Home / ಕವನ / ಕವಿತೆ / ಸಾವು

ಸಾವು

ಕಂಡಿರುವೆ ಮೂರು ಸಲ ಇವನ ಮೋರೆ,
ಮನೆಯಂಗಳಕೆ ನುಗ್ಗಿ ಹೀಚು ಹರಿವಾಗ,
ನೋಡುವರ ಕೈಕಟ್ಟಿ ಹಗಲೆ ಲೂಟಿಯ ಹೊಡೆವ ದರೋಡೆಕೋರ
ಹಂಡೆಯಂಥಾ ಹೊಟ್ಟೆ, ಕಿರುಬೆಂಡುಗಾಲು,
ಉಂಡದ್ದು ಉದರ ಸೇರದ ಯಾವ ರೋಗವೋ!
ತಿನಿಮೋರೆ ಚಂದವೋ, ಅರಕೆ ಅತೃಪ್ತಿಗಳೆ
ತೇದ ಇದ್ದಿಲಿನಲ್ಲಿ ಗೆರೆನಿಂತೆ ಬರಲುಮುಖ;
ರೆಪ್ಪೆ ತಡೆಯೂ ಇರದ ಬತ್ತುಗಣ್ಣೊಡಲಲ್ಲಿ
ನೆತ್ತರನೆ ಹೆಪ್ಪುಗಟ್ಟಿಸುವ ಥಣ್ಣನೆ ಬೆಳಕುಗೋಲಿ,
ಜೋಲ್ವ ಗೊಣೆಸಿಂಬಳದ ಬಣ್ಣದಾಲಿ;
ಕಪ್ಪು ಹಾವಂಥ ಉದ್ದನೆ ನಂಜುಗೈ ಚಾಚಿ,
ಉತ್ತಬಿತ್ತಗಳನ್ನೆ ಹೆಕ್ಕಿ,
ಹುಬ್ಬೆತ್ತಿ ನಗುವ ಲೊಟಕರಿಸಿ ನೆಕ್ಕಿ.

ಈಚೀಚೆ ಎಲ್ಲೆಲ್ಲು ಇವನ ನೆರಳು-
ಮೂಳೆಗಣ್ಣಿನ ಸುತ್ತ ಕರಿಯುಂಗುರವ ಬೆಳೆದ
ಮೂವತ್ತು ದಾಟಿರುವ ಬ್ರಹ್ಮಚಾರಿ;
ಆಳತೋಳಿಗೆ ದಬ್ಬಿ ಮಗುವನು, ಸಮಾಜದಲಿ
ಭಾಷಣದ ಸೇವೆ ನಡೆಸಿಹ ಶ್ರೀಮತಿ;
ಅಕ್ಕಿಯಂಗಡಿ ಮುಂದೆ ಮೈಲುದ್ದ ಕ್ಯೂನಿಂತು,
ಬೆವರಿಡುವ ಮುಖವ ಚೀಲದಲೆ ಒರೆಸುತ್ತಿರುವ
ಕಂಗಾಲುಗಣ್ಣಿನ ಸ್ವತಂತ್ರ ಗಣರಾಜ್ಯ;
ತಿವಿದಾಗ ಎಚ್ಚತ್ತು ಗಡಬಡಿಸಿ ಕೈಯೆತ್ತಿ
ನಿರ್ಣಯವ ಪಾಸುಮಾಡುವ ಪಕ್ಷ ಬಹುಮತ;
– ಇಲ್ಲೆಲ್ಲ ಆಡಿದಂತಿದೆ ಇವನ ಬೆರಳು.

ಇವನ ಮೈ ಒಮ್ಮೊಮ್ಮೆ ಬೆಳೆದು ಹರಡುವುದು
ಮಣ್ಣು ಮುಗಿಲಿನ ನಡುವೆ ನಂಜುತೆರೆಯಾಗಿ
ನಡುನಡುವೆ ಹರುಕಾಗಿ ಮೋಡಿ ಕೂಗುವುದು.
ಕಾರು ಮೋಟರು ರೈಲು ಕೈಗಾಡಿ ಪ್ಲೇನು,
ನರ ನಾಯಿ ಗಿಡ ಬಳ್ಳಿ ಕಾಗೆ ಗಿಳಿ ಮೀನು,
ಮಗು ಮುದುಕ ಮೊಳಕೆ ಮರ ಮಿಡಿ ಹೀಚು ಹಣ್ಣು-
ಎಲ್ಲಕ್ಕು ಸ್ಫರ್ಧೆ ಆಗ
ಹರುಕಿನಲಿ ತೂರುವಾಗ.
ತೆರೆ ತೂರಿದರೆ ಉಳಿವು
ತಡೆದು ಕೆಡೆದರೆ ಮುಗಿವು.
ತೆರೆ ಬಡಿದು ಸಿಡಿದ ಹರಣದ ಹರಹು ಕಂಡಾಗ
ಬೆರಗಾಗಿ ಬುದ್ಧಿಗನಿಸುವುದು,
ಸಾವೆ ಪ್ರಕೃತಿ, ಬಾಳೆ ವಿಕೃತಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...