Home / ಕವನ / ಕವಿತೆ / ಕೇರಳದ ಹುಡುಗಿಯರು

ಕೇರಳದ ಹುಡುಗಿಯರು

ಕೇರಳದ ಹುಡುಗಿಯರು ಸದಾ ಶೋಡಶಿಯರು
ಎಂದರೆ ಅತಿಶಯೋಕ್ತಿ ಹೌದು ಅಲ್ಲ
ಕಾರಣ ಇದ್ದೀತು ಹೀಗೆ-

ಕೇರಳದ ಮಣ್ಣು
ಉತ್ತರೂ ಬಿತ್ತರೂ ಬೆಳೆದರೂ ಕೊಯ್ದರೂ ಸದಾ
ಛಲೋ ಹೊಸ ಹೆಣ್ಣು-ಎಂದರೆ ಈ
ಸಮುದ್ರದ ಉದ್ದ ಗಾಳಿಗೆ ಮಳೆಗೆ ಬಿಸಿಲಿಗೆ
ಜೀವಂತ ಒಡ್ಡಿದ ಬೆತ್ತಲೆ ದೇಹ-

ಇಲ್ಲಿ ಈ ಬಯಲಿನ ಸೊಬಗಿನ
ತೆಂಗಿನ ನಾರಿನ ನೀರಿನ ಕೊಂಪೆಯ ಕೇರಿಯ
ಕಳ್ಳಿನ ಕಾಮದ ಜಗಳದ ಕೇಕೆಯ ಫೇರಿಯ
ಎದ್ದ ನಗರಗಳ ಬಿದ್ದ ಬೀದಿಗಳ ಜನಗಳ ಸಂಘರ್ಷದ ಸೆಕೆಗೆ

ಈ ಭೂಮಿಯಲ್ಲಿ ಅವತರಿಸಿದ ಶಾಪಗ್ರಸ್ತೆಯರು
ಈ ಭೂಮಿಯ ಸೆಳವಿಗೆ ತುಯ್ಯುತ್ತಾರೆ ಈ ಕಡಲಿನ ತೆರೆಗಳ
ಏರಿಳಿತದ ಕರೆಗೆ ಓಗೊಡುತ್ತಾರೆ

ಪ್ರಮೋದೆ ಪ್ರಮೀಳೆಯ ಸುಕುಮಾರ ಕತೆಯ ಪರಿಷೆಯಲ್ಲಿ
ದುರಂತ ಕಾಣದಿರಬಹುದು ಕಣ್ಣುಗಳ ಹಿಂದೆ
ನಿರಾಸೆ ಮಾಯ್ದಿರಬಹುದು ಕಾಡಿಗೆಯ ಹಿಂದೆ
ನಿಟ್ಟುಸಿರು ಕೇಳದಿರಬಹುದು ಚೆಲ್ಲಾಟದ ಹಿಂದೆ

ಕತೆಗೂ ವಾಸ್ತವತೆಗೂ ಅಂತರವಾಗಿ ನಿಂತ ಇವರಲ್ಲಿ
“ಆ!” ಎಂದು ಆಶ್ಚರ್ಯ ಚಿಮ್ಮಿದಾಗಲೂ ಕಣ್ಣುಗಳಲ್ಲಿ
ಅಥವಾ ವೇದನೆ ಹರಿದಾಗಲೂ ಕೆನ್ನೆಗಳಲ್ಲಿ
ಅಥವಾ ರೋಮಾಂಚ ಮೂಡಿದಾಗಲೂ ಮೈಯಲ್ಲಿ
ಬದುಕು ಒಂದಲ್ಲ ಒಂದು ವಿಧ ಮೂರ್ತಗೊಂಡಾಗಲೂ ಇವರಲ್ಲಿ

ತುರುಬಿನ ಈ ಎಣ್ಣೆಯ ಕಣ್ಣಿನ ಈ ಸೆಳಕಿನ
ಕಂಕುಳ ಈ ಬೆವರಿನ ಸುವಾಸದ ಆಕರ್ಷದ ಹಿಂದೆ
ಬದುಕಿನ ಉದಯಾಸ್ತಮದ ವ್ಯಂಗ್ಯದಲ್ಲೂ
ಇದರ ನಿಷ್ಠುರ ಕ್ರೌರ್ಯದಲ್ಲೂ

ಎಲ್ಲರನ್ನೂ ಎಚ್ಚರಿಸಿ ಹಂಗಿಸಿ ನಗುವ ಭಂಗಿ
ಹೆಜ್ಜೆಯಲ್ಲಿ ಗೆಜ್ಜೆಯಲ್ಲಿ ಇವರ ಉದಾಸೀನದ ಒಜ್ಜೆಯಲ್ಲಿ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...