Home / ಕವನ / ಕವಿತೆ / ಅವಸಾನ

ಅವಸಾನ

ಕೆಲವೊಮ್ಮೆ ಫಕ್ಕನೆ ಕಣ್ಣು ಕತ್ತಲೆಗಟ್ಟಿ ಇದೀಗ ಎಲ್ಲವೂ
ಮುಗಿದೆ ಹೋಯಿತು ವಸ್ತು ಸ್ಥಲ ಕಾಲಗಳ ದಾಟಿ ಎಲ್ಲಿಗೋ
ಹೊರಟೆ ಹೋಯಿತು ಎನಿಸುತ್ತದೆ
ಸತ್ತವರ ನೆನಪು ಬರುತ್ತದೆ ನೀರಿನಲ್ಲಿ ಬಿದ್ದವರ
ಹಾಸಿಗೆಯಲ್ಲಿ ಸತ್ತವರ ಸ್ವಂತ ರಕ್ತ ಬಂಧಗಳ
ಹೇಗಿದ್ದೀತು ಅದು? ದಾಹವೆ ಸೆಖೆಯೆ ಚಳಿಯೆ
ಭಯವೆ ಮರೆವೆಯೆ ನಿದ್ರೆಯೆ?
ಪ್ರಳಯದ ಕಲ್ಪನೆ ಮಾಡುತ್ತೇನೆ
ಗೋರಿಗಳು ಬಿರಿದರೆ ಕಂಕಾಳಗಳು ಕುಣಿದರೆ
ಕತ್ತಲೆ ಹಗಲ ನುಂಗಿದರೆ
ಹೇಗಿದ್ದೀತು ಅದು? ಜೋನನ ಭೀಕರ ಪ್ರವಾದಗಳ ಚಿತ್ರಗಳು
ಕಣ್ಣಿಗೆ ಕಟ್ಟುತ್ತವೆ ಬೆಂಕಿಯ ಕುದುರೆಗಳು ಕೆನೆಯುತ್ತವೆ
ಹೆದರಿಸುವ ಶಬ್ದಗಳಿವೆ
ಈಚೆ ಪರಂಪರೆಯ ವಿಶ್ವಾಸಗಳಿವೆ
ಸಮುದ್ರ ಏಳುವ ಎಲ್ಲವೂ ಮುಳುಗುವ
ಕ್ರೂರ ಪರ್ಯಾವಸಾನದ ದೀರ್ಘ ಮೌನದಲ್ಲಿ
ಅದು ಇದ್ದೀತೆ ಹೀಗೆ ಆಕಾಶ ದೊಪ್ಪನೆ ಬಿದ್ದು ವಸ್ತುಸ್ಥಿತಿ
ಸ್ಥಿತ್ಯಂತರದ ಅರೆಕ್ಷಣದಲ್ಲಿ ಕ್ಷಯಿಸಿ ಇನ್ನೊಂದೇ ಸ್ಥಿತಿಯೂ ಇರದೆ
ಆಕಾಶ ಬಿರಿದಂತೆ ಆಕಾಶ
ಇದ್ದೀತೆ ಅಂಥ ಆಕಾಶವೂ ಇಲ್ಲದೇ ಯಾವುದೂ
ಇಲ್ಲದ ಅಂಥ ಋಣಸ್ಥಿತಿಯ ವಿರೋಧಾಬಾಸ
ಈ ಸೃಷ್ಟಿಯ ಆರಂಭದಲ್ಲೂ ಇದ್ದರೆ ಇದೆಲ್ಲದರ
ಅವಸಾನದಲ್ಲೂ ಇದ್ದರೆ ಈ ಮಧ್ಯೆ
ನಿಶ್ಚಿತ ಪ್ರತೀಕ್ಷೆಯಲ್ಲಿ ಕಟ್ಟಿಗೆಯೊಟ್ಟಿ ತಯಾರಾದ ವ್ಯಕ್ತಿಗಳ
ಆ ಜನಾಂಗದ ಹುಟ್ಟಿನ ಸಾವಿನ ನಡುವೆ ಕರ್ಮದ
ಮರೆವಿನಲ್ಲಿ ಬುದಕಿದ ಹುಸಿ ಬದುಕಿನ ಹಾಗೂ
ಸ್ವರ್ಗ ಮೋಕ್ಷಗಳ ಸ್ವಯಂಕೃತ ಭ್ರಮೆಯ ಬ್ರಹ್ಮ ಪರಬ್ರಹ್ಮದ
ಸ್ವಸಮಾಧಾನ ಸ್ವಸ್ಥತೆಯ ಕಲ್ಪನೆಯನ್ನೂ ಛಿದ್ರಿಸಿ
ಅಲೆಹೊಡೆವ ಪ್ರಜ್ಞೆ
ವ್ಯಕ್ತಿಯ ನಾಡಿಯಲ್ಲೂ ಜನಾಂಗದ ಪ್ರವಾಹದಲ್ಲೂ
ಹರಿಯುತ್ತಲೇ ಇರುವಾಗ ಇದರ ಕ್ರೌರ್ಯದ ಕೆಳಗೆ
ಅವಸಾನಿಸುವ ಆರಂಭಗಳು ಹುಟ್ಟುವ ಮೊದಲೇ
ಸಾಯುವ ಸೃಷ್ಟಿಗಳು.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...