ಶಾಪ


ಒಂದೂರು ಊರೊಳಗೊಂದು ದುರ್ಗ ದುರ್ಗ
ದೊಳಗೊಂದು ಅರಮನೆ ಅರಮನೆ

ಯೊಳಗೊಂದು ಮನೆ ಮನೆ
ಗೇಳು ಬಾಗಿಲು ಹದಿನಾಲ್ಕು ಕಿಟಕಿ

ಪಲ್ಲಂಗದ ಮೇಲೆ ರಾಜಕುಮಾರಿ ಒಂಟಿ
ನಿದ್ದೆ ಹೋಗಿದ್ದಾಳೆ ನಿದ್ರಿಸುವ ಸುಂದರಿ

ಅಮವಾಸ್ಯೆ ರಾತ್ರಿ ಮೂರನೇ ಝಾವ
ಮನೆಯೊಳಗೆ ಮೌನವೋ ಮೌನ

ತೆರೆದಾವು ಏಳು ಬಾಗಿಲು ಹದಿನಾಲ್ಕು ಕಿಟಕಿ
ಅಮವಾಸ್ಯೆ ರಾತ್ರಿ ಮೂರನೇ ಝಾವ

ಎಚ್ಚರಾಗುತ್ತಾಳೆ ನಿದ್ರಿಸುವ ಸುಂದರಿ
ಎದ್ದು ಬರುತ್ತಾಳೆ ಹೊರಗೆ

ಅಂಗಣದಲ್ಲಿ ನಿಂತು ಆಕಾಶ ನೋಡುತ್ತಾಳೆ
ಆಕಾಶದಲ್ಲಿ ಚಂದ್ರನಿಲ್ಲ

ಆಕಾಶದಲ್ಲಿ ಚಂದ್ರನಿಲ್ಲ-ಎನ್ನುತ್ತಾಳೆ
ಆಕಾಶದಲ್ಲಿ ಚಂದ್ರನೇ ಇಲ್ಲ.

ಊರೊಳಗೊಂದು ಕರೆ ಕರೆ
ತುಂಬ ನೀರು ನೀರಿನ ತನಕ ಸೋಪಾನ ಸಾಲು

ಸಾಲಿಗೆ ಸಾಲು ಕುಳಿತ ಶಿಲಾಬಾಲೆ
ಗಳೊಂದು ನೂರು ನೂರು

ನಿದ್ರಿಸುವ ಸುಂದರಿ ಬರುತ್ತಾಳೆ ಕೆರೆಗೆ ಒಂಟಿ
ಊರೊಳಗೆ ಇರುಳೋ ಇರುಳು

ಸೋಪಾನದಲ್ಲಿ ಕುಳಿತು ಕೆರೆಯೊಳಗೆ ನೋಡುತ್ತಾಳೆ
ಕೆರೆಯೊಳಗೆ ಚಂದ್ರನಿಲ್ಲ

ಕೆರೆಯೊಳಗೆ ಚಂದ್ರನಿಲ್ಲ-ಎನ್ನುತ್ತಾಳೆ
ಕೆರೆಯೊಳಗೆ ಚಂದ್ರನೇ ಇಲ್ಲ

ಅಳುತ್ತಾಳೆ ರಾಜಕುಮಾರಿ ಸೋಪಾನದಲ್ಲಿ ಕುಳಿತು
ಕೆರೆಗೆ ಬಿದ್ದಾವು ಕಣ್ಣೀರ ಬಿಂದು

ಎದ್ದೀತು ಗಾಳಿ ಉಕ್ಕೀತು ನೀರು
ಅಳುವಂತೆ ಶಿಲಾಬಾಲೆಗಳು ನೂರು ನೂರು

ಬಂದಾಳು ಮನೆಗೆ ರಾಜಕುಮಾರಿ ಒಂಟಿ
ಅಮಾವಾಸ್ಯೆ ರಾತ್ರಿ ನಾಲ್ಕನೇ ಝಾವ

ಏಳು ಬಾಗಿಲು ಹದಿನಾಲ್ಕು ಕಿಟಕಿ ಮುಚ್ಚಿಕೊಳ್ಳುತ್ತಾವೆ
ನಿದ್ದೆ ಹೋಗುತ್ತಾಳೆ ನಿದ್ರಿಸುವ ಸುಂದರಿ

ಋತುಗಳು ಬರುತ್ತಾವೆ ಹೋಗುತ್ತಾವೆ ಬಾಗಿಲು ಕಿಟಕಿ
ತೆರೆಯುತ್ತಾವೆ ಮುಚ್ಚುತ್ತಾವೆ

ಊರ ಹೊರಗೆಲ್ಲ ಅರೆಗಾಲ ಬರೆಗಾಲ ಬಂದರೂ ಈ
ಕೆರೆನೀರು ಬತ್ತುವುದಿಲ್ಲ

ಕೆರೆ ನೀರು ಬತ್ತುವುದಿಲ್ಲ-ಎನ್ನುತ್ತಾರೆ ಜನ
ಈ ಕಣ್ಣೀರು ಬತ್ತುವುದೆ ಇಲ್ಲ.
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...