Home / ಕವನ / ಕವಿತೆ / ಬ್ರಹ್ಮಾಂಡದ ದನಿಗಳು

ಬ್ರಹ್ಮಾಂಡದ ದನಿಗಳು

ಬೆಳಕಿನ ಹನಿಗಳ ಮಂಡಲಕ್ಕೆ ಸನ್ನೆಕೋಲು
ಹಾಕಿ ಮೀಟಿ ತೆಗೆದಿಟ್ಟುಕೊಳ್ಳಬೇಕು ಅನ್ನಿಸುತ್ತದೆ
ಒಂದಿಷ್ಟು ಹಳತಾಗದ ಅದನ್ನೊಯ್ದು
ನೆತ್ತಿಯ ಗೋಡೆಗೆ
ಅಂಟಿಸಿಕೊಂಡರೆ ಚೆನ್ನ
ಜ್ಞಾನದ ಗುಡಾರದ ಧ್ವನಿಯೊಂದರ ಮರ್ಮರ.

ಮನೆ ಮುಂದಿನ ಚಪ್ಪರ ಬಿರುಗಾಳಿಗೆ ಬಿದ್ದು
ನೆಲಪಾಲಾದ ಕಸಗಳನ್ನೆಲ್ಲಾ ಎತ್ತಿ ಬಿಸಾಡಿದರೂ
ಕಂಬನೆಟ್ಟ ಕುಣಿ ಅರೆತೆರೆದುಕೊಂಡು ಹಾಗೇ ಬಿದ್ದಿದೆ
ಮಣ್ಣು ಕಲ್ಲುಗಳ ತುಂಬಿ ತಗ್ಗು ಮುಚ್ಚುಲೇ?
ಎನ್ನುತ್ತಿದ್ದಾನೆ- ಕೆಲಸದ ಮಂಕಾಳು.

ಸಿದ್ಧಾಂತ ತತ್ವ ಆದರ್ಶಗಳು ಜಪಕ್ಕಾಗಿ
ವಾದ ಪ್ರತಿವಾದ ಆಶಯಗಳು ನೆಪಕ್ಕಾಗಿ
ಹೀಗೆ ಪರಸ್ಪರ ವೈರುಧ್ಯಗಳ ಬಿಸಿನೀರು
ತುಂಬಿಕೊಂಡ ಹಂಡೆ
ಬೋರಲಾಗಿ ಬಿದ್ದರೆ, ಆ ನೆಲ ಹಸಿರುಕ್ಕಿಸಲಾರದು
ಎನ್ನುತ್ತಿದ್ದಾರೆ ಪ್ರೊಫೆಸರ್ರೊಬ್ಬರು.

ಭಾವ ಚಿಗುರುವುದು ಎದೆಯಲ್ಲಿ
ಮೆದುಳು ಮೀಯಬೇಕು ಸತ್ಯಂ ಶಿವಂ ಸುಂದರಂ
ಈ ಚುಕ್ಕಿ ಹೊಳಹನ್ನು
ಭಾಷ್ಯವಾಗಿಸುವುದೇ ಕಾಯಕವಾದ
ಗುರುಗಳ ಕೈಲಿಡಿದ ಬಳಪ ನೋಡುತ್ತ,
ಅದನ್ನೆ ಚೀಪುವ ಆಸೆಯುಕ್ಕಿ
ಬೆನ್ನಿಗೆ ಹೊಟ್ಟೆಯಂಟಿಸಿಕೊಂಡ ಹುಡುಗ
ಎಣ್ಣೆಗಾಣದ ಒಣಗೂದಲ ಕೆರೆದುಕೊಳ್ಳುತ್ತಾನೆ.
ಬಿಸಿಯೂಟದ ಘಮಘಮ ಬರುತ್ತಿಲ್ಲವೇ?
ಪಕ್ಕದ ಹುಡುಗನಿಗೆ ತಿವಿದು ಕೇಳುತ್ತಿದ್ದಾನೆ.

ಶತಶತಮಾನಗಳಿಂದ ಉರಿಬಿದ್ದ
ಬೆಂಕಿಯ ಮನೆಯ
ತಣ್ಣಗಾಗಿಸಲೆಂದು ಇದ್ದಿಲನ್ನು ಸುರಿಯುತ್ತಿದ್ದಾರೆ
ಆಚೀಚೆಯ ಮನೆಯವರು
ಆ ಮನೆಹೊಕ್ಕ ಇದ್ದಿಲು ಕ್ಷಣದಲ್ಲಿ
ನಿಗಿ ನಿಗಿಕೆಂಡವಾಗುತ್ತ
ವ್ಯಾಪಿಸಿಕೊಳ್ಳುತ್ತಿದೆ ಇನ್ನರ್ಧ ಜಾಗೆಯನ್ನು ಬಿಡದೆ
ನೆಲವೂ ಧಗಧಗನೇ ಉರಿಯಲಾರಂಭಿದರೆ ಮುಂದೇನು?
ಕಂಗಾಲಾಗಿ ಕೇಳುತ್ತಿದ್ದಾರೆ ನೆರೆಹೊರೆಯವರು.

ಸಮನ್ವಯತೆ ಫಲಕ ಧರಿಸಿದ ವಿಭಜಕ ಕಂಬಕ್ಕೆ
ಡಿಕ್ಕಿಹೊಡೆದ ಪಾರಿವಾಳವೊಂದು
ಸತ್ತೇ ಹೋಯಿತು
ಪರಿತಪಿಸುತ್ತಿದ್ದಾಳೆ ಹೆಣ್ಣೊಬ್ಬಳು

ಹತ್ತಾರು ರಾಗಗಳು ಗಿರಕಿ ಹೊಡೆಯುತ್ತವೆ
ಒಂದೇ ಮಂಡಲದಲ್ಲಿ ತಾರಕಕ್ಕೇರುತ್ತಿದೆ.
ಬ್ರಹ್ಮಾಂಡ ಜ್ಞಾನದ ಆಲಾಪಗಳಂತೆ
ಮುಖ ಎದೆ ಹೊಟ್ಟೆ ತುಂಬಾ ನೆರಿಗೆಗಳ
ಆಭರಣ ಧರಿಸಿದ ಸಾಧುವೊಬ್ಬ ಮುಗುಳ್ನಗುತ್ತಾನೆ.

ಬೆಂಕಿ ಮುಳ್ಳುಗಳನ್ನೆಲ್ಲಾ ಜಾಡಿಸಿ ಗುಡಿಸಿ
ಸೆಳೆದೊಯ್ಯುವಂತಹ ಮಳೆ ಬರುವ ಸುಣುಕು
ಆ ಹೊಸ ಸೋನೆ ಹನಿಯಲ್ಲಿ ಇವರೆಲ್ಲರೆಲ್ಲರೂ
ಅಪಾದಮಸ್ತಕ ನೆನೆಯಲಿ
ಮುದಗೊಳ್ಳಲಿ ದೇವರೇ..
ಕನಸುತ್ತೇನೆ ನಾನು…
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...