Home / ಕವನ / ಕವಿತೆ / ನಕ್ಕರೆ ನೋವಾಗುವುದು

ನಕ್ಕರೆ ನೋವಾಗುವುದು

ಎದೆಯೊಳಗೆ ಬೆಂಕಿ ಬಿದ್ದರೂ
ಜಪ್ಪಯ್ಯ ಎನ್ನದೇ ನಗುವ ಮುಖಗಳ ಕಂಡಾಗಲೆಲ್ಲಾ
ನನ್ನಲ್ಲಿ ಕನಿಕರದೊಂದಿಗೆ ಉಕ್ಕುವ ತಳಮಳ
ನಾನೊಬ್ಬಳೆ ಅಲ್ಲ ನನ್ನ ಸುತ್ತಲೂ
ಹತ್ತಾರು ಪಾತ್ರಗಳು
ನವಿಲುಗರಿ ಪೋಣಿಸಿಕೊಂಡು
ಡಂಭ ಬಡಿಯುವ ಕೆಂಬೂತಗಳು
ಹಾದು ಹೋಗುತ್ತಿವೆ.
ಒಂದರ ನಂತರ ಮತ್ತೊಂದು.

ಕೇಳಬೇಕೆಂದುಕೊಳ್ಳುತ್ತೇನೆ-
ರಕ್ತ ಉಕ್ಕುವ ಕಣ್ಣಿನ ಆಳದಲ್ಲಿ
ಮಡುಗಟ್ಟಿದ ನೋವಿಗೆ ಎಲ್ಲಿ
ಸಿಗಬಹುದು ಮದ್ದು ಮತ್ತು ಮುದ್ದು ಎಂದು.
ತಟ್ಟನೆ ಉತ್ತರಿಸುತ್ತದೆ ನೀಲಿಗಟ್ಟಿದ ದಪ್ಪ ತುಟಿಯೊಂದು
“ಒಡೆದ ತುಟಿಗಳಿಗೆ ಲೇಪಿಸಿಕೊಳ್ಳುವ
ವ್ಯಾಸಲೀನ ಕೂಡಾ ವಶೀಲಿ ಕೇಳುತ್ತದೆ.”

ಚರ್ಮದ ವಾಸನೆಯನ್ನು ಮೂಗಿಗೆ ಹತ್ತಿಸಿಕೊಂಡ
ಶ್ವಾನ ನಾಸಿಕಗಳಂತೆ ಕೆಂಪಿರುವೆ ಸಾಲು
ದಂಡುದಂಡಾಗಿ ಸುತ್ತಮುತ್ತಲಿನ ಮೂಲೆಗಳಿಂದ
ತಟ್ಟನೆ ಎದ್ದು ಬಿಡುತ್ತವೆ. ಹಸಕು ವಾಸನೆ ಹುಚ್ಚು ಹಿಡಿಸಿದಂತೆ.
ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಬೇಕೆಂದರೆ
ತೀರಿದ ಎಣ್ಣೆ ಡಬ್ಬ ಅಣಕಿಸಿ ನಗುತ್ತದೆ.

ಕೋಮಲ ಕನಸುಗಳ ಹೊತ್ತ ಹೊಲಕ್ಕೆ
ಚಿತ್ತಾರದ ಬೀಜಗಳ ಬಿತ್ತಿ, ಕೊನೆಯಲ್ಲಿ
ಕೊಳಚೆ ನೀರನ್ನು ಹಾಯಿಸಿ, ಕಳೆಗಿಡಗಳ ಬೆಳೆಸಿ
ಗೋರಿವಾಕ್ಯ ಹಾಡುವ
ಭಂಡರ ಗೊಂಡೆ ಬೆಳೆಯುತ್ತಲೇ ಇದೆ.
ಬಳ್ಳಿಯಾಗಿ ಸುತ್ತಿ ಉಸಿರುಗಟ್ಟಿಸಬೇಕೆನಿಸುತ್ತದೆ.
ನೀರು ಜಿನುಗಿದಡೆಯಲ್ಲೆಲ್ಲಾ ಆರ್ದ್ರವಾದ
ಮಣ್ಣಿನ ಗರ್ಭದಲ್ಲಿ ಬಿತ್ತದೆಯೇ
ಚಿಗುರೊಡೆದ ಹಸಿರು ಬೆರಗುಗೊಳಿಸುತ್ತದೆ. ನೋಡುತ್ತ
ಒಡಲಲ್ಲಿರುವ ಹಸಿರಿಗೆ ಹೆರಿಗೆ ನೋವು ಬಂದಂತಾಯ್ತು.
ಮುಖದಲ್ಲಿ ಮಲ್ಲಿಗೆಯ ನಗು ಮೂಡಿದರೂ
ಬಿರುಕಾದ ತುಟಿಗಳಿಗೆ ನಗಲಾಗಲಿಲ್ಲ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...