Home / ಕವನ / ಕವಿತೆ / ಬ್ರಹ್ಮಾಂಡದ ದನಿಗಳು

ಬ್ರಹ್ಮಾಂಡದ ದನಿಗಳು

ಬೆಳಕಿನ ಹನಿಗಳ ಮಂಡಲಕ್ಕೆ ಸನ್ನೆಕೋಲು
ಹಾಕಿ ಮೀಟಿ ತೆಗೆದಿಟ್ಟುಕೊಳ್ಳಬೇಕು ಅನ್ನಿಸುತ್ತದೆ
ಒಂದಿಷ್ಟು ಹಳತಾಗದ ಅದನ್ನೊಯ್ದು
ನೆತ್ತಿಯ ಗೋಡೆಗೆ
ಅಂಟಿಸಿಕೊಂಡರೆ ಚೆನ್ನ
ಜ್ಞಾನದ ಗುಡಾರದ ಧ್ವನಿಯೊಂದರ ಮರ್ಮರ.

ಮನೆ ಮುಂದಿನ ಚಪ್ಪರ ಬಿರುಗಾಳಿಗೆ ಬಿದ್ದು
ನೆಲಪಾಲಾದ ಕಸಗಳನ್ನೆಲ್ಲಾ ಎತ್ತಿ ಬಿಸಾಡಿದರೂ
ಕಂಬನೆಟ್ಟ ಕುಣಿ ಅರೆತೆರೆದುಕೊಂಡು ಹಾಗೇ ಬಿದ್ದಿದೆ
ಮಣ್ಣು ಕಲ್ಲುಗಳ ತುಂಬಿ ತಗ್ಗು ಮುಚ್ಚುಲೇ?
ಎನ್ನುತ್ತಿದ್ದಾನೆ- ಕೆಲಸದ ಮಂಕಾಳು.

ಸಿದ್ಧಾಂತ ತತ್ವ ಆದರ್ಶಗಳು ಜಪಕ್ಕಾಗಿ
ವಾದ ಪ್ರತಿವಾದ ಆಶಯಗಳು ನೆಪಕ್ಕಾಗಿ
ಹೀಗೆ ಪರಸ್ಪರ ವೈರುಧ್ಯಗಳ ಬಿಸಿನೀರು
ತುಂಬಿಕೊಂಡ ಹಂಡೆ
ಬೋರಲಾಗಿ ಬಿದ್ದರೆ, ಆ ನೆಲ ಹಸಿರುಕ್ಕಿಸಲಾರದು
ಎನ್ನುತ್ತಿದ್ದಾರೆ ಪ್ರೊಫೆಸರ್ರೊಬ್ಬರು.

ಭಾವ ಚಿಗುರುವುದು ಎದೆಯಲ್ಲಿ
ಮೆದುಳು ಮೀಯಬೇಕು ಸತ್ಯಂ ಶಿವಂ ಸುಂದರಂ
ಈ ಚುಕ್ಕಿ ಹೊಳಹನ್ನು
ಭಾಷ್ಯವಾಗಿಸುವುದೇ ಕಾಯಕವಾದ
ಗುರುಗಳ ಕೈಲಿಡಿದ ಬಳಪ ನೋಡುತ್ತ,
ಅದನ್ನೆ ಚೀಪುವ ಆಸೆಯುಕ್ಕಿ
ಬೆನ್ನಿಗೆ ಹೊಟ್ಟೆಯಂಟಿಸಿಕೊಂಡ ಹುಡುಗ
ಎಣ್ಣೆಗಾಣದ ಒಣಗೂದಲ ಕೆರೆದುಕೊಳ್ಳುತ್ತಾನೆ.
ಬಿಸಿಯೂಟದ ಘಮಘಮ ಬರುತ್ತಿಲ್ಲವೇ?
ಪಕ್ಕದ ಹುಡುಗನಿಗೆ ತಿವಿದು ಕೇಳುತ್ತಿದ್ದಾನೆ.

ಶತಶತಮಾನಗಳಿಂದ ಉರಿಬಿದ್ದ
ಬೆಂಕಿಯ ಮನೆಯ
ತಣ್ಣಗಾಗಿಸಲೆಂದು ಇದ್ದಿಲನ್ನು ಸುರಿಯುತ್ತಿದ್ದಾರೆ
ಆಚೀಚೆಯ ಮನೆಯವರು
ಆ ಮನೆಹೊಕ್ಕ ಇದ್ದಿಲು ಕ್ಷಣದಲ್ಲಿ
ನಿಗಿ ನಿಗಿಕೆಂಡವಾಗುತ್ತ
ವ್ಯಾಪಿಸಿಕೊಳ್ಳುತ್ತಿದೆ ಇನ್ನರ್ಧ ಜಾಗೆಯನ್ನು ಬಿಡದೆ
ನೆಲವೂ ಧಗಧಗನೇ ಉರಿಯಲಾರಂಭಿದರೆ ಮುಂದೇನು?
ಕಂಗಾಲಾಗಿ ಕೇಳುತ್ತಿದ್ದಾರೆ ನೆರೆಹೊರೆಯವರು.

ಸಮನ್ವಯತೆ ಫಲಕ ಧರಿಸಿದ ವಿಭಜಕ ಕಂಬಕ್ಕೆ
ಡಿಕ್ಕಿಹೊಡೆದ ಪಾರಿವಾಳವೊಂದು
ಸತ್ತೇ ಹೋಯಿತು
ಪರಿತಪಿಸುತ್ತಿದ್ದಾಳೆ ಹೆಣ್ಣೊಬ್ಬಳು

ಹತ್ತಾರು ರಾಗಗಳು ಗಿರಕಿ ಹೊಡೆಯುತ್ತವೆ
ಒಂದೇ ಮಂಡಲದಲ್ಲಿ ತಾರಕಕ್ಕೇರುತ್ತಿದೆ.
ಬ್ರಹ್ಮಾಂಡ ಜ್ಞಾನದ ಆಲಾಪಗಳಂತೆ
ಮುಖ ಎದೆ ಹೊಟ್ಟೆ ತುಂಬಾ ನೆರಿಗೆಗಳ
ಆಭರಣ ಧರಿಸಿದ ಸಾಧುವೊಬ್ಬ ಮುಗುಳ್ನಗುತ್ತಾನೆ.

ಬೆಂಕಿ ಮುಳ್ಳುಗಳನ್ನೆಲ್ಲಾ ಜಾಡಿಸಿ ಗುಡಿಸಿ
ಸೆಳೆದೊಯ್ಯುವಂತಹ ಮಳೆ ಬರುವ ಸುಣುಕು
ಆ ಹೊಸ ಸೋನೆ ಹನಿಯಲ್ಲಿ ಇವರೆಲ್ಲರೆಲ್ಲರೂ
ಅಪಾದಮಸ್ತಕ ನೆನೆಯಲಿ
ಮುದಗೊಳ್ಳಲಿ ದೇವರೇ..
ಕನಸುತ್ತೇನೆ ನಾನು…
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...