂಗಡಿ ಮುಂದೆ ಮೈಲುದ್ದ ಕ್ಯೂನಿಂತು,
ಬೆವರಿಡುವ ಮುಖವ ಚೀಲದಲೆ ಒರೆಸುತ್ತಿರುವ
ಕಂಗಾಲುಗಣ್ಣಿನ ಸ್ವತಂತ್ರ ಗಣರಾಜ್ಯ;
ತಿವಿದಾಗ ಎಚ್ಚತ್ತು ಗಡಬಡಿಸಿ ಕೈಯೆತ್ತಿ
ನಿರ್ಣಯವ ಪಾಸುಮಾಡುವ ಪಕ್ಷ ಬಹುಮತ;
– ಇಲ್ಲೆಲ್ಲ ಆಡಿದಂತಿದೆ ಇವನ ಬೆರಳು.

ಇವನ ಮೈ ಒಮ್ಮೊಮ್ಮೆ ಬೆಳೆದು ಹರಡುವುದು
ಮಣ್ಣು ಮುಗಿಲಿನ ನಡುವೆ ನಂಜುತೆರೆಯಾಗಿ
ನಡುನಡುವೆ ಹರುಕಾಗಿ ಮೋಡಿ ಕೂಗುವುದು.
ಕಾರು ಮೋಟರು ರೈಲು ಕೈಗಾಡಿ ಪ್ಲೇನು,
ನರ ನಾಯಿ ಗಿಡ ಬಳ್ಳಿ ಕಾಗೆ ಗಿಳಿ ಮೀನು,
ಮಗು ಮುದುಕ ಮೊಳಕೆ ಮರ ಮಿಡಿ ಹೀಚು ಹಣ್ಣು-
ಎಲ್ಲಕ್ಕು ಸ್ಫರ್ಧೆ ಆಗ
ಹರುಕಿನಲಿ ತೂರುವಾಗ.
ತೆರೆ ತೂರಿದರೆ ಉಳಿವು
ತಡೆದು ಕೆಡೆದರೆ ಮುಗಿವು.
ತೆರೆ ಬಡಿದು ಸಿಡಿದ ಹರಣದ ಹರಹು ಕಂಡಾಗ
ಬೆರಗಾಗಿ ಬುದ್ಧಿಗನಿಸುವುದು,
ಸಾವೆ ಪ್ರಕೃತಿ, ಬಾಳೆ ವಿಕೃತಿ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...