Home / ಕವನ / ಕವಿತೆ / ನನ್ನ ನೆನಪಿನ ಯಾತ್ರೆ

ನನ್ನ ನೆನಪಿನ ಯಾತ್ರೆ

ನನ್ನ ನೆನಪಿನ ಯಾತ್ರೆ ನಿನ್ನದರ ಥರವಲ್ಲ
ಅದಕ್ಕಿಲ್ಲ ಸರಳಗತಿ ದಾರಿನೆರಳು ;
ಮೊಸಳೆ ಹಲ್ಲಿನ ಕಲ್ಲುದಾರಿ, ಕನ್ನಡಿ ಚೂರು
ಮಂಡೆ ಮೇಲೇ ಬಾಯಿಮಸೆವ ಬಿಸಿಲು.

ಮಡಿದ ನಿನ್ನೆಗಳೆಲ್ಲ ಒಡೆದ ದೊನ್ನೆಗಳಲ್ಲಿ

ಸುರಿದ ಮರುಧರೆಯ ಅಮೂಲ್ಯ ನೀರು ;
ಕೊಲ್ಲಲೆಳಸುವ ನೂರು ಹೊಂಚುಗಳ ಹೆಡೆ ಕಡಿದು
ಸಾಗಿರುವೆ, ನಾನಲ್ಲ ಯುದ್ದಭೀರು.

ಸಮೃದ್ಧ ಬೆಳೆದ ಹೊಲ ಕೊಯಿಲಾಗಿ ಬರಿ ಬಯಲು
ಕಣ್ಣು ಚುಚ್ಚುವ ಮೂಳೆ ಕೊಳೆಗದ್ದೆ ;
ಅವಶೇಷಗಳು ಇಡಿದ ಗತವೈಭವದ ಮೇಲೆ
ಹಿಂದು ಮುಂದಿಲ್ಲದ ಭಿಕಾರಿ ಎದ್ದೆ.

ಕತ್ತಲಲ್ಲಿ ಬಚ್ಚಿಟ್ಟು ಗುಟ್ಟು ತೆರೆಸುವ ಮಣ್ಣು
ನೀರು ಗೊಬ್ಬರ ಇರದ ಬಂಜೆಭೂಮಿ ;
ತುಳಿವ ಕಾಲಿನ ಕೆಳಗೆ ಅಳಿಯಲೊಲ್ಲದ ಛಲದ
ಫಲದ ಕನಸನು ಹೊತ್ತ ಜೀವಕಾಮಿ.

ಕಾಲು ಹೊರಳಿದೆ ಕಡೆಗೆ ನಡೆದೆ, ಎರಡೂ ಬದಿಗೆ
ಭಯ ಉಗಿವ ವಕ್ರಮುಖ ಭಿತ್ತಿಚಿತ್ರ ;
ನೂರು ಮೀಟರಿಗೊಮ್ಮೆ ದಾರಿಬದಿ ಅತ್ತಿತ್ತ
ಬಿರುಗಣ್ಣು ಬಿಟ್ಟ ಗೋಪುರದ ಹುತ್ತ.

ತಿಳಿಯದಿದ್ದರು ದಾರಿ ನಡೆದೆ ಏನೋ ತೋರಿ
ದೈವವೋ ದೆವ್ವವೋ ಬೆನ್ನದೂಡಿ ;
ಕಡಲ ತಳಮನೆಗಿಳಿದು ಬೆಟ್ಟದಟ್ಟವ ಏರಿ
ತಲುಪಿರುವೆ ಸಮತಟ್ಟು ನೆಲದ ದಾರಿ.

ಚಾಣ ಸುತ್ತಿಗೆ ಕೈಯ ಕೌಶಲವ ಹಾಡುತ್ತ
ಮೈ ಪಡೆಯದೇ ಶಿಲ್ಪ ಬಂಡೆಯಿಂದ ?
ಪಡೆದ ಬಲ ಕೊಡುವ ಛಲ ಜೊತೆಗೂಡಿ ಎತ್ತಿರಲು
ಭಾರಿ ಮರ ಏಳದೇ ಕಾಳಿನಿಂದ ?
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...