Home / ಕವನ / ಕವಿತೆ / ಅವಸಾನ

ಅವಸಾನ

ಕೆಲವೊಮ್ಮೆ ಫಕ್ಕನೆ ಕಣ್ಣು ಕತ್ತಲೆಗಟ್ಟಿ ಇದೀಗ ಎಲ್ಲವೂ
ಮುಗಿದೆ ಹೋಯಿತು ವಸ್ತು ಸ್ಥಲ ಕಾಲಗಳ ದಾಟಿ ಎಲ್ಲಿಗೋ
ಹೊರಟೆ ಹೋಯಿತು ಎನಿಸುತ್ತದೆ
ಸತ್ತವರ ನೆನಪು ಬರುತ್ತದೆ ನೀರಿನಲ್ಲಿ ಬಿದ್ದವರ
ಹಾಸಿಗೆಯಲ್ಲಿ ಸತ್ತವರ ಸ್ವಂತ ರಕ್ತ ಬಂಧಗಳ
ಹೇಗಿದ್ದೀತು ಅದು? ದಾಹವೆ ಸೆಖೆಯೆ ಚಳಿಯೆ
ಭಯವೆ ಮರೆವೆಯೆ ನಿದ್ರೆಯೆ?
ಪ್ರಳಯದ ಕಲ್ಪನೆ ಮಾಡುತ್ತೇನೆ
ಗೋರಿಗಳು ಬಿರಿದರೆ ಕಂಕಾಳಗಳು ಕುಣಿದರೆ
ಕತ್ತಲೆ ಹಗಲ ನುಂಗಿದರೆ
ಹೇಗಿದ್ದೀತು ಅದು? ಜೋನನ ಭೀಕರ ಪ್ರವಾದಗಳ ಚಿತ್ರಗಳು
ಕಣ್ಣಿಗೆ ಕಟ್ಟುತ್ತವೆ ಬೆಂಕಿಯ ಕುದುರೆಗಳು ಕೆನೆಯುತ್ತವೆ
ಹೆದರಿಸುವ ಶಬ್ದಗಳಿವೆ
ಈಚೆ ಪರಂಪರೆಯ ವಿಶ್ವಾಸಗಳಿವೆ
ಸಮುದ್ರ ಏಳುವ ಎಲ್ಲವೂ ಮುಳುಗುವ
ಕ್ರೂರ ಪರ್ಯಾವಸಾನದ ದೀರ್ಘ ಮೌನದಲ್ಲಿ
ಅದು ಇದ್ದೀತೆ ಹೀಗೆ ಆಕಾಶ ದೊಪ್ಪನೆ ಬಿದ್ದು ವಸ್ತುಸ್ಥಿತಿ
ಸ್ಥಿತ್ಯಂತರದ ಅರೆಕ್ಷಣದಲ್ಲಿ ಕ್ಷಯಿಸಿ ಇನ್ನೊಂದೇ ಸ್ಥಿತಿಯೂ ಇರದೆ
ಆಕಾಶ ಬಿರಿದಂತೆ ಆಕಾಶ
ಇದ್ದೀತೆ ಅಂಥ ಆಕಾಶವೂ ಇಲ್ಲದೇ ಯಾವುದೂ
ಇಲ್ಲದ ಅಂಥ ಋಣಸ್ಥಿತಿಯ ವಿರೋಧಾಬಾಸ
ಈ ಸೃಷ್ಟಿಯ ಆರಂಭದಲ್ಲೂ ಇದ್ದರೆ ಇದೆಲ್ಲದರ
ಅವಸಾನದಲ್ಲೂ ಇದ್ದರೆ ಈ ಮಧ್ಯೆ
ನಿಶ್ಚಿತ ಪ್ರತೀಕ್ಷೆಯಲ್ಲಿ ಕಟ್ಟಿಗೆಯೊಟ್ಟಿ ತಯಾರಾದ ವ್ಯಕ್ತಿಗಳ
ಆ ಜನಾಂಗದ ಹುಟ್ಟಿನ ಸಾವಿನ ನಡುವೆ ಕರ್ಮದ
ಮರೆವಿನಲ್ಲಿ ಬುದಕಿದ ಹುಸಿ ಬದುಕಿನ ಹಾಗೂ
ಸ್ವರ್ಗ ಮೋಕ್ಷಗಳ ಸ್ವಯಂಕೃತ ಭ್ರಮೆಯ ಬ್ರಹ್ಮ ಪರಬ್ರಹ್ಮದ
ಸ್ವಸಮಾಧಾನ ಸ್ವಸ್ಥತೆಯ ಕಲ್ಪನೆಯನ್ನೂ ಛಿದ್ರಿಸಿ
ಅಲೆಹೊಡೆವ ಪ್ರಜ್ಞೆ
ವ್ಯಕ್ತಿಯ ನಾಡಿಯಲ್ಲೂ ಜನಾಂಗದ ಪ್ರವಾಹದಲ್ಲೂ
ಹರಿಯುತ್ತಲೇ ಇರುವಾಗ ಇದರ ಕ್ರೌರ್ಯದ ಕೆಳಗೆ
ಅವಸಾನಿಸುವ ಆರಂಭಗಳು ಹುಟ್ಟುವ ಮೊದಲೇ
ಸಾಯುವ ಸೃಷ್ಟಿಗಳು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...