Home / ಕವನ / ಕವಿತೆ / ಕೇರಳದ ಹುಡುಗಿಯರು

ಕೇರಳದ ಹುಡುಗಿಯರು

ಕೇರಳದ ಹುಡುಗಿಯರು ಸದಾ ಶೋಡಶಿಯರು
ಎಂದರೆ ಅತಿಶಯೋಕ್ತಿ ಹೌದು ಅಲ್ಲ
ಕಾರಣ ಇದ್ದೀತು ಹೀಗೆ-

ಕೇರಳದ ಮಣ್ಣು
ಉತ್ತರೂ ಬಿತ್ತರೂ ಬೆಳೆದರೂ ಕೊಯ್ದರೂ ಸದಾ
ಛಲೋ ಹೊಸ ಹೆಣ್ಣು-ಎಂದರೆ ಈ
ಸಮುದ್ರದ ಉದ್ದ ಗಾಳಿಗೆ ಮಳೆಗೆ ಬಿಸಿಲಿಗೆ
ಜೀವಂತ ಒಡ್ಡಿದ ಬೆತ್ತಲೆ ದೇಹ-

ಇಲ್ಲಿ ಈ ಬಯಲಿನ ಸೊಬಗಿನ
ತೆಂಗಿನ ನಾರಿನ ನೀರಿನ ಕೊಂಪೆಯ ಕೇರಿಯ
ಕಳ್ಳಿನ ಕಾಮದ ಜಗಳದ ಕೇಕೆಯ ಫೇರಿಯ
ಎದ್ದ ನಗರಗಳ ಬಿದ್ದ ಬೀದಿಗಳ ಜನಗಳ ಸಂಘರ್ಷದ ಸೆಕೆಗೆ

ಈ ಭೂಮಿಯಲ್ಲಿ ಅವತರಿಸಿದ ಶಾಪಗ್ರಸ್ತೆಯರು
ಈ ಭೂಮಿಯ ಸೆಳವಿಗೆ ತುಯ್ಯುತ್ತಾರೆ ಈ ಕಡಲಿನ ತೆರೆಗಳ
ಏರಿಳಿತದ ಕರೆಗೆ ಓಗೊಡುತ್ತಾರೆ

ಪ್ರಮೋದೆ ಪ್ರಮೀಳೆಯ ಸುಕುಮಾರ ಕತೆಯ ಪರಿಷೆಯಲ್ಲಿ
ದುರಂತ ಕಾಣದಿರಬಹುದು ಕಣ್ಣುಗಳ ಹಿಂದೆ
ನಿರಾಸೆ ಮಾಯ್ದಿರಬಹುದು ಕಾಡಿಗೆಯ ಹಿಂದೆ
ನಿಟ್ಟುಸಿರು ಕೇಳದಿರಬಹುದು ಚೆಲ್ಲಾಟದ ಹಿಂದೆ

ಕತೆಗೂ ವಾಸ್ತವತೆಗೂ ಅಂತರವಾಗಿ ನಿಂತ ಇವರಲ್ಲಿ
“ಆ!” ಎಂದು ಆಶ್ಚರ್ಯ ಚಿಮ್ಮಿದಾಗಲೂ ಕಣ್ಣುಗಳಲ್ಲಿ
ಅಥವಾ ವೇದನೆ ಹರಿದಾಗಲೂ ಕೆನ್ನೆಗಳಲ್ಲಿ
ಅಥವಾ ರೋಮಾಂಚ ಮೂಡಿದಾಗಲೂ ಮೈಯಲ್ಲಿ
ಬದುಕು ಒಂದಲ್ಲ ಒಂದು ವಿಧ ಮೂರ್ತಗೊಂಡಾಗಲೂ ಇವರಲ್ಲಿ

ತುರುಬಿನ ಈ ಎಣ್ಣೆಯ ಕಣ್ಣಿನ ಈ ಸೆಳಕಿನ
ಕಂಕುಳ ಈ ಬೆವರಿನ ಸುವಾಸದ ಆಕರ್ಷದ ಹಿಂದೆ
ಬದುಕಿನ ಉದಯಾಸ್ತಮದ ವ್ಯಂಗ್ಯದಲ್ಲೂ
ಇದರ ನಿಷ್ಠುರ ಕ್ರೌರ್ಯದಲ್ಲೂ

ಎಲ್ಲರನ್ನೂ ಎಚ್ಚರಿಸಿ ಹಂಗಿಸಿ ನಗುವ ಭಂಗಿ
ಹೆಜ್ಜೆಯಲ್ಲಿ ಗೆಜ್ಜೆಯಲ್ಲಿ ಇವರ ಉದಾಸೀನದ ಒಜ್ಜೆಯಲ್ಲಿ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...