Home / ಕವನ / ಕವಿತೆ / ಕೇರಳದ ಹುಡುಗಿಯರು

ಕೇರಳದ ಹುಡುಗಿಯರು

ಕೇರಳದ ಹುಡುಗಿಯರು ಸದಾ ಶೋಡಶಿಯರು
ಎಂದರೆ ಅತಿಶಯೋಕ್ತಿ ಹೌದು ಅಲ್ಲ
ಕಾರಣ ಇದ್ದೀತು ಹೀಗೆ-

ಕೇರಳದ ಮಣ್ಣು
ಉತ್ತರೂ ಬಿತ್ತರೂ ಬೆಳೆದರೂ ಕೊಯ್ದರೂ ಸದಾ
ಛಲೋ ಹೊಸ ಹೆಣ್ಣು-ಎಂದರೆ ಈ
ಸಮುದ್ರದ ಉದ್ದ ಗಾಳಿಗೆ ಮಳೆಗೆ ಬಿಸಿಲಿಗೆ
ಜೀವಂತ ಒಡ್ಡಿದ ಬೆತ್ತಲೆ ದೇಹ-

ಇಲ್ಲಿ ಈ ಬಯಲಿನ ಸೊಬಗಿನ
ತೆಂಗಿನ ನಾರಿನ ನೀರಿನ ಕೊಂಪೆಯ ಕೇರಿಯ
ಕಳ್ಳಿನ ಕಾಮದ ಜಗಳದ ಕೇಕೆಯ ಫೇರಿಯ
ಎದ್ದ ನಗರಗಳ ಬಿದ್ದ ಬೀದಿಗಳ ಜನಗಳ ಸಂಘರ್ಷದ ಸೆಕೆಗೆ

ಈ ಭೂಮಿಯಲ್ಲಿ ಅವತರಿಸಿದ ಶಾಪಗ್ರಸ್ತೆಯರು
ಈ ಭೂಮಿಯ ಸೆಳವಿಗೆ ತುಯ್ಯುತ್ತಾರೆ ಈ ಕಡಲಿನ ತೆರೆಗಳ
ಏರಿಳಿತದ ಕರೆಗೆ ಓಗೊಡುತ್ತಾರೆ

ಪ್ರಮೋದೆ ಪ್ರಮೀಳೆಯ ಸುಕುಮಾರ ಕತೆಯ ಪರಿಷೆಯಲ್ಲಿ
ದುರಂತ ಕಾಣದಿರಬಹುದು ಕಣ್ಣುಗಳ ಹಿಂದೆ
ನಿರಾಸೆ ಮಾಯ್ದಿರಬಹುದು ಕಾಡಿಗೆಯ ಹಿಂದೆ
ನಿಟ್ಟುಸಿರು ಕೇಳದಿರಬಹುದು ಚೆಲ್ಲಾಟದ ಹಿಂದೆ

ಕತೆಗೂ ವಾಸ್ತವತೆಗೂ ಅಂತರವಾಗಿ ನಿಂತ ಇವರಲ್ಲಿ
“ಆ!” ಎಂದು ಆಶ್ಚರ್ಯ ಚಿಮ್ಮಿದಾಗಲೂ ಕಣ್ಣುಗಳಲ್ಲಿ
ಅಥವಾ ವೇದನೆ ಹರಿದಾಗಲೂ ಕೆನ್ನೆಗಳಲ್ಲಿ
ಅಥವಾ ರೋಮಾಂಚ ಮೂಡಿದಾಗಲೂ ಮೈಯಲ್ಲಿ
ಬದುಕು ಒಂದಲ್ಲ ಒಂದು ವಿಧ ಮೂರ್ತಗೊಂಡಾಗಲೂ ಇವರಲ್ಲಿ

ತುರುಬಿನ ಈ ಎಣ್ಣೆಯ ಕಣ್ಣಿನ ಈ ಸೆಳಕಿನ
ಕಂಕುಳ ಈ ಬೆವರಿನ ಸುವಾಸದ ಆಕರ್ಷದ ಹಿಂದೆ
ಬದುಕಿನ ಉದಯಾಸ್ತಮದ ವ್ಯಂಗ್ಯದಲ್ಲೂ
ಇದರ ನಿಷ್ಠುರ ಕ್ರೌರ್ಯದಲ್ಲೂ

ಎಲ್ಲರನ್ನೂ ಎಚ್ಚರಿಸಿ ಹಂಗಿಸಿ ನಗುವ ಭಂಗಿ
ಹೆಜ್ಜೆಯಲ್ಲಿ ಗೆಜ್ಜೆಯಲ್ಲಿ ಇವರ ಉದಾಸೀನದ ಒಜ್ಜೆಯಲ್ಲಿ
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...