Home / ಕವನ / ಕವಿತೆ / ಹೊಸ ದೇವರ ಬರವಿಗಾಗಿ

ಹೊಸ ದೇವರ ಬರವಿಗಾಗಿ

ಓ ಓಸಿರಿಸ್! ನೈಲ್ ನದಿಯೇಕೆ ಉಕ್ಕಲಿಲ್ಲ?
ನಿನ್ನ ಕೊಳೆಯುತ್ತಿರುವ ಮೈಯಿಂದ ಸಸ್ಯಗಳೇಕೆ ಹುಟ್ಟಲಿಲ್ಲ?
ನಿನ್ನೆಲುಬುಗಳ ಹುಡುಕಿ ತಂದು ರಾಸಿ ಹಾಕಿ ಕರೆದರೂ ಕಾದರೂ
ಸತ್ತ ನೀ ಮರಳಿ ಬರಲಿಲ್ಲ!

ಆಶ್ವಯುಜ ಶುದ್ಧ ಮಾರ್ನಮಿ ಬರಲೆಂದು
ಬಾಲಕರು ಬಂದು ಹರಸಿದರೂ
ಮಾಡಿಟ್ಟ ನೈವೇದ್ಯ ಹಳಸಿದರೂ
ಕೂಗಿದರೂ ಓಗೊಲಿಲ್ಲ
ಪಾತಾಳದಿಂದ ಬಲೀಂದ್ರ ಬರಲಿಲ್ಲ ಮತ್ತಿಲ್ಲಿಗೆ

ಸತ್ತರೆ ಅಜೀರ್ಣದಿಂದ ಇಂದ್ರಾಗ್ನಿ ವರುಣರು ಮತ್ತೆ ಹುಟ್ಟಲಿಲ್ಲ
ಈ ಬ್ರಹ್ಮವಿಷ್ಣುರುದ್ರರೂ ವಯೋವೃದ್ಧರಾಗಿ ಮನುಷ್ಯ
ಜನಾಂಗ ಸ್ವರ್ಗ‍ದ ಸಂಪರ್ಕ ಕಳೆದಾಗ
ಸ್ವಂತ ಭೂಖಂಡವೂ ಕತ್ತಲೆಯ ಅಭೇದ್ಯ ಖಂಡ
ಅರ್ಥ ಚ್ಯುತಿಗೊಂಡ ಭಾಷೆ ಬರೇ ಗೊಂದಲಗೇರಿ ಸದ್ದುಗದ್ದಲದ
ಸುತ್ತು ಮುಖಗಳ ಮೇಲೆ ಕಿತ್ತರೂ ಬಾರದಂಥ ಅಂಟುಮೌನ
ಅಂತರ್ಮುಖದೊಳಗೆ ಕೂಡ ಅಪರಿಚಿತತ್ವ ಮುಖಾಮುಖಿಯ
ಈ ಹೆಪ್ಪುಗತ್ತಲೆಯಲ್ಲಿ ಹುಡುಕಿದರೆ

ಕ್ಯೂಬ ಬೊಲೀವಿಯಾ ಶೇಗವೇರಾ ಸಹ ದಾಟಿ
ಮತ್ತೆ ಹಿಪ್ಪಿ ಅತಿಮಾನಸಗಳನ್ನೂ ಅತಿಕ್ರಮಿಸಿ
ಅಂತ್ಯಗಳನ್ನೂ ಸೀಮೆಗಳನ್ನೂ ತಿರಸ್ಕರಿಸಿ
ಬೆಳೆದರೆ ಜೀವವಿಕಾಸವಲ್ಲ ಸಾಕ್ಷಾತ್ ಸ್ವಯಂಭೂ
ಸ್ವಂತ ಸನ್ನಿವೇಶಗಳ ತುರ್ತು ಆಶಯಗಳೇ ಮೈತಳೆದು
ನಮ್ಮ ನಾಭಿಕುಹರಗಳಿಂದ ತೊಡೆಗಳಿಂದ ನರಗಳಿಂದ
ಮೈ ಮನಸ್ಸಿನ ಭಾಗವಾಗಿ ನಮ್ಮೆಲ್ಲರ ಸಮಗ್ರ
ಸಂಕೇತವಾಗಿ ಏಳುತ್ತಾರೆ ಎದ್ದು ಸ್ವರ್ಣಗೋಪುರ ಸ್ಥಾಪನೆಗಳ
ಕೆಡವಿ-ಕೆಡವಿದರೆ ಉಸಿರಾಟ-ಉಸಿರಾಡಿದರೆ
ನಮ್ಮ ಬಿಡುಗಡೆ ಬಿಡುಗಡೆಯಲ್ಲಿ ಹೊಸ ಹುಟ್ಟು ಬೆಳವಣಿಗೆ.
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...