ನನ್ನ ನೆನಪಿನ ಯಾತ್ರೆ

ನನ್ನ ನೆನಪಿನ ಯಾತ್ರೆ ನಿನ್ನದರ ಥರವಲ್ಲ
ಅದಕ್ಕಿಲ್ಲ ಸರಳಗತಿ ದಾರಿನೆರಳು ;
ಮೊಸಳೆ ಹಲ್ಲಿನ ಕಲ್ಲುದಾರಿ, ಕನ್ನಡಿ ಚೂರು
ಮಂಡೆ ಮೇಲೇ ಬಾಯಿಮಸೆವ ಬಿಸಿಲು.

ಮಡಿದ ನಿನ್ನೆಗಳೆಲ್ಲ ಒಡೆದ ದೊನ್ನೆಗಳಲ್ಲಿ

ಸುರಿದ ಮರುಧರೆಯ ಅಮೂಲ್ಯ ನೀರು ;
ಕೊಲ್ಲಲೆಳಸುವ ನೂರು ಹೊಂಚುಗಳ ಹೆಡೆ ಕಡಿದು
ಸಾಗಿರುವೆ, ನಾನಲ್ಲ ಯುದ್ದಭೀರು.

ಸಮೃದ್ಧ ಬೆಳೆದ ಹೊಲ ಕೊಯಿಲಾಗಿ ಬರಿ ಬಯಲು
ಕಣ್ಣು ಚುಚ್ಚುವ ಮೂಳೆ ಕೊಳೆಗದ್ದೆ ;
ಅವಶೇಷಗಳು ಇಡಿದ ಗತವೈಭವದ ಮೇಲೆ
ಹಿಂದು ಮುಂದಿಲ್ಲದ ಭಿಕಾರಿ ಎದ್ದೆ.

ಕತ್ತಲಲ್ಲಿ ಬಚ್ಚಿಟ್ಟು ಗುಟ್ಟು ತೆರೆಸುವ ಮಣ್ಣು
ನೀರು ಗೊಬ್ಬರ ಇರದ ಬಂಜೆಭೂಮಿ ;
ತುಳಿವ ಕಾಲಿನ ಕೆಳಗೆ ಅಳಿಯಲೊಲ್ಲದ ಛಲದ
ಫಲದ ಕನಸನು ಹೊತ್ತ ಜೀವಕಾಮಿ.

ಕಾಲು ಹೊರಳಿದೆ ಕಡೆಗೆ ನಡೆದೆ, ಎರಡೂ ಬದಿಗೆ
ಭಯ ಉಗಿವ ವಕ್ರಮುಖ ಭಿತ್ತಿಚಿತ್ರ ;
ನೂರು ಮೀಟರಿಗೊಮ್ಮೆ ದಾರಿಬದಿ ಅತ್ತಿತ್ತ
ಬಿರುಗಣ್ಣು ಬಿಟ್ಟ ಗೋಪುರದ ಹುತ್ತ.

ತಿಳಿಯದಿದ್ದರು ದಾರಿ ನಡೆದೆ ಏನೋ ತೋರಿ
ದೈವವೋ ದೆವ್ವವೋ ಬೆನ್ನದೂಡಿ ;
ಕಡಲ ತಳಮನೆಗಿಳಿದು ಬೆಟ್ಟದಟ್ಟವ ಏರಿ
ತಲುಪಿರುವೆ ಸಮತಟ್ಟು ನೆಲದ ದಾರಿ.

ಚಾಣ ಸುತ್ತಿಗೆ ಕೈಯ ಕೌಶಲವ ಹಾಡುತ್ತ
ಮೈ ಪಡೆಯದೇ ಶಿಲ್ಪ ಬಂಡೆಯಿಂದ ?
ಪಡೆದ ಬಲ ಕೊಡುವ ಛಲ ಜೊತೆಗೂಡಿ ಎತ್ತಿರಲು
ಭಾರಿ ಮರ ಏಳದೇ ಕಾಳಿನಿಂದ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೧೯
Next post ಜಾತ್ರೆ ಮರುಳು

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…